ವಿಶ್ಲೇಷಣೆ : ಸಿದ್ದರಾಮಯ್ಯ ಯುರೋಪ್ ಪ್ರವಾಸದ ರಹಸ್ಯ ಬಟಾಬಯಲು!

Recommended Video

      ಸಿದ್ದರಾಮಯ್ಯನವರ ಯೂರೋಪ್ ಪ್ರವಾಸದ ಹಿಂದಿರುವ ರಹಸ್ಯ ಬಯಲು? | Oneindia kannada

      ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಯೂರೋಪ್ ಪ್ರವಾಸದಿಂದ ಬಿಜೆಪಿಗೆ ಅನುಕೂಲವಾಗಲಿದೆಯೇ? ಹಾಗೆಂಬುದೊಂದು ಕುತೂಹಲ ರಾಜಕೀಯ ವಲಯಗಳಲ್ಲಿ ಕಾಣಿಸಿಕೊಂಡಿದೆ. ಸಿದ್ದರಾಯ್ಯ ಯೂರೋಪ್ ಪ್ರವಾಸ ಹೋಗುವುದಕ್ಕೂ, ಬಿಜೆಪಿಗೆ ಲಾಭವಾಗುವುದಕ್ಕೂ ಏನು ಸಂಬಂಧ? ಎಂಬ ಪ್ರಶ್ನೆ ಏಳುವುದು ಸಹಜ.

      ಆದರೆ ಸಿದ್ದರಾಮಯ್ಯ ಅವರ ಯೂರೋಪ್ ಪ್ರವಾಸ ನಿಗದಿಯಾಗುವುದಕ್ಕೂ ಮುನ್ನ ಬಿಜೆಪಿಯಲ್ಲಿ ನಡೆದ ಒಂದು ಘಟನೆ ಇಂತಹ ಕುತೂಹಲಕ್ಕೆ ಇಂಬು ನೀಡುವಂತಿದೆ. ಸರ್ಕಾರ ರಚನೆ ಮಾಡುವುದೇ ಆದರೆ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಬೇಕು. ಆದರೆ ಈ ಕಾರ್ಯಾಚರಣೆ ತಡವಾದಷ್ಟೂ ಬಿಜೆಪಿಗೆ ಡ್ಯಾಮೇಜ್. ಹೀಗಾಗಿ ತ್ವರಿತವಾಗಿ ಪೂರ್ಣಗೊಳಿಸುವ ವಿಶ್ವಾಸ ನಿಮ್ಮಲ್ಲಿದ್ದರೆ ಅಂತಹ ಪ್ರಯತ್ನ ಮಾಡಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸಿಗ್ನಲ್ ನೀಡಿದ್ದಾರೆ ಎಂಬುದೇ ಆ ಬೆಳವಣಿಗೆ.

      ವಾಸ್ತವವಾಗಿ ಕೆಲ ಕಾಲದ ಹಿಂದೆ ಯಡಿಯೂರಪ್ಪ ಎರಡು ಬಾರಿ ದೆಹಲಿಗೆ ಹೋಗಿ, ಸರ್ಕಾರ ರಚಿಸಲು ವೇದಿಕೆ ಅಣಿಯಾಗಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಸುಮಾರು ಇಪ್ಪತ್ತು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ತಯಾರಾಗಿದ್ದಾರೆ. ಹೀಗಾಗಿ ನೀವು ಒಪ್ಪಿಗೆ ನೀಡಿ ಎಂದು ಯಡಿಯೂರಪ್ಪ ವರಿಷ್ಠರಿಗೆ ಹೇಳಿದ್ದರು.

      ಆದರೆ ಯಡಿಯೂರಪ್ಪ ಅದೇನೇ ಹೇಳಿದರೂ ಬಿಜೆಪಿ ಹೈಕಮಾಂಡ್ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಮುಂದಿನ ವರ್ಷ ಪಾರ್ಲಿಮೆಂಟ್ ಚುನಾವಣೆ ಇರುವುದರಿಂದ ರಾಜ್ಯ ಬಿಜೆಪಿ ಏನಾದರೂ ಆಪರೇಷನ್ ಕಮಲ ಕಾರ್ಯಾಚರಣೆಗೆ ಕೈ ಹಾಕಿದರೆ ರಾಷ್ಟ್ರ ಮಟ್ಟದಲ್ಲಿ ಪಕ್ಷದ ವರ್ಚಸ್ಸಿಗೆ ಡ್ಯಾಮೇಜ್ ಆಗುತ್ತದೆ ಎಂದು ಅಮಿತ್ ಶಾ ಅವರೇ ಸ್ಪಷ್ಟವಾಗಿ ಯಡಿಯೂರಪ್ಪ ಅವರಿಗೆ ಹೇಳಿದ್ದರು.

      ನನ್ನ ದಾರಿ ನನಗೆ ಎಂದು ಬಿಎಸ್ವೈ ಬೆದರಿಕೆ

      ನನ್ನ ದಾರಿ ನನಗೆ ಎಂದು ಬಿಎಸ್ವೈ ಬೆದರಿಕೆ

      ಆದರೆ ಇತ್ತೀಚಿನ ದಶಕಗಳಲ್ಲಿ ಪರರ ಪಕ್ಷದಿಂದ ಶಾಸಕರನ್ನು ಸೆಳೆಯುವ ಕೆಲಸ ಕರ್ನಾಟಕ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿದೆ. ನಡೆಯುತ್ತಲೂ ಇದೆ. ಹೀಗಿರುವಾಗ ಬಿಜೆಪಿ ಹೈಕಮಾಂಡ್ ಯಾವ ಕಾರಣಕ್ಕಾಗಿ ಯಡಿಯೂರಪ್ಪ ಅವರಿಗೆ ತಡೆ ಮಾಡುತ್ತಿದೆ? ಎಂಬ ಕುತೂಹಲ ರಾಷ್ಟ್ರ ಮಟ್ಟದಲ್ಲೇ ಶುರುವಾಗಿತ್ತು.

      ಆದರೆ ಕೊನೆಗೆ ಗೊತ್ತಾದ ಸತ್ಯವೆಂದರೆ, ಮುಂದಿನ ಪಾರ್ಲಿಮೆಂಟ್ ಚುನಾವಣೆಯಲ್ಲಿ ಲಿಂಗಾಯತರ ವೋಟು ಪಡೆಯುವ ಸಲುವಾಗಿ ಯಡಿಯೂರಪ್ಪ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿಕೊಳ್ಳುವುದು. ಪಾರ್ಲಿಮೆಂಟ್ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಸರ್ಕಾರ ಬದಲಾಗುವಂತೆ ಮಾಡಿ ಜೆಡಿಎಸ್ ಜತೆ ಕೈ ಜೋಡಿಸಿ ಸರ್ಕಾರ ರಚಿಸುವುದು ಅದರ ಯೋಚನೆ ಎಂಬುದು.

      ಹೀಗೆ ಸರ್ಕಾರ ಬದಲು ಮಾಡುವ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಪಕ್ಕಕ್ಕೆ ಸರಿಸುವುದು, ಜೆಡಿಎಸ್ ಬೆಂಬಲದ ಜತೆ ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಮಾಡಿ ಆಟ ಆಡುವುದು ಎಂಬ ಲೆಕ್ಕಾಚಾರ ಬಿಜಿಪಿ ಹೈಕಮಾಂಡ್ ನಲ್ಲಿದೆ ಎಂಬ ಮಾತು ಯಡಿಯೂರಪ್ಪ ಅವರ ಕಿವಿಯವರೆಗೆ ಬಂದು ತಲುಪಿದ್ದು ಕೂಡಾ ರಹಸ್ಯವೇನಲ್ಲ.

      ಯಾವಾಗ ಈ ವಿಷಯ ತಿಳಿಯಿತೋ? ಯಡಿಯೂರಪ್ಪ ಹೈಕಮಾಂಡ್ ವರಿಷ್ಠರ ಬಳಿ ನೇರವಾಗಿಯೇ ಆ ಕುರಿತು ಪ್ರಸ್ತಾಪಿಸಿದರು. ಇಂತಹ ಲೆಕ್ಕಾಚಾರವೇನಾದರೂ ಇದ್ದರೆ ನಾನು ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂಬ ಬೆದರಿಕೆ ಹಾಕಿದರು.

      ಸರಕಾರ ರಚಿಸಲು ಬಿಎಸ್ವೈಗೆ ಗ್ರೀನ್ ಸಿಗ್ನಲ್

      ಸರಕಾರ ರಚಿಸಲು ಬಿಎಸ್ವೈಗೆ ಗ್ರೀನ್ ಸಿಗ್ನಲ್

      ಪರಿಣಾಮ? ಈಗ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಗ್ರೀನ್ ಸಿಗ್ನಲ್ ನೀಡಿದೆ. ಆದರೆ ತ್ವರಿತವಾಗಿ ಈ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾದರೆ ಮಾತ್ರ ಕೈ ಹಾಕಿ. ಯಾಕೆಂದರೆ ನೀವು ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತಂದರೆ ನಮಗೆ ಲಾಭವೇ ಹೊರತು ನಷ್ಟವೇನಿಲ್ಲ ಎಂದು ಹೊಸ ವರಸೆ ತೆಗೆದಿದೆ.

      ಅದು ಈ ರೀತಿ ವರಸೆ ಬದಲಿಸಲು ಯಡಿಯೂರಪ್ಪ ಅವರ ಒತ್ತಡ ಮಾತ್ರ ಕಾರಣವಲ್ಲ, ಜತೆಗೆ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯೇತರ ಮತಗಳನ್ನು ಕನ್ ಸಾಲಿಡೇಟ್ ಮಾಡುತ್ತಿದ್ದಾರೆ. ಅವರು ಜಾರಿಗೆ ತರುತ್ತಿರುವ ಸ್ಕೀಮುಗಳ ಹಿಂದೆ ಇದೇ ಅಂಶ ಕೆಲಸ ಮಾಡುತ್ತಿದೆ ಎಂಬ ವಿವರ ಅದಕ್ಕೆ ದಕ್ಕಿರುವುದೂ ಮತ್ತೊಂದು ಕಾರಣ.

      ರಾಜ್ಯದಲ್ಲಿ ಬಿಜೆಪಿಯ ಭವಿಷ್ಯವೇನು?

      ರಾಜ್ಯದಲ್ಲಿ ಬಿಜೆಪಿಯ ಭವಿಷ್ಯವೇನು?

      ಅರ್ಥಾತ್, ಜೆಡಿಎಸ್ ಪಕ್ಷ ಇವತ್ತಲ್ಲ ನಾಳೆ ಬಿಜೆಪಿ ಜತೆ ಕೈ ಜೋಡಿಸುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದ ಕಮಲ ಪಾಳೆಯದ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಒಂದು ವೇಳೆ ತಮ್ಮ ಗುರಿ ಸಾಧಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾದರೆ? ರಾಜ್ಯದಲ್ಲಿ ಬಿಜೆಪಿಯ ಭವಿಷ್ಯವೇನು? ಅನ್ನುವ ಪ್ರಶ್ನೆ ಕಾಡಿದೆ.

      ಹಾಗಂತಲೇ ಏಕಕಾಲಕ್ಕೆ ಕುಮಾರಸ್ವಾಮಿ ಅವರ ಸರ್ಕಾರವನ್ನು ಅಲುಗಾಡಿಸಬೇಕು. ಆದರೆ ಹಾಗೆ ಅಲುಗಾಡಿಸುವಾಗ ಹೆಚ್ಚು ಸೌಂಡ್ ಆಗಬಾರದು ಎಂಬ ಲೆಕ್ಕಾಚಾರದೊಂದಿಗೆ ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

      ಕುತೂಹಲದ ಸಂಗತಿ ಎಂದರೆ, ಯಡಿಯೂರಪ್ಪ ಅವರು ತಮ್ಮ ಜತೆಗೆ ಬರಲು ಸಜ್ಜಾಗಿದ್ದಾರೆ ಎಂದು ಹೇಳಿಕೊಳ್ಳುತ್ತಿರುವ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಆಪ್ತರು. ಅಂದ ಹಾಗೆ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ಸರ್ಕಾರ ನಡೆಯುತ್ತಿರುವ ಕುರಿತು ಏನೇ ಅಸಮಾಧಾನಗಳಿರಲಿ, ಆದರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿಷಯದಲ್ಲಿ ದೊಡ್ಡ ಮಟ್ಟದ ಗೌರವವಿದೆ.

      ಸಾಲದೆಂಬಂತೆ ಅವರು ಕೂಡಾ ಪದೇ ಪದೇ, ಸಿದ್ದರಾಮಯ್ಯಾಜೀ, ಸರ್ಕಾರದ ಬಗ್ಗೆ ನಿಮಗೆ ಏನೇ ಅಸಮಾಧಾನಗಳಿರಬಹುದು, ಆದರೆ ಯಾವ ಕಾರಣಕ್ಕೂ ಅದು ಉರುಳದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.

      ಡಬಲ್ ಗೇಮ್ ಆಡುತ್ತಿದ್ದಾರಾ ಸಿದ್ದರಾಮಯ್ಯ?

      ಡಬಲ್ ಗೇಮ್ ಆಡುತ್ತಿದ್ದಾರಾ ಸಿದ್ದರಾಮಯ್ಯ?

      ಆಗಸ್ಟ್ ಮೂವತ್ತೊಂದರ ಸಮನ್ವಯ ಸಮಿತಿ ಸಭೆಯ ನಂತರ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಸರ್ಕಾರದ ಸಾಧನೆಗಳ ಕುರಿತು ಸರ್ಟಿಫಿಕೇಟು ಕೊಟ್ಟಿದ್ದೇ ಇದಕ್ಕೆ ಸಾಕ್ಷಿ. ಅದರೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಬಗ್ಗೆ ಏವೇ ಗೌರವವಿದ್ದರೂ, ದೇವೇಗೌಡ ಹಾಗೂ ಕುಮಾರಸ್ವಾಮಿ ಇಡುತ್ತಿರುವ ಹೆಜ್ಜೆ ಸಿದ್ದರಾಮಯ್ಯ ಅವರನ್ನು ಘಾಸಿಗೊಳಿಸಿರುವುದೂ ನಿಜ.

      ಹೀಗಾಗಿ ಬಿಜೆಪಿ ಸರ್ಕಾರ ರಚಿಸಲು ಪೂರಕವಾದ ವಾತಾವರಣ ನಿರ್ಮಾಣವಾಗುವುದಾದರೆ ಆಗಲಿ ಎಂದವರು ಬಯಸುತ್ತಿದ್ದಾರೆ. ಹೀಗಾಗಿ ತಾವು ಯೂರೋಪ್ ಪ್ರವಾಸಕ್ಕೆ ಹೋದ ಕಾಲದಲ್ಲಿ ಇಲ್ಲಿ ಏನೇ ಸ್ಥಿತ್ಯಂತರಗಳು ನಡೆದರೂ ಅದಕ್ಕೆ ತಾವು ಜವಾಬ್ದಾರಿಯಲ್ಲ ಎಂಬುದನ್ನು ಬಿಂಬಿಸಲು ಬಯಸುತ್ತಿದ್ದಾರೆ ಎಂಬುದು ಕುಮಾರಸ್ವಾಮಿ ಅವರಿಗೆ ಆಪ್ತರಾಗಿರುವ ಕಾಂಗ್ರೆಸ್ ನಾಯಕರ ಮಾತು.

      ಸಫಲರಾಗುತ್ತಾರಾ ಯಡಿಯೂರಪ್ಪ?

      ಸಫಲರಾಗುತ್ತಾರಾ ಯಡಿಯೂರಪ್ಪ?

      ಸಂಪರ್ಕ ಮಾಧ್ಯಮಗಳು ಪ್ರಬಲವಾಗಿರುವ ಕಾಲದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸಿದ್ದರಾಮಯ್ಯ ತಮ್ಮ ಆಪ್ತರನ್ನು ಹೊರಹೋಗದಂತೆ ನೋಡಿಕೊಳ್ಳುವ ಶಕ್ತಿ ಹೊಂದಿಲ್ಲವೇ? ಅನ್ನುವ ಮಾತು ಕೇಳಬಹುದು. ಆದರೆ ಒಬ್ಬ ನಾಯಕ ಕಣ್ಣೆದುರಿಗಿದ್ದಾಗ ಆಡುವ ಆಟಕ್ಕೂ, ದೂರ ಹೋದಾಗ ಅಡುವ ಆಟಕ್ಕೂ ವ್ಯತ್ಯಾಸವಿದೆ.

      ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಾವಂದುಕೊಂಡಂತೆ ಆಡಲು ಸಫಲರಾದರೆ, ಆಗ ಸಿದ್ದರಾಮಯ್ಯ ಅವರು ತಮ್ಮ ಮೇಲಿನ ಅಪವಾದದಿಂದ ನುಣುಚಿಕೊಳ್ಳಬಹುದು. ನನಗೆ ಇಂತವರು ಸಂಪರ್ಕಕ್ಕೇ ಸಿಗುತ್ತಿಲ್ಲ ಎಂದು ರಾಹುಲ್ ಗಾಂಧಿ ಅವರೆದುರು ಅಸಹಾಯಕತೆ ತೋಡಿಕೊಳ್ಳಬಹುದು.

      ಪರಿಸ್ಥಿತಿ ಹೀಗಿರುವ ಕಾಲದಲ್ಲೇ ಸಿದ್ದರಾಮಯ್ಯ ಅವರ ಅಪ್ತ ಸಿ.ಎಂ. ಇಬ್ರಾಹಿಂ ಅವರು ಸರ್ಕಾರದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಕಾರಿದ್ದಾರೆ. ತಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ನಾವೇನೆಂಬುದನ್ನು ತೋರಿಸುತ್ತೇವೆ ಎಂದಿದ್ದಾರೆ. ಸಿದ್ದರಾಮಯ್ಯ ಅವರ ವಿದೇಶ ಪ್ರಯಾಣಕ್ಕೆ ಕಾಂಗ್ರೆಸ್ಸಿನಲ್ಲಿಯೇ ಭಾರೀ ಅಸಮಾಧಾನ ಭುಗಿಲೆದ್ದಿತ್ತು.

      ಕಾಂಗ್ರೆಸ್ ಶಕ್ತಿ ಕುಸಿಯುತ್ತಿದೆ, ಜೆಡಿಎಸ್ ಬೆಳೆಯುತ್ತಿದೆ

      ಕಾಂಗ್ರೆಸ್ ಶಕ್ತಿ ಕುಸಿಯುತ್ತಿದೆ, ಜೆಡಿಎಸ್ ಬೆಳೆಯುತ್ತಿದೆ

      ಈ ಮಧ್ಯೆ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ತಮಗೆ ಪ್ರಾತಿನಿಧ್ಯ ಸಿಗದೇ ಇರುವುದರಿಂದ ಕೈ ಪಾಳೆಯದ ಒಂದು ಡಜನ್ ಗೂ ಹೆಚ್ಚು ನಾಯಕರು ತಮ್ಮದೇ ಆದ ಪ್ರತ್ಯೇಕ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಈ ಗುಂಪುಗಳ ಪೈಕಿ ಬಹುತೇಕ ಗುಂಪುಗಳು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ವಿರುದ್ಧ ನಿಂತಿವೆ.

      ಕೇಳಿದರೆ, ಪರಮೇಶ್ವರ್ ಅವರು ಕುಮಾರಸ್ವಾಮಿ ಅವರ ಜತೆ ಹೊಂದಾಣಿಕೆ ಮಾಡಿಕೊಂಡು ಕೈ ಪಾಳೆಯದ ಬುಡಕ್ಕೆ ಗುನ್ನ ಹಾಕುತ್ತಿದ್ದಾರೆ. ಪರಿಣಾಮವಾಗಿ ಕಾಂಗ್ರೆಸ್ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜೆಡಿಎಸ್ ಶಕ್ತಿ ಬೆಳೆಯುತ್ತಿದೆ ಎಂದು ಹೇಳುತ್ತಿದ್ದಾರೆ.

      ಬಿಎಸ್ವೈಗೆ ಗ್ರೀನ್ ಸಿಗ್ನಲ್, ಸಿದ್ದು ವಿದೇಶಕ್ಕೆ

      ಬಿಎಸ್ವೈಗೆ ಗ್ರೀನ್ ಸಿಗ್ನಲ್, ಸಿದ್ದು ವಿದೇಶಕ್ಕೆ

      ಇಂತಹ ಕಾಲಘಟ್ಟದಲ್ಲೇ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಬಿಜೆಪಿ ಹೈಕಮಾಂಡ್ ನೀಡಿರುವ ಗ್ರೀನ್ ಸಿಗ್ನಲ್ ಮತ್ತು ಸಿದ್ದರಾಮಯ್ಯ ಅವರ ಯೂರೋಪ್ ಪ್ರವಾಸ ಒಂದಕ್ಕೊಂದು ಲಿಂಕ್ ಆಗಿ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿಸಿದೆ. ಮುಂದೇನಾಗುತ್ತದೋ? ಅದು ಬೇರೆ ವಿಷಯ.

      ಆದರೆ ಹಿಂದೆ ಉಪಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ ತೊರೆಯಲು ಸಿದ್ದರಾಮಯ್ಯ ನಿರ್ಧರಿಸಿದ್ದು ಕೂಡಾ ವಿದೇಶದಲ್ಲೇ ಎಂಬ ಸಂಗತಿ ಗೊತ್ತಿರುವವರಿಗೆ ಅವರ ಈಗಿನ ಯೂರೋಪ್ ಪ್ರವಾಸ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಗಣೇಶ ಚತುರ್ಥಿ ಮುಗಿದ ನಂತರ ರಾಜ್ಯ ರಾಜಕಾರಣದಲ್ಲಿ ಏನೇನು ಹುನ್ನಾರಗಳು ನಡೆಯುತ್ತಿವೆ, ಯಾರು ಯಾವ ಆಟವಾಡುತ್ತಿದ್ದಾರೆ ಎಂಬುದು ಗೊತ್ತಾಗಲಿದೆ. ಅಲ್ಲಿಯವರೆಗೆ ಕುತೂಹಲ ಉಳಿಸಿಕೊಂಡಿರಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+