G S Basavaraj Profile : ದೇವೇಗೌಡರನ್ನು ಸೋಲಿಸಿದ ನಾಯಕನ ರಾಜಕೀಯ ನಿವೃತ್ತಿ ಘೋಷಣೆ!
ಅವರು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು. ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಲಿಲ್ಲ. ಪಕ್ಷ ನಿಷ್ಠೆ ಮತ್ತು ವ್ಯಕ್ತಿ ನಿಷ್ಠೆಗೆ ಹೆಸರಾಗಿರುವ ನಾಯಕ ಈಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ತುಮಕೂರು ಕ್ಷೇತ್ರದ ಸಂಸದ, ಬಿಜೆಪಿ ನಾಯಕ ಜಿ. ಎಸ್. ಬಸವರಾಜ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 81 ವರ್ಷದ ಅವರಿಗೆ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡುವುದು ಸಹ ಅನುಮಾನವಾಗಿತ್ತು. 2024ರ ಲೋಕಸಭೆ ಚುನಾವಣೆಗೆ ಮೊದಲೇ ಸಂಸದರು ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರನ್ನು ಸೋಲಿಸಿ ಜಿ. ಎಸ್. ಬಸವರಾಜ ಮತ್ತೊಮ್ಮೆ ಲೋಕಸಭೆ ಪ್ರವೇಶ ಮಾಡಿದ್ದರು. ಈಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿಷ್ಟರಾಗಿರುವ ಜಿ. ಎಸ್. ಬಸವರಾಜ ಪುತ್ರ ಜ್ಯೋತಿ ಗಣೇಶ್ ಸದ್ಯ ತುಮಕೂರು ನಗರ ಕ್ಷೇತ್ರದ ಬಿಜೆಪಿ ಶಾಸಕರು.
"ಇನ್ನು ಮುಂದೆ ಚುನಾವಣೆಯಲ್ಲಿ ನಿಲ್ಲುವುದಿಲ್ಲ. ಆದರೆ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಗಳ ಸಂದರ್ಭದಲ್ಲಿ ಜೊತೆಯಾಗಿರುವೆ" ಎಂದು ಜಿ. ಎಸ್. ಬಸವರಾಜ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮುಂದೆಯೇ ತಿಪಟೂರಿನಲ್ಲಿ ಘೋಷಣೆ ಮಾಡಿದ್ದಾರೆ.

ತಿಪಟೂರಿನಲ್ಲಿ ಸಂಸದರ ಘೋಷಣೆ
ತಿಪಟೂರಿನಲ್ಲಿ ನಡೆಯುತ್ತಿರುವ ಶ್ರೀ ಗುರು ಸಿದ್ಧರಾಮೇಶ್ವರರ 850ನೇ ಜಯಂತಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿನ ಜಿ. ಎಸ್. ಬಸವರಾಜ, "ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ. ಆದರೆ ನೀರಾವರಿ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಜೊತೆಯಾಗಿರುವೆ" ಎಂದರು. ಇದೇ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹ ಪಾಲ್ಗೊಂಡಿದ್ದರು.

ಮೂರು ಬಾರಿ ಸಂಸದರು
ಜಿ. ಎಸ್. ಬಸವರಾಜ 1999 ಮತ್ತು 2009ರಲ್ಲಿ ಸಂಸದರಾಗಿದ್ದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ನ ಎಸ್. ಪಿ. ಮುದ್ದಹನುಮೇಗೌಡ ವಿರುದ್ಧ ಸೋಲು ಕಂಡರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ವಿರುದ್ಧ 596,127 ಮತಗಳನ್ನು ಪಡೆದು ಜಯಗಳಿಸಿದರು. ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟು, ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದರೂ 582,788 ಮತಗಳನ್ನು ಪಡೆದು ಸೋಲು ಕಂಡರು.

ಕೇಂದ್ರ ಮಂತ್ರಿಯೂ ಆಗಲಿಲ್ಲ
1996ರಲ್ಲಿ ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದರು. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಜಿ. ಎಸ್. ಬಸವರಾಜ ಎರಡು ಬಾರಿ ಸಂಸದರಾಗಿದ್ದರೂ ಕೇಂದ್ರದಲ್ಲಿ ಮಂತ್ರಿಯಾಗಲಿಲ್ಲ.
ಜಿ. ಎಸ್. ಬಸವರಾಜ ಪುತ್ರ ಜ್ಯೋತಿ ಗಣೇಶ್ ಪ್ರಸ್ತುತ ತುಮಕೂರು ನಗರ ಕ್ಷೇತ್ರದ ಬಿಜೆಪಿ ಶಾಸಕರು. ಬಿ. ಎಸ್. ಯಡಿಯೂರಪ್ಪ ಅವರು ಕಟ್ಟಿದ್ದ ಕೆಜೆಪಿ ಪಕ್ಷದಿಂದಲೂ ಸಹ ಅವರು ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು.

ಎಸ್. ಪಿ. ಮುದ್ದಹನುಮೇಗೌಡಗೆ ಟಿಕೆಟ್?
ಕಾಂಗ್ರೆಸ್ ನಾಯಕ, ತುಮಕೂರಿನ ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಬಿಜೆಪಿ ಸೇರಿದ್ದಾರೆ. ಅವರು ಕುಣಿಗಲ್ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿ. ಒಂದು ವೇಳೆ ವಿಧಾನಸಭೆ ಟಿಕೆಟ್ ದೊರೆಯದಿದ್ದರೆ 2024ರಲ್ಲಿ ತುಮಕೂರು ಕ್ಷೇತ್ರದ ಟಿಕೆಟ್ ಅವರಿಗೆ ಸಿಗುವ ಸಾಧ್ಯತೆ ಇದೆ. 2019ರ ಚುನಾವಣೆಯಲ್ಲಿ ಹಾಲಿ ಸಂಸದರಾಗಿದ್ದರೂ ಸಹ ಅವರು ಎಚ್. ಡಿ. ದೇವೇಗೌಡರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು.












Click it and Unblock the Notifications