ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ದಿಢೀರ್ ಸ್ವಯಂ ನಿವೃತ್ತಿ: 3 ಕಾರಣ?
ಬೆಂಗಳೂರು, ಸೆ 17: ಬೆಂಗಳೂರು ಮಹಾನಗರದ ಮಾಜಿ ಪೊಲೀಸ್ ಆಯುಕ್ತರು ಮತ್ತು ಹಾಲೀ ರೈಲ್ವೆ ಎಡಿಜಿಪಿಯಾಗಿರುವ ಭಾಸ್ಕರ್ ರಾವ್ ಅವರು ಸ್ವಯಂ ನಿವೃತ್ತಿ ಘೋಷಣೆ ಮಾಡಿ, ಹುದ್ದೆಯಿಂದ ನಿವೃತ್ತಿಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸ್ವಯಂನಿವೃತ್ತಿಗಾಗಿ ಅರ್ಜಿಯನ್ನು ಭಾಸ್ಕರ್ ರಾವ್ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ವೈಯಕ್ತಿಕ ಕಾರಣ ಎಂದು ಭಾಸ್ಕರ್ ರಾವ್ ಬರೆದಿದ್ದು, ರಾಜ್ಯ ಸರಕಾರ ಇವರ ಅರ್ಜಿಗೆ ಒಪ್ಪಿಗೆ ಸೂಚಿಸುವ ತನಕ ಇವರು ಎಡಿಜಿಪಿಯಾಗಿ ಮುಂದುವರಿಯಬೇಕಿದೆ.
ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದು ಯಾಕೆ?
ತಮ್ಮ ಸೇವಾ ಅವಧಿ ಇನ್ನು ಮೂರು ವರ್ಷ ಇರುವ ಮುನ್ನವೇ ಭಾಸ್ಕರ್ ರಾವ್, ಸ್ವಯಂನಿವೃತ್ತಿ ಘೋಷಿಸಿದ್ದು, ರಾಜ್ಯ ಐಪಿಎಸ್ ವಲಯದಲ್ಲಿ ಸಂಚಲನ ಮೂಡಿಸಿದೆ ಮತ್ತು ಇವರ ಮುಂದಿನ ನಡೆಯ ಬಗ್ಗೆ ಹಲವು ಊಹಾಪೋಹ ಸುದ್ದಿಗಳು ಹೊರಬೀಳುತ್ತಿವೆ.
ತನಿಖೆಯಲ್ಲಿನ ಶ್ರೇಷ್ಠತೆ ಪದಕ: ಕರ್ನಾಟಕದ 6 ಐಪಿಎಸ್ ಸೇರಿ 152 ಮಂದಿ ಆಯ್ಕೆ
ಕೊರೊನಾ ಮೊದಲನೆಯ ಅಲೆಯ ವೇಳೆ ನಗರದ ಆಯುಕ್ತರಾಗಿ ಭಾಸ್ಕರ್ ರಾವ್ ಅವರು ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರನ್ನು ಸಂಪಾದಿಸಿದ್ದರು. ಅದರಲ್ಲೂ, ವಲಸೆ ಕಾರ್ಮಿಕರ ಸಮಸ್ಯೆಗಳನ್ನು ದಕ್ಷತೆಯಿಂದ ನಿಭಾಯಿಸಿದ್ದರು. ಇವರ ಸ್ವಯನಿವೃತ್ತಿ ಅರ್ಜಿಗೆ ಡಿಜಿಪಿ ಪ್ರವೀಣ್ ಸೂದ್ ಅವರಿಂದ ಒಪ್ಪಿಗೆ ಸಿಕ್ಕಿದರೂ, ಸರಕಾರದ ಮಟ್ಟದಲ್ಲಿ ಇದು ಕ್ಲಿಯರೆನ್ಸ್ ಪಡೆಯಬೇಕಾಗುತ್ತದೆ.
1990ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಆಗಿರುವ ಭಾಸ್ಕರ್ ರಾವ್
1990ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಆಗಿರುವ ಭಾಸ್ಕರ್ ರಾವ್ ಅವರು, ಬೆಂಗಳೂರು ಮತ್ತು ಮೈಸೂರು ನಗರ ಪೊಲೀಸ್ ಆಯುಕ್ತರಾಗಿ, ಸಾರಿಗೆ ಇಲಾಖೆಯ ಆಯುಕ್ತ, ಆಂತರಿಕ ಭದ್ರತೆ ವಿಭಾಗ ಸೇರಿದಂತೆ ಹಲವು ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇವರ ಸ್ವಯಂ ನಿವೃತ್ತಿ ಅರ್ಜಿಯನ್ನು ಪ್ರವೀಣ್ ಸೂದ್ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ (ಚೀಫ್ ಸೆಕ್ರೆಟರಿ) ರವಿಕುಮಾರ್ ಅವರಿಗೆ ಕಳುಹಿಸಿ ಕೊಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಗೃಹಸಚಿವ ಅರಗ ಜ್ಞಾನೇಂದ್ರ ಅವರು ಈ ವಿಚಾರದ ಬಗ್ಗೆ ಇದುವರೆಗೂ ಪ್ರತಿಕ್ರಿಯೆಯನ್ನು ನೀಡಿಲ್ಲ.
ಆಂಧ್ರ ಪ್ರದೇಶ ಮತ್ತು ಉತ್ತರ ಭಾರತ ಮೂಲದ ಐಪಿಎಸ್ ಅಧಿಕಾರಿಗಳಿಗೆ ಸರಕಾರ ಮನ್ನಣೆ
ಮೂಲಗಳ ಪ್ರಕಾರ, ಆಯಕಟ್ಟಿನ ಜಾಗಕ್ಕೆ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವುದು ಭಾಸ್ಕರ್ ರಾವ್ ಅವರ ನಿವೃತ್ತಿಗೆ ಕಾರಣವಿದ್ದರೂ ಇರಬಹುದು ಎಂದು ಹೇಳಲಾಗುತ್ತಿದೆ. ಆಂಧ್ರ ಪ್ರದೇಶ ಮತ್ತು ಉತ್ತರ ಭಾರತ ಮೂಲದ ಐಪಿಎಸ್ ಅಧಿಕಾರಿಗಳಿಗೆ ಸರಕಾರ ಮನ್ನಣೆ ನೀಡುತ್ತಿದೆ, ನನ್ನ ಹಾಗೇ ಯಾವ ಕನ್ನಡಿಗರಿಗೂ ಆಗದಿರಲಿ ಎನ್ನುವ ನೋವನ್ನು ಭಾಸ್ಕರ್ ರಾವ್ ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ದಕ್ಷಿಣ ಡಿಸಿಪಿ ಸೇರಿ ಹಲವು ಹುದ್ದೆಯಲ್ಲಿದ್ದ ಅಣ್ಣಾಮಲೈ ರಾಜೀನಾಮೆ ನೀಡಿ, ರಾಜಕೀಯಕ್ಕೆ
ಐಪಿಎಸ್ / ಐಎಎಸ್ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಹುದ್ದೆಗೆ ರಾಜೀನಾಮೆ ಇಲ್ಲವೇ ಅದಾದ ನಂತರ ರಾಜಕೀಯಕ್ಕೆ ಸೇರುವುದು ಹೊಸದೇನಲ್ಲ. ಉದಾಹರಣೆಗೆ ಶಂಕರ್ ಮಹಾದೇವ್ ಬಿದರಿ, ಅಣ್ಣಾಮಲೈ. ಭಾಸ್ಕರ್ ರಾವ್ ಅವರು ಕೂಡಾ ರಾಜೀನಾಮೆ ನೀಡಿದ ನಂತರ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನುವ ಚರ್ಚೆಯೂ ಆರಂಭವಾಗಿದೆ. ಅವರ ಸ್ವಯಂನಿವೃತ್ತಿ ನಿರ್ಧಾರಕ್ಕೆ ಇದೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹೌದೆಂದಾದರೆ ಯಾವ ಪಕ್ಷದ ಪರ ಇವರ ಒಲವು ಎನ್ನುವುದು ತಿಳಿದುಬಂದಿಲ್ಲ.
ತಮ್ಮ ಸಹದ್ಯೋಗಿ ಅಲೋಕ್ ಕುಮಾರ್ ಜೊತೆಗಿನ ಅಸಮಾಧಾನವೂ ಒಂದು ಕಾರಣ
ತಮ್ಮ ಸಹದ್ಯೋಗಿ ಅಲೋಕ್ ಕುಮಾರ್ ಜೊತೆಗಿನ ಅಸಮಾಧಾನವೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗುವ ಟೆಲಿಫೋನ್ ಕದ್ದಾಲಿಕೆ ವಿಚಾರದಲ್ಲಿ, ಸರಕಾರದ ನಿಲುವಿನ ಬಗ್ಗೆ ಭಾಸ್ಕರ್ ರಾವ್ ಆಕ್ಷೇಪ ವ್ಯಕ್ತ ಪಡಿಸಿದ್ದು ಗೊತ್ತಿರುವ ವಿಚಾರ. ಸಿಬಿಐ ಬಿ ರಿಪೋರ್ಟ್ ಸಲ್ಲಿಕೆಗೆ ಒಪ್ಪಿಕೊಂಡಿದ್ದಕ್ಕೆ ಭಾಸ್ಕರ್ ರಾವ್ ಪ್ರಶ್ನೆ ಮಾಡಿದ್ದರು. ಅವರ ಸ್ವಯಂನಿವೃತ್ತಿಗೆ ಇದೂ ಒಂದು ಕಾರಣವಾಗಿರಬಹುದು.