ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಎಸ್. ಹೆಗಡೆ ಕುಂದರಗಿ ಪರಿಚಯ
ಉತ್ತರ ಕನ್ನಡ, ಅಕ್ಟೋಬರ್ 28 : 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಎನ್. ಎಸ್. ಹೆಗಡೆ ಕುಂದರಗಿ ಅವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿದ್ದು, ಜಿಲ್ಲೆಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಅವರು 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದರು. ನವೆಂಬರ್ 7ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.
ಸಮಾಜ ಸೇವೆ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಎನ್. ಎಸ್. ಕುಂದರಗಿ ಹೆಗೆಡೆ ಅವರಿಗೆ ಪ್ರಶಸ್ತಿ ಲಭಿಸಿದೆ. ಶಿಕ್ಷಣ, ಸಹಕಾರ, ಸಾಹಿತ್ಯ, ಧಾರ್ಮಿಕ, ರಾಜಕೀಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಶಿಷ್ಟ ವ್ಯಕ್ತಿ ಎನ್. ಎಸ್. ಕುಂದರಗಿ (ಹಗೆಡೆ).

ಎನ್. ಎಸ್. ಹೆಗಡೆ ಕುಂದರಗಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಯಲ್ಲಾಪುರ ತಾಲೂಕಿನ ಭರತನಹಳ್ಳಿಯಲ್ಲಿ ಪ್ರಗತಿ ವಿದ್ಯಾಲಯ, ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ವಿದ್ಯಾಲಯಗಳನ್ನು ಸ್ಥಾಪಿಸಿ, ಮುನ್ನಡೆಸಿದ ಶಿಕ್ಷಣ ಪ್ರೇಮಿ.
87ರ ಇಳಿ ವಯಸ್ಸಿನಲ್ಲಿಯೂ ಸದಾ ಉತ್ಸಾಹಶೀಲ ವ್ಯಕ್ತಿಯಾಗಿರುವ ಅವರು, ಶಿರಸಿಯ ಟಿ. ಎಸ್. ಎಸ್., ಯಲ್ಲಾಪುರ ಎ. ಪಿ. ಎಂ. ಸಿ., ಸ್ವರ್ಣವಲ್ಲಿ ಮಹಾ ಸಂಸ್ಥಾನ ಹೀಗೆ ಹಲವಾರು ಸಂಸ್ಥೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಉತ್ತರ ಕನ್ನಡ ಜಿಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆ ಎನ್. ಎಸ್. ಹೆಗಡೆ ಕುಂದರಗಿ ಅವರದ್ದು. ಸರಳ, ಸಜ್ಜನ ಸಮಾಜ ಸೇವಕನಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಯೋಗ್ಯರಿಗೆ ಸಂದ ಗೌರವವಾಗಿದೆ. ಅವರ ಸಮಾಜ ಸೇವೆ ಹೀಗೆ ಮುಂದುವರೆಯಲಿ ಎಂದು ಜಿಲ್ಲೆಯ ಜನರು ಆಶಿಸಿದ್ದಾರೆ.












Click it and Unblock the Notifications