ಮತ್ತೆ ಬಂತು ಚೀಂವ್ ಚೀಂವ್ ಗುಬ್ಬಚ್ಚಿಯ ನೆನೆಯುವ ಸಮಯ...
ಪ್ರತಿದಿನ ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಎಚ್ಚರಗೊಂಡು ಚೀಂವ್ ...ಚೀಂವ್... ಎಂದು ಸದ್ದು ಮಾಡುತ್ತಾ ಸುಪ್ರಭಾತದೊಂದಿಗೆ ಶುಭಾಶಯ ಹೇಳುವ ಗುಬ್ಬಚ್ಚಿಯನ್ನು ನೆನೆಯುವ ಈ ದಿನ ವಿಶ್ವ ಗುಬ್ಬಿ ದಿನಾಚರಣೆ.
ಗ್ರಾಮೀಣ ಭಾಗದ ಹಳೆಯ ಶಾಲಾ ಕಟ್ಟಡ, ದೇವಸ್ಥಾನ, ಪಾಳು ಬಿದ್ದ ಬಾವಿ, ಕೊಳಗಳಲ್ಲಿ ಪುರ್ ಎಂದು ಹಾರುವ, ತನ್ನ ಇನಿಯನನ್ನು ಕರೆಯುತ್ತಾ, ಕುಣಿಯುತ್ತಾ ಆಹಾರ ಆರಿಸುವ ಗುಬ್ಬಚ್ಚಿ ಈಗ ಕಾಣಿಸುವುದು ಅಪರೂಪವಾಗಿದೆ.
ಇಂದು ಪರಿಸರ ಹಾಗೂ ಗೂಡು ಕಟ್ಟುವ ತಾಣಗಳ ನಾಶದಿಂದಾಗಿ, ಮೊಬೈಲ್ಗಳು ಹೊರ ಸೂಸುವ ವಿಕಿರಣ, ಶಬ್ದಮಾಲಿನ್ಯ ಹಾಗೂ ಮಿತಿ ಮೀರಿದ ಕೀಟನಾಶಕದ ಬಳಕೆಯಿಂದಾಗಿ ಗುಬ್ಬಚ್ಚಿಗಳ ಸಂತತಿಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕ್ಷೀಣಿಸುತ್ತಿರುವುದು ಪಕ್ಷಿ ತಜ್ಞರ ಕಳವಳಕ್ಕೆ ಕಾರಣವಾಗಿದೆ.
ಹಳ್ಳಿ, ಪಟ್ಟಣಗಳಲ್ಲಿರುವ ಮನೆಯ ಪ್ರಾಂಗಣಗಳಲ್ಲಿ ಮನೆ ಗುಬ್ಬಿಗಳು ಗೂಡು ಕಟ್ಟಿ ಸಂಸಾರ ನಡೆಸುವುದು ಮೊದಲೆಲ್ಲ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಅವುಗಳು ಕಣ್ಮರೆಯಾಗುತ್ತಿವೆ. ಇದು ಪರಿಸರದ ಅವನತಿಯ ಸೂಚಕವಾಗಿದೆ.
ಹಿಂದೆಲ್ಲ ಧಾನ್ಯಗಳನ್ನು ಸಂತೆಯಿಂದ ತಂದು, ಅದನ್ನು ಸ್ವಚ್ಛಗೊಳಿಸುವಾಗ ಕಾಳುಗಳನ್ನು ಗುಬ್ಬಿಗಳಿಗಾಗಿಯೇ ಮನೆ ಅಂಗಳಗಳಲ್ಲಿ ಬೀರುತ್ತಿದ್ದರು. ಇದರಿಂದ ಅವುಗಳಿಗೆ ಹೇರಳವಾಗಿ ಆಹಾರ ಸಿಗುತ್ತಿತ್ತು. ಆದರೆ, ಈ ಪದ್ಧತಿಗಳು ಇಂದು ಮರೆಯಾಗಿವೆ.

ಕುಸಿದ ಗುಬ್ಬಿ ಸಂತತಿ
ಕಣ್ಮರೆಯಾಗುತ್ತಿರುವ ಈ ಗುಬ್ಬಚ್ಚಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. 2010ರಿಂದ ವಿಶ್ವದ ವಿವಿಧ ದೇಶಗಳಲ್ಲಿ ಈ ಆಚರಣೆ ಪ್ರಾರಂಭವಾಯಿತು. ಪ್ರಕೃತಿ ಸಂರಕ್ಷಣೆಯ ಅಂತರರಾಷ್ಟ್ರೀಯ ಸಂಘಟನೆಯ (ಐಯುಸಿಎನ್) ವರದಿಯ ಪ್ರಕಾರ, 25 ವರ್ಷಗಳಲ್ಲಿ ಗುಬ್ಬಿಗಳ ಸಂತತಿಯು ಶೇ 71ರಷ್ಟು ಕುಸಿದಿದೆ.

ಗೂಡು ನಾಶ ಮಾಡಬೇಡಿ
ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳಿಗೆ ವಾಸಿಸಲು ಅನುಕೂಲವಾಗುವಂತೆ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ನೀರು ತುಂಬಿದ ಮಡಿಕೆಗಳನ್ನು ನೇತು ಹಾಕುವುದು, ತಾರಸಿಗಳ ಮೇಲೆ ನೀರು ತುಂಬಿದ ಮಡಿಕೆಗಳನ್ನು ಇಡುವ ಮೂಲಕ ಬೇಸಿಗೆಯಲ್ಲಿ ಅವುಗಳಿಗೆ ದಣಿವಾರಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಗುಬ್ಬಿಗಳು ಮನೆಯಲ್ಲಿ ಗೂಡು ನಿರ್ಮಿಸುವುದು ಸಾಮಾನ್ಯ. ಅದನ್ನು ಅಪಶಕುನವೆಂದು ಗೂಡು ನಾಶ ಮಾಡಬಾರದು.

ಪ್ರಮುಖ ಪಾತ್ರವಹಿಸುವ ವನ್ಯ ಜೀವಿಗಳು
ಪ್ರತಿ ವನ್ಯಜೀವಿಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಚಿತ್ರಗಳಲ್ಲಿ ಮಾತ್ರ ಅವುಗಳನ್ನು ತೋರಿಸಬೇಕಾದೀತು. ಮಳೆ ತರುವಲ್ಲಿ ಹಾಗೂ ಮಳೆ ನೀರು ಇಂಗಿಸಲು ಅರಣ್ಯಗಳು ಬಹುಮುಖ್ಯ.

ಹೀಗೆ ಮಾಡಿ ಗುಬ್ಬಿಗಳ ಸಂರಕ್ಷಣೆ
ಹಿಂದೆ ಪ್ರತಿ ನಿತ್ಯ ದೇವಾಲಯದಲ್ಲಿ ಈ ಗುಬ್ಬಿಗಳ ಚೀಂವ್ ಚೀಂವ್ ಸದ್ದೇ ಸುಪ್ರಭಾತವಾಗಿತ್ತು. ನಂತರ ಅಲ್ಲಿ ಬಿದ್ದ ಅಕ್ಕಿ, ಕಾಳು, ಕಡ್ಡಿ ತರಕಾರಿ ಬೀಜ ತಿನ್ನುತ್ತಾ ಸುತ್ತಲೂ ಹಾರಾಡಿ, ಅಲ್ಲಿ ಬಿದ್ದ ಹೂ ಕಟ್ಟಿದ ದಾರ, ತೆಂಗಿನ ಹಗ್ಗದ ನಾರು, ಕಸ ಕಡ್ಡಿಯನ್ನು ಹಿಡಿದು ಪುರ್ ಎಂದು ಹಾರಿ, ಅದನ್ನು ಯಾವುದೋ ಗುಪ್ತ ಸ್ಥಳದಲ್ಲಿ ಇಟ್ಟು ಬರುವುದು ಅವಳದ್ದು ನಿತ್ಯ ಕಾಯಕ. ಗುಬ್ಬಚ್ಚಿ ಉಳಿವಿಗಾಗಿ ಮನೆಯಂಗಳದಲ್ಲಿ ಹೂತೋಟ ನಿರ್ಮಿಸಿ, ಪುಟ್ಟ ಪೊದೆ ಬೆಳೆಸಬೇಕು. ಅಲ್ಲದೇ, ಹಣ್ಣಿನ ಮರ ಬೆಳೆಸುವುದರ ಜತೆಗೆ ನೀರಿನ ತೊಟ್ಟಿ ನಿರ್ಮಿಸಬೇಕು. ಮನೆ ಅಂಗಳದ ಹಿತ್ತಲಲ್ಲಿ ನೀರುಣಿಕೆ, ಮೇವುಣಿಕೆಗಳನ್ನು ಇಡಬೇಕು ಆಗ ಮಾತ್ರ ಗುಬ್ಬಿಗಳ ಉಳಿವು ಸಾಧ್ಯ.












Click it and Unblock the Notifications