ದೇಶಕ್ಕಾಗಿ ಹೋರಾಡಿ ಪ್ರಾಣಬಿಟ್ಟ ಯೋಧನಿಗೆ ನೀಡುತ್ತಿರುವ ಗೌರವ ಇದೇನಾ?
ಚಾಮರಾಜನಗರ,
ನವೆಂಬರ್ 23: ಇತಿಹಾಸದ, ಸಾಹಸದ ಕಥೆ ಹೇಳುವ ಹಲವು ಸ್ಮಾರಕಗಳು, ವೃತ್ತಗಳು ನಿರ್ವಹಣೆಯ ಕೊರತೆಯಿಂದಾಗಿ ಇಂದು ಮೂಲೆಗುಂಪಾಗಿವೆ. ಇವುಗಳ ಸಾಲಿಗೆ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿರುವ ವೀರ ಯೋಧ ಶಿವಾನಂದ ಅವರ ಹೆಸರಿನ ವೃತ್ತವೂ ಒಂದಾಗಿದ್ದು, ಅದು ನಿರ್ಲಕ್ಷ್ಯಕ್ಕೊಳಗಾಗಿ ಹಂದಿಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ. id="toptextpromo"> id='are-slot-1' class='oiad oi-axt oiadv'>ಯೋಧ
ಶಿವಾನಂದರವರ ಹೆಸರಿನ ವೃತ್ತ ಸ್ಥಾಪಿಸಿ ಸ್ಮಾರಕ ನಿರ್ಮಾಣ ಮಾಡಲು ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಆದರೆ ಇವತ್ತಿಗೂ ಸ್ಮಾರಕ ನಿರ್ಮಾಣವಾಗಿಲ್ಲ. ಆದರೆ ಅವರ ಹೆಸರಿನ ವೃತ್ತ ತಲುಪಿರುವ ದುಸ್ಥಿತಿಯನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಮುಂದೆ ಓದಿ... id='are-slot-2' class='oiad oi-axt oiadv'>
ನಿರ್ಮಾಣವಾಗದ ಯೋಧನ ಸ್ಮಾರಕ
ಕೇವಲ ಕಾಟಚಾರಕ್ಕಾಗಿ ಹೆಸರು ಘೋಷಣೆ ಮಾಡಿ ಕೈತೊಳೆದುಕೊಳ್ಳುವ ಆಡಳಿತರೂಢರು ನಂತರ ಇದರತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಇದರಿಂದ ಬಹುತೇಕ ಸ್ಮಾರಕಗಳು ನಿರ್ಮಾಣಗೊಳ್ಳುವುದೇ ಇಲ್ಲ. ಒಂದು ವೇಳೆ ನಿರ್ಮಾಣಗೊಂಡರೂ ನಿರ್ವಹಣೆಯಿಲ್ಲದೆ ಕಳಾಹೀನವಾಗುತ್ತಿವೆ. ಇದೇ ಸಾಲಿಗೆ ಯೋಧ ಶಿವಾನಂದ ಅವರ ವೃತ್ತ ಸೇರುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟ ಯೋಧನಿಗೆ ನೀಡುತ್ತಿರುವ ಗೌರವ ಇದೇನಾ ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.

ಹಿಮಪಾತದಲ್ಲಿ ವೀರಮರಣವನ್ನಪ್ಪಿದ ಯೋಧ
ಶಿವಾನಂದ ದೇಶಕ್ಕಾಗಿ ಹೋರಾಡಿದ ಯೋಧ. ಇವರು ಗುಂಡ್ಲುಪೇಟೆ ತಾಲೂಕಿನ ಭರಟಹಳ್ಳಿ ಗ್ರಾಮದವರು. ಮದ್ರಾಸ್ ರೆಜಿಮೆಂಟಿನ 16ನೇ ಬೆಟಾಲಿಯನ್ ನಲ್ಲಿ ನಾಯಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುಮಾರು ಹದಿನೈದು ವರ್ಷಗಳ ಹಿಂದೆ ಪಾಕಿಸ್ತಾನ - ಭಾರತದ ನಡುವಿನ ಸಂಘರ್ಷದ ಸಮಯದಲ್ಲಿ ಆಪರೇಷನ್ ಮೇಘದೂತ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಶಿವಾನಂದ ಅವರು ಶೌರ್ಯ ಮೆರೆದಿದ್ದರು. ಈ ವೇಳೆ ಜಗತ್ತಿನ ಅತಿ ದುರ್ಗಮ ಯುದ್ಧಭೂಮಿ ಸಿಯಾಚಿನ್ ಗ್ಲಾಸಿಯರ್ ನಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ ಹಿಮಪಾತಕ್ಕೆ ಸಿಲುಕಿ ವೀರಮರಣವನ್ನಪ್ಪಿದ್ದರು.

ಹಂದಿ ಗೂಡಾಗಿ ಪರಿವರ್ತನೆಗೊಂಡ ವೃತ್ತ
ಈ ಯೋಧನ ಗೌರವಾರ್ಥ ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ಮುಖ್ಯರಸ್ತೆಯಲ್ಲಿನ ವೃತ್ತಕ್ಕೆ ಯೋಧ ಶಿವಾನಂದ ವೃತ್ತ ಎಂದು ನಾಮಕರಣ ಮಾಡಲಾಯಿತು. ಜತೆಗೆ ಸ್ಮಾರಕ ನಿರ್ಮಾಣ ಮಾಡುವ ಘೋಷಣೆ ಮಾಡಲಾಯಿತು. ಆದರೆ ಇದೆಲ್ಲ ನಡೆದು ಹಲವು ವರ್ಷಗಳೇ ಕಳೆದಿವೆ. ಆದರೆ ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಾಗಲೀ, ಪುರಸಭಾ ಅಧಿಕಾರಿಗಳಾಗಲೀ ನಿಗಾವಹಿಸದ ಕಾರಣ ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದರೂ ಸ್ಮಾರಕ ನಿರ್ಮಾಣದ ಕೆಲಸ ನಡೆದಿಲ್ಲ. ಅಷ್ಟೇ ಅಲ್ಲ ವೃತ್ತದತ್ತ ಗಮನ ಹರಿಸದ ಕಾರಣ ಈ ಸ್ಥಳ ಥೇಟ್ ಹಂದಿಗೂಡಾಗಿ ಪರಿವರ್ತನೆಗೊಂಡಿರುವುದು ಎದ್ದು ಕಾಣುತ್ತಿದೆ.

ನಾಮಫಲಕ ಅಳವಡಿಸಿ ಕೈತೊಳೆದುಕೊಂಡರು!
ಶಿವಾನಂದ ವೃತ್ತವೆಂದು ಘೋಷಿಸಿ ನಾಮಫಲಕ ಅಳವಡಿಸಿರುವುದು ಹೊರತುಪಡಿಸಿ ಬೇರೇನೂ ಮಾಡಿಲ್ಲ. ಪರಿಣಾಮ ಕೊಳಚೆ ನೀರು ಇಲ್ಲಿ ಹರಿದು ಬರುತ್ತಿರುವುದು ಮಾತ್ರವಲ್ಲದೆ, ಸಂಗ್ರಹವಾಗಿ ದುರ್ವಾಸನೆ ಬೀರುತ್ತಿದೆ. ಅದೇ ಕೊಳಚೆ ನೀರಲ್ಲಿ ಹಂದಿಗಳು ಹೊರಳಾಡುತ್ತಾ ಇಲ್ಲಿನ ಮೋರಿಗಳಲ್ಲಿ ವಾಸ್ತವ್ಯ ಹೂಡುತ್ತಿವೆ. ಪಟ್ಟಣದಲ್ಲಿರುವ ಹಂದಿಗಳೆಲ್ಲವೂ ಇಲ್ಲಿಗೆ ಬರುತ್ತಿದ್ದು ಹಂದಿಗಳ ಆವಾಸ ತಾಣವಾಗಿ ಮಾರ್ಪಟ್ಟಿದೆ.
ಮೂಲಗಳ ಪ್ರಕಾರ ಈಗಾಗಲೇ ಶಿವಾನಂದ ಸ್ಮಾರಕ ಮಾಡಲು ಕ್ಯಾಟ್ ಸಂಸ್ಥೆ ನೀಲಿನಕ್ಷೆ ತಯಾರು ಮಾಡಿದ್ದು, ಸುಮಾರು 8 ಲಕ್ಷ ರೂಪಾಯಿಯನ್ನು ಸ್ಮಾರಕ ನಿರ್ಮಾಣಕ್ಕೆ ಮೀಸಲಿಡಲಾಗಿದೆ ಎಂದು ಹೇಳಲಾಗುತ್ತಿದೆ. ವೃತ್ತದ ನಿರ್ಲಕ್ಷ್ಯತೆ ಬಗ್ಗೆ ಮಾತನಾಡಿರುವ ಗುಂಡ್ಲುಪೇಟೆ ಜಿಲ್ಲಾ ಹಸಿರು ಸೇನೆ ಸಂಚಾಲಕ ಕಡಬೂರು ಮಂಜುನಾಥ್, ದೇಶ ಸೇವೆಗಾಗಿ ತನ್ನ ಪ್ರಾಣ ನೀಡಿದ ವೀರಯೋಧನಿಗೆ ಹತ್ತಾರು ವರ್ಷ ಕಳೆದರೂ ಸ್ಮಾರಕ ಮಾಡಿಲ್ಲ. ಇದು ನಾಚಿಗೇಡಿನ ಸಂಗತಿ. ಕೂಡಲೇ ಪುರಸಭೆ ಅಧಿಕಾರಿಗಳು ಸ್ಮಾರಕ ನಿರ್ಮಾಣ ಮಾಡಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications