ಚನ್ನಪಟ್ಟಣದ ಜನಾನುರಾಗಿ ವೈದ್ಯ ವೆಂಕಟಪ್ಪನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ರಾಮನಗರ, ಅಕ್ಟೋಬರ್ 28: 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ವೈದ್ಯಕೀಯ ಕ್ಷೇತ್ರದಿಂದ ರಾಮನಗರ ಜಿಲ್ಲೆಯ ಡಾ.ಎಚ್.ಎಂ, ವೆಂಕಟಪ್ಪನವರಿಗೆ ಪ್ರಶಸ್ತಿ ಲಭಿಸಿದೆ.
ಬೊಂಬೆನಾಡು ಎಂದೇ ಖ್ಯಾತಿ ಪಡೆದಿರುವ ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿ ಹುಟ್ಟಿದ ವೆಂಕಟಪ್ಪನವರು, ಗ್ರಾಮಗಳಲ್ಲಿ ತಮ್ಮ ವೈದ್ಯಕೀಯ ಸೇವೆಯ ಮೂಲಕವೇ ಮನೆ ಮಾತಾದವರು. ಇವರ ಈ ಸೇವೆಯನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಅವರು 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ನವೆಂಬರ್ 7ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.
65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ
1945ರ ಅಕ್ಟೋಬರ್ 2ರಂದು ಜನಿಸಿದ ವೆಂಕಟಪ್ಪನವರು, ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿ ಚನ್ನಪಟ್ಟಣದ ಶತಮಾನದ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರೈಸಿದರು. ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ, ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಗ್ರಾಮಗಳಲ್ಲಿ ಕೆಲಸ ಮಾಡಲು ಹಿಂಜರಿಯುವವರ ನಡುವೆ ಗ್ರಾಮಗಳಲ್ಲೇ ಸೇವೆ ನೀಡಬೇಕು ಎಂದು ಮಂಡ್ಯ ಜಿಲ್ಲೆಯ ಕೆಸ್ತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಹಾಗೂ ಮಂಡ್ಯದ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯಲ್ಲಿ ಸತತ 10 ವರ್ಷಗಳ ಕಾಲ ವೈದ್ಯರಾಗಿ, ಮುಖ್ಯವಾಗಿ ಜನಾನುರಾಗಿ ವೈದ್ಯರಾಗಿ ಖ್ಯಾತಿ ಪಡೆದರು.
ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ಮಂಡ್ಯ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಇವರ ಹೆಸರು ಚಿರಪರಿಚಿತ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಎಸ್. ಹೆಗಡೆ ಕುಂದರಗಿ ಪರಿಚಯ
24 ವರ್ಷಗಳ ಸೇವೆಯಲ್ಲಿ ಕೆಸ್ತೂರು, ಮಂಡ್ಯ ಮತ್ತು ಚನ್ನಪಟ್ಟಣದಲ್ಲಿ ಹೆಚ್ಚುಕಾಲ ವೈದ್ಯಕೀಯ ಸೇವೆ ಸಲ್ಲಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯನ್ನು ತಮ್ಮ ಸ್ವಂತದ್ದು ಎಂದೇ ಪರಿಭಾವಿಸಿ ಸೌಲಭ್ಯಗಳ ಕೊರತೆಯನ್ನು ನೀಗಿಸಿದ್ದಾರೆ. 1994ರ ಆಕ್ಟೋಬರ್ 31ರಂದು ಸ್ವಯಂ ನಿವೃತ್ತಿ ಪಡೆದ ಇವರು, ರೋಗದ ಲಕ್ಷಣಗಳನ್ನು ನಿಖರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಸಾಧನೆಗಳ ಕೊರತೆಯನ್ನು ಗಮನಿಸಿ ಅಂತಹ ರೋಗ ಲಕ್ಷಣ ಪತ್ತೆ ಮಾಡುವ ಆಸ್ಪತ್ರೆ ತೆರೆಯುವ ಆಲೋಚನೆಯೊಂದಿಗೆ ಬೆಂಗಳೂರಿನಲ್ಲಿರುವ ಕಣ್ವ ಡಯಾಗ್ನಸ್ಟಿಕ್ ಸ್ಥಾಪಿಸಿದರು.
ಗ್ರಾಮಾಂತರ ಪ್ರದೇಶಗಳಿಂದ ಬರುವ ರೋಗಿಗಳಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕೆಂಗೇರಿ ಹೊರವರ್ತುಲ ರಸ್ತೆಯ ನಾಗರಬಾವಿಯಲ್ಲಿಯೂ ಅತ್ಯುತ್ತಮ ತಂತ್ರಜ್ಞಾನವುಳ್ಳ ಮತ್ತೊಂದು ಆಸ್ಪತ್ರೆ ನಿರ್ಮಿಸಿದರು. 2 ಆಸ್ಪತ್ರೆಗಳಿಂದ 350 ಅರೆ ವೈದ್ಯಕೀಯ ಸಿಬ್ಬಂದಿ, 75ಕ್ಕೂ ಹೆಚ್ಚು ನುರಿತ ವೈದ್ಯ ತಂಡವನ್ನು ಕಟ್ಟಿಕೊಂಡು 'ಆಸ್ಪತ್ರೆ'ಯನ್ನೇ ಮನೆಯನ್ನಾಗಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಜನಾನುರಾಗಿ ಎಂದೇ ಗುರುತಿಸಿಕೊಂಡಿದ್ದಾರೆ ಡಾ. ವೆಂಕಟಪ್ಪನವರು.
ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿರುವುದಕ್ಕೆ ಚನ್ನಪಟ್ಟಣದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.