Supertech twin tower demolition: ಅವಳಿ-ಜವಳಿ ಕಟ್ಟಡಗಳ ಹುಟ್ಟಿನಿಂದ ಸಾವಿನವರೆಗೂ ಏನಾಯಿತು!? ಬೆಳವಣಿಗೆ-ಸಾವು!
ನೋಯ್ಡಾ, ಆಗಸ್ಟ್ 25: ಭಾರತದಲ್ಲೇ ಮೊದಲ ಬಾರಿಗೆ 40 ಅಂತಸ್ತಿನ ಬೃಹತ್ ಅವಳಿ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ನೋಯ್ಡಾದಲ್ಲಿ ತನ್ನ ಎಮರಾಲ್ಡ್ ಪ್ರಾಜೆಕ್ಟ್ನಲ್ಲಿ ಸೂಪರ್ಟೆಕ್ನ ಅವಳಿ ಕಟ್ಟಡಗಳನ್ನು ಉರುಳಿಸುವುದಕ್ಕೆ ಎಲ್ಲವೂ ರೆಡಿಯಾಗಿದೆ. ಈ ಕಾರ್ಯಾಚರಣೆಗಾಗಿಯೇ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ (ಆರ್ಡಬ್ಲ್ಯೂಎ) ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಿದೆ.
ಆಗಸ್ಟ್ 28ರ ಭಾನುವಾರ ಮಧ್ಯಾಹ್ನ 2.30ರ ಹೊತ್ತಿಗೆ ನೋಯ್ಡಾದ ಸೆಕ್ಟರ್ 93ರಲ್ಲಿ ಇರುವ ಅವಳಿ ಗೋಪುರಗಳು ನೆಲಕ್ಕೆ ಉರುಳಲಿದೆ. ಅಪೆಕ್ಸ್ ಮತ್ತು ಸೆಯಾನೆ ತೆರವು ಕಾರ್ಯಾಚರಣೆಯಿಂದ 35,000 ಕ್ಯೂಬಿಕ್ ಮೀಟರ್ನಷ್ಟು ಬೃಹತ್ ಪ್ರಮಾಣದ ಅವಶೇಷ ಸೃಷ್ಟಿ ಆಗಲಿದೆ. ಅಲ್ಲಿಂದ ಮುಂದೆ ಅವಶೇಷವನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ತದನಂತರದಲ್ಲಿ ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3,700 ಕೆ.ಜಿ. ಸ್ಫೋಟಕ ಬಳಸಿ ನೊಯ್ಡಾದ 40 ಅಂತಸ್ತಿನ ಸೂಪರ್ಟೆಕ್ ಅವಳಿ ಕಟ್ಟಡಗಳ ಕೆಡವಲು ಸಿದ್ಧತೆ
ಭಾನುವಾರದ ಅವಳಿ-ಜವಳಿ ಗೋಪುರಗಳ ತೆರವು ಕಾರ್ಯಾಚರಣೆ ಹೇಗೆ ನಡೆಯಲಿದೆ?, ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯಾಚರಣೆಯ ಮೊದಲ ಹಂತವು ಹೇಗೆ ಶುರುವಾಗುತ್ತದೆ?, ಈ ತೆರವು ಕಾರ್ಯಾಚರಣೆಯು ಸುತ್ತಮುತ್ತಲಿನ ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಟೈಮ್ ಲೈನ್ ಅನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.
ಅವಳಿ ಗೋಪುರದಲ್ಲಿರುವ ನಿವಾಸಿಗಳ ಸಂಖ್ಯೆ ಎಷ್ಟಿದೆ?
ನೋಯ್ಡಾದ ಎರಡು ಟವರ್ಗಳ ಪೈಕಿ ಅಪೆಕ್ಸ್ 32 ಮಹಡಿಗಳು ಮತ್ತು ಸೆಯಾನೆ 29 ಮಹಡಿಗಳಿವೆ. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಈ ಟಾವರ್ ಅನ್ನು ನೆಲಸಮಗೊಳಿಸಲಾಗುತ್ತಿದೆ. ಸದ್ಯಕ್ಕೆ ಈ ಗೋಪುರದಲ್ಲಿ ಯಾವುದೇ ನಿವಾಸಿಗಳಿಲ್ಲ. ಈ ಗೋಪುರದ ಸುತ್ತಮುತ್ತಲಿನಲ್ಲಿ ಕನಿಷ್ಠ 7,000 ಜನರು ವಾಸವಾಗಿದ್ದು, ಆಗಸ್ಟ್ 28ರ ಬೆಳಗ್ಗೆ 7 ಗಂಟೆ ವೇಳೆಗೆ ಎಲ್ಲರೂ ಮನೆಗಳಿಂದ ಜಾಗ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಸಂಜೆ ಹೊತ್ತಿಗೆ ವಾಪಸ್ ತೆರಳುವುದಕ್ಕೆ ಅವಕಾಶ ನೀಡಲಾಗಿದೆ. ಹೀಗೆ ನಿವಾಸಿಗಳನ್ನು ತೆರವುಗೊಳಿಸಿ ಈ ಕಾರ್ಯಾಚರಣೆ ಅನ್ನು ನಡೆಸಲಾಗುತ್ತಿದೆ. ಸರಿಯಾಗಿ ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಾಚರಣೆಯು ಇತ್ತೀಚಿನ ದಿನಗಳಲ್ಲೇ ಅತಿದೊಡ್ಡ ತೆರವು ಕಾರ್ಯಾಚರಣೆ ಆಗಿದೆ.
ಟ್ವಿನ್ ಟವರ್ ತೆರವಿಗೆ 3700 ಕೆಜಿ ಸ್ಫೋಟಕ ಬಳಕೆ
ಅಕ್ರಮ ಅವಳಿ ಕಟ್ಟಡ ತೆರವು ಕಾರ್ಯಾಚರಣೆಗಾಗಿ 3700 ಕೆಜಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ, ಎಂದು ಎಡಿಫೈಸ್ ಎಂಜಿನಿಯರಿಂಗ್ನ ಪ್ರಾಜೆಕ್ಟ್ ಇಂಜಿನಿಯರ್ ಮಯೂರ್ ಮೆಹ್ತಾ ಹೇಳಿದ್ದಾರೆ. ಸೂಪರ್ಟೆಕ್ ಮತ್ತು ನೋಯ್ಡಾ ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ 20,000 ಸಂಪರ್ಕಗಳನ್ನು ಕೆಡವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಎರಡು ಪಕ್ಕದ ಸೊಸೈಟಿಗಳ ಕೆಲವು ಕಟ್ಟಡಗಳು, ಸೂಪರ್ಟೆಕ್ ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್, ಅವಳಿ ಗೋಪುರಗಳಿಂದ ಕೇವಲ 9 ಮೀಟರ್ಗಳಷ್ಟು ದೂರದಲ್ಲಿದೆ ಎಂದು ಮೆಹ್ತಾ ತಿಳಿಸಿದ್ದಾರೆ. ಈ ರಚನೆಗಳ ಮೇಲೆ ಕಂಪನದ ಪರಿಣಾಮ ಬೀಳಬಹುದು ಎಂಬ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. "ನೋಯ್ಡಾವನ್ನು ಭೂಕಂಪನ ವಲಯ IVರ ಭೂಕಂಪಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಈ ಮಾನದಂಡಗಳ ಪ್ರಕಾರ ನಿರ್ಮಿಸಲಾದ ರಚನೆಗಳು ರಿಕ್ಟರ್ ಮಾಪಕದಲ್ಲಿ 6ರ ತೀವ್ರತೆಯ ಭೂಕಂಪಗಳನ್ನು ತಡೆಯಬಲ್ಲ ಸಾಮರ್ಥ್ಯವನ್ನು ಹೊಂದಿವೆ," ಎಂದು ಮೆಹ್ತಾ ತಿಳಿಸಿದರು.
ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಟೈಮ್ ಲೈನ್
* ಬೆಳಗ್ಗೆ 6 ಗಂಟೆ: ಸಮೀಪದ ಸೊಸೈಟಿಯನ್ನು ಸ್ಥಳಾಂತರಿಸಲು ಪೊಲೀಸರಿಂದ ಪ್ರಕಟಣೆ ಪ್ರಾರಂಭ
* ಬೆಳಗ್ಗೆ 6.30 ಗಂಟೆ: ಸೊಸೈಟಿ ಬಳಿಗೆ ತಲುಪಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ(NDRF) ತಂಡಗಳು
* ಬೆಳಗ್ಗೆ 7 ಗಂಟೆ: ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲಾಗುವುದು
* ಬೆಳಗ್ಗೆ 9 ಗಂಟೆ: ಸೊಸೈಟಿಯಲ್ಲಿ ವಿದ್ಯುತ್-ಅನಿಲ ಸೇರಿದಂತೆ ಎಲ್ಲಾ ಸೇವೆಗಳ ನಿರ್ಬಂಧ
* ಮಧ್ಯಾಹ್ನ 2ಗಂಟೆ 3 ನಿಮಿಷ: ಎಕ್ಸ್ಪ್ರೆಸ್ವೇ ಮುಚ್ಚಲಾಗುವುದು
* ಮಧ್ಯಾಹ್ನ 2.30: ಅವಳಿ ಗೋಪುರ 12 ಸೆಕೆಂಡುಗಳಲ್ಲಿ ಸ್ಫೋಟ
* ಮಧ್ಯಾಹ್ನ 3:30 ಗಂಟೆ: NDRF, CBRI ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ವಾಪಸ್
* ಮಧ್ಯಾಹ್ನ 4:15 ಗಂಟೆ ಯಾವುದೇ ರೀತಿಯ ಹಾನಿಗಳನ್ನು ಪರಿಶೀಲಿಸಲು ಸೊಸೈಟಿ ಟಾಸ್ಕ್ ಫೋರ್ಸ್ ತಂಡವು ಆಗಮಿಸುವುದು
ಸಂಜೆ 5 ಗಂಟೆ: ವಿದ್ಯುತ್, ಅನಿಲ ಸೇವೆಗಳು ಪುನಾರಂಭಗೊಳ್ಳುತ್ತವೆ
ರಾತ್ರಿ 7 ಗಂಟೆ: ನಿವಾಸಿಗಳು ಸೊಸೈಟಿಗೆ ಮರಳಿ ಪ್ರವೇಶಿಸಲು ಅವಕಾಶ ನೀಡಲಾಗುವುದು
ಆ ಗೋಪುರದಲ್ಲಿ ಸ್ಫೋಟವಾದರೆ ಸುತ್ತಮುತ್ತಲಿನ ಗತಿಯೇನು?
"ಈ ಸ್ಫೋಟವು ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆಯನ್ನು ದಾಖಲಿಸುವ ಭೂಕಂಪದ ಹತ್ತನೇ ಒಂದು ಭಾಗವನ್ನು ಪ್ರಚೋದಿಸಲಿದ್ದು, ಸುರಕ್ಷಿತವಾಗಿದೆ. ಸುತ್ತಮುತ್ತಲಿನ 30 ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಈ ರೀತಿ ಕಂಪನದ ಅನುಭವವಾಗುತ್ತದೆ. ಯುಕೆ ಮೂಲದ ಸಂಸ್ಥೆಯಾದ ವೈಬ್ರೊಟೆಕ್ ಅನ್ನು ನೇಮಿಸಿಕೊಂಡಿದ್ದೇವೆ, ಈ ಸ್ಫೋಟವು ಪ್ರತಿ ಸೆಕೆಂಡಿಗೆ 22 ರಿಂದ 34 ಮಿಮೀ ಕಂಪನವನ್ನು ಉಂಟು ಮಾಡುತ್ತದೆ ಎಂದು ಕಂಡುಹಿಡಿಯಲಾಗಿದೆ. ರಿಕ್ಟರ್ ಮಾಪಕದಲ್ಲಿ 4ರ ವಿಶಿಷ್ಟವಾದ ಭೂಕಂಪವು ಸೆಕೆಂಡಿಗೆ 300 ಮಿಮೀ ಉಂಟಾಗುತ್ತದೆ," ಅವರು ವಿವರಿಸಿದರು.
ಕಾರ್ಯಾಚರಣೆ ವೇಳೆ ಧೂಳು ನಿಯಂತ್ರಿಸುವುದು ಹೇಗೆ?
ಅವಳಿ ಗೋಪುರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ತುಂಬಿಕೊಳ್ಳುತ್ತದೆ. ಅದನ್ನು ನಿರಾಕರಿಸುವುದರಲ್ಲಿ ಅರ್ಥವಿಲ್ಲ. ಇದೊಂದು ಪ್ರಮುಖ ಸಮಸ್ಯೆ ಆಗಿದೆ. ಆದರೆ ನೋಯ್ಡಾ ಅಧಿಕಾರಿಗಳು ಈಗಾಗಲೇ ತೆರವಿನ ನಂತರದ ಕಾರ್ಯಾಚರಣೆಗೆ ಎಲ್ಲ ರೀತಿ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಯಂತ್ರಗಳು ಮತ್ತು ಕಾರ್ಮಿಕರನ್ನು ಸಿದ್ಧಗೊಳಿಸಿದ್ದು ಆಗಿದೆ. ನಮ್ಮ ಸಿಬ್ಬಂದಿ ಕೂಡ ಇರುತ್ತಾರೆ. ಅವರು ಪಕ್ಕದ ಸೊಸೈಟಿಗಳು, ಮನೆಗಳು ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸುತ್ತಾರೆ," ಎಂದು ಮೆಹ್ತಾ ಹೇಳಿದ್ದಾರೆ.
ಈ ಮೊದಲು ಹಲವು ಗಡುವು ವಿಸ್ತರಣೆಗಳ ನಂತರ ಕಳೆದ ವರ್ಷ ಆಗಸ್ಟ್ 31ರಂದು ಸುಪ್ರಿಂ ಕೋರ್ಟ್ ಆದೇಶ ನೀಡಿತ್ತು. ಸೂಪರ್ಟೆಕ್ ಪ್ರೈವೇಟ್ ಲಿಮಿಟೆಡ್ಗೆ 40 ಅಂತಸ್ತಿನ ಅವಳಿ ಗೋಪುರಗಳನ್ನು ಮೂರು ತಿಂಗಳೊಳಗೆ ಕೆಡವಲು ನಿರ್ದೇಶಿಸಿತು. ಈ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ನಕ್ಷೆಗಳನ್ನು ಅನುಮೋದಿಸುವಲ್ಲಿ ಮತ್ತು ನಿಯಮಗಳನ್ನು ಉಲ್ಲಂಘಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆ ಗೋಪುರ ತೆರವಿಗೆ ಆದೇಶಿಸಲಾಗಿದ್ದು, ಮನೆಯನ್ನು ಖರೀದಿ ಮಾಡಿದವರಿಗೆ ಶೇ.12ರಷ್ಟು ಬಡ್ಡಿಯೊಂದಿಗೆ ಮರುಪಾವತಿ ಮಾಡುವಂತೆ ಸೂಚನೆ ನೀಡಲಾಗಿದೆ.