ನೂರೆಂಟು ಪ್ರಶ್ನೆ ಹುಟ್ಟುಹಾಕುತ್ತಿರುವ ಸಿಎಂ ರೆಸಾರ್ಟ್ ವಾಸ್ತವ್ಯ..!
Recommended Video
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು, ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದು ವರ್ಷವಾಗುತ್ತಿದೆ. ಅಲ್ಲಿಂದ ಇಲ್ಲಿ ತನಕದ ಬೆಳವಣಿಗೆ ಮತ್ತು ಆಡಳಿತದ ಹಾದಿಯನ್ನೊಮ್ಮೆ ಗಮನಿಸಿ ನೋಡಿದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಹೆಚ್ಚಿನ ಸಮಯವನ್ನು ಕಳೆದಿರುವುದು ದೇವಾಲಯಗಳಿಗೆ ಭೇಟಿ ನೀಡುವುದರಲ್ಲಿ..
ಪೂಜೆ, ಹೋಮ, ಹವನ ಮಾಡಿಸುವುದರಲ್ಲಿ, ರೆಸಾರ್ಟ್ಗಳಲ್ಲಿ ಕುಳಿತು ರಾಜಕೀಯ ರಣತಂತ್ರವನ್ನು ಹೆಣೆಯುವುದರಲ್ಲಿಯೇ ಕಳೆದಿರುವುದು ಎದ್ದು ಕಾಣುತ್ತಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ವಿರೋಧಪಕ್ಷದ ಸ್ಥಾನದಲ್ಲಿದ್ದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಲೇಬೇಕೆಂಬ ಹಠ ತೊಟ್ಟು ಕೆಲಸ ಮಾಡಿದ್ದರು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಅಲ್ಲದೇ ತಾನು ಸಿಎಂ ಆಗಲೇಬೇಕೆಂಬ ಸಂಕಲ್ಪ ತೊಟ್ಟು ನಂಜನಗೂಡು ನಂಜುಂಡೇಶ್ವರ, ಆದಿಚುಂಚನಗಿರಿಯ ಕಾಲಭೈರವೇಶ್ವರ ದೇಗುಲಗಳಿಗೆ ತೆರಳಿ ಸಂಕಲ್ಪ ಮಾಡಿಕೊಂಡಿದ್ದರು. ಇದಲ್ಲದೆ ಶೃಂಗೇರಿ ಸೇರಿದಂತೆ ಹಲವೆಡೆಗಳಲ್ಲಿಯೂ ಇವರು ಹರಕೆ ಹೊತ್ತಿದ್ದರು. ದೇವರ ದಯೆಯಿಂದ ಅವರ ಪಕ್ಷ ಬಹುಮತ ಪಡೆಯದಿದ್ದರೂ ಸಿಎಂ ಪಟ್ಟವಂತು ಅವರನ್ನು ಹುಡುಕಿಕೊಂಡು ಬಂದಿತು.
ಸಿಎಂ ಸ್ಥಾನಕ್ಕೇರಿದ ಬಳಿಕವಂತು ಕುಮಾರಸ್ವಾಮಿ ಅವರು ಹರಕೆ ತೀರಿಸುವುದರಲ್ಲಿಯೇ ಹೆಚ್ಚಿನ ಸಮಯ ಕಳೆದಿದ್ದಾರೆ.

ಮೌನಕ್ಕೆ ಶರಣಾದ ಕಾಂಗ್ರೆಸ್ ನಾಯಕರು
ಪುತ್ರ ನಿಖಿಲ್ ನನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದ ಮುಖ್ಯಮಂತ್ರಿಗಳು ಮಗನ ಗೆಲುವಿಗಾಗಿ ಮತ್ತೆ ದೇಗುಲಗಳ ದರ್ಶನಕ್ಕೆ ಮುಂದಾದರು. ಈ ನಡುವೆ ಕುಕ್ಕೆಸುಬ್ರಹ್ಮಣ್ಯನಿಗೆ ಎಪ್ಪತ್ತು ಕೋಟಿ ವೆಚ್ಚದಲ್ಲಿ ಚಿನ್ನದ ರಥದ ಹರಕೆ ತೀರಿಸಲು ಮುಂದಾಗಿದ್ದು, ಒಂದಷ್ಟು ವಿರೋಧದ ನಡುವೆಯೂ ಅದರ ಪ್ರಕ್ರಿಯೆಗಳು ನಡೆಯುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ತರಬೇಕೆಂದು ಆಗಿನ ಸಿಎಂ ಸಿದ್ದರಾಮಯ್ಯ ಹೊರಟಿದ್ದರು. ಆದರೆ ಇದೀಗ ಕಾಂಗ್ರೆಸ್ ಬೆಂಬಲಿತ ಸರ್ಕಾರ ಆಡಳಿತ ನಡೆಸುತ್ತಿದ್ದು, ಮುಖ್ಯಮಂತ್ರಿಗಳು ದಿನಬೆಳಗಾದರೆ ದೇವರು, ದೇವಸ್ಥಾನವೆಂದು ಸುತ್ತುತ್ತಿದ್ದರೆ, ಇತ್ತ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ.

ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಿಎಂ
ಕೊಡಗಿನಲ್ಲಿ ಕಳೆದ ವರ್ಷ ಆಗಸ್ಟ್ನಲ್ಲಿ ಜಲಪ್ರಳಯವಾಗಿ ಹಲವು ಗ್ರಾಮಗಳೇ ಕೊಚ್ಚಿ ಹೋಗಿವೆ.ಅಲ್ಲಲ್ಲಿ ಕೆಲಸಗಳು ನಡೆಯುತ್ತವೆಯಾದರೂ ಯಾವುದೂ ತಹಬದಿಗೆ ಬಂದಿಲ್ಲ. ಜಲಪ್ರವಾಹದ ನಂತರ ಕೊಡಗನ್ನು ಮರು ಸ್ಥಾಪಿಸುವ ಕೆಲಸವಾಗಬೇಕಾಗಿತ್ತು. ಆದರೆ ಅದ್ಯಾವುದೂ ಸಮಾರೋಪಾದಿಯಲ್ಲಿ ಸಾಗಿದಂತೆ ಕಾಣುತ್ತಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಈಗ ಜಿಲ್ಲಾಡಳಿತ ಮುಂದಿನ ಮುಂಗಾರು ಮಳೆಯ ಸಂದರ್ಭ ವಿಪತ್ತು ಸಂಭವಿಸಿದರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಎಲ್ಲ ರೀತಿಯಲ್ಲೂ ಸಜ್ಜಾಗಿದೆ. ಆದರೆ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರಿಗೆ ಮತ್ತು ಜಿಲ್ಲೆಯ ಜನತೆಗೆ ಧೈರ್ಯ ತುಂಬ ಬೇಕಾದ ಮುಖ್ಯಮಂತ್ರಿಗಳು ಪರಿವಾರದೊಂದಿಗೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

ಉತ್ತರ ಭಾರತದ ಕೆಲಸಗಾರರಷ್ಟೇ ಇದ್ದಾರೆ
ಇದೀಗ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿರುವ ಇಬ್ಬನಿ ರೆಸಾರ್ಟ್ ಮಡಿಕೇರಿಗೆ ಅನತಿ ದೂರದಲ್ಲಿ ಮಡಿಕೇರಿ ಕುಶಾಲನಗರ ರಸ್ತೆಯಲ್ಲಿದೆ. ಇಲ್ಲಿಂದ ಕೆಲವೇ ಕೆಲವು ಕಿ.ಮೀ.ದೂರ ಸಾಗಿದರೆ ಜಲಪ್ರಳಯಕ್ಕೊಳಗಾದ ಗ್ರಾಮಗಳಿವೆ. ಆದರೆ ಅಲ್ಲೆಲ್ಲೂ ತೆರಳದ ಕುಮಾರಸ್ವಾಮಿ ಅವರು ಬಿಗಿ ಬಂದೋಬಸ್ತ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಾಧ್ಯಮದವರಿಗೆ ಗೊತ್ತಾಗದಂತೆ ಮತ್ತು ರೆಸಾರ್ಟ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳೀಯರನ್ನು ರಜೆಯ ಮೇಲೆ ಕಳುಹಿಸಿ ಉತ್ತರ ಭಾರತದ ಕೆಲಸಗಾರರನ್ನಷ್ಟೆ ಇಲ್ಲಿಟ್ಟುಕೊಳ್ಳಲಾಗಿದೆ. ಆದರೂ ಕೊನೆಗಳಿಗೆಯಲ್ಲಿ ಗೌಪ್ಯ ಬಯಲಾಗಿದೆ. ಇದೀಗ ರೆಸಾರ್ಟ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ರಾಂತಿ ಪಡೆಯಲು ರೆಸಾರ್ಟ್ನಲ್ಲಿ ತಂಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಅದು ಸುಳ್ಳು. ಇಲ್ಲಿದ್ದುಕೊಂಡೇ ರಾಜಕೀಯ ರಣತಂತ್ರ ಹೆಣೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಶ್ರಾಂತಿ ನೆಪದಲ್ಲಿ ರೆಸಾರ್ಟ್ ಸೇರಿದ್ದಾರಾ?
ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಒಂದಷ್ಟು ಬೆಳವಣಿಗೆಯಾಗಿದೆ. ಕಾಂಗ್ರೆಸ್ನ ಒಂದಷ್ಟು ನಾಯಕರು ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಬಹಿರಂಗವಾಗಿಯೇ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಅರ್ಥ ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಇಳಿಸಬೇಕು ಎಂಬುದಾಗಿದೆ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ರಾಜಕೀಯ ತಂತ್ರಗಳನ್ನು ಈಗಿನಿಂದಲೇ ಕುಮಾರಸ್ವಾಮಿ ಅವರು ತಯಾರು ಮಾಡಿಟ್ಟುಕೊಳ್ಳುತ್ತಿದ್ದಾರಾ? ಅದಕ್ಕಾಗಿ ವಿಶ್ರಾಂತಿ ನೆಪದಲ್ಲಿ ರೆಸಾರ್ಟ್ ಸೇರಿದ್ದಾರೆ ಮೊದಲಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ. ಈಗಾಗಲೇ ಇದೇ ಇಬ್ಬನಿ ರೆಸಾರ್ಟ್ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ವಾಸ್ತವ್ಯ ಹೂಡಿದ್ದರು. ಇದೀಗ ಕುಮಾರಸ್ವಾಮಿ ಅವರ ಸರದಿ.. ಮುಂದೇನಾಗಬಹುದು? ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕಿದೆ.












Click it and Unblock the Notifications