ಉತ್ತರಾಖಂಡ ಚುನಾವಣಾ ಸಮೀಕ್ಷೆ: ಎಎಪಿಗೂ ಲಭಿಸಲಿದೆ ಗೆಲುವು, ಯಾವ ಪಕ್ಷಕ್ಕೆ ಆಡಳಿತದ ಚುಕ್ಕಾಣಿ?
ಇನ್ನೆರಡು ತಿಂಗಳಿನಲ್ಲಿ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಉತ್ತರಾಖಂಡದಲ್ಲಿ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದೆ. ಈ ನಡುವೆ ಟೈಮ್ಸ್ ನೌ ನವಭಾರತ್ ತನ್ನ ಚುನಾವಣಾ ಪೂರ್ವ ಸಮೀಕ್ಷೆಯನ್ನು ವರದಿ ಮಾಡಿದೆ.
ಈ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರವಾಗಿ ಎಲ್ಲಾ ರಾಜ್ಯಗಳಲ್ಲಿ ಎಎಪಿ ತನ್ನದೇ ಆದ ಚಾಪನ್ನು ಮೂಡಿಸಲಿದೆ. ಉತ್ತರಾಖಂಡದಲ್ಲಿ ಕಳೆದ ವರ್ಷ ಯಾವುದೇ ಸ್ಥಾನವನ್ನು ಪಡೆಯದ ಎಎಪಿ ಈ ಬಾರಿ ಕೆಲವು ಕ್ಷೇತ್ರಗಳಲ್ಲಾದರೂ ಗೆಲುವು ಸಾಧಿಸುವ ಸಾಧ್ಯತೆ ಇದೆ.
ಈ ಚುನಾವಣಾ ಪೂರ್ವ ಸಮೀಕ್ಷೆಯು ನಿಜವಾದರೆ ಈ ಬಾರಿ ಉತ್ತರಾಖಂಡದಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷವು ಹೊಸ ಖಾತೆಯನ್ನು ತೆರೆಯಲಿದೆ. ಅಂದರೆ ಕಳೆದ ಬಾರಿ ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸದ ಎಎಪಿ ಪಕ್ಷವು ಈ ಬಾರಿ ಉತ್ತರಾಖಂಡದಲ್ಲಿ ಕನಿಷ್ಠ 4-7 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಈ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಎಂಬುವುದನ್ನು ತಿಳಿಯಲು ಮುಂದೆ ಓದಿ..

ಚುನಾವಣಾ ಪೂರ್ವ ಸಮೀಕ್ಷೆ ಏನು ಹೇಳುತ್ತದೆ?
ಟೈಮ್ಸ್ ನೌ ನವಭಾರತ್ನ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿರುವ 70 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 42-48 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಇನ್ನು ಕಾಂಗ್ರೆಸ್ 12-16 ಕ್ಷೇತ್ರದಲ್ಲಿ ಗೆಲುವು ಕಾಣಲಿದೆ. ಈ ನಡುವೆ ಕಳೆದ ಬಾರಿ ಯಾವುದೇ ಕ್ಷೇತ್ರದಲ್ಲಿ ಗೆಲುವು ಕಾಣದ ಎಎಪಿ ಈ ಬಾರಿ 4-7 ವಿಧಾನಸಭೆ ಕ್ಷೇತ್ರದಲ್ಲಿ ಜಯ ಗಳಿಸಲಿದೆ. ಇನ್ನು ಇತರೆ ಪಕ್ಷಗಳು 0-2 ಸ್ಥಾನವನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಸಮೀಕ್ಷೆಯು ಹೇಳುತ್ತದೆ. ಬಿಜೆಪಿ ಪಕ್ಷವೇ ಈ ಬಾರಿಯೂ ಆಡಳಿತ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳುತ್ತದೆ.

ಕಳೆದ ಬಾರಿ ಚುನಾವಣೆಯಲ್ಲಿ ಏನಾಗಿತ್ತು?
2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿಯು ಸ್ಪಷ್ಟವಾದ ಬಹುಮತವನ್ನು ಸಾಧಿಸಿತ್ತು. ಒಟ್ಟು 70 ವಿಧಾನಸಭೆ ಕ್ಷೇತ್ರದಲ್ಲಿ 57 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ವಿಜಯ ಪತಾಕೆಯನ್ನು ಉತ್ತರಾಖಂಡದಲ್ಲಿ ಹಾರಿಸಿತ್ತು. ಶೇಕಡ 47 ಮತವನ್ನು ಬಿಜೆಪಿಯು ಪಡೆದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಶೇಕಡ 34 ರಷ್ಟು ಮತವನ್ನು ಗಳಿಸಿದೆ. ಈ ಬಾರಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಯ ಬಗ್ಗೆ ಸಮೀಕ್ಷೆ ಹೇಳಿದೆ. ಕಳೆದ ಬಾರಿ ಯಾವುದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ಎಎಪಿ ವಿಫಲವಾಗಿತ್ತು. ಇನ್ನುಳಿದ 2 ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಪಡೆದಿದ್ದರು.

ಎಎಪಿ ಅಧ್ಯಕ್ಷರೇ ಕಾಂಗ್ರೆಸ್ ಸೇರ್ಪಡೆ
ಉತ್ತರಾಖಂಡದಲ್ಲಿ ಇತ್ತೀಚೆಗೆ ಎಎಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅನಂತ್ ರಾಮ್ ಚೌಹಾಣ್ ಎಎಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಇನ್ನು ಈ ಸಂದರ್ಭದಲ್ಲೇ ಇಬ್ಬರು ಬಿಜೆಪಿ ನಾಯಕರುಗಳು ಕೂಡಾ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಮಾಲ್ ಚಂದ್ ಹಾಗೂ ಉತ್ತರಾಖಂಡ ಜಿಲ್ಲಾ ಪಂಚಾಯತ್ ಅಧ್ಯಕ್ಷ ದೀಪಕ್ ಬಿಜಿಲ್ವಾನ್ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಇನ್ನು ಎಎಪಿ ಮುಖಂಡ ಕಾಂಗ್ರೆಸ್ ಮುಖಂಡರಾದ ಪ್ರಿಯಾಂಕ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ. ಇದು ಎಎಪಿ ಪಕ್ಷಕ್ಕೆ ಹಿನ್ನಡೆಯಾದರೂ ಕೂಡಾ ಮುಂದಿನ ಚುನಾವಣೆಯಲ್ಲಿ ಎಎಪಿ 4-7 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ ಎಂದು ಚುನಾವಣಾ ಸಮೀಕ್ಷೆಯು ಹೇಳುತ್ತದೆ.

ಬಿಜೆಪಿ ಕೈತಪ್ಪಲಿದೆಯೇ ಹಲವಾರು ಕ್ಷೇತ್ರಗಳು?
ಉತ್ತರಾಖಂಡದಲ್ಲಿ ಪ್ರಮುಖವಾಗಿ ಬಿಜೆಪಿ ವಿರೋಧವಾಗಿ ಅಲೆ ಎದ್ದಿದೆ. ಮುಂಬರುವ ಉತ್ತರಾಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 70 ವಿಧಾನಸಭಾ ಕ್ಷೇತ್ರಗಳಲ್ಲಿ 30 ಕ್ಷೇತ್ರಗಳನ್ನು ಗುರುತಿಸಿದೆ. ಅಲ್ಲಿ ಆಡಳಿತ ವಿರೋಧಿ ಅಲೆ ಪ್ರಬಲವಾಗಿದೆ. ಈ 30 ಕ್ಷೇತ್ರಗಳ ಪೈಕಿ 11 ಕಾಂಗ್ರೆಸ್ ಹಾಗೂ 19 ಕ್ಷೇತ್ರ ಬಿಜೆಪಿಗೆ ದಕ್ಕುವ ಸಾಧ್ಯತೆ ಇದೆ ಎಂದು ಬೇರೊಂದು ಸಮೀಕ್ಷೆಯು ಹೇಳಿತ್ತು. ಶೇ. 60 ರಷ್ಟು ಬಿಜೆಪಿ ಶಾಸಕರ ವಿರುದ್ಧ ಅಧಿಕಾರ ವಿರೋಧಿ ಅಲೆ ಇದೆ. ಕೇವಲ ಶೇ. 28 ರಷ್ಟು ಜನರು ಶಾಸಕರು ಈ ಪ್ರದೇಶದಲ್ಲಿ ವಿರೋಧಿ ಅಲೆ ಹೊಂದಿಲ್ಲ ಎಂದು ಸಮೀಕ್ಷೆಯು ಉಲ್ಲೇಖ ಮಾಡಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications