ಸಿದ್ದರಾಮಯ್ಯ-ದೇವೇಗೌಡ ಭೇಟಿ: ಅತಂತ್ರ ಫಲಿತಾಂಶದ ಮುನ್ಸೂಚನೆ?
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತವರ ಕೆಲವು ಆಪ್ತರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು ಸೋಮವಾರ (ಸೆ 19) ಅವರ ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿದ್ದರು. ಅದು ಅಂದಿನ ಬ್ರೇಕಿಂಗ್ ನ್ಯೂಸ್ ಆಗಿ ಎಲ್ಲಾ ಕಡೆ ವೈರಲ್ ಆಯಿತು.
ಅನಾರೋಗ್ಯದಲ್ಲಿರುವಾಗ ಒಬ್ಬರು ಇನ್ನೊಬ್ಬರನ್ನು ಭೇಟಿಯಾಗುವುದು ಮಾನವೀಯ ಮೌಲ್ಯಗಳಿಗೆ ಕೊಡುವ ಪ್ರತಿಕ್ರಿಯೆ. ಸಿದ್ದರಾಮಯ್ಯ, ದೇಶಪಾಂಡೆ, ಜಮೀರ್ ಸೇರಿದಂತೆ ಗೌಡ್ರನ್ನು ಭೇಟಿಯಾದ ನಂತರ ಸಿದ್ದರಾಮಯ್ಯ ಹೇಳಿದ್ದು ಕೂಡಾ ಇದನ್ನೇ..
Breaking: ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಭೇಟಿ ನೀಡಿದ ಸಿದ್ದರಾಮಯ್ಯ
ಆರೋಗ್ಯ ವಿಚಾರಿಸಲು ಹೋಗಿದ್ದೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆ ಸ್ವಾಭಾವಿಕ ಕೂಡಾ. ಗೌಡರ ಗರಡಿಯಲ್ಲೇ ಪಳಗಿದ್ದ ಸಿದ್ದರಾಮಯ್ಯ ಮತ್ತು ಗೌಡ್ರ ಭೇಟಿಯ ವೇಳೆಯಲ್ಲಿ ಅಲ್ಲಿ ಆತ್ಮೀಯತೆಯಿತ್ತು, ಸೌಜನ್ಯವಿತ್ತು.
ಸ್ವಲ್ಪದೂರದಲ್ಲಿ ಕೂತಿದ್ದ ಸಿದ್ದರಾಮಯ್ಯನವರನ್ನು ಪಕ್ಕಕ್ಕೆ ಕರೆಸಿಕೊಂಡು ಉಭಯ ಕುಶಲೋಪರಿ ವಿಚಾರಿಸಿಕೊಂಡ ದೇವೇಗೌಡ್ರು, ಟಿವಿಯಲ್ಲಿ ನಿಮ್ಮ ಭಾಷಣವನ್ನು ಕೇಳುತ್ತೇನೆ ಎಂದು ಹೇಳಿದರು. ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಗೌಡ್ರ ಮತ್ತು ಸಿದ್ದರಾಮಯ್ಯನವರ ಭೇಟಿಯ ಹಿಂದೆ ಮುಂದಾಲೋಚನೆ ಏನಾದರೂ ಇದೆಯಾ ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.
ಅತ್ತ ಭಾರತ್ ಜೋಡೋ, ಇತ್ತ ಕಾಂಗ್ರೆಸ್ಸಿನಲ್ಲಿ ಡಿಕೆಶಿ ತೋಡೋ
ರಾಕೇಶ್ ನಿಧನರಾದಾಗ ಗೌಡ್ರು, ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ದೇವೇಗೌಡ್ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಗೌಡ್ರನ್ನು ಭೇಟಿಯಾಗಿದ್ದರು. ಇದಾದ ನಂತರ, ಸಿದ್ದರಾಮಯ್ಯನವರ ಪುತ್ರ ರಾಕೇಶ್ ನಿಧನರಾದಾಗ ಗೌಡ್ರು, ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ನೀಡಿ ಬಂದಿದ್ದರು. ಇದರಿಂದ ಹೊರತಾಗಿ ಈ ಇಬ್ಬರು ನಾಯಕರು ಮತ್ತು ಕುಮಾರಸ್ವಾಮಿ ಬೇರೆ ಬೇರೆ ಸನ್ನಿವೇಶಗಳಲ್ಲಿ ಭೇಟಿಯಾಗಿದ್ದರೂ, ಸೋಮವಾರದ ಭೇಟಿಗೆ ವಿಶೇಷ ಮಹತ್ವ ಬಂದಿದ್ದು ಈಗ ಚುನಾವಣಾ ವರ್ಷವಾಗಿರುವುದರಿಂದ.
ದಳಪತಿಗಳ ವಿರುದ್ದ ಯಾರೂ ಟೀಕಾಸ್ತ್ರವನ್ನು ಪ್ರಯೋಗಿಸಬಾರದು
ಕೆಲವು ತಿಂಗಳ ಹಿಂದೆ, ದಳಪತಿಗಳ ವಿರುದ್ದ ಯಾರೂ ಟೀಕಾಸ್ತ್ರವನ್ನು ಪ್ರಯೋಗಿಸಬಾರದು ಎನ್ನುವ ಫರ್ಮಾನು ನೇರವಾಗಿ ಕಾಂಗ್ರೆಸ್ ಹೈಕಮಾಂಡಿನಿಂದಲೇ ಬಂದಿತ್ತು ಎಂದು ವರದಿಯಾಗಿತ್ತು. ಅದಕ್ಕೆ ಪೂರಕ ಎನ್ನುವಂತೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ನಡುವಿನ ವಾಕ್ಸಮರವೂ ಒಂದು ಹಂತಕ್ಕೆ ಕಮ್ಮಿಯಾಗುತ್ತಾ ಬಂದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿವೆಯಾದರೂ, ಒಬ್ಬರೊನ್ನೊಬ್ಬರು ದೂಷಿಸಿಕೊಳ್ಳುವುದು ಕಮ್ಮಿಯಾಗಿತ್ತು. ಇದೆಲ್ಲಾ, ಮುಂದಿನ ಚುನಾವಣೆಯ ದೃಷ್ಟಿಯಿಂದ ಎಂದು ವ್ಯಾಖ್ಯಾನಿಸಲಾಗಿತ್ತು.
ಇನ್ನೇನು ಕೆಲವು ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ಎದುರಾಗಲಿದೆ
ಇನ್ನೇನು ಕೆಲವು ತಿಂಗಳಲ್ಲಿ ಅಸೆಂಬ್ಲಿ ಚುನಾವಣೆ ಎದುರಾಗಲಿದೆ. ಎಲ್ಲಾ ಪಕ್ಷಗಳು ತಮ್ಮದೇ ಆದ ಸಮೀಕ್ಷೆಯನ್ನು ಮಾಡಿಕೊಳ್ಳುತ್ತಿವೆ. ಬಿಜೆಪಿ ಅಧಿಕಾರ ಉಳಿಸಿಕೊಳ್ಳುವುದು ಕಷ್ಟ, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರ ನಡೆಸುವಷ್ಟು ನಂಬರ್ ಸಿಗುವುದು ಕಷ್ಟ ಎನ್ನುವ ವರದಿ ಎರಡೂ ಪಕ್ಷಗಳ ಕೈಸೇರಿವೆ ಎನ್ನುವ ಗುಸುಗುಸು ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಹಾಗಾಗಿಯೇ, ಗೌಡ್ರ ಮತ್ತು ಸಿದ್ದರಾಮಯ್ಯನವರ ಭೇಟಿಗೆ ವಿಶೇಷ ಮಹತ್ವ ಬಂದಿರುವಂತದ್ದು.
ಮುಂಬರುವ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಏನಾದರೂ ಬಂದರೆ
ಒಂದು ವೇಳೆ, ಮುಂಬರುವ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಏನಾದರೂ ಬಂದರೆ, ಕಾಂಗ್ರೆಸ್ಸಿಗೆ ಜೆಡಿಎಸ್ ಬೆಂಬಲ ಅನಿವಾರ್ಯ. ಸಿದ್ದಾಮಯ್ಯ ಮತ್ತು ಗೌಡ್ರ ನಡುವೆ ರಾಜಕೀಯ ಸಂಬಂಧ ಅಷ್ಟೇನೂ ಚೆನ್ನಾಗಿ ಇಲ್ಲದೇ ಇರುವುದರಿಂದ, ಒಂದು ವೇಳೆ ಮುಖ್ಯಮಂತ್ರಿಯಾಗಲು ಜೆಡಿಎಸ್ ಸಪೋರ್ಟ್ ಬೇಕೆಂದಾದರೆ, ಅದಕ್ಕೆ ಈಗಲೇ ಸಿದ್ದರಾಮಯ್ಯನವರು ಸಿದ್ದತೆಯನ್ನು ಮಾಡಿಕೊಂಡರೇ? ಪರೋಕ್ಷವಾಗಿ ಜೆಡಿಎಸ್ ಅನಿವಾರ್ಯತೆಯನ್ನು ಸಿದ್ದರಾಮಯ್ಯ ಒಪ್ಪಿಕೊಂಡರೇ ಎನ್ನುವ ಪ್ರಶ್ನೆ ಎದ್ದೇಳುವುದು ಸ್ವಾಭಾವಿಕ.