Year-Ender 2024: 2024ರಲ್ಲಿ ಕಂಬಿ ಎಣಿಸಿದ ಕನ್ನಡ ಸ್ಟಾರ್ಗಳಿವರು
ಮೊನ್ನೆ ಮೊನ್ನೆಯಷ್ಟೇ 2024ನ್ನು ಸ್ವಾಗತಿಸಿದ್ದ ನಾವು ಆಗಲೇ 12 ತಿಂಗಳನ್ನು ಸಂಪೂರ್ಣವಾಗಿ ಮುಗಿಸಿ 2025ನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದೇವೆ. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಒಂದು ವರ್ಷವೇ ಕಳೆದು ಹೋಗಿದ್ದು, ಹೊಸ ವರ್ಷಾರಂಭಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. 2025 ಎಲ್ಲರ ಜೀವನದಲ್ಲಿ ಹೊಸತನ ತರಲಿ ಎನ್ನುವ ಆಶಯದೊಂದಿಗೆ 2024ರ ವರ್ಷದ ಕೊನೆಯಲ್ಲಿ ಈ ವರ್ಷ ನೆನಪಿನಲ್ಲಿಡಬಹುದಾದ ಕೆಲವು ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ. 2024ರಲ್ಲಿ ಜೈಲಿಗೆ ಹೋದ ಕನ್ನಡದ ಮನೋರಂಜನಾ ಕ್ಷೇತ್ರದ ಸೆಲೆಬ್ರೆಟಿಗಳ ವಿವರ ಇಲ್ಲಿದೆ.

ದರ್ಶನ್ ತೂಗುದೀಪ
ಚಿತ್ರದುರ್ಗದ ರೇಣುಕಾಸ್ವಾಮಿ ಎನ್ನುವಾತನ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದರು. ತಮ್ಮ ಆಪ್ತೆಗೆ ಮೆಸೇಜ್ ಮಾಡಿದ ಎನ್ನುವ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ, ಚಿತ್ರಹಿಂಸೆ ಕೊಟ್ಟು, ಕೊಲೆ ಮಾಡಿರುವ ಆರೋಪ ದರ್ಶನ್ ತಲೆ ಮೇಲೆ ಬಂದಿತ್ತು.
ಕೊಲೆ ಪ್ರಕರಣಲ್ಲಿ ಎ-೨ ಆರೋಪಿಯಾಗಿದ್ದ ದರ್ಶನ್ ಅನ್ನು ಮೊದಲು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ದರ್ಶನ್, ಫೋಟೋವೊಂದು ವೈರಲ್ ಆದ ಬಳಿಕ ಬಳ್ಳಾರಿ ಕಾರಾಗೃಹ ಸೇರುವಂತಾಯಿತು. ದರ್ಶನ್ಗೆ ನಿಜವಾದ ಜೈಲಿನ ದರ್ಶನ ಹಾಗೂ ಅನುಭವ ಇಲ್ಲಿಂದ ಶುರುವಾಯಿತು. ಬಳ್ಳಾರಿ ಜೈಲಿನಲ್ಲಿ ತಾವು ಬಯಸಿದ ಸವಲತ್ತು ಸಿಗದೇ ಒದ್ದಾಡಿದ ದರ್ಶನ್ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು.
ಬಳಿಕ ಅನಾರೋಗ್ಯವನ್ನೇ ಕಾರಣ ಮಾಡಿಕೊಂಡು ಜಾಮೀನಿಗೆ ಅರ್ಜಿ ಸಲ್ಲಿಸಲಾಯಿತು. ವಾದ-ಪ್ರತಿವಾದಗಳ ಬಳಿಕ ದರ್ಶನ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಕಾರಣ ಕೋರ್ಟ್ ಮಧ್ಯಂತರ ಜಾಮೀನು ನೀಡಿತು. ಈ ಮೂಲಕ ಸುಮಾರು ಆರು ತಿಂಗಳು ಜೈಲುವಾಸ ಅನುಭವಿಸಿದ್ದ ದರ್ಶನ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿತು. ಚಿಕಿತ್ಸೆಗಾಗಿ ಹೊರಬಂದ ದರ್ಶನ್ಗೆ ಇತ್ತೀಚಿಗಷ್ಟೆ ಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ನೀಡಿದೆ. ದರ್ಶನ್ ಮಾತ್ರವಲ್ಲದೇ ಈ ಪ್ರಕರಣದಲ್ಲಿ ಸಿಲುಕಿದ್ದ ಎಲ್ಲಾ ಆರೋಪಿಗಳಿಗೂ ಸದ್ಯ ಜಾಮೀನು ಮಂಜೂರಾಗಿದೆ.

ಪವಿತ್ರಾ ಗೌಡ
ಈ ಹಿಂದೆ ನಟಿಯಾಗಿದ್ದ ಸದ್ಯ ಉದ್ಯಮಿಯಾಗಿರುವ ಪವಿತ್ರಾ ಗೌಡ ಪ್ರಕರಣ ಕೂಡ ದರ್ಶನ್ ಕೇಸ್ ಹೊರತಾಗಿಲ್ಲ. ಯಾಕೆಂದರೆ ಪವಿತ್ರಾ ಗೌಡ ಕೂಡ ಅರೆಸ್ಟ್ ಆಗಿದ್ದು ಕೂಡ ಇದೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ. ಕೊಲೆ ಪ್ರಕರಣ ಆರೋಪದ ಮೇಲೆ ನಟ ದರ್ಶನ್ ಜೊತೆಗೆ ಪವಿತ್ರಾ ಗೌಡರನ್ನು ಪೊಲೀಸರು ಬಂಧಿಸಿದ್ದರು. ಕಳೆದ ಜೂನ್ ತಿಂಗಳಲ್ಲಿ ಪವಿತ್ರಾ ಗೌಡ ಅವರನ್ನು ಬಂಧಿಸಲಾಗಿತ್ತು. ಪವಿತ್ರ ಗೌಡ ಈ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಕಾರಣ ಜಾಮೀನು ಸಿಗುವುದು ವಿಳಂಬವಾಗಿತ್ತು. ಆರೇಳು ತಿಂಗಳು ಕಾಲ ಜೈಲು ಸೇರಿದ್ದ ಪವಿತ್ರ ಗೌಡಗೆ ಡಿಸೆಂಬರ್ 13ರಂದು ಜಾಮೀನು ಮಂಜೂರಾಗಿದೆ.

ಸೋನು ಶ್ರೀನಿವಾಸ್ ಗೌಡ
ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪದ ಮೇಲೆ ಬಿಗ್ ಬಾಸ್ ಒಟಿಟಿ ಕನ್ನಡ ಸೀಸನ್ 1 ರಿಯಾಲಿಟಿ ಶೋನ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಈ ವರ್ಷ ಜೈಲು ಸೇರುವಂತಾಯಿತು. 8 ವರ್ಷದ ಹೆಣ್ಣು ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಸೋನು ಗೌಡ ಅವರನ್ನು ಮಾರ್ಚ್ 22 ರಂದು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ತನಿಖೆಯ ಬಳಿಕ ಜೈಲು ಸೇರಿದ್ದ ಸೋನು ಗೌಡಗೆ ಏಪ್ರಿಲ್ 4 ಜಾಮೀನು ಮಂಜೂರಾಗಿತ್ತು.

ಡ್ರೋನ್ ಪ್ರತಾಪ್
ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಮಾಡಿದ್ದ ಪ್ರಕರಣದಲ್ಲಿ ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿದ್ದರು. ಹತ್ತು ದಿನಗಳು ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಡ್ರೋನ್ ಪ್ರತಾಪ್ಗೆ ಡಿಸೆಂಬರ್ 23ರಂದು ಜಾಮೀನು ಮಂಜೂರು ಆಗಿದೆ.

ನಟ ತಾಂಡವ್ ರಾಮ್
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ಜೋಡಿಹಕ್ಕಿ, ಭೂಮಿಗೆ ಬಂದ ಭಗವಂತ ಧಾರಾವಾಹಿಗಳು ಸೇರಿದಂತೆ ಹಲವು ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟ ತಾಂಡವ್ ರಾಮ್ಅನ್ನು ಪೊಲೀಸರು ಬಂಧಿಸಿದ್ದರು. ಕನ್ನಡ ಚಿತ್ರರಂಗದ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ನಟ ತಾಂಡವ್ ರಾಮ್ಅನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದರು.












Click it and Unblock the Notifications