ಬೆಂಗಳೂರಿಗರ ಕನಸು ನನಸು; ಉಪನಗರ ರೈಲು ಯೋಜನೆಗೆ ವೇಗ
ಬೆಂಗಳೂರು ಜೂ. 10: ದಶಕಗಳ ಹಿಂದೆ ಯೋಜನೆ ರೂಪುಗೊಂಡು ವರ್ಷಗಳಿಂದಲೂ ವಿಳಂಬವಾಗುತ್ತಿದ್ದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ವೇಗ ಸಿಕ್ಕಿದೆ. ಜೂನ್ 20ರಂದು ಯೋಜನೆಗೆ ಶಂಕು ಸ್ಥಾಪನೆಯಾಗಲಿದ್ದು, ಯೋಜನೆ ಪೂರ್ಣಗೊಳ್ಳಲು ಸುಮಾರು 6 ವರ್ಷ ಬೇಕು ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆ, 6 ವರ್ಷಗಳಲ್ಲಿ ಪೂರ್ಣ
ವಿವಿಧ ಕಾರಣಗಳಿಂದ ಯೋಜನೆಗೆ ಶಂಕುಸ್ಥಾಪನೆ ಮಾಡುವುದು ವಿಳಂಬವಾಗಿತ್ತು. ಈಗ ಯೋಜನೆಗೆ ಜೂನ್ 20 ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಬಹುಕಾಲದ ಕನಸಿನ ಯೋಜನೆಗೆ ಆರಂಭಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಹುಬ್ಬಳ್ಳಿ-ಆಂಕೋಲಾ ರೈಲು ಮಾರ್ಗ: 10 ವಾರಗಳಲ್ಲಿ ನಿರ್ಧರಿಸಲು ಕೇಂದ್ರಕ್ಕೆ ಆದೇಶ
ಮುಂಬೈ ಮಾದರಿಯಲ್ಲೇ ಬೆಂಗಳೂರಿಗೆ ಉಪನಗರ ರೈಲು ಯೋಜನೆಗೆ ದಶಕಗಳ ಹಿಂದೆ ಅಂದರೆ 1983ರಲ್ಲಿ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ನಂತರ 2019ರಲ್ಲಿ ಕೇಂದ್ರ ಸರ್ಕಾರ ತನ್ನ ಆಯವ್ಯಯದಲ್ಲಿ ಪ್ರಸ್ತಾಪಿಸಿತ್ತು. ನಂತರ 2020 ರಲ್ಲಿ ಕೇಂದ್ರ ರೈಲ್ವೆ ಇಲಾಖೆಯಿಂದ ಯೋಜನೆಗೆ ಅನುಮೋದನೆ ದೊರೆಯಿತು.
ಒಟ್ಟು 15,767 ಕೋಟಿ ರೂ. ಯೋಜನೆ ಇದ್ದಾಗಿದ್ದು, ಇದರ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆ-ರೈಡ್) ವಹಿಸಿಕೊಂಡಿದೆ. ಕೆ-ರೈಡ್ ಈ ಉಪನಗರ ಯೋಜನೆಯನ್ನು ಬೆಂಗಳೂರಿನಾದ್ಯಂತ ಸುಮಾರು 150 ಕಿ. ಮೀ. ವ್ಯಾಪ್ತಿಯಲ್ಲಿ ಒಟ್ಟು 4 ವಿಭಾಗಗಳಾಗಿ ವಿಂಗಡಿಸಿದೆ.
ಬೆಂಗಳೂರು ಸಬ್ಅರ್ಬನ್ ರೈಲು ಯೋಜನೆ: ಜೂ.20ಕ್ಕೆ ಪ್ರಧಾನಿ ಶಂಕುಸ್ಥಾಪನೆ- ಸಿಎಂ ಬೊಮ್ಮಾಯಿ
ದಿನೇ ದಿನೇ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಯಾಗುತ್ತಿರುವ ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಉಪ ನಗರ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. ಬಿಎಂಟಿಸಿ ಬಸ್, ನಮ್ಮ ಮೆಟ್ರೋ ಮೇಲಿನ ಒತ್ತಡ ಕಡಿಮೆಯಾಗು ನಿರೀಕ್ಷೆ ಇದೆ.
6 ವರ್ಷದಲ್ಲಿ ಯೋಜನೆ ಪೂರ್ಣವಾಗುವುದೇ?:
2020ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಮುಂದಿನ ಮೂರು ವರ್ಷದಲ್ಲಿ ಉಪನಗರ ರೈಲು ಯೋಜನೆ ಮುಗಿಸುವುದಾಗಿ ಘೋಷಿಸಿದ್ದರು. ಅಲ್ಲಿಂದ ಈವರೆಗಿನ ಎರಡು ವರ್ಷದಲ್ಲಿ ಯೋಜನೆ ಆರಂಭವಾಗದೇ ವಿಳಂಬವಾಗುತ್ತಾ ಬಂದಿದೆ. ಇದೀಗ ಸರ್ಕಾರ ಮತ್ತೆ ಹೊಸ ಗಡುವು ಸೂಚಿಸಿದ್ದು, ಮುಂದಿನ ಆರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ತಿಳಿಸಿದೆ. ಯೋಜನೆ ಆರಂಭಕ್ಕೆ ಇಷ್ಟೊಂದು ಸಮಯ ತೆಗೆದುಕೊಂಡ ಸರ್ಕಾರ ಬೃಹತ್ ಯೋಜನೆ ಕೇವಲ ಆರು ವರ್ಷದಲ್ಲಿ ಪೂರ್ಣಗೊಳಿಸಿತೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಭೇಟಿ ಬಳಿಕ ಉತ್ತರ ನಿರೀಕ್ಷಿಸಬಹುದು.
ರಾಜ್ಯ ನಾಲ್ವರು ರೈಲ್ವೆ ಮಂತ್ರಿಗಳಾಗಿದ್ದರು
1983ರಲ್ಲಿ ಯೋಜನೆಗೆ ಪ್ರಸ್ತಾವನೆ ಸಿದ್ದಪಡಿಸಲಾಯಿತು. ಆದರೆ ಕೆಲವು ಬಾರಿ ಯೋಜನಾ ವಿನ್ಯಾಸ ತಿದ್ದುಪಡಿಗೆ ಒಳಪಡಿಸಿರುವುದು ಸಹ ಯೋಜನೆ ಕಾರ್ಯಾರಂಭಗೊಳ್ಳಲು ಕಾರಣ ಎಂಬ ಮಾತಿದೆ. ಅಲ್ಲಿಂದ ಈವರೆಗೆ ರಾಜ್ಯದಿಂದ ಆಡಳಿತ ಹಾಗೂ ವಿರೋಧಪಕ್ಷದಿಂದ ಒಟ್ಟು ನಾಲ್ವರು ರೈಲ್ವೆ ಮಂತ್ರಿಗಳಾಗಿದ್ದರು. ಜಾರ್ಜ್ ಫರ್ನಾಂಡೀಸ್, ಜಾಫರ್ ಷರೀಫ್, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ. ವಿ. ಸದಾನಂದಗೌಡ ರೈಲ್ವೆ ಸಚಿವರಾಗಿ ಅಧಿಕಾರ ನಡೆಸಿದ್ದರು. ಹೀಗಿದ್ದರು ಯೋಜನೆಗೆ ಚುರುಕುಗೊಳ್ಳಲಿಲ್ಲ.
ಯೋಜನೆಗೆ ಕೇಂದ್ರದಿಂದ 850ಕೋಟಿ ರೂ.
2013ರ ಚುನಾವಣೆ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 2016ರಲ್ಲಿ ಸಬ್ ಅರ್ಬನ್ ರೈಲು ಯೋಜನೆ ಆರಂಭಕ್ಕೆ 100 ಕೋಟಿ ರೂ. ಘೋಷಿಸಿದ್ದರು. ಆಗ ಇದಕ್ಕೆ ಕೇವಲ ಔಪಚಾರಿಕವಾಗಿ ಮಾತ್ರ ಒಪ್ಪಿಗೆ ನೀಡಿದ್ದ ಕೇಂದ್ರ ಸರ್ಕಾರ ಇದೀಗ 2022-2023 ಕೇಂದ್ರ ಬಜೆಟ್ ನಲ್ಲಿ ಮೊದಲ ಹಂತದಲ್ಲಿ ಒಟ್ಟು ಸುಮಾರು 850 ಕೋಟಿ ರು. ಅನುದಾನ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ರಾಜಕೀಯ ಕಾರಣಗಳಿಂದ ತಡವಾಗಿದ್ದ ಬಹುನಿರೀಕ್ಷಿತ ಉಪನಗರ ರೈಲ್ವೆ ಯೋಜನೆಗೆ ಜೂನ್ 20ರಂದು ಚಾಲನೆ ದೊರೆಯಲಿದೆ.
ಕಾಮಗಾರಿ ವಿಳಂಬ ಇದೇ ಮೊದಲೇನಲ್ಲ
ದಿನೇ ದಿನೇ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮೂಲ ಸೌಕರ್ಯಗಳು ತುರ್ತಾಗಿ ಅಭಿವೃದ್ಧಿ ಕಾಣಬೇಕಿದೆ. ಈ ಸಂಬಂಧ ಅಧಿಕಾರಕ್ಕೆ ಬಂದ ಸರ್ಕಾರಗಳು ಘೋಷಿಸುವ ಕೋಟ್ಯಂತರ ರೂ. ಅನುದಾನದ ನಮ್ಮ ಮೆಟ್ರೋ ಕಾಮಗಾರಿ, ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್, ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸೇರಿದಂತೆ ಸಾಕಷ್ಟು ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇದರಿಂದ ಸಾರ್ವಜನಿಕರು, ವಾಹನ ಸವಾರರು ನಿತ್ಯ ಹೈರಾಣಾಗುತ್ತಿರುವುದನ್ನು ಗಮನಿಸಿ ಇನ್ನುಮುಂದೆಯಾದರೆ ಕಾಮಗಾರಿಗಳಿಗೆ ಚುರುಕು ನೀಡಿಬೇಕಿದೆ.