Get Updates
Get notified of breaking news, exclusive insights, and must-see stories!

ಮೈಸೂರು ಸಂಸ್ಥಾನಕ್ಕೆ ಅಂಟಿದ ಆ ಶಾಪ ಯಾವುದು?

ಮೈಸೂರು ಸಂಸ್ಥಾನವನ್ನು ಕಾಡಿರುವ ಆ ಶಾಪದ ಬಗ್ಗೆ ಇವತ್ತಿಗೂ ಜನ ಮಾತನಾಡುತ್ತಲೇ ಇರುತ್ತಾರೆ. ಅದರಿಂದ ವಿಮೋಚನೆ ಪಡೆಯುವ ಸಲುವಾಗಿ ದಸರಾ ಸಮಯದಲ್ಲಿ ಪೂಜೆ ನಡೆಯುತ್ತದೆ. ಹಾಗಾದರೆ ಆ ಶಾಪ ಏನು? ಅದರ ವಿಮೋಚನೆಗೆ ನಡೆಯುವ ಪೂಜೆ ಯಾವುದು?

ಐತಿಹಾಸಿಕ ಜಂಬೂಸವಾರಿ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿದ್ದರೂ ಅರಮನೆಯಲ್ಲಿ ಖಾಸಗಿ ದರ್ಬಾರ್ ಜತೆಗೆ ಹಲವಾರು ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ಹಿಂದಿನಿಂದಲೂ ನಡೆಯುತ್ತಾ ಬಂದಿದ್ದು ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗಲಾಗುತ್ತಿದೆ.

ಮೈಸೂರು ದಸರಾದ ವೇಳೆ ಸಾಮಾನ್ಯವಾಗಿ ಮೈಸೂರು ರಾಜವಂಶಸ್ಥರ ಇತಿಹಾಸದತ್ತ ಹೆಚ್ಚಿನವರು ಆಸಕ್ತಿ ವಹಿಸುತ್ತಾರೆ. ಸುಮಾರು ನಾಲ್ಕು ಶತಮಾನಗಳಿಂದ ದಸರಾ ಆಚರಣೆ ನಡೆದುಕೊಂಡು ಬಂದಿದೆ ಎಂದರೆ ಅದರ ಬಗ್ಗೆ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇನ್ನು ಮೈಸೂರು ಮಹಾರಾಜರ ಬಗೆಗೆ ತಿಳಿದುಕೊಳ್ಳುತ್ತಾ ಹೋಗುವಾಗಲೆಲ್ಲ ಮೈಸೂರು ಮಹಾರಾಜರಿಗೆ ಅಂಟಿದ ಶಾಪದ ಬಗೆಗೆ ಪ್ರಚಲಿತದಲ್ಲಿರುವ ಕಥೆಯೊಂದು ಎಲ್ಲರ ಕುತೂಹಲ ಕೆರಳಿಸುತ್ತದೆ.

 ಶಾಪವಿಮೋಚನೆ ಅಲಮೇಲಮ್ಮನ ಪೂಜೆ

ಶಾಪವಿಮೋಚನೆ ಅಲಮೇಲಮ್ಮನ ಪೂಜೆ

ಇವತ್ತು ಮೈಸೂರು ವಲಯದಲ್ಲಿರುವ ಆ ಕಥೆಗೂ ದಸರಾ ವೇಳೆ ನಡೆಯುವ ಅದೊಂದು ಪೂಜೆಗೂ ನಂಟಿದೆ. ಅಷ್ಟೇ ಅಲ್ಲದೆ ಮೈಸೂರು ಮಹಾರಾಜರಿಗೆ ಮಕ್ಕಳಾಗದಿರುವುದಕ್ಕೂ ಹಾಗೂ ತಲಕಾಡು ಮರಳಾಗಿರುವುದಕ್ಕೂ ಒಂದಕ್ಕೊಂದು ಸಂಬಂಧವಿರುವುದು ನಮಗೆ ಗೋಚರಿಸುತ್ತದೆ. ಇನ್ನು ಮೈಸೂರು ಮಹಾರಾಜರಿಗೆ ಆ ಕಾಲದಲ್ಲಿ ಶಾಪನೀಡಿದ ಅಲಮೇಲಮ್ಮನ ಹೆಸರು ಇಂದಿಗೂ ಚಾಲ್ತಿಯಲ್ಲಿದೆ. ಮತ್ತು ಆಕೆಗೆ ದಸರಾ ವೇಳೆ ಮೈಸೂರು ರಾಜವಂಶಸ್ಥರಿಂದ ಪೂಜೆಯೂ ಸಲ್ಲುತ್ತದೆ.

ಈ ಪೂಜೆಯನ್ನು ಅಂದಿನ ಮಹಾರಾಜರಾಗಿದ್ದ ರಾಜ ಒಡೆಯರು ಶಾಪವಿಮೋಚನೆಗಾಗಿ ಮಾಡಿದ್ದು ಅದು ಸಂಪ್ರದಾಯವಾಗಿ ಮುಂದುವರೆದಿದೆ. ಹಾಗಾದರೆ ಅಲಮೇಲಮ್ಮನ ಪೂಜೆ ಹಿಂದಿನ ರಹಸ್ಯ ಏನು ಎಂಬುದನ್ನು ನೋಡುತ್ತಾ ಹೋದರೆ ರೋಚಕ ಕಥೆಯೊಂದು ತೆರೆದುಕೊಳ್ಳುತ್ತದೆ.

 ಒಡವೆ ಒಪ್ಪಿಸುವಂತೆ ರಾಜಾಜ್ಞೆ

ಒಡವೆ ಒಪ್ಪಿಸುವಂತೆ ರಾಜಾಜ್ಞೆ

ವಿಜಯನಗರದ ಪ್ರತಿನಿಧಿಯಾಗಿ ಶ್ರೀರಂಗರಾಯ ಎಂಬುವರು ಶ್ರೀರಂಗಪಟ್ಟಣದಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರಿಗೆ ಬೆನ್ನುಪಣಿ ರೋಗಬರುತ್ತದೆ. ಅದರ ನಿವಾರಣೆಗಾಗಿ ಅವರು ತನ್ನ ಪತ್ನಿ ಅಲಮೇಲಮ್ಮನ ಜೊತೆ ತಲಕಾಡಿನ ಶ್ರೀ ವೈದ್ಯನಾಥೇಶ್ವರ ದೇವಸ್ಥಾನಕ್ಕೆ ತೆರಳುತ್ತಾರೆ. ಅಲ್ಲಿ ಪೂಜೆ ಇನ್ನಿತರ ಕೈಂಕರ್ಯಗಳನ್ನು ಮಾಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಅಷ್ಟರಲ್ಲೇ ರೋಗ ಉಲ್ಭಣಗೊಂಡು ಅವರು ಮೃತಪಡುತ್ತಾರೆ.

ಇದೇ ಸುಸಂದರ್ಭ ಎಂದರಿತ ಮೈಸೂರು ರಾಜ್ಯವನ್ನು ಆಳುತ್ತಿದ್ದ ರಾಜ ಒಡೆಯರ್ ಶ್ರೀರಂಗರಾಯ ಆಳ್ವಿಕೆ ನಡೆಸುತ್ತಿದ್ದ ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಳ್ಳುತ್ತಾರೆ. ಆಗ ಶ್ರೀರಂಗರಾಯನ ಪತ್ನಿ ಅಲಮೇಲಮ್ಮ ಮತ್ತೆ ಶ್ರೀರಂಗಪಟ್ಟಣಕ್ಕೆ ಹೋಗಲು ಸಾಧ್ಯವಾಗದೆ ತಲಕಾಡಿನಲ್ಲಿ ನೆಲೆಸುತ್ತಾಳೆ. ತಲಕಾಡಿನಲ್ಲಿದ್ದ ಅಲಮೇಲಮ್ಮನ ಬಳಿ ಅಮೂಲ್ಯವಾದ ಮುತ್ತಿನ ಮೂಗುತಿ ಸೇರಿದಂತೆ ಬಹಳಷ್ಟು ಒಡವೆಗಳು ಇರುತ್ತವೆ. ಹೀಗಾಗಿ ನವರಾತ್ರಿ ಉತ್ಸವಕ್ಕೆ ಶ್ರೀರಂಗನಾಥ ಸ್ವಾಮಿಯನ್ನು ಅಲಂಕರಿಸಲು ಆ ಒಡವೆಗಳನ್ನು ತಂದು ತಮಗೊಪ್ಪಿಸುವಂತೆ ರಾಜ ಒಡೆಯರ್ ರಾಜಾಜ್ಞೆ ಮಾಡುತ್ತಾರೆ.

 ತಲಕಾಡಿನಲ್ಲಿ ಶಾಪ ನೀಡಿದ ಅಲಮೇಲಮ್ಮ

ತಲಕಾಡಿನಲ್ಲಿ ಶಾಪ ನೀಡಿದ ಅಲಮೇಲಮ್ಮ

ಅಲಮೇಲಮ್ಮ ರಾಜಾಜ್ಞೆಯನ್ನು ತಿರಸ್ಕರಿಸುತ್ತಾಳೆ. ಆಕೆಯಿಂದ ಬಲವಂತವಾಗಿ ಒಡವೆಗಳನ್ನು ಕಿತ್ತುಕೊಂಡು ಬರುವಂತೆ ರಾಜ ಒಡೆಯರು ಭಟರಿಗೆ ಅಪ್ಪಣೆ ಮಾಡುತ್ತಾರೆ. ಆಗ ರಾಜಧಾನಿ ಶ್ರೀರಂಗಪಟ್ಟಣದಿಂದ ರಾಜಭಟರು ಅಲಮೇಲಮ್ಮ ವಾಸವಿದ್ದ ತಲಕಾಡಿನತ್ತ ಹೊರಡುತ್ತಾರೆ. ರಾಜಭಟರು ತಲಕಾಡಿನತ್ತ ಬರುತ್ತಿರುವ ವಿಷಯ ತಿಳಿದ ಅಲಮೇಲಮ್ಮ ಅವರಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಲಕಾಡಿನಿಂದ ಮಾಲಂಗಿಯತ್ತ ಓಡಿಹೋಗುತ್ತಾಳೆ. ಆದರೆ ರಾಜಭಟರು ಅವಳ ಬೆನ್ನಟ್ಟುತ್ತಾರೆ.

ಅಲಮೇಲಮ್ಮನಿಗೆ ಆಗ ಅವರಿಂದ ತಪ್ಪಿಸಿಕೊಂಡು ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಬೇರೆ ದಾರಿ ಕಾಣದ ಆಕೆ ಕೋಪದಿಂದ "ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ" ಎಂದು ಶಾಪ ನೀಡಿ ತನ್ನಲ್ಲಿದ್ದ ಒಡವೆಗಂಟನ್ನು ಉಡಿಯಲ್ಲಿ ಕಟ್ಟಿಕೊಂಡು ಮಾಲಂಗಿ ಸಮೀಪದ ಕಾವೇರಿ ನದಿಗೆ ಹಾರಿ ಪ್ರಾಣ ಬಿಡುತ್ತಾಳೆ. ಅಂದಿನಿಂದ ತಲಕಾಡು ಮರಳುಮಯವಾಗಿದೆ ಎನ್ನಲಾಗುತ್ತಿದೆ.

 ಒಂದೊಂದು ಪೂಜೆಯೂ ವಿಶಿಷ್ಟ

ಒಂದೊಂದು ಪೂಜೆಯೂ ವಿಶಿಷ್ಟ

ಈ ಕಥೆಯ ಸತ್ಯಾಸತ್ಯತೆ ಏನೇ ಇರಲಿ ಇವತ್ತಿಗೂ ತಲಕಾಡು ಮರಳಾಗಿ, ಮಾಲಂಗಿ ಮಡುವಾಗಿ ಇರುವುದಂತು ನಿಜ, ಹಾಗೆಯೇ ಮೈಸೂರು ರಾಜರಿಗೆ ಮಕ್ಕಳಾಗದೆ ಇರುವುದೂ ನಿಜ, ದತ್ತುಪುತ್ರರಿಗೆ ಮಾತ್ರ ಮಕ್ಕಳಾಗುತ್ತಿದೆ. ಅದು ಏನೇ ಇರಲಿ ಅದಾದ ನಂತರ ಅಲಮೇಲಮ್ಮನ ಶಾಪ ನಿವಾರಣೆಗಾಗಿ ರಾಜ ಒಡೆಯರು ಅಲಮೇಲಮ್ಮನ ಚಿನ್ನದ ವಿಗ್ರಹವೊಂದನ್ನು ಮಾಡಿಸಿ ಅವರ ಕಾಲದಿಂದಲೇ ನವರಾತ್ರಿ ಹಬ್ಬದಲ್ಲಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಜಾರಿಗೆ ತಂದರು ಎನ್ನಲಾಗಿದ್ದು, ಅದು ಇವತ್ತಿಗೂ ನಡೆದುಕೊಂಡು ಬಂದಿದೆ.

ಮೈಸೂರಿನ ಮಹಾರಾಜರು ವಿಜಯದಶಮಿಯಂದು ಶಮೀವೃಕ್ಷ(ಬನ್ನಿಮರ) ಪೂಜಿಸು ವುದರೊಂದಿಗೆ ಪಾಡ್ಯದಂದು ಕಟ್ಟಿಸಿಕೊಂಡಿದ್ದ ಕಂಕಣವನ್ನು ಬಿಚ್ಚಿ ತಮ್ಮ ಖಾಸಗಿ ದರ್ಬಾರನ್ನು ಮುಗಿಸುತ್ತಾರೆ. ಇದೆಲ್ಲದರ ನಡುವೆ ಅರಮನೆಯಲ್ಲಿ ಅಲಮೇಲಮ್ಮನಿಗೂ ಪೂಜೆ ಮಾಡುತ್ತಾರೆ. ಒಟ್ಟಾರೆ ಮೈಸೂರಿನ ದಸರಾದಲ್ಲಿ ನಡೆಯುವ ಒಂದೊಂದು ಪೂಜೆಯೂ ತನ್ನದೇ ಆದ ವಿಶೇಷತೆ ಹೊಂದಿರುವುದಂತು ನಿಜ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+