ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?
ನವದೆಹಲಿ, ಮಾರ್ಚ್ 20: ದೇಶದೆಲ್ಲೆಡೆ ಕೊರೊನಾವೈರಸ್ ಭೀತಿ ಆವರಿಸಿದ್ದು, ಜನತೆಯ ಆತಂಕ ದೂರಾಗಿಸಲು ಪ್ರಧಾನಿ ಮೋದಿ ಅವರು ಒಂದು ದಿನದ ಜನತಾ ಕರ್ಫ್ಯೂ ಹಾಗೂ ಒಂದು ವಾರದ ಸೋಷಿಯಲ್ ಕರ್ಫ್ಯೂ ಆಚರಣೆಗೆ ಕರೆ ನೀಡಿದ್ದಾರೆ.
ಮಾರ್ಚ್ 19ರಂದು ರಾತ್ರಿ 8ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಪ್ರಧಾನಿ ಮೋದಿ, ವೈರಸ್ ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಆರೋಗ್ಯ ಇಲಾಖೆ ನೀಡಿರುವ ಜಾಗೃತಿ ಸಂದೇಶದ ಮಹತ್ವದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ನಾಗರಿಕರು ಸಂಕಲ್ಪ ಹಾಗೂ ಸಂಯಯದಿಂದ ವರ್ತಿಸಬೇಕು ಎಂದರು. ಕೇಂದ್ರ ಸರ್ಕಾರ, ರಾಜ ಸರ್ಕಾರವು ನೀಡಿರುವ ನಿರ್ದೇಶನಗಳನ್ನು ಪಾಲಿಸಿರಿ. ನಾವು ಸ್ವಸ್ಥರಾಗಿದ್ದರೆ, ವಿಶ್ವವು ಸ್ವಸ್ಥವಾಗಲಿದೆ. social distancing ಬಹುಮುಖ್ಯವಾಗಿದೆ. ವ್ಯಕ್ತಿಯಿಂದ ವ್ಯಕ್ತಿ ಅಂತರ ಕಾಯ್ದುಕೊಳ್ಳುವ ಸಂಕಲ್ಪ ಮಾಡಬೇಕಿದೆ ಎಂದರು. ಹೀಗಾಗಿ ಕರ್ಫ್ಯೂ ಆಚರಣೆಯಿಂದ ಸೋಂಕು ತಡೆಗಟ್ಟಬಹುದು. ಸೋಷಿಯಲ್ ಕರ್ಫ್ಯೂ ಮೂಲಕ 10 ವರ್ಷದೊಳಗಿನ ಮಕ್ಕಳು, 65ಕ್ಕೂ ಅಧಿಕ ವಯಸ್ಸಿನ ವೃದ್ಧರು ಸ್ವಯಂ ನಿರ್ಬಂಧ ಹೇರಿಕೊಂಡು ಮಾರ್ಚ್ 22 ರಿಂದ ಒಂದು ವಾರ ಮನೆಯಲ್ಲಿದ್ದರೆ ಉತ್ತಮ ಎಂದಿದ್ದಾರೆ.

ಜನತಾ ಕರ್ಫ್ಯೂ ಎಂದರೇನು?
ಜನತಾ ಕರ್ಫ್ಯೂ ಎಂದರೆ ಜನರಿಂದ ಜನರಿಗಾಗಿ ಮಾಡುವ ಕರ್ಫ್ಯೂ.
ಮಾರ್ಚ್ 22ರ ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶದ ನಿವಾಸಿಗಳು ಮನೆಯಲ್ಲೇ ಉಳಿದು ಕರ್ಫ್ಯೂ ಆಚರಣೆಗೆ ಸಹಕರಿಸುವಂತೆ ಕೋರಿದ್ದಾರೆ. ಅಂದು ಮನೆಯಿಂದ ಹೊರಕ್ಕೆ ಬರಬೇಡಿ, ಮಾರ್ಚ್ 22ರ ಸಂಜೆ 5 ಗಂಟೆಗೆ ಸರಿಯಾಗಿ ನಿಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವರ್ಗಕ್ಕೆ ಧನ್ಯವಾದ ಸಲ್ಲಿಸೋಣ ಎಂದು ಕರೆ ನೀಡಿದರು.
ವೈದ್ಯರು, ರೈಲ್ವೆ ಸಿಬ್ಬಂದಿ, ಪೊಲೀಸ್ ಇಲಾಖೆ, ಸಾರಿಗೆ ಸಿಬ್ಬಂದಿ, ನರ್ಸ್, ಮಾಧ್ಯಮ ಸಿಬ್ಬಂದಿ ಎಲ್ಲರೂ ಸೋಂಕು ಲೆಕ್ಕಿಸದೇ ಸೇವೆ ಸಲ್ಲಿಸುತ್ತಿದ್ದಾರೆ. ಇಂಥ ನಿಸ್ವಾರ್ಥ ಸೇವೆ ಸಲ್ಲಿಸುವವರಿಗೆ ನಾವು ಭಾನುವಾರದಂದು ಸಂಜೆ 5 ಗಂಟೆಗೆ ನಮ್ಮ ಮನೆ ಬಾಗಿಲು, ಕಿಟಕಿ, ಬಾಲ್ಕನಿಗಳಲ್ಲಿ ನಿಂತು ಚಪ್ಪಾಳೆ ಹೊಡೆಯುವ ಮೂಲಕ ಧನ್ಯವಾದ ಸಲ್ಲಿಸೋಣ ಎಂದರು.
ಜನತಾ ಕರ್ಫ್ಯೂ ಬಗ್ಗೆ ತಿಳಿದವರು ಇನ್ನೂ 10 ಮಂದಿಗೆ ಈ ವಿಷಯ ಮುಟ್ಟಿಸಿ ಹೆಚ್ಚು ಮಂದಿ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಎಂದಿದ್ದಾರೆ.












Click it and Unblock the Notifications