Get Updates
Get notified of breaking news, exclusive insights, and must-see stories!

ಬಾಂಗ್ಲಾ ಹುಟ್ಟಿಗೆ ಕಾರಣ; ಇಂದಿರಾ ಎಂಬ 'ದುರ್ಗಿ'

'ಉಕ್ಕಿನ ಮಹಿಳೆ' ಎಂದೇ ಪ್ರಖ್ಯಾತಿ ಪಡೆದುಕೊಂಡಿದ್ದ ಇಂದಿರಾ ಗಾಂಧಿ ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿದ್ದರು. ಅಷ್ಟೇ ಅಲ್ಲದೇ 1966 ರಿಂದ 1977 ಅವಧಿಯಲ್ಲಿ ಸತತ ಮೂರು ಬಾರಿ ಭಾರತದಂತಹ ದೊಡ್ಡ ದೇಶವನ್ನು ಪ್ರಧಾನಿಯಾಗಿ ಮುನ್ನಡೆಸಿದ್ದರು. 1980 ರಿಂದ 1984ರಲ್ಲಿ ನಡೆದ ಅವರ ಹತ್ಯೆಯವರೆಗೆ ಒಟ್ಟು ನಾಲ್ಕು ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಒಟ್ಟು ಹದಿನೈದು ವರ್ಷಗಳ ಕಾಲ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದರು ಇಂದಿರಾ ಗಾಂಧಿ.

ಇಷ್ಟು ಸುದೀರ್ಘ ಅವಧಿಗಳ ಕಾಲ ಅಧಿಕಾರದ ಕೇಂದ್ರದಲ್ಲಿದ್ದ ಇಂದಿರಾ ಸಾಕಷ್ಟು ವಿಚಾರಗಳಲ್ಲಿ ಈ ದೇಶದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿದ್ದಾರೆ, ಅದರಲ್ಲಿ ನೆರೆಯ ಬಾಂಗ್ಲಾ ಎಂಬ ದೇಶದ ಹುಟ್ಟಿಗೆ ಕಾರಣ ಎಂಬುದು ಅವರನ್ನು ಯುದ್ಧಭೂಮಿಯ ಇತಿಹಾಸವೂ ನೆನಪಿಸಿಕೊಳ್ಳುವಂತೆ ಮಾಡುತ್ತಿದೆ. ಇವತ್ತು ದೇಶದ ವಿಜಯ್ ದಿವಸ್ ಹೆಸರಿನಲ್ಲಿ ಪಾಕ್‌ ಜತೆಗೆ ನಡೆಸಿದ ರಣ ರೋಚಕ ಯುದ್ಧದ ನೆನಪಿಸಿಕೊಳ್ಳುತ್ತಿದ್ದರೆ, ಅದರ ಹಿಂದಿರುವ ಆಡಳಿತಾತ್ಮಕ ಆಲೋಚನೆ ಇಂದಿರಾ ಗಾಂಧಿ ಅವರದ್ದಾಗಿತ್ತು ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ.

ಪಾಕಿಸ್ತಾನದಿಂದ ಬಾಂಗ್ಲಾಗೆ ಕಿರುಕುಳ

ಪಾಕಿಸ್ತಾನದಿಂದ ಬಾಂಗ್ಲಾಗೆ ಕಿರುಕುಳ

ಇಂದಿನ ಬಾಂಗ್ಲಾದೇಶ, (ಅಂದಿನ ಪೂರ್ವ ಪಾಕಿಸ್ತಾನ) ಸ್ವಾತಂತ್ರ್ಯ ಪಡೆಯುವುದರಲ್ಲಿ ಇಂದಿರಾ ಗಾಂಧಿಯವರು ಪ್ರಮುಖ ಸ್ಥಾನ ವಹಿಸುತ್ತಾರೆ. ಪಾಕಿಸ್ತಾನ ಒಂದು ಕಾಲದಲ್ಲಿ ತನ್ನದೇ ಭಾಗವಾಗಿದ್ದ ಪೂರ್ವ ಪಾಕಿಸ್ತಾನದ ಜನರಿಗೆ ಇನ್ನಿಲ್ಲದೆ ಕಿರುಕುಳ ನೀಡುತ್ತಿತ್ತು ಎಂಬುದನ್ನು ಇತಿಹಾಸ ದಾಖಲಿಸಿದೆ.

ಅಲ್ಲಿ ನಡೆದ ಮಹಿಳಾ ದೌರ್ಜನ್ಯಕ್ಕೆ ತನ್ನದೇ ಆದ ಕಹಿ ನೆನಪುಗಳಿವೆ. ಇಂತಹ ಸಮಯದಲ್ಲಿ ಅನಿವಾರ್ಯವಾಗಿ ಇಂದಿರಾ ಗಾಂಧಿ ನೇತೃತ್ವದ ಭಾರತ ಸರ್ಕಾರ ಪೂರ್ವ ಪಾಕಿಸ್ತಾನ ಜನರಿಗೆ ಬೆಂಬಲ ನೀಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟಿತು ಮತ್ತು ಅದರ ಸುತ್ತ ನಡೆದ ಘಟನಾವಳಿಗಳು ರೋಚಕವಾಗಿವೆ.

ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ

ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ

ಭಾರತ ಎಂಬ ಬ್ರಿಟಿಷರ ಅಂಕೆಯಲ್ಲಿದ್ದ ದೇಶ 1947 ರಲ್ಲಿ ಸ್ವಾತಂತ್ರ್ಯಗೊಳ್ಳುವುದರ ಜೊತೆಗೆ ಇಬ್ಭಾಗವೂ ಆಯಿತು. ಪಾಕಿಸ್ತಾನ ಎಂಬ ಹೊಸ ದೇಶ ಹುಟ್ಟಿಕೊಂಡಿತು. ಧರ್ಮದ ಆಧಾರದ ಮೇಲೆ ವಿಭಜನೆಯಾದ ಪಾಕಿಸ್ತಾನವು ಸ್ವಾತಂತ್ರ್ಯದ ಬೆನ್ನಲ್ಲೇ ಭಾರತದ ಜೊತೆ ಯುದ್ಧ ಮಾಡಿ ಸೋತಿತು.

ಪೂರ್ವ ಭಾರತದಲ್ಲಿ ನೆಲೆಸಿದ್ದ ಮುಸ್ಲಿಂ ಪ್ರದೇಶ ಪಾಕಿಸ್ತಾನದ ಆಳ್ವಿಕೆ ಒಳಪಟ್ಟಿತ್ತು. ಅದನ್ನು 'ಪೂರ್ವ ಪಾಕಿಸ್ತಾನ' ಎಂದು ಕರೆಯುತ್ತಿದ್ದರು.

ಪೂರ್ವ ಪಾಕಿಸ್ತಾನದ ನಾಗರೀಕರಿಗೆ ಪಾಕಿಸ್ತಾನದ ಸೇನಾ ಆಡಳಿತ ವ್ಯಾಪಕ ದೌರ್ಜನ್ಯ ನೀಡುತ್ತಿತ್ತು. ಆಗಿನ ಪೂರ್ವ ಪಾಕಿಸ್ತಾನದಿಂದ ಸುಮಾರು 10 ಲಕ್ಷ ನಿರಾಶ್ರಿತರು ಭಾರತಕ್ಕೆ ನುಸುಳಿದರು. ಅವರು ಭಾರತದಲ್ಲಿ ಅಭದ್ರತೆ ಸೃಷ್ಠಿಸುವುದರ ಜೊತೆಗೆ ದೇಶದ ಆರ್ಥಿಕ ಮುಗ್ಗಟ್ಟಿಗೂ ಕಾರಣರಾದರು.

ಝೀಯಾ ಉರ್ ರೆಹಮಾನ್ ಬಾಂಗ್ಲಾದ ಜನಕ

ಝೀಯಾ ಉರ್ ರೆಹಮಾನ್ ಬಾಂಗ್ಲಾದ ಜನಕ

ಆ ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಬೆಂಬಲ ಪಾಕಿಸ್ತಾನಕ್ಕಿತ್ತು. ಪಾಕಿಸ್ತಾನದ ಮೇಲೆ ಯುದ್ಧ ಮಾಡದಂತೆ ಭಾರತಕ್ಕೆ ಎಚ್ಚರಿಕೆ ನೀಡಿ ವಿಶ್ವಸಂಸ್ಥೆ ನಿರ್ಣಯವನ್ನೂ ಕೈಗೊಂಡಿತು. ಆದರೆ ನೆರೆಯ ಬಾಂಗ್ಲಾದಲ್ಲಿ ನಡೆದ ಘಟನಾವಳಿಗಳು ಅನಿವಾರ್ಯವಾಗಿ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಗೆ ನಾಂದಿ ಹಾಡಿದವು. ಯಾವ ಅಂತಾರಾಷ್ಟ್ರೀಯ ಒತ್ತಡವೂ ಇದನ್ನು ತಡೆಯಲು ಸಾಧ್ಯವಾಗಲಿಲ್ಲ.

ಮಾರ್ಚ್ 27, 1971 ರಂದು ಪಾಕಿಸ್ತಾನ ಸೈನ್ಯದಲ್ಲಿ ಮೇಜರ್ ಆಗಿದ್ದ ಝೀಯಾ ಉರ್ ರೆಹಮಾನ್ ಅವರು ಬಂಡೆದ್ದಿದ್ದರು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ, ಅವಾಮಿ ಲೀಗ್ ನ ಮುಖ್ಯಸ್ಥ ಶೇಖ್ ಮುಜೀಬುರ್ ರೆಹಮಾನ್ ಹೋರಾಟಕ್ಕೆ ಜತೆಯಾದರು. ಸಹಜವಾಗಿಯೇ ರೆಹಮಾನ್ ರನ್ನು ದೇಶ ಭ್ರಷ್ಟರೆಂದು ಪಾಕಿಸ್ತಾನ ಸರ್ಕಾರ ಘೋಷಿಸಿತು.
ಯುದ್ದದ ಮೂಲಕ ಬಿಡುಗಡೆ ಹೊಂದಿದ ಬಾಂಗ್ಲದೇಶ

ಯುದ್ದದ ಮೂಲಕ ಬಿಡುಗಡೆ ಹೊಂದಿದ ಬಾಂಗ್ಲದೇಶ

ಇಂಹದೊಂದು ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದಂತೆ ಇಂದಿರಾ ಗಾಂಧಿಯವರು ಬಾಂಗ್ಲಾದೇಶದ ವಿಮೋಚನೆಗಾಗಿ ಪೂರ್ವ ಪಾಕಿಸ್ತಾನ ಜನರ ಹೋರಾಟಕ್ಕೆ ತಮ್ಮ ಸರಕಾರದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು. ಅಧಿಕೃತವಾಗಿ ಭಾರತವು ಪೂರ್ವ ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟದ ಕಣಕ್ಕೆ ಎಂಟ್ರಿ ಕೊಟ್ಟಿತು.

ಭಾರತದ ಪೂರ್ವ ಗಡಿಯನ್ನು ನಿರಾಶ್ರಿತರ ಆಶ್ರಯಕ್ಕಾಗಿ ಸುರಕ್ಷಿತ ಸ್ಥಳವೆಂದು ಘೋಷಿಸಲಾಯಿತು. ಪಶ್ಚಿಮ ಬಂಗಾಲ, ಬಿಹಾರ, ಆಸ್ಸಾಮ್, ಮೇಘಾಲಯ ಮತ್ತು ತ್ರಿಪುರ ಸರ್ಕಾರಗಳು ಗಡಿಯುದ್ದಕ್ಕೂ ನಿರಾಶ್ರಿತರ ಶಿಬಿರಗಳನ್ನು ಕಟ್ಟಿ ನಿಲ್ಲಿಸಲಾಯಿತು. ಝೀಯಾ ಉರ್ ರೆಹಮಾನ್ ಮತ್ತು ಶೇಖ್ ಮುಜೀಬರ್ ರೆಹಮಾನ್ ಅವರು ಈ ಶಿಬಿರಗಳನ್ನು ಗೆರಿಲ್ಲಾ ತರಬೇತಿ ಗೆ ಬಳಸಿಕೊಂಡರು.

ಬಿಕ್ಕಟ್ಟಿನಿಂದ ಹಿಂದೆ ಸರಿದ ಚೀನಾ

ಬಿಕ್ಕಟ್ಟಿನಿಂದ ಹಿಂದೆ ಸರಿದ ಚೀನಾ

1971 ರಲ್ಲಿ ಇಂದಿರಾ ಗಾಂಧಿಯವರು ಯೂರೋಪ್ ಪ್ರವಾಸ ಕೈಗೊಂಡರು. ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಪಾಕಿಸ್ತಾನದ ಪರವಾಗಿದ್ದ ಬ್ರಿಟನ್ ಮತ್ತು ಪ್ರಾನ್ಸ್ ದೇಶಗಳು ದೂರಸರಿಯುವಂತೆ ಮಾಡುವಲ್ಲಿ ಇಂದಿರಾ ಗಾಂಧಿ ಯಶಸ್ವಿಯಾದರು.

ಇಂದಿರಾ ಗಾಂಧಿಯವರ ಇನ್ನೊಂದು ಮಹತ್ವವಾದ ಸಾಧನೆಯೆಂದರೆ ಅದೇ ವರ್ಷದ ಅಗಸ್ಟ್ 9 ರಂದು ಸೋವಿಯತ್ ಯೂನಿಯನ್ ಜೊತೆ ಇಂಡೋ-ಸೋವಿಯತ್ ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ ಸಹಿ ಮಾಡಿಕೊಂಡರು. ಇದು ಅಮೆರಿಕಕ್ಕೆ ಆಘಾತವುಂಟು ಮಾಡಿತು. ಅದಲ್ಲದೇ ಪೀಪಲ್ಸ್ ರಿಪಬ್ಲಿಕ್ ಚೈನಾವು ಈ ಬಿಕ್ಕಟ್ಟಿನಲ್ಲಿ ಭಾಗಿಯಾಗದಂತೆ ನೋಡಿಕೊಂಡರು.

ಪಾಕಿಸ್ತಾನದಿಂದ ತುರ್ತುಪರಿಸ್ಥಿತಿ ಘೋಷಣೆ

ಪಾಕಿಸ್ತಾನದಿಂದ ತುರ್ತುಪರಿಸ್ಥಿತಿ ಘೋಷಣೆ

ಪಾಕಿಸ್ತಾನದ ಆಪ್ತ ಸ್ನೇಹಿತವಾಗಿದ್ದ ಚೀನಾವು ಕೇವಲ ನೈತಿಕ ಬೆಂಬಲ ಕೊಟ್ಟಿತು, ಭಾರತದ ಗಡಿಯತ್ತ ಸೈನ್ಯವನ್ನು ಕಳಿಸಲಿಲ್ಲ. ನಂತರ ಇಂದಿರಾ ಗಾಂಧಿಯವರ ಚಾಣಾಕ್ಷ ನಡೆಯಿಂದಾಗಿ ಚೀನಾ ಮತ್ತು ಅಮೇರಿಕ ದೇಶಗಳು ನೇರವಾಗಿ ಯುದ್ದದಲ್ಲಿ ಭಾಗಿಯಾಗಲಿಲ್ಲ.

1971, ನವೆಂಬರ್ ವೇಳೆಗೆ ಯುದ್ದ ಅನಿವಾರ್ಯವಾಯಿತು. ಪೂರ್ವ ಪಾಕಿಸ್ತಾನದೊಂದಿಗಿನ ಗಡಿಯಲ್ಲಿ ಭಾರತೀಯ ಸೇನೆಯನ್ನು ಜಮಾಗೊಳಿಸಲು ಇಂದಿರಾ ಗಾಂಧಿ ಆದೇಶ ನೀಡಿದರು. ಅದೇ ನವೆಂಬರ್ 23 ರಂದು ಯಾಹ್ಯಾಖಾನ್ ಇಡೀ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಿ ತಮ್ಮ ಜನತೆಗೆ ಯುದ್ಧಕ್ಕೆ ತಯಾರಾಗಿರುವಂತೆ ಹೇಳಿದರು.

ಇಂದಿರಾಗೆ ಭಾರತದಲ್ಲಿ ಅಭಿನಂದನೆಗಳ ಮಹಾಪೂರ

ಇಂದಿರಾಗೆ ಭಾರತದಲ್ಲಿ ಅಭಿನಂದನೆಗಳ ಮಹಾಪೂರ

ಡಿಸೆಂಬರ್ 3 ರಂದು ಪಾಕಿಸ್ತಾನಿ ವಾಯುಪಡೆಯು ಆಗ್ರಾ ಸೇರಿದಂತೆ ವಾಯುವ್ಯ ಭಾರತದ ಎಂಟು ವಿಮಾನನೆಲೆಗಳ ಮೇಲೆ ದಾಳಿ ಮಾಡಿತು. ಕೂಡಲೇ ಪ್ರಧಾನಿ ಇಂದಿರಾ ಗಾಂಧಿ ಪ್ರತಿಕ್ರಿಯಿಸಿ ಪಾಕಿಸ್ತಾನದ ಮೇಲೆ ಯುದ್ಧ ಸಾರಿದರು. ಭೂ ಸೇನೆ ಮತ್ತು ವಾಯು ದಾಳಿ ಮೂಲಕ ಪಾಕಿಸ್ತಾನದ ಮೇಲೆ ದಾಳಿ ಮಾಡಲಾಯಿತು.

ಬಹುತೇಕ ನಷ್ಟ ಅನುಭವಿಸಿದ ಪಾಕಿಸ್ತಾನ ಸೇನೆ ಡಿಸೆಂಬರ್ 16, 1971 ರಂದು ಶರಣಾಯಿತು. ಅಂದೇ ಹೊಸ ಬಾಂಗ್ಲಾದೇಶ ಉದಯವಾಯಿತು. ಪಾಕಿಸ್ತಾನದ ಬಿಗಿ ಮುಷ್ಠಿಯಿಂದ ಪೂರ್ವ ಪಾಕಿಸ್ತಾನ ಮುಕ್ತಿ ಹೊಂದಿ ಸ್ವತಂತ್ರ ದೇಶವಾಯಿತು. ಇಷ್ಟಕ್ಕೆಲ್ಲಾ ಕಾರಣರಾದ ಇಂದಿರಾಗೆ ಭಾರತದ ಸಂಸತ್ತಿನಲ್ಲಿ ಸರ್ವಪಕ್ಷಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತು. ಪ್ರತಿಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿಯನ್ನು 'ದುರ್ಗಿ' ಎಂದು ಬಣ್ಣಿಸಿದ್ದರು. ಬಾಂಗ್ಲಾ ವಿಮೋಚನೆಯಂತಹ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಭಾರತದ ಉಕ್ಕಿನ ಮಹಿಳೆಯೆಂದು ಕರೆಸಿಕೊಂಡರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+