Tulsidas Jayanti 2022: ಹನುಮ, ರಾಮನ ಮಹಾನ್ ಭಕ್ತನ ಬಗ್ಗೆ ತಿಳಿಯಿರಿ
ಆಗಸ್ಟ್ 4ರಂದು ತುಳಸಿದಾಸ ಜಯಂತಿ ದಿನ. ರಾಮಚರಿತ ಮಾನಸ ಸೇರಿದಂತೆ ಹಲವು ಮಹಾನ್ ಗ್ರಂಥಗಳನ್ನು ಬರೆದ ತುಳಸಿದಾಸ ಭಾರತ ಕಂಡ ಮಹಾನ್ ಗ್ರಂಥಕಾರರಲ್ಲಿ ಒಬ್ಬರು.
ತುಳಸೀದಾಸರು 16 ಮತ್ತು 17ನೇ ಶತಮಾನದಲ್ಲಿ ವಾಸವಿದ್ದ ಮಹಾನ್ ರಾಮಭಕ್ತರು. ಇವರು ಶ್ರಾವಣ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಜನಿಸಿದ್ದು. ಈ ವರ್ಷ ಇಂಗ್ಲೀಷ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್ 4 ರಂದು ಇದೆ.
International Friendship Day; ಎಲ್ಲಾ ಸಂಬಂಧ ಮೀರಿಸುತ್ತೆ ಸ್ನೇಹ- ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಉತ್ತರ ಪ್ರದೇಶದ ಕಾಸಗಂಜ್ ಜಿಲ್ಲೆಯ ಸೋರೋಂ ಬಳಿಯ ರಾಜಪುರ ಗ್ರಾಮದಲ್ಲಿ ಜನಿಸಿದ್ದರು. ಇವರು ಕ್ರಿ.ಶ. 1511ರಲ್ಲಿ ಜನಿಸಿದ್ದು ಎಂದು ಕೆಲವರು ಹೇಳುತ್ತಾರೆ, ಕೆಲವರು 1497ರಲ್ಲಿ ಹುಟ್ಟಿದ್ದು ಎನ್ನುತ್ತಾರೆ. ಇವರು 123 ವರ್ಷ ಕಾಲ ಬದುಕಿದ್ದರು ಎಂಬುದು ಕೆಲವರ ವಾದವಾದರೆ 111 ವರ್ಷ ಇವರು ಜೀವಿಸಿದ್ದರು ಎಂದು ಇನ್ನೂ ಕೆಲವರು ಹೇಳುತ್ತಾರೆ.
ವಿಶಿಷ್ಟಾದ್ವೈತ ಪರಂಪರೆಯ ತುಳಸೀದಾಸರನ್ನು ವಾಲ್ಮೀಕಿಯ ಅವತಾರ ಎಂದು ನಂಬಲಾಗುತ್ತದೆ. ಹಾಗೆಯೇ, ಇವರ ರಾಮಾಯಣ ಕೃತಿ ರಚನೆಗೆ ಸ್ವಯಂ ಹನುಮಂತನೇ ಮಾರ್ಗದರ್ಶಕ ಎಂದು ಹೇಳಲಾಗುತ್ತದೆ. ಇಂಥ ತುಳಸೀದಾಸರ ಬಗ್ಗೆ ಅವರ ಜಯಂತಿ ದಿನದಂದು ಕೆಲ ಪ್ರಮುಖ ವಿಚಾರಗಳನ್ನು ತಿಳಿಸುವ ಪ್ರಯತ್ನ ಇದು.
12 ತಿಂಗಳು ಗರ್ಭದಲ್ಲಿದ್ದರು
ತುಳಸೀದಾಸ್ ಅವರು ಆತ್ಮರಾಮನ್ ದುಬೇ ಮತ್ತು ಹುಳಸಿ ದೇವಿ ಎಂಬ ದಂಪತಿಗೆ ಜನಿಸಿದರು. ದಂತಕಥೆಗಳ ಪ್ರಕಾರ ಇವರು 12 ತಿಂಗಳ ಕಾಲ ತಾಯಿಯ ಗರ್ಭದಲ್ಲಿದ್ದರಂತೆ. ಹುಟ್ಟಿದಾಗ ಇವರು ಪುಟ್ಟ ಬಾಲಕನಂತೆ ಬೆಳವಣಿಗೆ ಹೊಂದಿದ್ದರಂತೆ. 32 ಹಲ್ಲುಗಳಿದ್ದವು. ಹುಟ್ಟಿದಾಗ ಎಲ್ಲ ಹಲುಳೆಗಳಂತೆ ಅಳದೆ ಇವರು ರಾಮ ಎಂದು ಶಬ್ದ ಹೊರಡಿಸಿದರು ಎಂದು ಹೇಳಲಾಗತ್ತದೆ. ಇದೇ ಕಾರಣಕ್ಕೆ ಇವರಿಗೆ ರಾಮಬೋಲಾ ಎಂದು ಹೆಸರಿಡಲಾಯಿತಂತೆ.
ಹೆತ್ತವರಿಂದ ದೂರ
ರಾಮಬೋಲಾ ಅವರು ಹುಟ್ಟಿದ್ದು ಅಭೂಕ್ತ ಮೂಲ ನಕ್ಷತ್ರದಲ್ಲಿ. ಜ್ಯೋತಿಷ್ಯದ ಪ್ರಕಾರ, ಈ ನಕ್ಷತ್ರದಲ್ಲಿ ಮಗು ಹುಟ್ಟಿದರೆ ತಂದೆಯ ಪ್ರಾಣಕ್ಕೆ ಪ್ರಮಾದ ಇರುತ್ತದೆ. ಹೀಗಾಗಿ, ತುಳಸೀದಾಸ್ ಹುಟ್ಟಿದ ನಾಲ್ಕು ದಿನಕ್ಕೆ ಮನೆಗೆಲಸದವಳ ಕೈಗೆ ಮಗು ಕೊಟ್ಟು ಕಳುಹಿಸಲಾಯಿತು. ಈಕೆಯ ಜೊತೆಯಲ್ಲಿ ಮಗು ಐದೂವರೆ ವರ್ಷಗಳ ಕಾಲ ಬೆಳೆಯುತ್ತದೆ.
ಮನೆಗೆಲಸದವಳು ಮೃತಪಟ್ಟ ಬಳಿಕ ರಾಮಬೋಲಾ ಅನಾಥ ಮಗುವಾಗುತ್ತದೆ. ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುತ್ತಾ ಆ ಬಾಲಕ ಜೀವನ ನಡೆಸಬೇಕಾಗುತ್ತದೆ. ಕೆಲ ಕಾಲದ ಬಳಿಕ ನರಹರಿದಾಸ ಎಂಬುವವರು ರಾಮಬೋಲಾನನ್ನು ಸಲಹುತ್ತಾರೆ. ಆಗ ಅವರ ಹೆಸರು ತುಳಸೀದಾಸ ಎಂದು ಬದಲಾಗುತ್ತದೆ.
ಪತ್ನಿಯಿಂದಾಗಿ ಸಂತನಾದ ತುಳಸೀದಾಸ
ತುಳಸೀದಾಸರ ಮದುವೆ ಬಗ್ಗೆಯೂ ಗೊಂದಲವಿದೆ. ತುಳಸೀದಾಸರು ಮದುವೆಯಾಗಿಲ್ಲ ಎಂದು ಕೆಲವರು ಹೇಳಿದರೆ, ಅವರಿಗೆ ವಿವಾಹವಾಗಿತ್ತು ಎಂದು ಇನ್ನೂ ಕೆಲವರು ನಂಬುತ್ತಾರೆ. ಅದೇನೇ ಇರಲಿ ಅವರ ಪತ್ನಿ ಕುರಿತಾದ ಒಂದು ದಂತಕಥೆ ಸ್ವಾರಸ್ಯಕರವಾಗಿದೆ.
ರತ್ನವಲಿ ಎಂಬುವವರು ತುಳಸೀದಾಸರ ಪತ್ನಿ. ಒಂದು ದಿನ ತುಳಸೀದಾಸರು ಹನುಮಂತನ ದೇವಸ್ಥಾನಕ್ಕೆ ಹೋಗಿರುತ್ತಾರೆ. ಆಗ ಅವರ ಪತ್ನಿ ರತ್ನವಲಿ ತನ್ನ ತವರು ಮನೆಗೆ ಹೋಗುತ್ತಾರೆ. ಇದು ಗೊತ್ತಾದಾಗ ತುಳಸೀದಾಸರಿಗೆ ಹೆಂಡತಿಯನ್ನು ನೋಡುವ ಹಂಬಲವಾಗುತ್ತದೆ. ರಾತ್ರಿಯಲ್ಲೇ ಯಮುನಾ ನದಿಯಲ್ಲಿ ಈಜಿ ಪತ್ನಿಯ ತವರು ಮನೆಗೆ ಹೋಗುತ್ತಾರೆ.
ತನ್ನ ಗಂಡ ಇಷ್ಟು ಸಾಹಸ ಮಾಡಿ ಬಂದಿರುವುದನ್ನು ಕಂಡ ರತ್ನವಳಿ ತುಳಸೀದಾಸರನ್ನು ಪ್ರಶಂಸಿಸುವ ಬದಲು ಛೇಡಿಸುತ್ತಾರೆ. "ನನ್ನ ದೇಹದ ಮೇಲೆ ನಿಮಗೆ ಇಷ್ಟು ವ್ಯಾಮೋಹ ಇದೆ. ದೇವರ ಮೇಲೆ ಇದರ ಅರ್ಧದಷ್ಟು ಭಕ್ತಿ ಬಂದರೂ ಸಾಕು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬಹುದು" ಎಂದು ರತ್ನವಲಿ ಹೇಳುತ್ತಾರೆ.
ಹೆಂಡತಿ ಮಾತಿನಿಂದ ಜ್ಞಾನೋದಯವಾದ ತುಳಸೀದಾಸರು ಮರುಮಾತಾಡದೇ ತತ್ಕ್ಷಣ ಅಲ್ಲಿಂದ ನಿರ್ಗಮಿಸಿ ಪ್ರಯಾಗ ನಗರಕ್ಕೆ ಹೋಗುತ್ತಾರೆ. ಅಲ್ಲಿ ಗೃಹಸ್ಥಾಶ್ರಮ ತ್ಯಜಿಸಿ ಸಂತನಾಗಿ ಬದಲಾಗುತ್ತಾರೆ.
ತುಳಸೀದಾಸರು ಬರೆದ ಕೃತಿಗಳು
ತುಳಸೀದಾಸರು ಪ್ರಮುಖವಾಗಿ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ಪ್ರಖ್ಯಾತವಾದುದು ರಾಮಚರಿತ ಮಾನಸ, ದೋಹವಲಿ, ಸಾಹಿತ್ಯ ರತ್ನ, ಗೀತಾವಲಿ, ವಿನಯಪತ್ರಿಕಾ. ಹನುಮಾನ್ ಚಾಲೀಸಾ, ಹನುಮಾನ್ ಅಷ್ಟಕ, ತುಳಸಿ ಸತ್ಸಾಯಿ ಇತ್ಯಾದಿ ಹಾಡಗಳನ್ನೂ ತುಳಸೀದಾಸರೇ ರಚಿಸಿದ್ದಾರೆ ಎನ್ನಲಾಗುತ್ತದೆ. ಇವರ ಕೃತಿಗಳು ಅವಧಿ ಮತ್ತು ಬ್ರಜ ಭಾಷೆಗಳಲ್ಲಿ ರಚನೆಯಾಗಿವೆ. ಸಂಸ್ಕೃತದಲ್ಲೂ ಇವರು ಬರೆದಿದ್ದಾರೆ.
ತುಳಸೀದಾಸರ ಮಹಾತ್ಮೆ ಬಗ್ಗೆ ಬಹಳ ದಂತಕಥೆಗಳಿವೆ. ಇವರು ಪವಾಡ ಪುರುಷರಾಗಿದ್ದರು ಎಂದು ಹೇಳಲಾಗುತ್ತದೆ. ಸ್ವತಃ ಹನುಮಂತನೇ ಇವರಿಗೆ ದರ್ಶನ ನೀಡಿದ್ದಾನೆ. ಪಾರ್ವತಿ ದೇವಿ ಮನುಷ್ಯ ರೂಪದಲ್ಲಿ ಬಂದು ಇವರಿಗೆ ಸಹಾಯ ಮಾಡಿದ್ದರು ಎಂಬೆಲ್ಲಾ ಕಥೆಗಳಿವೆ.
(ಒನ್ಇಂಡಿಯಾ ಸುದ್ದಿ)