Get Updates
Get notified of breaking news, exclusive insights, and must-see stories!

Unforgettable 2020: ಈ ವರ್ಷ ಸುಪ್ರೀಂಕೋರ್ಟ್ ನೀಡಿದ ಪ್ರಮುಖ ತೀರ್ಪುಗಳ ವಿವರ

ಭಾರತದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂಕೋರ್ಟ್, 2020ರಲ್ಲಿ ಅನೇಕ ಮಹತ್ವದ ಮತ್ತು ನಿರ್ಣಾಯಕ ತೀರ್ಪುಗಳನ್ನು ಪ್ರಕಟಿಸಿದೆ. ಮಾರ್ಚ್ 23ರಿಂದ ಆನ್‌ಲೈನ್ ವಿಚಾರಣೆಗಳನ್ನು ನಡೆಯುತ್ತಿರುವ ನ್ಯಾಯಾಲಯದಲ್ಲಿ, ಕೋರ್ಟ್ ಕೊಠಡಿಗಳು ವರ್ಚ್ಯುವಲ್ ಕೋರ್ಟ್‌ಗಳಾಗಿ ಬದಲಾಗಿವೆ. ಕಾಗದ ಪತ್ರಗಳು ಕಂಪ್ಯೂಟರ್ ಕಡತಗಳಾಗಿವೆ. ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದ್ದಾರೆ. 2020 ಇಂತಹ ತಂತ್ರಜ್ಞಾನದ ಪ್ರಯೋಜನಗಳನ್ನು ನ್ಯಾಯಾಲಯದಲ್ಲಿಯೂ ಕಾಣುವಂತೆ ಮಾಡಿದೆ.

ಇದರ ಜತೆಗೆ ಸುಪ್ರೀಂಕೋರ್ಟ್ ಈ ಬಾರಿ ನ್ಯಾಯಾಂಗದ ಇತಿಹಾಸವನ್ನು ಬದಲಿಸುವ ನಿರ್ಣಾಯಕ ತೀರ್ಪುಗಳನ್ನು ಕೂಡ ನೀಡಿದೆ. ಈ ಬಾರಿಯ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗಳು ಅನೇಕ ವಿಚಿತ್ರ, ತಮಾಷೆಯ ಘಟನೆಗಳನ್ನೂ ಕಂಡಿದೆ.

ವಕೀಲರೊಬ್ಬರು ಕ್ಯಾಮೆರಾ ಆನ್ ಆಗಿರುವುದು ತಿಳಿಯದೆ ಅಂಗಿರಹಿತ ಪೂಜೆಯ ದಿರಿಸಿನಲ್ಲಿ ಕಾಣಿಸಿಕೊಂಡಿದ್ದರು. ಇನ್ನೊಬ್ಬರು ಮಹಿಳಾ ವಕೀಲರು ಫೇಸ್‌ಪ್ಯಾಕ್‌ನಲ್ಲಿ ಪ್ರತ್ಯಕ್ಷವಾಗಿದ್ದರು. ಮತ್ತೊಬ್ಬರು ತಲೆಬಾಚಿಕೊಳ್ಳುತ್ತಾ ಮುಖ ಪರೀಕ್ಷಿಸಿಕೊಳ್ಳುತ್ತಿದ್ದರು. ಇನ್ನೊಬ್ಬ ವಕೀಲರು ಹಾಸಿಗೆ ಮೇಲೆ ಸಾಮಾನ್ಯ ಉಡುಪಿನಲ್ಲಿ ಆರಾಮಾಗಿ ಕುಳಿತಿದ್ದರು. ಇನ್ನೊಂದು ಪ್ರಕರಣವೊಂದರಲ್ಲಿ ವಿಚಾರಣೆ ವೇಳೆ ಮರವೊಂದರ ಕೆಳಗೆ ವಕೀಲರು ಕುಳಿತಿದ್ದರೆ, ಅವರ ಅಕ್ಕಪಕ್ಕ ಅನೇಕರು ಸುತ್ತವರೆದಿದ್ದರು.

ಈ ವರ್ಷ ಸುಪ್ರೀಂಕೋರ್ಟ್ ನೀಡಿದ ಕೆಲವು ಪ್ರಮುಖ ತೀರ್ಪುಗಳ ವಿವರ ಇಲ್ಲಿದೆ. ಮುಂದೆ ಓದಿ.

ಇಂಟರ್‌ನೆಟ್ ಮೂಲಭೂತ ಹಕ್ಕು

ಇಂಟರ್‌ನೆಟ್ ಮೂಲಭೂತ ಹಕ್ಕು

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಅಲ್ಲಿನ ದೂರಸಂಪರ್ಕ ಸಂವಹನ ವ್ಯವಸ್ಥೆಯನ್ನು ಕಡಿತಗೊಳಿಸಿದ್ದರ ವಿರುದ್ಧ ಮೂವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತ್ತು. ಇದರಲ್ಲಿ ಮೊಬೈಲ್ ಸೇವೆಗಳನ್ನು ಪುನರ್ ಸ್ಥಾಪಿಸುವಂತೆ ನೇರವಾಗಿ ಹೇಳದೆ ಹೋದರೂ, ಇಂಟರ್‌ನೆಟ್ ಹೊಂದುವುದು ಜನರ ವಿಸ್ತೃತ ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುತ್ತದೆ ಎಂದು ಹೇಳಿತ್ತು. ಹೀಗಾಗಿ ಇನ್ನು ಮುಂದೆ ಪ್ರತಿ ಬಾರಿ ಇಂಟರ್‌ನೆಟ್ ಕಡಿತದ ವೇಳೆ ನಿರ್ದಿಷ್ಟ ಕಾರಣಗಳನ್ನು ನೀಡಬೇಕು ಮತ್ತು ಅದನ್ನು ಸಂಬಂಧಿತ ಪ್ರಾಧಿಕಾರಗಳ ಪರಾಮರ್ಶಿಸಬೇಕು ಎಂದು ಸೂಚಿಸಿತ್ತು.

ಸ್ಪೀಕರ್‌ ಅವರ ಅನರ್ಹತೆ ಅಧಿಕಾರ

ಸ್ಪೀಕರ್‌ ಅವರ ಅನರ್ಹತೆ ಅಧಿಕಾರ

ವಿಧಾನಸಭೆಯ ಸ್ಪೀಕರ್ ಕೂಡ ರಾಜಕೀಯ ಪಕ್ಷಕ್ಕೆ ಸೇರಿದವರು ಎಂದ ಕೋರ್ಟ್, ಶಾಸಕರನ್ನು ಅನರ್ಹಗೊಳಿಸುವ ಸ್ಪೀಕರ್‌ಗಳ ಅಧಿಕಾರವನ್ನು ಮೊಟಕುಗೊಳಿಸುವಂತೆ ಸಂವಿಧಾನದಲ್ಲಿ ತಿದ್ದುಪಡಿ ತರುವಂತೆ ಸಂಸತ್ತಿಗೆ ಮನವಿ ಮಾಡಿತ್ತು. ಕಾಂಗ್ರೆಸ್‌ನಿಂದ ಗೆದ್ದು ಬಿಜೆಪಿಗೆ ಸೇರ್ಪಡೆಯಾದ ಶಾಸಕರೊಬ್ಬರನ್ನು ಅನರ್ಹಗೊಳಿಸಲು ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಣಿಪುರದ ಕಾಂಗ್ರೆಸ್ ಶಾಸಕರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ಸಂಸದರು ಅಥವಾ ಶಾಸಕರ ಅನರ್ಹತೆಯನ್ನು ಸಂಸತ್ತು ಮತ್ತು ವಿಧಾನಸಭೆಗಳ ಆಚೆಗೆ ಸ್ವತಂತ್ರ ನ್ಯಾಯಮಂಡಳಿ ನಿಭಾಯಿಸಬೇಕು ಎಂದು ತೀರ್ಪು ನೀಡಿತ್ತು.

ನಿರೀಕ್ಷಣಾ ಜಾಮೀನು ಗೊಂದಲ

ನಿರೀಕ್ಷಣಾ ಜಾಮೀನು ಗೊಂದಲ

ನಿರೀಕ್ಷಣಾ ಜಾಮೀನು ಪಡೆದುಕೊಳ್ಳುವ ವ್ಯಕ್ತಿಗೆ ನೀಡಲಾಗಿರುವ ರಕ್ಷಣೆಗೆ ಸಮಯದ ಗಡುವು ಇರುತ್ತದೆಯೇ ಎಂಬ ಕುರಿತಾದ ಗೊಂದಲವನ್ನು ಐವರು ನ್ಯಾಯಮೂರ್ತಿಗಳ ನ್ಯಾಯಪೀಠ ಪರಿಹರಿಸಿತು. ಒಬ್ಬ ವ್ಯಕ್ತಿಯನ್ನು ಬಂಧಿಸುವ ಮೊದಲು ನೀಡಲಾಗುವ ನಿರೀಕ್ಷಣಾ ಜಾಮೀನು, ಆ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಅನ್ವಯವಾಗುತ್ತದೆ ಎಂದು ಕೋರ್ಟ್ ಹೇಳಿತು.

ಮೀಸಲಾತಿ ಮೂಲಭೂತ ಹಕ್ಕಲ್ಲ

ಮೀಸಲಾತಿ ಮೂಲಭೂತ ಹಕ್ಕಲ್ಲ

ಸಾರ್ವಜನಿಕ ಉದ್ಯೋಗಗಳಲ್ಲಿ ಮೀಸಲಾತಿ ಕೇಳುವುದು ಮೂಲಭೂತ ಹಕ್ಕಲ್ಲ ಎಂದು ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹಾಗೆಯೇ ಮೀಸಲಾತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಯಾವುದೇ ನ್ಯಾಯಾಲಯ ಸೂಚಿಸುವಂತಿಲ್ಲ ಎಂದು ಹೇಳಿತು.

ಎಸ್‌ಸಿ ಎಸ್‌ಟಿ ಕಾಯ್ದೆ ತಿದ್ದುಪಡಿ

ಎಸ್‌ಸಿ ಎಸ್‌ಟಿ ಕಾಯ್ದೆ ತಿದ್ದುಪಡಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ ಕೆಲವು ಬದಲಾವಣೆಗಳನ್ನು ಸುಪ್ರೀಂಕೋರ್ಟ್ ತಂದಿತು. ಈ ಕಾಯ್ದೆಯಡಿ ಪ್ರಕರಣ ದಾಖಲಿಸುವ ಮುನ್ನ ಪೂರ್ವಭಾವಿ ವಿಚಾರಣೆ ನಡೆಸುವಂತಿಲ್ಲ ಮತ್ತು ಆರೋಪಿ ಬಂಧನಕ್ಕೆ ಮೇಲಧಿಕಾರಿಗಳ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಮನವರಿಕೆಯಾದರೆ, ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ ಹೈಕೋರ್ಟ್ ಎಫ್‌ಐಆರ್ ರದ್ದು ಮಾಡಬಹುದು ಮತ್ತು ಆರೋಪ ಸುಳ್ಳು ಎಂದು ಮೇಲ್ನೋಟಕ್ಕೆ ಮನವರಿಕೆಯಾದರೆ ಮಾತ್ರ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ತೀರ್ಪು ನೀಡಿತು.

ಪ್ರಶಾಂತ್ ಭೂಷಣ್‌ಗೆ ಒಂದು ರೂ ದಂಡ

ಪ್ರಶಾಂತ್ ಭೂಷಣ್‌ಗೆ ಒಂದು ರೂ ದಂಡ

ಲಾಕ್‌ಡೌನ್ ಅವಧಿಯಲ್ಲಿ ಸುಪ್ರೀಂಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಕುರಿತು ಟ್ವೀಟ್ ಮಾಡುವ ಮೂಲಕ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಒಳಗಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅವರ ಪ್ರಕರಣ ದೇಶದಾದ್ಯಂತ ಚರ್ಚೆಗೆ ಒಳಗಾಗಿತ್ತು. ತಮ್ಮ ಹೇಳಿಕೆಗೆ ಕ್ಷಮೆ ಕೋರಲು ನೀಡಿದ್ದ ಅವಕಾಶವನ್ನು ಪ್ರಶಾಂತ್ ಭೂಷಣ್ ನಿರಾಕರಿಸಿದ್ದರು. ಕೊನೆಗೆ ಅವರಿಗೆ 1 ರೂ ದಂಡ ವಿಧಿಸಲಾಗಿತ್ತು.

ಅರ್ನಬ್‌ಗೆ ಜಾಮೀನು

ಅರ್ನಬ್‌ಗೆ ಜಾಮೀನು

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅರ್ನಬ್ ಗೋಸ್ವಾಮಿ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಂತೆ ಕೋರ್ಟ್ ಕೆಲಸ ಮಾಡಬೇಕು ಎಂದು ಹೇಳಿತ್ತು.

ನೀಟ್ ಪ್ರವೇಶ ಪರೀಕ್ಷೆ

ನೀಟ್ ಪ್ರವೇಶ ಪರೀಕ್ಷೆ

ಸಶಸ್ತ್ರ ಪಡೆಗಳಲ್ಲಿನ ಮಹಿಳಾ ಅಧಿಕಾರಿಗಳಿಗಾಗಿ ಕಾಯಂ ಆಯೋಗವನ್ನು ರಚಿಸುವುದು, ವಿಧಾನಸಬೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿವ ತಮ್ಮ ಅಭ್ಯರ್ಥಿಗಳ ಅಪರಾಧ ಇತಿಹಾಸವನ್ನು ರಾಜಕೀಯ ಪಕ್ಷಗಳು ಪ್ರಕಟಿಸುವುದು, 2018ರಲ್ಲಿ ಕ್ರಿಪ್ಟೋಕರೆನ್ಸಿಗಳ ಮೇಲೆ ಆರ್‌ಬಿಐ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದ್ದು ಸುಪ್ರೀಂಕೋರ್ಟ್‌ನ ಪ್ರಮುಖ ತೀರ್ಪುಗಳಲ್ಲಿ ಸೇರಿವೆ. ದೇಶದೆಲ್ಲೆಡೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ನೀಟ್ ಪರೀಕ್ಷೆ ಮಾತ್ರವೇ ಏಕೈಕ ಪರೀಕ್ಷೆಯಾಗಿದ್ದು, ಯಾವುದೇ ಸಂಸ್ಥೆ ಪ್ರತ್ಯೇಕ ಪರೀಕ್ಷೆ ನಡೆಸುವಂತಿಲ್ಲ ಎಂದು ಏಪ್ರಿಲ್‌ನಲ್ಲಿ ತೀರ್ಪು ಪ್ರಕಟಿಸಲಾಯಿತು.

ಶಬರಿಮಲೆ ವಿವಾದ

ಶಬರಿಮಲೆ ವಿವಾದ

ಶಬರಿಮಲೆಯಲ್ಲಿ ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಬಹುದು ಎಂಬ ಹಿಂದಿನ ತೀರ್ಪಿಗೆ ಸಂಬಂಧಿಸಿದಂತೆ, ಕಾನೂನು ತೊಡಕುಗಳ ಬಗ್ಗೆ ವಿಸ್ತೃತ ಪೀಠದ ವಿಚಾರಣೆಗೆ ಅವಕಾಶ ಕಲ್ಪಿಸುವ ಕ್ರಮವನ್ನು ಸುಪ್ರೀಂಕೋರ್ಟ್‌ನ 9 ನ್ಯಾಯಮೂರ್ತಿಗಳ ಪೀಠ ಎತ್ತಿ ಹಿಡಿಯಿತು. ಬಾಕಿ ಇರುವ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ದೊರಕಿಸುವ ಅಗತ್ಯವಿದೆ ಎಂದು ಕೋರ್ಟ್ ಹೇಳಿತು.

ಲಾಕ್‌ಡೌನ್‌ನಲ್ಲಿ ವಲಸಿಗರ ಸಮಸ್ಯೆ

ಲಾಕ್‌ಡೌನ್‌ನಲ್ಲಿ ವಲಸಿಗರ ಸಮಸ್ಯೆ

ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ವಲಸಿಗರ ಸಮಸ್ಯೆಗಳ ವಿಚಾರವನ್ನು ಸ್ವಯಂ ಪ್ರೇರಣೆಯಿಂದ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ತಮ್ಮ ರಾಜ್ಯಗಳಿಗೆ ತೆರಳಲು ಬಯಸಿರುವ ವಲಸಿಗರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.

ಸಾರ್ವಜನಿಕ ಸ್ಥಳ ಆಕ್ರಮಣ ತಪ್ಪು

ಸಾರ್ವಜನಿಕ ಸ್ಥಳ ಆಕ್ರಮಣ ತಪ್ಪು

ಮದುವೆಯಾದ ಬಳಿಕವೂ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ ಎಂದು ಆಗಸ್ಟ್‌ನಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತು. ಮುಂಬೈನ ನಿವಾಸದಲ್ಲಿ ಆತ್ಮಹತ್ಯೆಗೆ ಒಳಗಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತು. ದೆಹಲಿಯ ಶಹೀನ್ ಬಾಗ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಸಾರ್ವಜನಿಕ ರಸ್ತೆ ಮತ್ತು ಸ್ಥಳಗಳಲ್ಲಿ ತಡೆಯೊಡ್ಡಿರುವುದು ಕಾನೂನಿನಡಿ ಅವಕಾಶ ನೀಡಲಾಗದು. ಅದನ್ನು ತೆರವುಗೊಳಿಸಬೇಕು ಎಂದು ಆದೇಶಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+