ಹೊರಗಿನವರಿಗೆ ಮಣೆ, ಸ್ಥಳೀಯರ ಕಡೆಗಣನೆ- ಕಾಂಗ್ರೆಸ್ನೊಳಗೆ ಅಸಮಾಧಾನದ ಹೊಗೆ
ನವದೆಹಲಿ, ಮೇ 30: ಮುಂಬರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ 10 ಅಭ್ಯರ್ಥಿಗಳನ್ನು ಪ್ರಕಟಿಸಿದ ಬಳಿಕ ಅಸಮಾಧಾನಿತರ ಹೊಗೆ ದಟ್ವವಾಗತೊಡಗಿದೆ. ಹಲವು ಪ್ರಮುಖರ ಹೆಸರು ಕೈಬಿಡಲಾಗಿರುವುದು ಸಾಕಷ್ಟು ಅತೃಪ್ತಿಗೆ ಕಾರಣವಾಗಿದೆ. ಟಿಕೆಟ್ ಸಿಕ್ಕೇ ಸಿಗುತ್ತದೆಂದು ಭಾವಿಸಿದ್ದ ಪ್ರಮುಖ ನಾಯಕರಿಗೆ ನಿರಾಸೆ ಆಗಿರುವುದು ಒಂದೆಡೆಯಾದರೆ ಹೊರಗಿನವರಿಗೆ ಟಿಕೆಟ್ ಕೊಟ್ಟಿರುವುದು ಇನ್ನೊಂದು ರೀತಿಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಹಿಂದೆ ವೆಂಕಯ್ಯ ನಾಯ್ಡುಗೆ ಟಿಕೆಟ್ ಕೊಟ್ಟಿದ್ದು ಇದೆ. ಈಗ ನಿರ್ಮಲಾ ಸೀತಾರಾಮನ್ಗೆ ಸತತ ಎರಡನೇ ಬಾರಿ ಟಿಕೆಟ್ ಕೊಟ್ಟಿದೆ. ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ಈ ಬೆಳವಣಿಗೆಯನ್ನು ತೀವ್ರವಾಗಿ ಆಕ್ಷೇಪಿಸಿತ್ತು. ಕರ್ನಾಟಕದ ಪರ ನಿಲ್ಲದ ಹೊರಗಿನವರಿಗೆ ಬಿಜೆಪಿ ಯಾಕೆ ಟಿಕೆಟ್ ನೀಡುತ್ತದೆ ಎಂದು ಕೈಮುಖಂಡರು ಕಿಡಿಕಾರಿದ್ದರು. ಈಗ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷದ ಅದೇ ಪರಿಸ್ಥಿತಿಗೆ ಸಿಲುಕಿದೆ. ಅಲ್ಲಿ ಕಾಂಗ್ರೆಸ್ ಪ್ರಕಟಿಸಿರುವ ಮೂವರು ಅಭ್ಯರ್ಥಿಗಳೂ ಸ್ಥಳೀಯರಲ್ಲ ಎಂಬುದು ಗಮನಾರ್ಹ.
ರಣದೀಪ್ ಸಿಂಗ್ ಸುರ್ಜೆವಾಲ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರಿಗೆ ರಾಜಸ್ಥಾನದಿಂದ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. ರಾಜಸ್ಥಾನದ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದನ್ನು ಬಲವಾಗಿ ಆಕ್ಷೇಪಿಸಿದ್ದಾರೆ. ಯಾವೊಬ್ಬ ರಾಜಸ್ಥಾನಿಗೂ ಯಾಕೆ ಟಿಕೆಟ್ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಶಾಸಕ ಸಾನ್ಯಂ ಲೋಧಾ ಪ್ರಶ್ನೆ ಮಾಡಿದ್ಧಾರೆ.

"ರಾಜಸ್ಥಾನದ ಯಾವೊಬ್ಬ ಕಾಂಗ್ರೆಸ್ ನಾಯಕ ಅಥವಾ ಕಾರ್ಯಕರ್ತನಿಗೆ ರಾಜ್ಯಸಭಾ ಚುನಾವಣೆಯಲ್ಲಿ ಯಾಕೆ ಟಿಕೆಟ್ ಕೊಟ್ಟಿಲ್ಲ ಎಂದು ಪಕ್ಷ ಕಾರಣ ತಿಳಿಸಬೇಕು," ಎಂದು ಸಿರೋಹಿ ಶಾಸಕ ಸಾನ್ಯಂ ಲೋಧಾ ಭಾನುವಾರ ಟ್ವೀಟ್ ಮಾಡಿದ್ದಾರೆ.
Twitter Embed:#कांग्रेस_नवसंकल्प
— Sanyam Lodha (@SanyamLodha66) May 29, 2022
कांग्रेस पार्टी को यह बताना चाहिए कि राजस्थान के किसी भी कांग्रेस नेता/कार्यकर्ता को राज्यसभा चुनाव में प्रत्याशी नही बनाने के क्या कारण है ?#Rajasthan #Congress#RajyaSabhaElection2022#RajyaSabha@RahulGandhi@priyankagandhi @INCIndia @INCRajasthan pic.twitter.com/HHz9ZrowAA
ಕರ್ನಾಟಕದಲ್ಲಿ ಬಿಜೆಪಿ ಪ್ರಕಟಿಸಿದ ಎರಡು ಅಭ್ಯರ್ಥಿಗಳಲ್ಲಿ ಕನ್ನಡಿಗ ಜಗ್ಗೇಶ್ ಹೆಸರು ಇದೆ. ಆದರೆ, ರಾಜಸ್ಥಾನದಲ್ಲಿ ಮೂರಕ್ಕೆ ಮೂರು ಕಾಂಗ್ರೆಸ್ ಅಭ್ಯರ್ಥಿಗಳು ಹೊರಗಿನವರೇ. ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಈ ವಿಚಾರವನ್ನು ಕೆದಕಿ ಕಾಂಗ್ರೆಸ್ಗೆ ಝಾಡಿಸಿದ್ದಾರೆ. "ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರ ನಡೆದದ್ದು ರಾಜಸ್ಥಾನದಲ್ಲೇ. ಈಗ ನೋಡಿ, ಚಿಂತನ ಶಿಬಿರದ ಫಲ ಏನಾಗಿದೆ ಅಂತ. ಸ್ಥಳೀಯ ಅಭ್ಯರ್ಥಿಗಳಿಗೆ ಮಣೆ ಹಾಕಬೇಕು ಅಂತ ಹೇಳಿದ್ದರು. ಆದರೆ, ಲೋಕಲ್ ಇಲ್ಲದೇ ವೋಕಲ್ ಯಾರಾಗ್ತಾರೆ?" ಎಂದು ಸತೀಶ್ ಪೂನಿಯಾ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ಧಾರೆ.
Twitter Embed:कांग्रेस का चिंतन शिविर हुआ राजस्थान में, अब लीजिये इस चिंतन की एक और उपलब्धि…अब स्थानीय उम्मीदवारों का टोटा….बिना “लोकल” कौन होगा “वोकल”…#RajyaSabhaElections
— Satish Poonia (@DrSatishPoonia) May 29, 2022
ಗುಜರಾತ್ ಕೈ ಮುಖಂಡ ವ್ಯಂಗ್ಯ
ಕಾಂಗ್ರೆಸ್ ಪಕ್ಷ ಭಾನುವಾರ ಪ್ರಕಟಿಸಿದ 10 ಅಭ್ಯರ್ಥಿಗಳ ಪಟ್ಟಿ ಬಗ್ಗೆ ಗುಜರಾತ್ ಕಾಂಗ್ರೆಸ್ ಸಹ-ಉಸ್ತುವಾರಿ ಜಿತೇಂದ್ರ ಬಾಘೆಲ್ ವ್ಯಂಗ್ಯ ಮಾಡಿದ್ದಾರೆ. "ಈ ಅಭ್ಯರ್ಥಿಗಳಲ್ಲಿ ಎಷ್ಟು ಮಂದಿ ಒಬಿಸಿ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ?" ಎಂದು ಬಾಘೆಲ್ ಪ್ರಶ್ನೆ ಮಾಡಿದ್ಧಾರೆ.
ರಾಜಸ್ಥಾನದಿಂದ ರಣದೀಪ್ ಸಿಂಗ್ ಸುರ್ಜೆವಾಲ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ, ಛತ್ತೀಸ್ಗಡದಿಂದ ರಾಜೀವ್ ಶುಕ್ಲ ಮತ್ತು ರಂಜಿತಾ ರಂಜನ್, ಕರ್ನಾಟಕದಿಂದ ಜೈರಾಮ್ ರಮೇಶ್, ಹರಿಯಾಣದಿಂದ ಅಜಯ್ ಮಾಕೆನ್, ಮಧ್ಯಪ್ರದೇಶದಿಂದ ವಿವೇಕ್ ತಂಖ, ಮಹಾರಾಷ್ಟ್ರದಿಂದ ಇಮ್ರಾನ್ ಪ್ರತಾಪ್ಗಡಿ ಮತ್ತು ತಮಿಳುನಾಡಿನಿಂದ ಪಿ ಚಿದಂಬರಂ ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ.
Twitter Embed:क्या आप बताएंगे कि इसमें OBC/SC/ST कितने उम्मीदवार है ?? https://t.co/INEis0pUIm
— Jitendra Baghel जितेन्द्र बघेल (@JitendraBaghel_) May 29, 2022
ನಗ್ಮಾ ಕಿಡಿ
ಕುತೂಹಲ ಎಂದರೆ ಈ 10 ಅಭ್ಯರ್ಥಿಗಳಲ್ಲಿ ಮಧ್ಯಪ್ರದೇಶ ಮತ್ತು ತಮಿಳುನಾಡಿನಿಂದ ಸ್ಪರ್ಧಿಸಿರುವ ವಿವೇಕ್ ತಂಖ ಮತ್ತು ಪಿ ಚಿದಂಬರಂ ಬಿಟ್ಟರೆ ಉಳಿದ ಎಂಟು ಮಂದಿ ಅಭ್ಯರ್ಥಿಗಳು ಹೊರಗಿನವರೇ ಆಗಿದ್ಧಾರೆ. ಕಾಂಗ್ರೆಸ್ ನಾಯಕಿ ಹಾಗು ನಟಿ ನಗ್ಮಾ ಬಹಿರಂಗವಾಗ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದಿಂದ ಇಮ್ರಾನ್ ಪ್ರತಾಪ್ಗಡಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಪ್ರತಿಕ್ರಿಯಿಸಿರುವ ನಗ್ಮಾ, "ನಮ್ಮ 18 ವರ್ಷಗಳ ತಾಳ್ಮೆ ಈಗ ಇಮ್ರಾನ್ ಭಾಯ್ ಮುಂದೆ ಮಂಡಿಯೂರಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಜೂನ್ 10 ರಂದು 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಂದೇ ಫಲಿತಾಂಶ ಪ್ರಕಟವಾಗಲಿದೆ. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ 11 ಸ್ಥಾನಗಳಿಗೆ ಚುನಾವಣೆ ಆಗುತ್ತಿದೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳಿದ್ದು, ಬಿಜೆಪಿಗೆ ಎರಡು ಸ್ಥಾನ ಮತ್ತು ಕಾಂಗ್ರೆಸ್ಗೆ ಒಂದು ಸ್ಥಾನ ದಕ್ಕುವುದು ನಿಶ್ಚಿತ. ನಾಲ್ಕನೇ ಸ್ಥಾನದ ಲೆಕ್ಕಾಚಾರದಲ್ಲಿ ಜೆಡಿಎಸ್ ಬರುತ್ತದಾದ್ದರಿಂದು ರಾಜಕೀಯ ಸಮೀಕರಣ ಯಾರ ರೀತಿ ಆಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications