ಸಿಂಗಾಪುರ ಪ್ರವಾಸ, ಸಿಬಿಐ ತನಿಖೆ- ದೆಹಲಿ ಸಿಎಂ, ಲೆ. ಗವರ್ನರ್ ಮಧ್ಯೆ ಮತ್ತೆ ಜಟಾಪಟಿ

ನವದೆಹಲಿ, ಜುಲೈ 22: ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ ಆದಾಗಿನಿಂದಲೂ ಸಿಎಂ ವರ್ಸಸ್ ಲೆ. ಗವರ್ನರ್ ಜಟಾಪಟಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಇದೊಂದು ರೀತಿಯಲ್ಲಿ ದೆಹಲಿ ಸರಕಾರ ಮತ್ತು ಕೇಂದ್ರ ಸರಕಾರ ನಡುವಿನ ಮುಸುಕಿನ ಯುದ್ಧವೇ ಆಗಿಹೋಗಿದೆ.

ದೆಹಲಿಗೆ ಯಾರೇ ಲೆಫ್ಟಿನೆಂಟ್ ಗವರ್ನರ್ ಅಗಿ ಬಂದರೂ ಸಿಎಂ ಕೇಜ್ರಿವಾಲ್ ಜೊತೆಗೆ ಜಟಾಪಟಿ ಮಾತ್ರ ನಿಲ್ಲುವುದಿಲ್ಲ. 2013ರಿಂದಲೂ ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಆಗಿದ್ದಾರೆ. ಈ ಅವಧಿಯಲ್ಲಿ ನಜೀಬ್ ಜುಂಗ್, ಅನಿಲ್ ಬೈಜಲ್ ಮತ್ತು ಈಗ ವಿನಯ್ ಕುಮಾರ್ ಸಕ್ಸೇನಾ ಈ ಮೂವರು ಲೆಫ್ಟಿನೆಂಟ್ ಗವರ್ನರ್‌ಗಳ ಜೊತೆ ಕೇಜ್ರಿವಾಲ್ ಗುದ್ದಾಟ ನಡೆಸಿದ್ದೇ ಹೆಚ್ಚು.

ಈಗ ಸಿಂಗಾಪುರದಲ್ಲಿ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಹೋಗುವ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಮತ್ತು ಅರವಿಂದ್ ಕೇಜ್ರಿವಾಲ್ ಮಧ್ಯೆ ಜಟಾಪಟಿ ನಡೆದಿದೆ. ಪ್ರವಾಸ ಹೋಗುವಂತಿಲ್ಲ ಎಂದು ಗವರ್ನರ್ ತಾಕೀತು ಮಾಡಿದರೆ, ಪ್ರವಾಸ ಹೋಗಿಯೇ ತೀರುತ್ತೇನೆ ಎಂದು ಕೇಜ್ರಿವಾಲ್ ಸವಾಲು ಹಾಕಿದ್ದಾರೆ.

ಅದಾದ ಬೆನ್ನಲ್ಲೇ ಇದೀಗ ಕೇಜ್ರಿವಾಲ್ ಸರಕಾರದ ಹೊಸ ಅಬಕಾರಿ ನೀತಿ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಶಿಫಾರಸು ಮಾಡಿರುವುದು ತಿಳಿದುಬಂದಿದೆ. ದೆಹಲಿಯ ಮುಖ್ಯಮಂತ್ರಿ ಮತ್ತು ಲೆ. ಗವರ್ನರ್ ಮಧ್ಯೆ ಏನಿಂಥ ಜಟಾಪಟಿ, ಈ ಸಿಂಗಾಪುರ ಪ್ರವಾಸ ಏನು, ಸಿಬಿಐ ತನಿಖೆ ಯಾಕಾಗಿ ಇತ್ಯಾದಿ ಮಾಹಿತಿ ಇಲ್ಲಿದೆ.

ಏನಿದು ಸಿಂಗಾಪುರ ಪ್ರವಾಸ?

ಏನಿದು ಸಿಂಗಾಪುರ ಪ್ರವಾಸ?

ಆಗಸ್ಟ್ ತಿಂಗಳಲ್ಲಿ ಸಿಂಗಾಪುರದಲ್ಲಿ ವಿಶ್ವ ನಗರಗಳ ಶೃಂಗ ಸಭೆ ಆಯೋಜನೆ ಆಗುತ್ತಿದೆ. ಜುಲೈ 31ರಿಂದ ಆಗಸ್ಟ್ 3ರವರೆಗೆ ಇದು ನಡೆಯಲಿದೆ. ಈ ಸಭೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನೂ ಆಹ್ವಾನಿಸಲಾಗಿರುವುದು ತಿಳಿದುಬಂದಿದೆ.

ನಗರಗಳ ಅಭಿವೃದ್ಧಿಯಲ್ಲಿರುವ ಸವಾಲುಗಳು ಏನು, ಅದಕ್ಕೆ ಸಂಭಾವ್ಯ ಪರಿಹಾರವೇನು ಎಂಬಿತ್ಯಾದಿ ಚರ್ಚೆಗಳನ್ನು ಈ ಶೃಂಗ ಸಭೆಯಲ್ಲಿ ನಡೆಸಲಾಗುತ್ತದೆ. ಆಯ್ದ ನಗರಗಳ ಮೇಯರ್‌ಗಳು, ಉನ್ನತ ಅಧಿಕಾರಿಗಳು, ಸಚಿವರು ಹಾಗು ಪರಿಣಿತರನ್ನು ಈ ಶೃಂಗಸಭೆಗೆ ಆಹ್ವಾನಿಸಲಾಗಿದೆ. ಹೆಲ್ಸಿಂಕಿ, ಕ್ರೈಸ್ಟ್‌ಚರ್ಚ್, ಟೌನ್ಸ್‌ವಿಲೆ, ಬಾಟು ಸಿಟಿ, ಕೇಪ್ ಟೌನ್, ಅಲ್-ಅಹಸ ಮೊದಲಾದ ಕೆಲ ನಗರಗಳ ಮೇಯರ್‌ಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ವರ್ಲ್ಡ್ ಸಿಟಿ ಸಮಿಟ್‌ನ ವೆಬ್‌ಸೈಟ್‌ನಲ್ಲಿ ಇರುವ ಆಹ್ವಾನಿತರಲ್ಲಿ ಭಾರತದ ಯಾವ ಮೇಯರ್ ಕೂಡ ಇಲ್ಲ. ಅರವಿಂದ್ ಕೇಜ್ರಿವಾಲ್ ಅವರನ್ನು ಯಾವ ಸ್ತರದಲ್ಲಿ ಆಹ್ವಾನಿಸಲಾಗಿದೆ ಎಂಬುದು ಗೊತ್ತಿಲ್ಲ. ಅದರೆ, ಸಿಂಗಾಪುರ ಸರಕಾರದಿಂದ ಕೇಜ್ರಿವಾಲ್‌ಗೆ ವೈಯಕ್ತಿಕವಾಗಿ ಆಹ್ವಾನ ಹೋಗಿದ್ದಿರಬಹುದು.

ಬೇಡ ಎಂದ ಲೆ. ಗವರ್ನರ್

ಬೇಡ ಎಂದ ಲೆ. ಗವರ್ನರ್

ಸಿಂಗಾಪುರಕ್ಕೆ ವಿಶ್ವ ನಗರಗಳ ಶೃಂಗಸಭೆಗೆ ಹೋಗಲು ಅರವಿಂದ್ ಕೇಜ್ರಿವಾಲ್ ಅವರಿಗೆ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅನುಮತಿ ನಿರಾಕರಿಸಿದ್ದಾರೆ.

"ಈ ಸಮ್ಮೇಳನಕ್ಕೆ ಮುಖ್ಯಮಂತ್ರಿ ಪಾಲ್ಗೊಳ್ಳುವುದು ಸರಿಯಲ್ಲ. ಆ ವಿಚಾರಗಳು ದೆಹಲಿ ಸರಕಾರದ ವ್ಯಾಪ್ತಿಗೆ ಸೀಮಿತವಾದುದಲ್ಲ. ಅದರಲ್ಲಿ ಸಿಎಂ ಭಾಗವಹಿಸುವುದು ಉಚಿತ ಎನಿಸುವುದಿಲ್ಲ" ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.

ಹೋಗಿಯೇ ತೀರುತ್ತೇನೆ ಎಂದ ಸಿಎಂ

ಹೋಗಿಯೇ ತೀರುತ್ತೇನೆ ಎಂದ ಸಿಎಂ

ಸಿಂಗಾಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಸಮ್ಮೇಳನಕ್ಕೆ ಹೋಗಲು ಅರವಿಂದ್ ಕೇಜ್ರಿವಾಲ್‌ಗೆ ಲೆಫ್ಟಿನೆಂಟ್ ರಾಜ್ಯಪಾಲರು ಅಡ್ಡಿ ಮಾಡುತ್ತಿರುವುದಕ್ಕೆ ಆಮ್ ಆದ್ಮಿ ಪಕ್ಷ ಕಿಡಿಕಾರಿದೆ. "ದೆಹಲಿ ಎಲ್‌ಜಿ ಅವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ" ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟೀಕಿಸಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸಿಂಗಾಪುರ ಪ್ರವಾಸಕ್ಕೆ ಅನುಮತಿ ಪಡೆಯಲು ಎಎಪಿ ನಾಯಕರು ನಿರ್ಧರಿಸಿದ್ಧಾರೆ.

ಇದೇ ವೇಳೆ, "ಸಿಂಗಾಪುರದಲ್ಲಿ ನಡೆಯಲಿರುವ ಆ ಶೃಂಗಭೆಯಲ್ಲಿ ದೆಹಲಿಯನ್ನು ಆರಿಸಲಾಗಿರುವುದು ದೆಹಲಿಗೆ ಮಾತ್ರವಲ್ಲ ಇಡೀ ದೇಶ ಹೆಮ್ಮೆ ಪಡುವ ವಿಚಾರ. ಶಿಕ್ಷಣ, ಆರೋಗ್ಯ, ವಿದ್ಯುತ್ ಇತ್ಯಾದಿ ವಲಯಗಳಲ್ಲಿ ಯಶಸ್ವಿಯಾಗಿರುವ ದೆಹಲಿ ಮಾದರಿಯ ಅಡಳಿತದ ಬಗ್ಗೆ ವಿಶ್ವಾದ್ಯಂತ ಚರ್ಚೆಗಳಾಗುತ್ತಿವೆ. ವಿಶ್ವಾದ್ಯಂತ ಬಂದಿರುವ ವಿವಿಧ ನಗರಗಳ ಮುಖ್ಯಸ್ಥರ ಮುಂದೆ ದೆಹಲಿ ಮಾದರಿಯನ್ನು ವಿವರಿಸಲು ಸಿಂಗಾಪುರ ಸರಕಾರ ನನ್ನನ್ನು ಆಹ್ವಾನಿಸಿದೆ. ದೇಶಪ್ರೇಮಿಗಳೆಲ್ಲರಿಗೂ ಖುಷಿ ತರುವ ಸಂಗತಿ ಇದು" ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಪಿಎಂ ಕೂಡ ಎಲ್ಲೂ ಹೋಗುವಂತಿಲ್ಲ

ಪಿಎಂ ಕೂಡ ಎಲ್ಲೂ ಹೋಗುವಂತಿಲ್ಲ

ಸಿಂಗಾಪುರದ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ದೆಹಲಿ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಮಾಡಿದ ಆಕ್ಷೇಪವನ್ನು ಅರವಿಂದ್ ಕೇಜ್ರಿವಾಲ್ ತಳ್ಳಿಹಾಕಿದ್ದಾರೆ.

"ಈ ಲೆಕ್ಕ ತೆಗೆದುಕೊಂಡರೆ ಪ್ರಧಾನಿಗಳು ಎಲ್ಲಿಗೂ ಹೋಗಲು ಆಗುವುದಿಲ್ಲ. ಯಾಕೆಂದರೆ ಅವರ ಬಹುತೇಕ ವಿದೇಶಿ ಭೇಟಿಗಳಲ್ಲಿ ಚರ್ಚೆ ನಡೆಸಲಾಗುವ ವಿಚಾರಗಳು ಅವರ ಪರಿಧಿಗೆ ಬರುವುದಿಲ್ಲ. ಅವರು ರಾಜ್ಯ ಪಟ್ಟಿಗೆ ಬರುತ್ತವೆ. ದೇಶದ ಯಾವ ಮುಖ್ಯಮಂತ್ರಿ ಕೂಡ ವಿದೇಶ ಪ್ರವಾಸ ಮಾಡಲು ಆಗುವುದಿಲ್ಲ. ಆದ್ದರಿಂದ ಎಲ್‌ಜಿಯವರ ಸಲಹೆಯನ್ನು ನಾನು ನಯವಾಗಿಯೇ ತಿರಸ್ಕರಿಸಬಯಸುತ್ತೇನೆ. ಆ ಪ್ರವಾಸ ಹೋಗುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ರಾಜಕೀಯ ಅನುಮತಿಗೆ ಮನವಿ ಸಲ್ಲಿಸುತ್ತೇನೆ," ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ದಿಲ್ಲಿ ಸರಕಾರದ ವಿರುದ್ಧ ತನಿಖೆಗೆ ಶಿಫಾರಸು

ದಿಲ್ಲಿ ಸರಕಾರದ ವಿರುದ್ಧ ತನಿಖೆಗೆ ಶಿಫಾರಸು

ಈ ಬೆಳವಣಿಗೆ ಆದ ಬೆನ್ನಲ್ಲೇ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಇಂದು ಶುಕ್ರವಾರ ಕೇಜ್ರಿವಾಲ್ ಸರಕಾರದ ಹೊಸ ಅಕ್ರಮ ಆರೋಪ ಪ್ರಕರಣವೊಂದನ್ನು ಸಿಬಿಐನಿಂದ ತನಿಖೆಗೆ ಒಳಪಡಿಸಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದಾರೆ.

ದೆಹಲಿ ಸರಕಾರದ ಹೊಸ ಅಬಕಾರಿ ನೀತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಇರುವ ಪ್ರಕರಣ ಇದು. ಖಾಸಗಿ ಮದ್ಯ ದೊರೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಜುಲೈ 8ರಂದು ದೆಹಲಿ ಸರಕಾರದ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿತ್ತು.

ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾವರೆಗೂ ವಿವಿಧ ಹಂತಗಳಲ್ಲಿ ವ್ಯಕ್ತಿಗಳಿಗೆ ಈ ಅಕ್ರಮ ಹಣದ ಫಲ ಸಿಕ್ಕಿದೆ ಎಂಬುದು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಆರೋಪ.

ಸಿಎಂ ವರ್ಸಸ್ ಎಲ್‌ಜಿ

ಸಿಎಂ ವರ್ಸಸ್ ಎಲ್‌ಜಿ

2013ರಲ್ಲಿ ಅರವಿಂದ್ ಕೇಜ್ರಿವಾಲ್ ದೆಹಲಿ ಸಿಎಂ ಆದಾಗಿನಿಂದಲೂ ಲೆಫ್ಟಿನೆಂಟ್ ಗವರ್ನರ್ ಜೊತೆ ಸಂಘರ್ಷ ನಡೆಯುತ್ತಲೇ ಇದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇಬ್ಬರ ಮಧ್ಯೆ ತಿಕ್ಕಾಟ ಹೆಚ್ಚಾಗಿದೆ. ಮೊದಲಿಗೆ ಲೆಫ್ಟಿನೆಂಟ್ ಗವರ್ನರ್ ಆಗಿದ್ದವರು ನಜೀಬ್ ಜುಂಗ್. ದೆಹಲಿಯಲ್ಲಿರುವ ಸರಕಾರಿ ಅಧಿಕಾರಿಗಳ ಹಿಡಿತ ರಾಜ್ಯ ಸರಕಾರದ್ದಿರಬೇಕೋ ಅಥವಾ ಕೇಂದ್ರ ಸರಕಾರದ್ದಿರಬೇಕೋ ಎಂಬ ಹಗ್ಗಜಗ್ಗಾಟ ಜೋರಾಗಿತ್ತು. ರಾಜ್ಯ ಸರಕಾರ ಅನುಮೋದನೆಗೆ ಕಳುಹಿಸಿದ ಕಡತಗಳನ್ನು ಲೆಫ್ಟಿನೆಂಟ್ ಗವರ್ನರ್ ವಿವಿಧ ಕಾರಣವೊಡ್ಡಿ ತಿರಸ್ಕರಿಸುತ್ತಿದ್ದು.

ಜುಂಗ್ ಬಳಿಕ ಬಂದ ಇಬ್ಬರು ಲೆಫ್ಟಿನೆಂಟ್ ಗವರ್ನರ್ ಕೂಡ ಇದೇ ಪರಂಪರೆ ಮುಂದುವರಿಸಿದಂತಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+