Unforgettable 2020: ದೇಶದಲ್ಲಿ ನಡೆದ ಪ್ರಮುಖ ಪ್ರತಿಭಟನೆಗಳು

ಭಾರತದಂತಹ ಪ್ರಜಾಪ್ರಭುತ್ವದ ದೇಶದಲ್ಲಿ ಪ್ರತಿಭಟನೆಗಳು ಸರ್ವೇ ಸಾಮಾನ್ಯ. ಬೆಲೆ ಏರಿಕೆ, ಸೌಲಭ್ಯದ ಕೊರತೆ, ಅಪರಾಧಗಳು, ಅದಕ್ಷತೆ, ವೇತನದ ಕೊರತೆ, ಸರ್ಕಾರದ ನಿರ್ಧಾರಗಳು ಇದೆಲ್ಲವೂ ಪ್ರತಿಭಟನೆಯ ಸಾಮಾನ್ಯ ವಿಷಯಗಳು.

ಕೊರೊನಾ ವೈರಸ್ ಭೀತಿಯನ್ನು ಎದುರಿಸುತ್ತಿರುವ ಭಾರತದಲ್ಲಿ ನಾಲ್ಕೈದು ತಿಂಗಳು ಪ್ರತಿಭಟನೆಗಳು ಇಲ್ಲದೆ ಸ್ತಬ್ಧ ಸ್ಥಿತಿ ಉಂಟಾಗಿತ್ತು. ಆದರೆ ಕಳೆದ ಎರಡು ಮೂರು ತಿಂಗಳಿನಿಂದ ಮತ್ತೆ ಜನರು ಬೀದಿಗಿಳಿಯುತ್ತಿದ್ದಾರೆ. ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅದರಲ್ಲಿಯೂ ಡಿಸೆಂಬರ್ ತಿಂಗಳಲ್ಲಿ ದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ವಿಶೇಷವೆಂದರೆ 2020ಅನ್ನು ಭಾರತೀಯರು ಸ್ವಾಗತಿಸಿದ್ದು ಪ್ರತಿಭಟನೆಗಳಲ್ಲಿಯೇ. ಹಾಗೆಯೇ 2020ಕ್ಕೆ ವಿದಾಯ ಹೇಳುತ್ತಿರುವುದು ಕೂಡ ಪ್ರತಿಭಟನೆಗಳಲ್ಲಿಯೇ. 2019ರ ಅಂತ್ಯವೂ ಹೀಗೆಯೇ ಆಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆಗಳ ವಿರುದ್ಧ ಕಳೆದ ವರ್ಷ ಆರಂಭವಾಗಿದ್ದ ಪ್ರತಿಭಟನೆ ಈ ವರ್ಷದ ಆರಂಭದಲ್ಲಿಯೂ ಮುಂದುವರಿದಿತ್ತು. ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹರಡಲು ಶುರುಮಾಡುವವರೆಗೂ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು.

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳು ಬರುತ್ತಿದ್ದಂತೆಯೇ ಪ್ರತಿಭಟನೆಗಳ ಕಾವು ತಗ್ಗತೊಡಗಿದವು. ಕೊನೆಗೆ ಲಾಕ್‌ಡೌನ್ ಘೋಷಣೆಯಾದ ಬಳಿಕ ಎಲ್ಲ ಚಟುವಟಿಕೆಗಳೂ ಅಕ್ಷರಶಃ ಸ್ಥಗಿತಗೊಂಡಿದ್ದವು. ಈಗ ಕೋವಿಡ್ ಭೀತಿ ಕಡಿಮೆಯಾಗಿಲ್ಲ. ಆದರೆ ಪ್ರತಿಭಟನೆಗಳ ಕಾವು ತೀವ್ರವಾಗುತ್ತಿವೆ. ಇದು ಇಡೀ ದೇಶದಲ್ಲಿ ಹರಡಿದೆ. ಮುಂದೆ ಓದಿ.

ಜೆಎನ್‌ಯು ಪ್ರತಿಭಟನೆ

ಜೆಎನ್‌ಯು ಪ್ರತಿಭಟನೆ

ಜನವರಿ 5ರಂದು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮೇಲೆ ಮಸುಕುಧಾರಿ ವ್ಯಕ್ತಿಗಳು ದಾಳಿ ನಡೆಸಿ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಶುಲ್ಕ ಏರಿಕೆ ವಿರುದ್ಧದ ಪ್ರತಿಭಟನೆಗಳು ಸೇರಿಕೊಂಡು ಹಿಂಸಾಚಾರಕ್ಕೆ ಕಾರಣವಾಗಿದ್ದವು.

ಪೌರತ್ವ ತಿದ್ದುಪಡಿ ಕಾಯ್ದೆ

ಪೌರತ್ವ ತಿದ್ದುಪಡಿ ಕಾಯ್ದೆ

ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದ ಅನೇಕ ಭಾಗಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದವು. ಕೇರಳದಲ್ಲಿ ಬೃಹತ್ ಮಾನವ ಸರಪಣಿ ರಚನೆಯ ಮೂಲಕ ಪ್ರತಿಭಟಿಸಲಾಗಿತ್ತು. ಉತ್ತರ ಪ್ರದೇಶದ ಜಾಮಿಯಾ ಮಿಲಿಯಾಇಸ್ಲಾಮಿಯಾದಲ್ಲಿ, ಅಲಿಗಡ, ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆದಿತ್ತು. ಡಿಸೆಂಬರ್‌ನಲ್ಲಿ ಶುರುವಾಗಿದ್ದ ಶಹೀನ್ ಬಾಗ್ ಪ್ರತಿಭಟನೆ ಮಾರ್ಚ್‌ವರೆಗೂ ಮುಂದುವರಿದಿತ್ತು.

ನಮಸ್ತೆ ಟ್ರಂಪ್, ತಬ್ಲಿಘಿ ಜಮಾತ್

ನಮಸ್ತೆ ಟ್ರಂಪ್, ತಬ್ಲಿಘಿ ಜಮಾತ್

ಫೆಬ್ರವರಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿಗಾಗಿ ಬಂದ 'ನಮಸ್ತೆ ಟ್ರಂಪ್' ಕಾರ್ಯಕ್ರಮದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಏಪ್ರಿಲ್‌ನಲ್ಲಿ ಮಹಾರಾಷ್ಟ್ರದ ಪಲ್ಗಾರ್‌ನಲ್ಲಿ ಇಬ್ಬರು ಸಾಧುಗಳ ಹತ್ಯೆ ಕೂಡ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನಿಬಂಧನೆಗಳ ನಡುವೆಯೇ ಅನುಮತಿ ಇಲ್ಲದೆ ನಡೆದ ತಬ್ಲಿಘಿ ಜಮಾತ್ ಸಮಾವೇಶದಿಂದ ವೈರಸ್ ಹರಡಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ

ಸೆಪ್ಟೆಂಬರ್ ತಿಂಗಳಲ್ಲಿ ಮೂರು ಕೃಷಿ ಕಾಯ್ದೆಗಳು ಸಂಸತ್‌ನಲ್ಲಿ ಅಂಗೀಕಾರವಾದವು. ಆಗಲೇ ವಿವಿಧ ರಾಜ್ಯಗಳಲ್ಲಿ, ಮುಖ್ಯವಾಗಿ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ಪ್ರತಿಭಟನೆಗಳು ಶುರುವಾಗಿದ್ದವು. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿದ್ದವು. ಈ ಸಂಬಂಧ ರೈತರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದ್ದರೂ ಫಲಕಾರಿಯಾಗಿರಲಿಲ್ಲ. ಹೀಗೆ ಪಂಜಾಬ್ ಮತ್ತು ಹರ್ಯಾಣಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಿಂದ ಯಾವುದೇ ಪ್ರಯೋಜನ ಕಾಣುತ್ತಿಲ್ಲ ಎಂದ ರೈತ ಸಂಘಟನೆಗಳು ಸರ್ಕಾರವನ್ನು ಬಗ್ಗಿಸಲೇಬೇಕೆಂದು ದೆಹಲಿಗೆ ಮುತ್ತಿಗೆ ಹಾಕುವ ನಿರ್ಧಾರ ತೆಗೆದುಕೊಂಡವು. 'ದೆಹಲಿ ಚಲೋ' ಜಾಥಾ ಹಲವು ಟಿಸಿಲುಗಳೊಡೆದು ಈಗ ಬೃಹತ್ ಪ್ರತಿಭಟನೆಯ ಸ್ವರೂಪ ಪಡೆದುಕೊಂಡಿದೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ

ಹತ್ರಾಸ್ ಸಾಮೂಹಿಕ ಅತ್ಯಾಚಾರ

ದೇಶದ ಜನತೆಯ ಎದೆನಡುಗಿಸಿದ ಪ್ರಕರಣಗಳಲ್ಲಿ ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವೂ ಒಂದು. ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣ ಭಾರಿ ವಿವಾದ ಸೃಷ್ಟಿಸಿತ್ತು. ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ವಿರುದ್ಧ ವಿರೋಧಪಕ್ಷಗಳು ಪ್ರತಿಭಟನೆ ನಡೆಸಿದವು. ಎರಡು ವಾರ ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಡಿ ಮೃತಪಟ್ಟ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಕುಟುಂಬಕ್ಕೂ ತಿಳಿಸದೆ ರಾತ್ರೋರಾತ್ರಿ ನಡೆಸಿದ ಪೊಲೀಸರ ಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವ್ಯಾಪಾರ ಒಕ್ಕೂಟಗಳು ನವೆಂಬರ್‌ 26ರಂದು ದೇಶದಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದ್ದವು. ಕಾರ್ಮಿಕ ವಿರೋಧಿ ಸಂಹಿತೆಯನ್ನು ರದ್ದುಗೊಳಿಸುವುದು, ಖಾಸಗೀಕರಣ ನಿಲ್ಲಿಸುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಇರಿಸಲಾಗಿತ್ತು. ರಾಜ್ಯದಲ್ಲಿ ಟೊಯೊಟೊ ಕಂಪೆನಿ ವಿರುದ್ಧ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

ರೈತರು, ಸಾರಿಗೆ ನೌಕರರು, ವೈದ್ಯರು

ರೈತರು, ಸಾರಿಗೆ ನೌಕರರು, ವೈದ್ಯರು

ಡಿಸೆಂಬರ್ ತಿಂಗಳನ್ನು ಭಾರತದ ಪ್ರತಿಭಟನೆಗಳ ವರ್ಷವೆಂದೇ ಪರಿಗಣಿಸಬಹುದು. ಅನೇಕ ರಾಜ್ಯಗಳಲ್ಲಿ ಹಲವು ಪ್ರತಿಭಟನೆಗಳು ನಡೆಯುತ್ತಿದ್ದು, ರೈತರ ಪ್ರತಿಭಟನೆ ತೀವ್ರಗೊಂಡಿದೆ. ಇನ್ನೊಂದೆಡೆ ಕರ್ನಾಟಕದಲ್ಲಿ ಸಾರಿಗೆ ಇಲಾಖೆಯ ನೌಕರರು ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು, ಸೂಕ್ತ ಸವಲತ್ತು, ಸಂಬಳ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬಹುದು ಎಂಬ ಕೇಂದ್ರ ಸರ್ಕಾರದ ಹೊಸ ನಿಯಮದ ವಿರುದ್ಧ ಖಾಸಗಿ ವೈದ್ಯರು ಮುಷ್ಕರ ನಡೆಸಿದ್ದಾರೆ. ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಯ ವಿವಾದ ರಾಜ್ಯದಲ್ಲಿ ಬೃಹತ್ ಪ್ರತಿಭಟನೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+