ಯಾವುದಯ್ಯ ನಿಜ ಶಿವಸೇನೆ; ಯಾರಿಗೆ ಒಲಿಯುವುದು ಪಕ್ಷದ ಹೊಣೆ!?
ಮುಂಬೈ, ಜುಲೈ 02: ಮಹಾರಾಷ್ಟ್ರದ ಶಿವಸೇನೆಯಲ್ಲಿ ಸೃಷ್ಟಿಯಾದ ಬಿಕ್ಕಟ್ಟು ಇಡೀ ಪಕ್ಷವನ್ನು ಒಡೆದ ಮನೆಯನ್ನಾಗಿ ಮಾಡಿದೆ. ಇದರ ಮಧ್ಯೆ ನಿಜವಾದ ಶಿವಸೇನೆ ಯಾವುದು ಎನ್ನುವುದರ ಬಗ್ಗೆ ಚರ್ಚೆ ಶುರುವಾಗಿದೆ.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣವು ನಿಜವಾದ ಶಿವಸೇನೆಯೇ ಅಥವಾ ಅತಿಹೆಚ್ಚು ಶಾಸಕರ ಬೆಂಬಲವನ್ನು ಪಡೆದಿರುವ ಏಕನಾಥ್ ಶಿಂಧೆ ಬಣವು ನಿಜವಾದ ಶಿವಸೇನೆಯೇ ಎನ್ನುವುದು ರಾಜಕೀಯ ವಲಯದ ಚರ್ಚೆಯ ವಿಷಯವಾಗಿದೆ.
ಬಿಜೆಪಿಯ ಜೊತೆಗೆ ಸೇರಿಕೊಂಡು ಈಗಾಗಲೇ ಏಕನಾಥ್ ಶಿಂಧೆ ನೂತನ ಸರ್ಕಾರ ರಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಮುಖ್ಯಮಂತ್ರಿ ಆಗಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವೀಸ್ ಅಧಿಕಾರ ಸ್ವೀಕರಿಸಿದ್ದೂ ಆಗಿದೆ. ಆದರೆ ಇದರ ಮಧ್ಯೆ ಶಿವಸೇನೆಯ ನಿಜವಾದ ಚಿಹ್ನೆ ಮತ್ತು ನಾಯಕತ್ವ ಯಾರಿಗೆ ಒಲಿಯಲಿದೆ ಎಂಬುದು ಪ್ರಶ್ನಾತ್ಮಕವಾಗಿದೆ. ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ನಡುವೆ ಶಿವಸೇನೆ ಮುಖ್ಯಸ್ಥ ಸ್ಥಾನ ಮತ್ತು ಪಕ್ಷದ ಚಿಹ್ನೆಗಾಗಿ ಯಾವ ರೀತಿ ಪೈಪೋಟಿ ನಡೆಯುತ್ತಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಆ ಹೋರ್ಡಿಂಗ್ಗಳು ಹೇಳುತ್ತಿವೆಯಾ ಭವಿಷ್ಯದ ಕಥೆ?
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಇಲ್ಲದ ಹೋರ್ಡಿಂಗ್ಗಳು ರಾರಾಜಿಸುತ್ತಿವೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ತವರು ಜಿಲ್ಲೆಯಲ್ಲಿ ಹೋರ್ಡಿಂಗ್ಗಳು ಬದಲಾವಣೆಯ ಭವಿಷ್ಯವನ್ನು ಹೇಳುತ್ತಿವೆ. ಶಿವಸೇನೆಗೆ ಸಂಬಂಧಿಸಿದ ಹೋರ್ಡಿಂಗ್ಗಳಲ್ಲಿ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಜೊತೆಗೆ ಏಕನಾಥ್ ಶಿಂಧೆ, ಅವರ ಆಪ್ತ ಆನಂದ್ ದಿಘೆ, ಸಂಸದ ಆಗಿರುವ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆಯ ಫೋಟೋಗಳು ಮತ್ತು ಪಕ್ಷದ ಲಾಂಛನವಾಗಿರುವ ಹುಲಿಯನ್ನು ಹಾಕಲಾಗಿದೆ. ಈ ಹೋರ್ಡಿಂಗ್ಗಳಿಂದ ಉದ್ಧವ್ ಠಾಕ್ರೆ ಹೊರಗೆ ಉಳಿದಿದ್ದಾರೆ. ಇದು ಶಿವಸೇನೆಯ ಮುಂದಿನ ಕಥೆ ಹೇಳುತ್ತಿದೆಯಾ ಎಂಬ ಅನುಮಾನವನ್ನು ಹುಟ್ಟು ಹಾಕುತ್ತದೆ.

ಸಿಎಂ ಕುರ್ಚಿ ಬಿಟ್ಟು ಜಾಣ ನಡೆ ಪ್ರದರ್ಶಿಸಿತಾ ಬಿಜೆಪಿ?
ಮಹಾರಾಷ್ಟ್ರದಲ್ಲಿ 106 ಶಾಸಕರನ್ನು ಹೊಂದಿದ್ದರೂ ಬಿಜೆಪಿಯು ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಳ್ಳಲಿಲ್ಲ. ಅದರ ಬದಲಿಗೆ 39 ಶಾಸಕರ ಬೆಂಬಲವನ್ನು ಹೊಂದಿರುವ ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಟ್ಟಿತು. ಆ ಮೂಲಕ ಭವಿಷ್ಯ ರಾಜಕೀಯ ಲೆಕ್ಕಾಚಾರದಲ್ಲಿ ಬಿಜೆಪಿಯು ಜಾಣ ನಡೆಯನ್ನು ಪ್ರದರ್ಶಿಸಿದಂತೆ ತೋರುತ್ತಿದೆ. ಒಂದು ಕಾಲದಲ್ಲಿ ಮುಖ್ಯಮಂತ್ರಿ ಆಗಿ ಆಡಳಿತವನ್ನು ನಡೆಸಿದ ದೇವೇಂದ್ರ ಫಡ್ನವೀಸ್ ಎರಡನೇ ಸ್ಥಾನವಾಗಿರುವ ಉಪ ಮುಖ್ಯಮಂತ್ರಿ ಆಗಿ ಪದಗ್ರಹಣವನ್ನು ಸ್ವೀಕರಿಸಿದರು.

ಉದ್ಧವ್ ಠಾಕ್ರೆ ವಿರುದ್ಧ ಮಾಸ್ಟರ್ ಸ್ಟ್ರೋಕ್ ಕೊಡುತ್ತಿದೆ ಬಿಜೆಪಿ?
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅನ್ನು ಮತ್ತಷ್ಟು ಪ್ರತ್ಯೇಕಿಸಲು ಬಿಜೆಪಿಯ ಮಾಸ್ಟರ್ಸ್ಟ್ರೋಕ್ ನಡೆಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಹಿನ್ನೆಲೆ ಏಕನಾಥ್ ಶಿಂಧೆ ಚುಕ್ಕಾಣಿ ಹಿಡಿದಿರುವುದು ಶಾಸಕಾಂಗದ ಒಳಗೆ ಮತ್ತು ಹೊರಗೆ ಹೆಚ್ಚಿನ ಶಿವಸೈನಿಕರನ್ನು ಸೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆಗೆ ಶಿವಸೈನಿಕರ ಬೆಂಬಲದೊಂದಿಗೆ ಒಂದು ಬಣವನ್ನು ಬಲಿಷ್ಠಗೊಳಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಯಿಂದ ಹೊರಬಂದ ದಿನದಿಂದಲೂ ತಾವು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಸಿದ್ಧಾಂತವನ್ನು ಅನುಸರಿಸುವುದಾಗಿ ಏಕನಾಥ್ ಶಿಂಧೆ ಹೇಳಿಕೊಳ್ಳುತ್ತಲೇ ಬಂದಿದ್ದಾರೆ.

ಶಿವಸೇನೆ ಕಾರ್ಯಕರ್ತರಿಗೆ ಮುಂದಿನ ದಾರಿ ಯಾವುದಯ್ಯ?
ಶಿವಸೇನೆಯ ಮೇಲ್ಮಟ್ಟದಲ್ಲಿ ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಎಂಬ ಎರಡು ಬಣಗಳು ಪಕ್ಷವನ್ನು ಇಬ್ಭಾಗ ಮಾಡುವ ಮಟ್ಟಕ್ಕೆ ಪೈಪೋಟಿಗೆ ಬಿದ್ದಿದೆ. ಇದು ಪಕ್ಷದ ಕೆಳಮಟ್ಟದ ಕಾರ್ಯಕರ್ತರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ತೀರಾ ಚರ್ಚೆ ಆಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಕೆಲವು ಕಾರ್ಯಕರ್ತರು ತಮ್ಮ ಶಾಸಕರನ್ನು ಬೆಂಬಲಿಸಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರೆ, ಇನ್ನೂ ಕೆಲವು ಕಾರ್ಯಕರ್ತರು ಬಾಳಾ ಸಾಹೇಬ್ ಮತ್ತು ಉದ್ಧವ್ ಠಾಕ್ರೆ ಕುಟುಂಬಕ್ಕೆ ನಿಷ್ಠರಾಗಿ ವರ್ತಿಸುತ್ತಿದ್ದಾರೆ. ಇದು ಕೆಳ ಮಟ್ಟದಲ್ಲಿ ಶಿವಸೇನೆಯನ್ನು ಒಡೆದ ಮನೆಯನ್ನಾಗಿ ಮಾಡುವುದೇ ಎಂಬ ಅನುಮಾನಗಳು ಸಹ ಹುಟ್ಟಿಕೊಳ್ಳುತ್ತಿವೆ.
ಈ ವರ್ಷ ಮುಂಬೈ ಸೇರಿದಂತೆ ಪ್ರಮುಖ ಮುನ್ಸಿಪಲ್ ಕಾರ್ಪೊರೇಷನ್ಗಳಿಗೆ ಮುಂಬರುವ ಚುನಾವಣೆಗಳು ನಡೆಯಲಿದ್ದು, ಉದ್ಧವ್ ಠಾಕ್ರೆ ಪಾಳಯದಿಂದ ಹಲವರು ಸ್ಪರ್ಧಿಸಲಿದ್ದಾರೆ.

ಶಿವಸೇನೆ ಹಕ್ಕು ಸಾಧಿಸಲು ಬಣಗಳ ಗುದ್ದಾಟ
ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಪ್ರಕಾರ, ಭಾರತೀಯ ಚುನಾವಣಾ ಆಯೋಗವು ಶಿವಸೇನೆ ಪಕ್ಷದ ಚಿಹ್ನೆಯನ್ನು ಯಾರು ಉಳಿಸಿಕೊಳ್ಳಬೇಕು ಮತ್ತು ಯಾವ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಲಾಗುತ್ತದೆ ಎಂಬುದರ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಲಭ್ಯವಿರುವ ಸತ್ಯ ಸಂಗತಿ ಮತ್ತು ಮಾಹಿತಿ ಆಧರಿಸಿದಂತೆ ಎಲ್ಲಾ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಪ್ರಕರಣ ಸಂಬಂದ ಚುನಾವಣಾ ಆಯೋಗವು ತೆಗೆದುಕೊಳ್ಳುವ ನಿರ್ಧಾರಕ್ಕೆ ಎರಡೂ ಬಣಗಳು ಬದ್ಧವಾಗಿರಬೇಕಾಗುತ್ತದೆ.
ಏಕನಾಥ್ ಶಿಂಧೆ ಸರ್ಕಾರವು ಬಂಡಾಯ ಶಾಸಕರ ಪರವಾಗಿ ಅನರ್ಹತೆ ಅರ್ಜಿಗಳ ಮೇಲೆ ತೀರ್ಪು ನೀಡಬಹುದಾದ ತಮ್ಮದೇ ಆದ ಸ್ಪೀಕರ್ ಅನ್ನು ಆಯ್ಕೆ ಮಾಡಬಹುದು. ಅವರು ಪಕ್ಷದ ವಿಪ್ ಅನ್ನು ಅನುಸರಿಸದ ಕಾರಣಕ್ಕಾಗಿ ಉದ್ಧವ್ ಠಾಕ್ರೆ ಪಾಳೆಯದ 16 ಶಾಸಕರನ್ನು ಅನರ್ಹಗೊಳಿಸುವ ಮಟ್ಟಕ್ಕೂ ಹೋಗಬಹುದು. ಆದರೆ, ಬಂಡಾಯ ಶಾಸಕರನ್ನು ಅನರ್ಹಗೊಳಿಸುವ ವಿಚಾರ ಇನ್ನೂ ಸುಪ್ರೀಂ ಕೋರ್ಟ್ನಲ್ಲಿದೆ.

ಏಕನಾಥ್ ಶಿಂಧೆಗೆ ಒಲಿಯುತ್ತಾ ನಿಜವಾದ ಶಿವಸೇನೆ ಹೊಣೆ?
ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಶಿವಸೇನೆ ಶಾಸಕರ ಬೆಂಬಲವನ್ನು ಹೊಂದಿರುವ ಏಕನಾಥ್ ಶಿಂಧೆ ಬಣವನ್ನೇ ನಿಜವಾದ ಶಿವಸೇನೆ ಎಂದು ಪರಿಗಣಿಸಲಾಗುತ್ತದೆಯೇ ಅಥವಾ ಪಕ್ಷದ ಟ್ರೇಡ್ ಮಾರ್ಕ್, ಲಾಂಛನ ಅಥವಾ ಚುನಾವಣಾ ಚಿಹ್ನೆಯಾಗಿರುವ ಬಿಲ್ಲು ಮತ್ತು ಬಾಣವನ್ನು ಕೊಡಬಹುದೇ ಎಂಬುದು ಪ್ರಶ್ನೆಯಾಗಿದೆ. ಪಕ್ಷದ ವಿವಿಧ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಗಳು, ಅದರ ಟ್ರೇಡ್ ಯೂನಿಯನ್, ಮಹಿಳಾ ವಿಭಾಗ, ಯುವ ಘಟಕಗಳಂತಹ ಇತರ ಚುನಾಯಿತ ಶಾಖೆಗಳು, ಪಕ್ಷದ ಸದಸ್ಯರ ಸಂಖ್ಯೆ, ಸಕ್ರಿಯ ಸದಸ್ಯರು, ಇತರರು ಶಾಸಕರ ಸಂಖ್ಯೆಯ ಜೊತೆಗೆ ಲೆಕ್ಕಕ್ಕೆ ಬರುತ್ತಾರೆ.
ಒಮ್ಮೆ ಬಂಡಾಯ ಬಣವು ತಮ್ಮ ಹಕ್ಕುಗಳನ್ನು ಮಂಡಿಸಿದರೆ, ಅಂತಹ ವಿವಾದಗಳಲ್ಲಿ ಪೂರ್ವನಿದರ್ಶನಗಳನ್ನು ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿಭಜಿತ ಬಣಗಳಲ್ಲಿ ಯಾವುದು ಮೂಲ ಶಿವಸೇನೆಗೆ ಅರ್ಹವಾಗಿದೆ ಎಂಬುದರ ಮೇಲೆ ಪಕ್ಷದ ಆಸ್ತಿಯನ್ನು ಹಂಚಲಾಗುತ್ತದೆ. ಅ ಸಂಬಂಧ ಚುನಾವಣಾ ಆಯೋಗವು ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳಲಿದೆ. ಚುನಾವಣಾ ಆಯೋಗದ ನಿರ್ಧಾರದ ನಂತರದಲ್ಲೂ ಯಾವುದೇ ಬಣವು ಸುಪ್ರೀಂಕೋರ್ಟ್ ಮೊರೆಗೆ ಹೋಗಲು ಅವಕಾಶವಿದೆ.

ಸಿಎಂ ಏಕನಾಥ್ ಶಿಂಧೆಗೆ ಗೇಟ್ ಪಾಸ್ ಕೊಟ್ಟ ಉದ್ಧವ್ ಠಾಕ್ರೆ
ಶಿವಸೇನೆಯ ನಾಯಕತ್ವ ಯಾರಿಗೆ ಒಲಿಯುತ್ತೆ ಎಂಬುದರ ಚರ್ಚೆಯ ನಡುವೆ ಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಶಿವಸೇನೆಯಿಂದಲೇ ಹೊರ ಹಾಕಲಾಗುವುದು ಎಂದು ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ ಶುಕ್ರವಾರ ಘೋಷಿಸಿದ್ದಾರೆ. ಶಿವಸೇನೆ ಸಂಘಟನೆಯ ಸಂಘಟನಾ ನಾಯಕನ ಸ್ಥಾನದಿಂದ ಏಕನಾಥ್ ಶಿಂಧೆಯನ್ನು ತೆಗೆದು ಹಾಕಲಾಗುವುದು. ಏಕೆಂದರೆ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ "ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ" ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸ್ವಯಂಪ್ರೇರಣೆಯಿಂದ ತಮ್ಮ ಸದಸ್ಯತ್ವವನ್ನು ತ್ಯಜಿಸಿದ್ದಾರೆ ಎಂದು ಪಕ್ಷವು ಹೊರಡಿಸಿರುವ ಪತ್ರದಲ್ಲಿ ಉದ್ಧವ್ ಠಾಕ್ರೆ ಉಲ್ಲೇಖಿಸಿದ್ದಾರೆ.
"ಶಿವಸೇನಾ ಪಕ್ಷ ಪ್ರಮುಖನಾಗಿ ನನಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕುತ್ತೇನೆ" ಎಂದು ಉದ್ಧವ್ ಠಾಕ್ರೆ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

ಶಿಂಧೆ ಸರ್ಕಾರಕ್ಕೆ ಜುಲೈ 4ರಂದು ವಿಶ್ವಾಸ ಮತಯಾಚನೆ
ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರಕ್ಕೆ ಜುಲೈ 4ರಂದು ವಿಶ್ವಾಸಮತ ಸಾಬೀತುಪಡಿಸಬೇಕಾಗಿದೆ. ಶಿವಸೇನೆ-ಬಿಜೆಪಿ ಸರ್ಕಾರವು ಜುಲೈ 4ರಂದು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಏಕನಾಥ್ ಶಿಂಧೆ ಜೊತೆಗೆ ಗುರುತಿಸಿಕೊಂಡ ಇತರೆ ಬಂಡಾಯ ಶಾಸಕರು ಜುಲೈ 2ರಂದು ಮುಂಬೈಗೆ ಆಗಮಿಸಲಿದ್ದಾರೆ.
ಜುಲೈ 3 ಅಥವಾ 4ರಂದು ರಾಜ್ಯಪಾಲರು ಅಧಿವೇಶನ ಕರೆದಿದ್ದಾರೆ. ನಾವು 170 ಶಾಸಕರ ಬೆಂಬಲವನ್ನು ಹೊಂದಿದ್ದು, ಈ ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಯೂ ಇದೆ. ವಿಧಾನಸಭೆಯಲ್ಲಿ ನಾವು ಆರಾಮದಾಯಕ ಬಹುಮತ ಸಾಬೀತುಪಡಿಸುತ್ತೇವೆ," ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications