Year End Special 2024: ಈ ವರ್ಷ ನಮ್ಮನ್ನು ಆಗಲಿದ ಪ್ರಮುಖ ರಾಜಕೀಯ ನಾಯಕರು
2024ನೇ ವರ್ಷ ಮುಗಿಯುತ್ತಾ ಬಂದಿತು. ಈ ವರ್ಷ ಹಲವು ನೆನಪಿನಲ್ಲಿಟ್ಟುಕೊಳ್ಳುವ ಘಟನೆಗಳು ನಡೆದಿವೆ. ದೇಶದಲ್ಲಿ ಈ ವರ್ಷ ಲೋಕಸಭೆ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿವೆ. ಹಲವು ರಾಜಕೀಯ ನಾಯಕರು ಈ ವರ್ಷ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಆದರೆ ಅವರು ಮಾಡಿದ ಕೆಲಸಗಳಿಂದ ಸದಾ ನಮ್ಮ ಜೊತೆ ನೆನಪಿನಲ್ಲಿ ಉಳಿಯುತ್ತಾರೆ. ಈ ವರ್ಷ ನಿಧನ ಹೊಂದಿದ ರಾಜಕೀಯ ನಾಯಕರ ಪಟ್ಟಿ ಇಲ್ಲಿದೆ.
ಡಿಸೆಂಬರ್ 10ರಂದು ಕೇಂದ್ರದ ಮಾಜಿ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ (92) ಹೃದಯಾಘಾತದಿಂದ ನಿಧನ ಹೊಂದಿದರು. ಮಂಡ್ಯ ಜಿಲ್ಲೆಯ ಎಸ್. ಎಂ. ಕೃಷ್ಣ 5 ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರು. 2017ರಲ್ಲಿ ಬಿಜೆಪಿಯನ್ನು ಸೇರಿದ್ದರು. ಪಕ್ಷಬೇಧವಿಲ್ಲದೇ ಎಸ್. ಎಂ. ಕೃಷ್ಣ ನಿಧನಕ್ಕೆ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ. ವಿಧಾನಸಭಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಹೀಗೆ ಅನೇಕ ಉನ್ನತ ಹುದ್ದೆಗಳಲ್ಲಿ ಎಸ್. ಎಂ. ಕೃಷ್ಣ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ, ದೇಶಕ್ಕೆ ತಮ್ಮದೇ ಆದ ಕೊಡುಗೆಯ್ನು ನೀಡಿದ್ದಾರೆ.

ಅಕ್ಟೋಬರ್ 12ರಂದು ಮುಂಬೈನಲ್ಲಿ ಬಾಬಾ ಸಿದ್ದಿಕ್ ಹತ್ಯೆ ನಡೆಯಿತು. ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. 4 ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯರಿಂದ ಈ ಹತ್ಯೆ ನಡೆದಿದೆ ಎಂದು ಆರೋಪಿಸಲಾಗಿದ್ದು, ಇನ್ನೂ ಸಹ ತನಿಖೆ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ನಡೆದ ಈ ಹತ್ಯೆ ರಾಜ್ಯ ರಾಜಕೀಯದಲ್ಲಿ ಸಂಚಲವನ್ನು ಮೂಡಿಸಿತು.
ಸೆಪ್ಟೆಂಬರ್ 12ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (72) ನಿಧನ ಹೊಂದಿದರು. ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಸೀತಾರಾಮ್ ಯೆಚೂರಿ ಎಲ್ಲಾ ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯರಾಗಿ ಪಕ್ಷ ಮತ್ತು ದೇಶದ ರಾಜಕೀಯಕ್ಕೆ ಅವರು ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.
ಮೇ 13ರಂದು ಕ್ಯಾನ್ಸರ್ನಿಂದ ಬಳಲುತ್ತಿದ್ದ ಸುಶೀಲ್ ಕುಮಾರ್ ಮೋದಿ (72) ನಿಧನ ಹೊಂದಿದರು. ಬಿಜೆಪಿಯ ಹಿರಿಯ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ 2005 ರಿಂದ 2020ರ ತನಕ ಬಿಹಾರ ಸರ್ಕಾರದ ಭಾಗವಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಬಿಹಾರ ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಏಳಿಗೆಗೆ ಸುಶೀಲ್ ಕುಮಾರ್ ಮೋದಿ ಅವರ ಕೊಡುಗೆ ಅಪಾರವಾದದ್ದು.
ಆಗಸ್ಟ್ 11ರಂದು ಕಾಂಗ್ರೆಸ್ ನಾಯಕ, ಮಾಜಿ ವಿದೇಶಾಂಗ ಸಚಿವ ಕೆ. ನಟವರ್ ಸಿಂಗ್ (95) ನಿಧನ ಹೊಂದಿದರು. ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ರಾಜಕೀಯಕ್ಕೆ ಬರುವ ಮೊದಲು ಅವರು ಐಎಫ್ಎಸ್ ಅಧಿಕಾರಿಯಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕೆ. ನಟವರ್ ಸಿಂಗ್ ವಿದೇಶಾಂಗ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು. ವಿದೇಶಾಂಗ ನೀತಿ ರೂಪಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು.












Click it and Unblock the Notifications