ರಾಜಕೀಯ ಮುಖಂಡರ 2018 ರ ವಿವಾದಾತ್ಮಕ ಹೇಳಿಕೆಗಳು
Recommended Video

2018ರಲ್ಲಿ ಹಲವು ರಾಜಕಾರಣಿಗಳು ಬಾಯಿಂದಲೇ ಬೆಂಕಿ ಉಗುಳಿದರು. ಈ ವರ್ಷದಲ್ಲಿ ಒಂಬತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದವು ಪ್ರತಿ ಚುನಾವಣೆಯಲ್ಲಿಯೂ ರಾಜಕಾರಣಿಗಳು ಭಾಷಣದ ಹೆಸರಲ್ಲಿ ಸಾಧ್ಯವಾದಷ್ಟು ಬೆಂಕಿಯನ್ನೇ ಉಗುಳಿದ್ದಾರೆ.
ರಾಜಕಾರಣಿಗಳಿಗೆ ವಿವಾದಾತ್ಮಕ ಹೇಳಿಕೆಗಳು ಹೊಸದೇನೂ ಅಲ್ಲ ಹಲವು ರಾಜಕಾರಣಿಗಳು ಆ ರೀತಿಯ ಹೇಳಿಕೆಗಳ ಮೂಲಕವೇ ಖ್ಯಾತರಾಗಿದ್ದಾರೆ. ಈ ವರ್ಷ ಚುನಾವಣೆಗಳು, ಉಪಚುನಾವಣೆಗಳು ಹೆಚ್ಚಿಗೆ ನಡೆದ ಕಾರಣ ರಾಜಕೀಯ ಪಕ್ಷಗಳ ನಡುವೆ ಮಾತಿನ ಯುದ್ಧವೂ ಜೋರಾಗಿಯೇ ನಡೆಯಿತು.
ಈ ವರ್ಷ ನಡೆದ ಚುನಾವಣೆಗಳಲ್ಲಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ರಾಜಕೀಯ ನಾಯಕರು ಅಭಿವೃದ್ಧಿ ಪ್ರಚಾರಕ್ಕಿಂತಲೂ ಹೀಗಳಿಕೆ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದು ಢಾಳಾಗಿ ಮತದಾರರಿಗೆ ಕಾಣುತ್ತಿತ್ತು. ಆಡಳಿತ-ವಿರೋಧ ಪಕ್ಷಗಳು ನಾ ಮುಂದು, ತಾಮುಂದು ಎನ್ನುವಂತೆ ಪರಸ್ಪರ ಕೆಸರು ಎರಚಿಕೊಂಡರು. ಆದರೆ ಕೆಲವರು ನೀಡಿದ ಹೇಳಿಕೆಗಳು ಎಲ್ಲೆ ಮೀರಿ ಹೋಗಿ ಭಾರಿ ವಿವಾದವನ್ನು ಸೃಷ್ಠಿಸಿದವು.
2018 ರಲ್ಲಿ ರಾಷ್ಟ್ರ ಮಟ್ಟದಲ್ಲಿ ವಿವಾದ ಸೃಷ್ಠಿಸಿದ ರಾಜಕೀಯ ನಾಯಕರ ಹೇಳಿಕೆಗಳು ಇಲ್ಲಿವೆ ಕಣ್ಣು ಹಾಯಿಸಿ...

ಹನುಮಂತನಿಗೆ ಜಾತಿ ಪ್ರಮಾಣ ಪತ್ರ!
ಪಂಚ ರಾಜ್ಯ ಚುನಾವಣೆ ಸಮಯದಲ್ಲಿ ಯೋಗಿ ಆದಿತ್ಯನಾಥ ಅವರು ವಿವಾದಾತ್ಮಕ ಹೇಳಿಕೆ ಒಂದನ್ನು ನೀಡಿಬಿಟ್ಟರು. ಹನುಮನಿಗೆ ಜಾತಿ ಸರ್ಟಿಫಿಕೆಟ್ ಕೊಟ್ಟ ಅವರು, ಹನುಮ ದಲಿತನಾಗಿದ್ದ ಎಂಬರ್ಥ ಬರುವ ಮಾತುಗಳನ್ನಾಡಿದರು. ಇದು ಭಾರಿ ವಿವಾದ ಸೃಷ್ಠಿಸಿತ್ತು. ಆದರೆ ಕೆಲವರು ಯೋಗಿ ಹೇಳಿಕೆಯನ್ನು ತಿರುಚಲಾಗಿದೆ, ಅಥವಾ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದಿದ್ದರು.

ವಿವಾದ ಎಬ್ಬಿಸಿದ ಮೋದಿಯ ವಿಧವೆ ಹೇಳಿಕೆ
ಪಂಚ ರಾಜ್ಯ ಚುನಾವಣೆ ವೇಳೆಯಲ್ಲಿ ಮೋದಿ ಅವರು ಕಾಂಗ್ರೆಸ್ನ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವಿಧವಾ ಪಿಂಚಣಿಯ ಹಣ ಕಾಂಗ್ರೆಸ್ನ ಯಾವ ವಿಧವೆಗೆ ಹೋಗುತ್ತಿತ್ತು ಎಂಬುದು ಗೊತ್ತಿದೆ ಎಂದು ಹೇಳಿ ಬಿಟ್ಟರು. ಇದಕ್ಕೆ ಭಾರಿ ಆಕ್ಷೇಪ ವ್ಯಕ್ತವಾಯಿತು. ಮೋದಿ ಅವರು ಹದ್ದು ಮೀರಿ ಮಾತನಾಡಿದ್ದಾರೆ ಎಂದು ಭಾರಿ ಟೀಕೆಗಳು ವ್ಯಕ್ತವಾಗಿದ್ದವು.

ಆಲೂಗಡ್ಡೆಯನ್ನು ಚಿನ್ನ ಮಾಡುವ ಮಷಿನ್!
ರಾಹುಲ್ ಗಾಂಧಿ ಅವರು ಈ ವರ್ಷದ ಬಹು ಚರ್ಚಿತ ಹೇಳಿಕೆ ಎಂದರೆ 'ಆಲೂಗಡ್ಡೆಯನ್ನು ಚಿನ್ನ ಮಾಡುವ ಮಿಷನ್' ಹೇಳಿಕೆ. ರಾಹುಲ್ ಅವರು ರೈತರ ವಿಷಯ ಮಾತನಾಡುತ್ತಾ ವ್ಯಂಗ್ಯವಾಗಿ 'ಎಂತಹಾ ಮಿಷನ್ ಹಾಕುತ್ತೇನೆ ಎಂದರೆ ಒಂದು ಕಡೆ ಆಲೂಗಡ್ಡೆ ಹಾಕಿದರೆ ಮತ್ತೊಂದು ಕಡೆ ಚಿನ್ನ ಬರಬೇಕು' ಎಂದಿದ್ದರು ಇದು ಭಾರಿ ವ್ಯಂಗ್ಯಕ್ಕೆ ಒಳಗಾಗಿತ್ತು.

ಸಂವಿಧಾನ ಬದಲಾಯಿಸುವ ಅನಂತ್ಕುಮಾರ್ ಹೆಗಡೆ
ಕರ್ನಾಟಕದ ಬಿಜೆಪಿ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು' ಎಂದು ಅವರು ಹೇಳಿದ್ದರು. ಇದು ದಲಿತ ಸಂಘಟನೆಗಳನ್ನು ಕೆರಳಿಸಿತ್ತು. ಹೇಳಿಕೆ ವಿರುದ್ಧ ಲೋಕಸಭೆಯಲ್ಲೂ ಗದ್ದಲ ಆಯಿತು. ಅನಂತ್ಕುಮಾರ್ ಹೆಗಡೆ ಸದನದಲ್ಲಿ ಕ್ಷಮಾಪಣೆ ಕೋರಿದರು. ಇಂದಿಗೂ ಅನಂತ್ಕುಮಾರ್ ಅವರ ಮೇಲೆ ಇದೇ ಕಾರಣಕ್ಕೆ ಹಲವು ಪಕ್ಷಗಳಿಗೆ ಸಂಘಟನೆಗಳಿಗೆ ಸಿಟ್ಟಿದೆ.

ಸಾಕ್ಷಿ ಮಹಾರಾಜರ ಮದುವೆ-ಮಕ್ಕಳ ಹೇಳಿಕೆ
ಬಿಜೆಪಿಯ ವಿವಾದಾತ್ಮಕ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ವಿವಾದಗಳು ಹೊಸತಲ್ಲ. ಕಠು ಹಿಂದೂವಾದಿ ಆದ ಅವರು ಬಾಯಿ ತೆರೆದರೆ ವಿವಾದವೇ. ಈ ವರ್ಷ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಪ್ರತಿ ಹಿಂದೂ ಪುರುಷರು ನಾಲ್ಕು ಮದುವೆ ಆಗಬೇಕು, 40 ಮಕ್ಕಳನ್ನು ಪಡೆಯಬೇಕು ಎಂದಿದ್ದರು. ಇದು ಭಾರಿ ವಿವಾದ ಎಬ್ಬಿಸಿತ್ತು. ಬಿಜೆಪಿಗೆ ಇದರಿಂದ ಮುಖಂಭಂಗ ಆಯಿತು.

ಮಣಿಶಂಕರ್ ಅಯ್ಯರ್ 'ನೀಚ' ಹೇಳಿಕೆ
ಕಾಂಗ್ರೆಸ್ನ ಮಣಿಶಂಕರ್ ಅಯ್ಯರ್ ಅವರ 'ನೀಚ' ಹೇಳಿಕೆ ಪಕ್ಷಕ್ಕೆ ಭಾರಿ ಹಿನ್ನಡೆ ಮಾಡಿತು. ಗುಜರಾತ್ ಚುನಾವಣೆ ಸಂದರ್ಭದಲ್ಲಿ ಮಣಿಶಂಕರ್ ಅಯ್ಯರ್ ಅವರು ಪ್ರಧಾನಿ ಮೋದಿಯನ್ನು 'ನೀಚ' ಎಂದು ಕರೆದರು. ಇದು ಕಾಂಗ್ರೆಸ್ಗೆ ಋಣಾತ್ಮಕವಾಗಿ ಪ್ರತಿಕ್ರಿಯೆ ಬೀರಿತು ಕಾಂಗ್ರೆಸ್ ಚುನಾವಣೆಯಲ್ಲಿ ಸೋತಿತು. ರಾಹುಲ್ ಗಾಂಧಿ ಅವರು ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತು ಮಾಡಿದರು ಆದರೂ ಕಾಂಗ್ರೆಸ್ಗೆ ಇದು ಭಾರಿ ಹಿನ್ನಡೆಯೇ ಆಯಿತು.

'ಮೊದಲು ಧರ್ಮ ಆಮೇಲೆ ದೇಶ'
ಉತ್ತರ ಪ್ರದೇಶದಲ್ಲಿ ನ್ಯಾಯಾಲಯವು ಮದರಾಸಾಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತೆ ತೀರ್ಪು ನೀಡಿತು. ಇದನ್ನು ವಿರೋಧಿಸಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡ ಮಾವಿಯಾ ಅಲಿ ಅವರು 'ಮೊದಲು ನಾವು ಮುಸ್ಲಿಮರು ಆ ನಂತರ ಭಾರತೀಯರು' ಎಂದಿದ್ದರು ಇದು ಭಾರಿ ವಿವಾದ ಹುಟ್ಟುಹಾಕಿದ್ದು, ಬಿಜೆಪಿಗರು ಈ ಹೇಳಿಕೆ ವಿರುದ್ಧ ಸಿಡಿದು ನಿಂತಿದ್ದರು.

'ತಾಜ್ ಮಹಲ್ ಕಟ್ಟಿದವರು ದ್ರೋಹಿಗಳು'
ತಾಜ್ ಮಹಲ್ ಅನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಹೊರಗಿಟ್ಟ ಬಗ್ಗೆ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್ ಸೋಮ್, 'ತಾಜ್ ಮಹಲ್ ಕಟ್ಟಿದ್ದು ದ್ರೋಹಿಗಳು' ಹಾಗಾಗಿ ಅದನ್ನು ಇತಿಹಾಸ ಎನ್ನಲು ಆಗದು ಎಂದಿದ್ದರು.

ಕಾಂಗ್ರೆಸ್ ಗುರುತು ದೇವರ ಬಳಿ ಇದೆ
ರಾಹುಲ್ ಗಾಂಧಿ ಅವರ ಹೇಳಿಕೆಗಳು ವಿವಾದ ಸೃಷ್ಠಿಸದಿದ್ದರೂ ಸಹ ಭಾರಿ ಟ್ರೋಲ್ಗೆ ಒಳಗಾದವು. ಕಾಂಗ್ರೆಸ್ನ ಗುರುತು ದೇವರುಗಳ ಕೈಯಲ್ಲಿದೆ ಎಂದು ಹೇಳಿದ್ದ ಮಾತು ಭಾರಿ ತಮಾಷೆಗೆ ಈಡಾಗಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರು ಹೇಳಲಾಗದೆ ತೊಳಲಾಡಿದ್ದು ಸಹ ಭಾರಿ ಟ್ರೋಲ್ ಆಗಿತ್ತು.












Click it and Unblock the Notifications