ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸದಿರಲು ಕಾರಣವೇನು?
Recommended Video
ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್ ಶೋ ಮಾಡುತ್ತಿದ್ದು, ಲಕ್ಷಾಂತರ ಜನ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆ ಮೂಲಕ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆ, ಇಲ್ಲಿ ಏನಿದ್ದರೂ ನಮ್ಮದೇ ಹವಾ ಎಂಬ ಸಂದೇಶವನ್ನು ಎದುರಾಳಿ ಕಾಂಗ್ರೆಸ್ಸಿಗೆ ರವಾನಿಸಿದಂತೆ ಕಾಣುತ್ತಿದೆ.
ಇಷ್ಟಕ್ಕೂ ಬಿಜೆಪಿ ಇಲ್ಲಿ ಇಂತಹದೊಂದು ಬೃಹತ್ ರೋಡ್ ಶೋ ಮಾಡಲು ಮುಖ್ಯ ಕಾರಣವೂ ಇದೆ. ಅದು ಏನೆಂದರೆ ಈ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುತ್ತಾರೆ ಎಂಬ ವದಂತಿ ಹರಡಿತ್ತು. ಬಹುಶಃ ಆ ಕಾರಣಕ್ಕಾಗಿಯೇ ಬಿಜೆಪಿ ಬೃಹತ್ ಮಟ್ಟದ ರೋಡ್ ಶೋ ಮತ್ತು ಸಮಾವೇಶವನ್ನು ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು.
ಇದೀಗ ಮೋದಿ ಅವರ ಹಾದಿ ಸುಗಮವಾಗಿದೆ, ಎಐಸಿಸಿ ರಾಹುಲ್ ಗಾಂಧಿ ಅವರು ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಮಾಡಿದ್ದಾರೆ. ಹೀಗಾಗಿ ಜನರ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.
ಇಲ್ಲಿ ತನಕವೂ ಮೋದಿ ಅವರ ವಿರುದ್ಧ ನೆಹರು ಕುಟುಂಬದ ಕುಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುತ್ತಾರೆ ಎಂಬ ವದಂತಿ ಹರಿದಾಡುತ್ತಲೇ ಇತ್ತು. ಹೀಗಾಗಿ ಜನ ಕೂಡ ಕುತೂಹಲದ ನೋಟ ಬೀರಿದ್ದರು.
ಹಾಗೆ ನೋಡಿದರೆ ಪ್ರಿಯಾಂಕಾ ವಾದ್ರಾ ಅವರು ಅಜ್ಜಿ ಇಂದಿರಾ ಗಾಂಧಿ ಅವರನ್ನು ಹೋಲುತ್ತಿದ್ದು, ಅವರಲ್ಲಿದ್ದ ನಾಯಕತ್ವದ ಗುಣಗಳು ಸೇರಿದಂತೆ ಹಲವು ರೀತಿಯಲ್ಲಿ ಹೋಲಿಕೆಗಳು ಇರುವುದರಿಂದ ಭವಿಷ್ಯದ ನಾಯಕಿಯಾಗುವ ಎಲ್ಲ ಲಕ್ಷಣಗಳು ಇವೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇ ಆದರೆ ಪಕ್ಷದ ಏಳ್ಗೆ ಸಾಧ್ಯವಾಗುತ್ತದೆ ಎಂಬಿತ್ಯಾದಿ ಮಾತುಗಳು ಕಾಂಗ್ರೆಸ್ನಲ್ಲಿ ಕೇಳಿಬಂದಿದ್ದವು.
ಆದರೆ ಇಲ್ಲಿಯವರೆಗೂ ರಾಜಕೀಯದಿಂದ ದೂರವೇ ಇದ್ದು ಕೇವಲ ಚುನಾವಣಾ ಪ್ರಚಾರಗಳಲ್ಲಷ್ಟೆ ಭಾಗವಹಿಸುತ್ತಿದ್ದ ಪ್ರಿಯಾಂಕಾ ಅವರು ಸದ್ಯ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದಾರೆಯಲ್ಲದೆ, ಆ ಮೂಲಕ ಸಹೋದರ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಪಣ ತೊಟ್ಟಿದ್ದಾರೆ.

ಮೋದಿ ವಿರುದ್ಧ ಗೆಲ್ಲಬೇಕೆಂಬ ಒತ್ತಾಯ
ಕಾಂಗ್ರೆಸ್ ನಾಯಕರು ಹೇಳುವ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ನಾಗಾಲೋಟಕ್ಕೆ ತಡೆಯೊಡ್ಡುವ ಶಕ್ತಿ ಇರುವುದು ಕೇವಲ ಪ್ರಿಯಾಂಕಾ ವಾದ್ರಾ ಅವರಿಗೆ ಮಾತ್ರವಂತೆ. ಹೀಗಾಗಿ ಮೋದಿ ವಿರುದ್ಧವೇ ಸ್ಪರ್ಧೆಗಿಳಿಸಿ ಗೆಲುವು ಸಾಧಿಸಬೇಕೇಂಬ ಒತ್ತಾಯವೂ ಹಲವು ನಾಯಕರದ್ದಾಗಿತ್ತು. ಈ ನಡುವೆ ಪ್ರಿಯಾಂಕಾ ಕೂಡ ತಾನು ಮೋದಿ ವಿರುದ್ಧ ಸ್ಪರ್ಧಿಸಲು ಉತ್ಸುಕಳಾಗಿರುವುದಾಗಿದ್ದು, ಈ ಬಗೆಗಿನ ನಿರ್ಧಾರವನ್ನು ಸಹೋದರ ರಾಹುಲ್ ಗಾಂಧಿಗೆ ಬಿಟ್ಟಿರುವುದಾಗಿ ಹೇಳಿದ್ದರು.

ಕೊನೆಗೂ ನಿರ್ಧಾರ ಪ್ರಕಟಿಸಿದ ರಾಹುಲ್
ಈ ವಿಚಾರದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದ ರಾಹುಲ್ ಗಾಂಧಿ ಅವರು ಈಗ ತಮ್ಮ ಕೊನೆಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಅವರನ್ನು ಮೋದಿ ವಿರುದ್ಧ ಸ್ಪರ್ಧಿಸದಂತೆ ಸೂಚಿಸಲು ಕಾರಣ ಏನಿರಬಹುದು? ಎಂಬುದನ್ನು ನೋಡುವುದಾದರೆ ಈಗಷ್ಟೆ ರಾಜಕೀಯಕ್ಕೆ ಬಂದಿರುವ ಪ್ರಿಯಾಂಕಾ ಅವರನ್ನು ಮೋದಿ ವಿರುದ್ಧ ನಿಲ್ಲಿಸಿದರೆ ಗೆಲುವು ಅಷ್ಟು ಸುಲಭವಲ್ಲ. ಜತೆಗೆ ಇಲ್ಲಿ ಕಾಂಗ್ರೆಸ್ನ್ನು ದೂರವಿಟ್ಟಿರುವ ಬಿಎಸ್ಪಿ ಮತ್ತು ಎಸ್ಪಿ ಪಕ್ಷಗಳು ಮೈತ್ರಿಯಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಹೀಗಾಗಿ ಇಲ್ಲಿ ಇತರೆ ಪಕ್ಷಗಳಿಂದ ಯಾವುದೇ ರೀತಿಯ ಬೆಂಬಲವೂ ಸಿಗುವ ಸಾಧ್ಯತೆಯೂ ಕಡಿಮೆಯೇ

ತುಂಬಾ ಪೈಪೋಟಿ ನೀಡುವ ಕ್ಷೇತ್ರ
ಒಂದು ವೇಳೆ ಸ್ಪರ್ಧಿಸಿ ಗೆದ್ದರೆ ಇತಿಹಾಸ ಸೃಷ್ಠಿಯಾಗುತ್ತದೆ. ಗೆಲ್ಲದೆ ಹೋದರೆ ನೆಹರೂ ಕುಟುಂಬದ ಪ್ರತಿಷ್ಠೆಗೆ ಕುಂದು ಬರುತ್ತದೆ. ಅಷ್ಟೇ ಅಲ್ಲ ಮೋದಿ ಮುಂದೆ ಇಡೀ ಕಾಂಗ್ರೆಸ್ ಪಕ್ಷ ತಲೆಬಾಗಿದಂತಾಗುತ್ತದೆ. ಇದು ಕೂಡ ಇತಿಹಾಸದಲ್ಲಿ ಹೊಸದೊಂದು ವ್ಯಾಖ್ಯಾನ ಬರೆಯಲೂ ಬಹುದು. ಈಗಷ್ಟೇ ರಾಜಕೀಯಕ್ಕೆ ಬಂದಿರುವ ಪ್ರಿಯಾಂಕಾ ಅವರಿಗೆ ಮೊದಲ ಬಾರಿಗೆ ತುಂಬಾ ಪೈಪೋಟಿ ನೀಡುವ ಕ್ಷೇತ್ರವನ್ನು ನೀಡದೆ, ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಬೇರೆ ಯಾವುದಾದರೂ ಕ್ಷೇತ್ರ ನೀಡುವ ಮೂಲಕ ಸುಲಭವಾಗಿ ಗೆಲ್ಲುವಂತೆ ನೋಡಿಕೊಳ್ಳುವ ತಂತ್ರವೂ ರಾಹುಲ್ ಗಾಂಧಿ ಅವರದ್ದಾಗಿದೆ.

ಅಜಯ್ ರೈ ಕಾಂಗ್ರೆಸ್ ಅಭ್ಯರ್ಥಿ
ಹೀಗಾಗಿ ಹೆಚ್ಚಿನ ತೊಂದರೆ ತೆಗೆದುಕೊಳ್ಳಲು ಹಿಂದೇಟು ಹಾಕಿದ ರಾಹುಲ್ ಗಾಂಧಿ ಅಂತಿಮವಾಗಿ ಅಜಯ್ ರೈ ಅವನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿನ ಹಾದಿ ಸುಗಮವಾದಂತೆಯೇ.. ಇಲ್ಲಿ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 29 ಕೊನೆಯ ದಿನಾಂಕ ಮೇ 19ರಂದು ಮತದಾನ ನಡೆಯಲಿದೆ. ಮೇ 23ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications