ಮುಂದಿನ ಸಂಭಾವ್ಯ ಸಿಜೆಐ: ಆಂಧ್ರಪ್ರದೇಶದ ಎನ್ವಿ ರಮಣ ವ್ಯಕ್ತಿಚಿತ್ರ
ಸುಪ್ರೀಂಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಅತಿ ಹಿರಿಯ ನ್ಯಾಯಮೂರ್ತಿ ಎನ್ವಿ ರಮಣ ಅವರ ಹೆಸರನ್ನು ಸಿಜೆಐ ಎಸ್ಎ ಬೋಬ್ಡೆ ಶಿಫಾರಸು ಮಾಡಿದ್ದಾರೆ. ಎಸ್ಎ ಬೋಬ್ಡೆ ಅವರು ಏಪ್ರಿಲ್ 23ರಂದು ನಿವೃತ್ತರಾಗಲಿದ್ದು, ಅವರು ಮಾಡಿರುವ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಎನ್ವಿ ರಮಣ ನೇಮಕವಾಗಲಿದ್ದಾರೆ. ಎನ್ವಿ ರಮಣ ಅವರು 2022ರ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ.
ನೂತಲಪತಿ ವೆಂಕಟ ರಮಣ ಅವರು 1957ರ ಆಗಸ್ಟ್ 27ರಂದು ಅವಿಭಜಿತ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಪೊನ್ನಾವರಂ ಗ್ರಾಮದಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದವರು. 1983ರ ಫೆಬ್ರವರಿ 10ರಂದು ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ ನೋಂದಣಿಯಾದರು.
ಮುಂದಿನ ಸಿಜೆಐ ಯಾರು? ಉತ್ತರಾಧಿಕಾರಿ ಹೆಸರು ಶಿಫಾರಸು ಮಾಡಿದ ಬೋಬ್ಡೆ
ಆಂಧ್ರಪ್ರದೇಶ ಹೈಕೋರ್ಟ್, ಕೇಂದ್ರ ಆಡಳಿತ ನ್ಯಾಯಮಂಡಳಿ, ಆಂಧ್ರಪ್ರದೇಶ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗಳಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. ಸುಪ್ರೀಂಕೋರ್ಟ್ನಲ್ಲಿ ಸಿವಿಲ್, ಕ್ರಿಮಿನಲ್, ಸಾಂವಿಧಾನಿಕ, ಕಾರ್ಮಿಕ, ಸೇವೆ ಮತ್ತು ಚುನಾವಣಾ ವಿಚಾರಗಳಲ್ಲಿ ವಾದ ಮಂಡಿಸಿದ್ದರು. ಸಂವಿಧಾನ, ಅಪರಾಧ, ಸೇವೆ ಮತ್ತು ಅಂತರ್ ರಾಜ್ಯ ನದಿ ಕಾನೂನುಗಳಲ್ಲಿ ಅವರು ವಿಶೇಷ ಪರಿಣತಿ ಹೊಂದಿದ್ದಾರೆ. ಮುಂದೆ ಓದಿ.
ಸಿಜೆಗಳ ವರ್ಗಾವಣೆಯಿಂದ ಜಗನ್ ಮೋಹನ್ಗೆ ಅನುಕೂಲ: ಆಂಧ್ರ ಹೈಕೋರ್ಟ್ ಅಸಮಾಧಾನ
ವಿವಿಧ ಇಲಾಖೆಗಳಿಗೆ ಸಲಹೆಗಾರ
ಸರ್ಕಾರದ ವಿವಿಧ ಸಂಸ್ಥೆಗಳ ಸಮಿತಿಗಳಿಗೆ ಸಲಹೆಗಾರರಾಗಿದ್ದರ ಜತೆಗೆ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕಿಲರಾಗಿ, ಹೈದರಾಬಾದ್ನ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿನ ರೈಲ್ವೆಯ ಪರ ನ್ಯಾಯವಾದಿಯಾಗಿ ಮತ್ತು ಆಂಧ್ರಪ್ರದೇಶದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಸುಪ್ರೀಂಕೋರ್ಟ್ ಸಿಜೆಐಗೆ ಆಂಧ್ರ ಸಿಎಂ ಜಗನ್ ಪತ್ರ
ಹೈಕೋರ್ಟ್ ನ್ಯಾಯಮೂರ್ತಿ
2000ರ ಜೂನ್ 27ರಂದು ಆಂಧ್ರಪ್ರದೇಶ ಹೈಕೋರ್ಟ್ನ ಕಾಯಂ ನ್ಯಾಯಮೂರ್ತಿಯಾದರು. 2013ರ ಮಾರ್ಚ್ 10 ರಿಂದ ಮೇ 20ರವರೆಗೂ ಆಂಧ್ರಪ್ರದೇಶ ಹೈಕೋರ್ಟ್ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದರು.
ಹೈಕೋರ್ಟ್ನಿಂದ ಸುಪ್ರೀಂಕೋರ್ಟ್ಗೆ
2013ರ ಸೆಪ್ಟೆಂಬರ್ 2ರಂದು ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಬಳಿಕ 2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್ಗೆ ಪದೋನ್ನತಿ ಪಡೆದರು. ಕಾನೂನಿನ ಅಚೆಗೆ ತತ್ವಶಾಸ್ತ್ರ ಮತ್ತು ಸಾಹಿತ್ಯ ಅವರ ಆಸಕ್ತಿಯ ಕ್ಷೇತ್ರಗಳು.
ನ್ಯಾ. ರಮಣ ನೀಡಿದ ಪ್ರಮುಖ ತೀರ್ಪುಗಳು
* ಮನೆಯಲ್ಲಿ ಕೆಲಸ ಮಾಡುವ ಮಹಿಳೆಯ ಮೌಲ್ಯವು ಕಚೇರಿಗೆ ತೆರಳಿ ಕೆಲಸ ಮಾಡುವ ಆಕೆಯ ಪತಿಗಿಂತ ಯಾವ ರೀತಿಯಲ್ಲಿಯೂ ಕಡಿಮೆಯಿಲ್ಲ ಎಂದು ನ್ಯಾಯಮೂರ್ತಿ ಎನ್ವಿ ರಮಣ ಮತ್ತು ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ತೀರ್ಪು ನೀಡಿತ್ತು. ಅಗ್ನಿ ಅವಘಡದ ಸಂತ್ರಸ್ತೆಯರಿಗೆ ಪರಿಹಾರ ನೀಡಬೇಕು ಎಂಬ ತೀರ್ಪು ನೀಡುವಾಗ ಅವರು ಈ ಹೇಳಿಕೆ ನೀಡಿದ್ದರು.
* ಜಮ್ಮು ಮತ್ತು ಕಾಶ್ಮಿರದಲ್ಲಿ ದೂರಸಂಪರ್ಕ ಮತ್ತು ಅಂತರ್ಜಾಲ ಸೇವೆಗಳನ್ನು ಪುನರಾರಂಭಿಸಲು ನೀಡಿದ ಆದೇಶ, ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ಮಾಹಿತಿ ಹಕ್ಕು ವ್ಯಾಪ್ತಿಯಡಿ ಬರುತ್ತದೆ ಎಂದು ನೀಡಿದ ತೀರ್ಪು, ಇತರೆ ರಾಜ್ಯಗಳಿಂದ ಅಮದು ಮಾಡಿಕೊಳ್ಳಲಾಗುವ ಸರಕುಗಳ ಮೇಲೆ ಪ್ರವೇಶ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರವನ್ನು ಎತ್ತಿಹಿಡಿದಿದ್ದು ಮುಂತಾದ ತೀರ್ಪುಗಳನ್ನು ಎನ್ವಿ ರಮಣ ಅವರನ್ನು ಒಳಗೊಂಡ ನ್ಯಾಯಪೀಠ ನೀಡಿದೆ.
ಜಗನ್ ಮೋಹನ್-ರಮಣ ವಿವಾದ
ಎನ್ವಿ ರಮಣ ಅವರು ವಿವಾದದಿಂದ ಹೊರತಾಗಿಲ್ಲ. ಆಂಧ್ರಪ್ರದೇಶದ ನ್ಯಾಯಮೂರ್ತಿಯಾಗಿದ್ದ ಸಮಯದಲ್ಲಿ ಎನ್ವಿ ರಮಣ ಅವರು ತಮ್ಮ ರಾಜಕೀಯ ವಿರೋಧಿ ಚಂದ್ರಬಾಬು ನಾಯ್ಡು ಅವರ ಪರವಾಗಿದ್ದರು ಎಂದು ಆರೋಪಿಸಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಸಿಜೆಐ ಎಸ್ಎ ಬೋಬ್ಡೆ ಅವರಿಗೆ ಬಹಿರಂಗ ಪತ್ರ ಬರೆದಿದ್ದರು. ಇದು ಭಾರಿ ಸಂಚಲನ ಮೂಡಿಸಿತ್ತು.