1970ರ ದಶಕದ ಈ ಮಳಿಗೆಯಲ್ಲಿ ಈಗಲೂ "ನಂಜನಗೂಡು ರಸಬಾಳೆ"ಗೆ ಡಿಮ್ಯಾಂಡ್
ಸಾಂಸ್ಕೃತಿಕ ನಗರಿಯ ವಿಶೇಷಗಳ ವಿಷಯ ಬಂದರೆ ನಂಜನಗೂಡಿನ ರಸಬಾಳೆಯ ಹೆಸರು ಬರದೇ ಇರುತ್ತದೆಯೇ? ಬಾಳೆಯಲ್ಲಿ ನೂರಾರು ತಳಿಗಳಿದ್ದು, ನಂಜನಗೂಡಿನ ರಸಬಾಳೆ ಎಂದೇ ಪ್ರಸಿದ್ಧವಾಗಿರುವ ಈ ಹಣ್ಣು ಬಾಳೆ ಹಣ್ಣುಗಳ ರಾಜ ಎಂದೇ ಹೇಳಬಹುದು.
ಮಾರುಕಟ್ಟೆಯಲ್ಲಿ ಅಧಿಕ ದರ ಇದ್ದರೂ ಎಲ್ಲೆಡೆಯೂ ಎಲ್ಲರೂ ಇದನ್ನು ಬೆಳೆಯಲು ಸಾಧ್ಯವಿಲ್ಲ. ಏಕೆಂದರೆ ನಂಜನಗೂಡಿನ ರಸಬಾಳೆ ಬೆಳೆಯಲು ಕಪ್ಪು ಲವಣಯುಕ್ತ ಮೆಕ್ಕಲು ಮಣ್ಣೇ ಬೇಕು. ಸಾವಯವ ಕೃಷಿಯ ವಿಶಿಷ್ಟ ವಿಧಾನದಲ್ಲಿ ಬೆಳೆಸಿದರೆ ಹಣ್ಣು ವಿಶಿಷ್ಟ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಇತರ ಸ್ಥಳಗಳಲ್ಲಿ ಬೆಳೆಸಿದರೆ ಬಾಳೆಹಣ್ಣು ಗಟ್ಟಿಯಾಗಿರುತ್ತದಲ್ಲದೆ, ಅದರ ಸುವಾಸನೆಯನ್ನು ಕಳೆದುಕೊಳ್ಳುತ್ತದೆ.
ದೇವರಾಜ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಘಮ
ಪ್ರಸ್ತುತ ನಂಜನಗೂಡು, ಎಚ್.ಡಿ ಕೋಟೆಯ ಕೆಲ ಭಾಗ, ಕೊಡಗಿನ ಕೆಲ ಭಾಗಗಳಲ್ಲಿ ನಂಜನಗೂಡಿನ ರಸಬಾಳೆ ಬೆಳೆಯಲಾಗುತ್ತಿದೆ. ಈ ಬಾಳೆಗೆ ಪ್ರಮುಖ ವ್ಯಾಪಾರ ಕೇಂದ್ರ ಮೈಸೂರಿನ ದೇವರಾಜ ಮಾರುಕಟ್ಟೆ. ಪಚ್ಚ ಬಾಳೆ ದರ ಕೆಜಿಗೆ 30 ರೂಪಾಯಿ ಮತ್ತು ಯಾಲಕ್ಕಿ ಬಾಳೆ ಕಿಲೋಗೆ 60 ರೂಪಾಯಿ ದರ ಇದ್ದರೆ, ನಂಜನಗೂಡಿನ ರಸಬಾಳೆ ಕಿಲೋಗೆ 120 ರೂಪಾಯಿ ದರ ಇದೆ.
ಮೈಸೂರಿಗೆ ಭೇಟಿ ನೀಡಿದರೆ ರೇಷ್ಮೆ ಸೀರೆ ಖರೀದಿಸಲು ಮರೆಯದಿರಿ...
2005ರಲ್ಲಿ ಭೌಗೋಳಿಕ ಸೂಚನಾ ಸ್ಥಾನಮಾನ
ರಾಜ್ಯ ತೋಟಗಾರಿಕೆ ಇಲಾಖೆ 1999ರ ಭೌಗೋಳಿಕ ಸೂಚಕ ಸರಕುಗಳ ಕಾಯ್ದೆಯಡಿ ನಂಜನಗೂಡು ಬಾಳೆಹಣ್ಣನ್ನು ನೋಂದಾಯಿಸಲು ಚೆನ್ನೈನ ಪೇಟೆಂಟ್, ವಿನ್ಯಾಸ ಮತ್ತು ಟ್ರೇಡ್ಮಾರ್ಕ್ಗಳ ನಿಯಂತ್ರಕ-ಜನರಲ್ ಕಚೇರಿಗೆ ಚೆನ್ನೈಗೆ ಅರ್ಜಿ ಸಲ್ಲಿಸಿದ ಮೇರೆಗೆ 2005ರಲ್ಲಿ ಇದಕ್ಕೆ ಭೌಗೋಳಿಕ ಸೂಚನಾ ಸ್ಥಾನಮಾನವನ್ನು ನೀಡಲಾಯಿತು.
1970ರ ದಶಕದ ಮಳಿಗೆಯಲ್ಲಿ ಈಗಲೂ ಡಿಮ್ಯಾಂಡ್
ನಂಜನಗೂಡಿನ ರಸಬಾಳೆಗೆ ಮೈಸೂರಿನ ಪ್ರಸಿದ್ಧ ಅಂಗಡಿ ಎಂದರೆ ದೇವರಾಜ ಮಾರುಕಟ್ಟೆಯ ಮಂಜುನಾಥ ಅಂಗಡಿ. ಬಿ.ಕೆ ಮಂಜುನಾಥ್ ಇದರ ಮಾಲೀಕರಾಗಿದ್ದು, ಒಟ್ಟು ಐದು ಅಂಗಡಿಗಳನ್ನು ಮಾರುಕಟ್ಟೆ ಅವರಣದಲ್ಲೇ ಹೊಂದಿದ್ದಾರೆ. ಇವರ ಭಾವ ರಂಗಸ್ವಾಮಿ ಅವರಿಂದ 1970ರ ದಶಕದಲ್ಲಿ ಪ್ರಾರಂಭವಾದದ್ದು. ಒನ್ ಇಂಡಿಯಾ ಕನ್ನಡ ಜತೆ ಮಾತನಾಡಿದ ಮಂಜುನಾಥ್ ಅವರು, ತಮ್ಮ ಐದು ಅಂಗಡಿಗಳಲ್ಲಿ ನಿತ್ಯ 5 ಟನ್ ಗೂ ಹೆಚ್ಚು ಬಾಳೆ ಹಣ್ಣನ್ನು ಮಾರಾಟ ಮಾಡಲಾಗುತ್ತಿದ್ದು, ಅಂದಿನಿಂದಲೂ ನಂಜನಗೂಡಿನ ಬಾಳೆಗೆ ಬೇಡಿಕೆಯಿದೆ. ಈಗಲೂ ಆ ಬೇಡಿಕೆ ಕುಸಿದಿಲ್ಲ. ಅಂಥ ವೈಶಿಷ್ಟ್ಯವಿದೆ ಈ ಹಣ್ಣಿನಲ್ಲಿ ಎನ್ನುತ್ತಾರೆ.
ಮೈಸೂರಿನ 18 ವೈಶಿಷ್ಟ್ಯಕ್ಕೆ ಸಿಗಲಿದೆ ಅಂತರಾಷ್ಟ್ರೀಯ ಮಟ್ಟದ ಹೆಗ್ಗುರುತು
ದುಬಾರಿಯಾದರೂ ಡಿಮ್ಯಾಂಡ್ ಕುಗ್ಗಿಲ್ಲ
ಈಗ ತುಮಕೂರು, ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳ ವರ್ತಕರಿಗೆ ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದಾರೆ. ಇವರ ಮಂಡಿಗೆ ಮೈಸೂರಿನ ಸುತ್ತಮುತ್ತಲಿನ ರೈತರೇ ಬಾಳೆ ಹಣ್ಣನ್ನು ಬೆಳೆದು ತರುತ್ತಾರೆ. ಈಗ ಇವರು ಮೈಸೂರಿನ ಹಲವು ರಿಲಯನ್ಸ್, ಬಿಗ್ ಬಜಾರ್, ಮೋರ್ ಇತ್ಯಾದಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅವರಿಗೆ ಹಣ್ಣುಗಳನ್ನು ಸರಬರಾಜು ಮಾಡುತ್ತಿದ್ದಾರೆ. ನಂಜನ ಗೂಡಿನ ರಸಬಾಳೆ ದುಬಾರಿ ಆಗಿದ್ದರೂ ಗ್ರಾಹಕರೇನೂ ಕಡಿಮೆಯಿಲ್ಲ. ಹಾಗಿದ್ದರೆ ಮೈಸೂರಿಗೆ ಹೋದಾಗ, ನಂಜನಗೂಡು ರಸಬಾಳೆಯನ್ನು ಕೊಂಡು ತಿನ್ನುವುದನ್ನೂ ಮರೆಯಬೇಡಿ...