ಭಾರತದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಾಮೀಜಿಗಳ ಪಟ್ಟಿ ಇಷ್ಟೊಂದಾ!?
ಬೆಂಗಳೂರು, ಆಗಸ್ಟ್ 27: ಕಾಯ, ವಾಚ, ಮನಸಾ ಪಂಚೇಂದ್ರಿಯಗಳ ಮೇಲೆ ಹಿಡಿತ ಹೊಂದಿದಾತನೇ ಆ ಪರಮಾತ್ಮನಿಗೆ ಸನ್ನಿಹಿತ. ನಿತ್ಯ ಪರಮಾತ್ಮನ ಸನ್ನಿಧಿಯಲ್ಲಿ ಭಕ್ತರಿಗೆ ದಾರಿದೀಪ ತೋರಬೇಕಾದ ಸ್ವಾಮೀಜಿಗಳೇ ಈಗ ಅಡ್ಡದಾರಿ ತುಳಿದಿರುವ ಆರೋಪಕ್ಕೆ ಸಿಲುಕಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡರುವ ಆರೋಪವನ್ನು ಇದೀಗ ಶ್ರೀಮಠದ ಶಿವಮೂರ್ತಿ ಶರಣರು ಎದುರಿಸುತ್ತಿದ್ದಾರೆ. ಶ್ರೀಗಳ ವಿರುದ್ದ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆದರೆ ಹೀಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಸ್ವಾಮೀಜಿಗಳ ಕಥೆ ಇಂದು ನಿನ್ನೆಯದ್ದಲ್ಲ.
ದೇಶದಲ್ಲಿ ಇದಕ್ಕೂ ಮೊದಲು ಅನೇಕ ಸ್ವಾಮೀಜಿಗಳ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯವೆಸಗಿದ ಆರೋಪವನ್ನು ಎದುರಿಸಿದ್ದಾರೆ. ಖಾವಿಧಾರಿಯಾಗಿ ಮಹಿಳೆಯರ ಮೇಲೆ ದೌರ್ಜನ್ಯ ತೋರಿದ ಆರೋಪ ಎದುರಿಸುತ್ತಿರುವ ಸ್ವಾಮೀಜಿಗಳು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಮುರುಘಾಮಠದ ಶಿವಮೂರ್ತಿ ಶರಣರ ವಿರುದ್ಧ ಕೇಸ್
ಚಿತ್ರದುರ್ಗದ ಶ್ರೀಮಠದ ಆಡಳಿತ ವ್ಯಾಪ್ತಿಗೆ ಬರುವ ವಸತಿನಿಲಯದಲ್ಲಿ ಇರುವ ವಿದ್ಯಾರ್ಥಿನಿಯರ ಮೇಲೆ ಶಿವಮೂರ್ತಿ ಶರಣರು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ಆರೋಪಿಸಲಾಗಿದೆ. ಮುರುಘಾಮಠ ಶಿವಮೂರ್ತಿ ಶರಣರ ವಿರುದ್ದ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಎಫ್ಐಆರ್ ಹಾಕಲಾಗಿದೆ. ಚಂದ್ರಶೇಖರ್ ಎಂಬುವವರು ದೂರನ್ನು ನೀಡಿದ್ದಾರೆ.
ಕಳೆದ 26.08.22 ರಂದು ಚಂದ್ರಕುಮಾರ್ ಜಿಲ್ಲಾ ಮಕ್ಕಳ ಕಲ್ಯಾಣ ಘಟಕ ಮೈಸೂರು ಜಿಲ್ಲೆ ಕಾನೂನು ಮತ್ತು ಪರಿವೀಕ್ಷಣಾಧಿಕಾರಿಯಾಗಿದ್ದು ಒಡನಾಡಿ ಸಂಸ್ಥೆಯವರು ಅಪ್ರಾಪ್ತ ಬಾಲಕಿಯರು ಅಕ್ಕಮಹಾದೇವಿ ವಸತಿ ನಿಲಯದ ನಿವಾಸಿಗಳಾಗಿರುತ್ತಾರೆ. ಈ ವಸತಿ ನಿಲಯವು ಚಿತ್ರದುರ್ಗ ಮುರುಘಾಮಠದ ಅಧೀನದಲ್ಲಿರುತ್ತದೆ. ಈ ಸಂಸ್ಥೆಯ ಮುಖ್ಯಸ್ಥರಾದ ಮಠದ ಸ್ವಾಜೀಜಿಗಳಾದ ಶಿವಮೂರ್ತಿ ಮುರುಗ ಶರಣರು ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಮೂರುವರೆ ವರ್ಷಗಳಿಂದ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ. ಇವರಿಗೆ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿಗಳಾದ ಬಸವಾದಿತ್ಯ, ಲಾಯರ್ ಗಂಗಾಧರಯ್ಯ, ಲೀಡರ್ ಪರಮ ಶಿವಯ್ಯ ಸಹಾಯ ಮಾಡಿರುತ್ತಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿರುತ್ತಾರೆ.
ಈ ಮಕ್ಕಳ ಹೇಳಿಕೆಯನ್ನು ಪಡೆದಿರುವ ವೇಳೆ ಲೈಂಗಿಕ ದೌರ್ಜನ್ಯ ನೀಡಿರುವುದು ತಿಳಿದು ಬಂದಿರುತ್ತದೆ. ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿಯನ್ನು ಮಾಡಿದ್ದು ಮಕ್ಕಳಿಗೆ ತಾತ್ಕಾಲಿಕವಾಗಿ ಒಡನಾಡಿ ಸಂಸ್ಥೆಯಲ್ಲಿ ವಸತಿಯನ್ನು ಕಲ್ಪಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸ್ವಾಮಿ ನಿತ್ಯಾನಂದ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಬಹಳ ದಿನಗಳಿಂದ ಕಾಣೆಯಾಗಿದ್ದಾರೆ. ರಾಮನಗರದ ಸ್ಥಳೀಯ ನ್ಯಾಯಾಲಯವು 2010 ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಈ ವಾರಂಟ್ ಹೊರಡಿಸಿದೆ. ಈ ಹಿಂದೆಯೂ ನಿತ್ಯಾನಂದನ ವಿರುದ್ಧ ವಾರೆಂಟ್ ಜಾರಿಯಾಗಿದ್ದರೂ ಆತನನ್ನು ಬಂಧಿಸಲು ಅಥವಾ ಆತ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.
ಭಕ್ತೆ ಮೇಲಿನ ಅತ್ಯಾಚಾರ ನಡೆಸಿರುವ ಆರೋಪದ ಎದುರಿಸುತ್ತಿರುವ ಸ್ವಾಮಿ ನಿತ್ಯಾನಂದನ ವಿರುದ್ಧ 2010ರಲ್ಲಿ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಅಂದಿನಿಂದಲೂ ವಿಚಾರಣೆ ನಡೆಯುತ್ತಿದೆ. 2019ರಿಂದ ನಿತ್ಯಾನಂದ ವಿಚಾರಣೆಗೆ ಸತತ ಗೈರಾಗಿದ್ದು, ಈಗಾಗಲೇ ದೇಶ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಮಧ್ಯೆ ನಿತ್ಯಾನಂದ ಸ್ವಾಮೀಜಿಗೆ ಜಾಮೀನು ಭದ್ರತೆ ನೀಡಿರುವ ವ್ಯಕ್ತಿಗೂ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿತು.

ರಾಘವೇಂದ್ರ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ
ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. 2014 ಆಗಸ್ಟ್ 17ರಂದು ರಾಮಕಥಾ ಗಾಯಕಿಯೊಬ್ಬರು ಸ್ವಾಮೀಜಿ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ರಾಘವೇಶ್ವರ ಸ್ವಾಮೀಜಿ ತಮ್ಮ ಮೇಲೆ ಹಲವು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದಾರೆ. ತಾವು 169ಕ್ಕೂ ಹೆಚ್ಚು ಬಾರಿ ಅತ್ಯಾಚಾರಕ್ಕೆ ಒಳಗಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರಿನ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳ ತಂಡವು ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.
ಬೆಂಗಳೂರಿನ 54ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿದ್ದು, ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಕೈಬಿಟ್ಟು 2016ರ ಮಾ.31ರಂದು ಆದೇಶಿಸಿತ್ತು. ಸ್ವಾಮೀಜಿ ಅನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದ ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳ ವಿಚಾರಣೆಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳೂ ಹಿಂದೆ ಸರಿದರು. ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ತದನಂತರದಲ್ಲಿ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು.

ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ರೇಪ್ ಕೇಸ್
ಮೈಸೂರಿನ ಕುವೆಂಪು ನಗರದ ನಿವಾಸಿ ಮಹಿಳೆಯೊಬ್ಬರು ಪಾಂಡವಪುರದ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಕ್ಷೇತ್ರದ ಪೀಠಾಧ್ಯಕ್ಷ ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಅತ್ಯಾಚಾರದ ದೂರು ಸಲ್ಲಿಸಿದ್ದರು. ಮಹಿಳೆ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದ್ದು, 2018ರ ಸೆಪ್ಟೆಂಬರ್ ವೇಳೆ ಚಾತುರ್ಮಾಸ ನಡೆಸುತ್ತಿದ್ದ ಸ್ವಾಮೀಜಿ ದಿಢೀರ್ ಪರಾರಿಯಾಗಿದ್ದರು. ಚಾತುರ್ಮಾಸ ಪೂಜೆಗಾಗಿ ಮಹಿಳೆ ಮನೆಗೆ ತೆರಳಿದ್ದ ವೇಳೆ ಸ್ವಾಮೀಜಿ ಅತ್ಯಾಚಾರ ನಡೆಸಿದ್ದು, ತನ್ನ ಪತಿಯೇ ಇದಕ್ಕೆಲ್ಲ ಸಹಕಾರ ನೀಡಿರುವುದಾಗಿ ಮಹಿಳೆಯು ತಾವು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದರು.
"ಕಳೆದ ಸೆಪ್ಟೆಂಬರ್ 4ರಂದು ಮಧ್ಯರಾತ್ರಿ ಸುಮಾರು ಒಂದು ಗಂಟೆಯ ಸಮಯದಲ್ಲಿ ಮನೆಯ ಬೆಲ್ ಮಾಡಿದ್ದು, ಪತಿಯೇ ಬಂದಿರಬಹುದೆಂದು ಬಾಗಿಲು ತೆರೆದೆ. ನನ್ನ ಗಂಡನ ಜೊತೆ ಸ್ವಾಮೀಜಿ ಮತ್ತವರ ಐದಾರು ಹಿಂಬಾಲಕರು ಬಂದಿದ್ದರು. ನನ್ನ ಗಂಡ ಮತ್ತು ಸ್ವಾಮೀಜಿ ಸೇರಿಕೊಂಡು ಏಕಾಏಕಿ ನನ್ನ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಲೈಂಗಿಕ ಕಿರುಕುಳ ನೀಡಿದ್ದು, ಪ್ರತಿರೋಧವೊಡ್ಡಿದಾಗ ಕಾರಿನಲ್ಲಿ ನನ್ನನ್ನು ಕುವೆಂಪುನಗರದ ಮೈದುನನ ಮನೆಗೆ ಕರೆದುಕೊಂಡು ಹೋಗಲಾಯಿತು. ಇದೇ ಸಂದರ್ಭದಲ್ಲಿ ದಾರಿಯುದ್ದಕ್ಕೂ ಲೈಂಗಿಕ ದೌರ್ಜನ್ಯ ನಡೆಸಿದರು. ಅಲ್ಲದೇ ಮೂರು ದಿನಗಳಲ್ಲಿ ಸೇವೆಗೆ ಬಾರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು," ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದರು.

ಅಸಾರಾಂ ಬಾಪು ಅತ್ಯಾಚಾರ ಪ್ರಕರಣದ ಕಥೆಯೇನು?
ಸ್ವಯಂ-ಘೋಷಿತ ದೇವಮಾನವ ಅಸಾರಾಂ ಬಾಪು ಕೂಡ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ ವಿವಿಧ ಜೈಲು ಶಿಕ್ಷೆಗಳನ್ನು ಎದುರಿಸುತ್ತಿದ್ದಾರೆ. ಅನಾರೋಗ್ಯ ಕಾರಣಕ್ಕಾಗಿ ಚಿಕಿತ್ಸೆ ಪಡೆಯಲು ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. "ಇದೇನು ಸಾಮಾನ್ಯ ಅಪರಾಧವಲ್ಲ. ಜೈಲಿನಲ್ಲಿಯೇ ನಿಮಗೆ ಎಲ್ಲಾ ರೀತಿಯ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ನ್ಯಾಯಪೀಠ ಹೇಳಿತ್ತು. ಕಳೆದ 2013ರಲ್ಲಿ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೋಧಪುರ ನ್ಯಾಯಾಲಯವು ಏಪ್ರಿಲ್ 25, 2018 ರಂದು ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಇಂದೋರ್ನಲ್ಲಿ ಅಸಾರಾಂ ಅನ್ನು ಬಂಧಿಸಲಾಗಿದ್ದು, 2013ರ ಸೆಪ್ಟೆಂಬರ್ 1ರಂದು ಜೋಧಪುರಕ್ಕೆ ಕರೆತರಲಾಯಿತು. 2013ರ ಸೆಪ್ಟೆಂಬರ್ 2ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಇದೇ ಪ್ರಕರಣದಲ್ಲಿ ಅವರ ಸಹಚರ ಶರದ್ ಮತ್ತು ಶಿಲ್ಪಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಸ್ವಯಂಘೋಷಿತ ದೇವಮಾನವ ರಾಮ್ ರಹೀಂ ಸಿಂಗ್ ಪ್ರಕರಣ
ಪಂಜಾಬ್ನ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿದ್ದಾರೆ. ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ 51 ವರ್ಷ ವಯಸ್ಸಿನ ರಾಮ್ ರಹೀಂ ನೆಲೆಸಿದ್ದಾರೆ. ಎರಡು ಅತ್ಯಾಚಾರ ಪ್ರಕರಣ, ಪತ್ರಕರ್ತರ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಈಗ 42 ದಿನಗಳ ಕಾಲ ಪೆರೋಲ್ ಗಾಗಿ ಮನವಿ ಮಾಡಿಕೊಂಡಿದ್ದಾರೆ. ತನ್ನ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ 2017ರ ಆಗಸ್ಟ್ನಲ್ಲಿ ಪಂಚಕುಲದ ಸಿಬಿಐ ನ್ಯಾಯಾಲಯವು ರಾಮ್ ರಹೀಂಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು.
ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪಿನ ಪ್ರಭಾವ ಪಂಜಾಬ್, ಹರಿಯಾಣ ಅಲ್ಲದೆ ರಾಜಸ್ಥಾನಕ್ಕೂ ವ್ಯಾಪಿಸಿದೆ. ಜಾತಿ ವ್ಯವಸ್ಥೆಯಲ್ಲಿ ಮುಳುಗಿರುವ ಪಂಜಾಬ್ ಹಾಗೂ ಹರ್ಯಾಣದಲ್ಲಿ ಡೇರಾ ಸಚ್ಚಾ ಸೌಧಾ ಸಂಸ್ಥೆ ಮೂಲಕ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಹೊಸ ಬೆಳಕು ಮೂಡಿಸಿದ್ದರು. ಜಾತಿ ರಹಿತ ವ್ಯವಸ್ಥೆ ತರಲು ಯತ್ನಿಸಿದರು. ಇದಕ್ಕೆ ಸಾರ್ವಜನಿಕರಿಂದ ಭರಪೂರ ವ್ಯಕ್ತವಾಗಿತ್ತು. ಸಮಾಜದಲ್ಲಿ ಹಿಂದುಳಿದ ವರ್ಗದವರು ರಾಮ್ ರಹೀಮ್ ಬೆನ್ನಹಿಂದೆ ನಿಂತರು. ಸಬ್ಸಿಡಿ ದರದಲ್ಲಿ ಆಹಾರ ವಿತರಣೆ, ಔಷಧಿ ಪೂರೈಕೆ ಮಾಡುವ ಮೂಲಕ ಜನಪ್ರಿಯತೆ ಗಳಿಸಿದರು. ಸರಿ ಸುಮಾರು 104ಕ್ಕೂ ಅಧಿಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿರುವ ರಾಮ್ ರಹೀಮ್ ಅವರು ಪಂಜಾಬಿನ ಬಹುಮುಖ್ಯ ಸಮಸ್ಯೆಯ ವಿರುದ್ಧ ಹೋರಾಟ ನಡೆಸಿದರು.
ಡೇರಾ ವೆಬ್ ಸೈಟ್ ನಲ್ಲಿ ರಾಮ್ ರಹೀಮ್ ನನ್ನು ಲೇಖಕ, ಸಂಶೋಧಕ, ಕೃಷಿಕ, ವಿಜ್ಞಾನಿ, ಕ್ರೀಡಾಪಟು, ಬಹು ಭಾಷಾ ತಜ್ಞ, ವಿದ್ವಾಂಸ, ನಿರ್ದೇಶಕ, ಸಂಗೀತಗಾರ, ಡಿ ಅಡಿಕ್ಷನ್ ಸ್ಪೆಶಲಿಸ್ಟ್ ಎಂದು ಉಲ್ಲೇಖಿಸಲಾಗಿದೆ! 2014 ಡೇರಾ ಮುಖ್ಯಸ್ಥರೇ ಹೇಳಿದ್ದ ಪ್ರಕಾರ ದೇಶದಲ್ಲಿ 5 ಕೋಟಿಗೂ ಹೆಚ್ಚು ಜನ ಡೇರಾ ಅನುಯಾಯಿಗಳಿದ್ದಾರೆ. ಅದರಲ್ಲಿ 25 ಲಕ್ಷಕ್ಕೂ ಹೆಚ್ಚು ಜನ ಹರ್ಯಾಣದಲ್ಲಿದ್ದಾರೆ! 2015 ರಲ್ಲಿ ಬಿಡುಗಡೆಯಾದ MSG: The Messenger ಎಂಬ ಸಿನೆಮಾದಲ್ಲೂ ನಟಿಸಿದ್ದ ರಾಮ್ ರಹೀಮ್, ಈ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕೀರ್ತಿ ಸಂಪಾದಿಸಲು ಉತ್ಸುಕನಾಗಿದ್ದನಂತೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications