ಬೆಂಗಳೂರಿಗರನ್ನು ಬೆಚ್ಚಿ ಬೀಳಿಸುತ್ತಿರುವ ಔಟರ್ ರಿಂಗ್ ರೋಡ್
ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವರ್ಷಧಾರೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ವಾರಕ್ಕೆ ಎರಡು ದಿನವೂ ಸೂರ್ಯನ ದರ್ಶನವಾಗುವುದು ಕಮ್ಮಿ. ಮಳೆಯಿಂದ ಬೆಂಗಳೂರಿಗರು ಬೆಚ್ಚಿಬೀಳುವಂತಾಗಿದೆ.
ರಾಜಾಕಾಲುವೆ ಒತ್ತುವರಿ, ಅವೈಜ್ಞಾನಿಕ ಕಾಮಗಾರಿ, ಸಾರ್ವಜನಿಕ ಇಚ್ಚಾಶಕ್ತಿಯಿಲ್ಲದ ರಾಜಕೀಯ ವ್ಯವಸ್ಥೆಗಳಿಂದ ಕನಿಷ್ಠ ಮಳೆಬಿದ್ದರೂ ಅದನ್ನು ತಡೆದುಕೊಳ್ಳುವ ಮೂಲಭೂತ ವ್ಯವಸ್ಥೆ ಬೆಂಗಳೂರಿಗಿಲ್ಲ. ಇದಕ್ಕೆ ಯಾರನ್ನು ದೂರಬೇಕು?. ಯಾವ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕು? ಅಥವಾ ನಮ್ಮನ್ನೇ ನಾವು ದೂಷಿಸಿಕೊಳ್ಳಬೇಕೋ?
ಮಹಾಮಳೆಗೆ ತತ್ತರಿಸಿದ ಬೆಂಗಳೂರು: ಕೆರೆಯಂತಾದ ರಸ್ತೆಗಳು, ವಾಹನ ಸವಾರರ ಪರದಾಟ
ಎರಡು ದಿನಗಳ ಕೆಳಗೆ ಸುರಿದ ಮಳೆಯಿಂದ ಬೆಂಗಳೂರಿನ ಮಹದೇವಪುರ, ವರ್ತೂರು, ಸರ್ಜಾಪುರ ಭಾಗದ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಕೆರೆಗಳು ಕೋಡಿ ಬಿದ್ದ ಕಾರಣ ನೀರು ಸರಾಗವಾಗಿ ಸಾಗುತ್ತಿಲ್ಲ. ಹಾಗಾಗಿ ಮನೆಯೊಳಗೂ ನೀರು ನುಗ್ಗಿದೆ. ನೀರಿನ ಜೊತೆಗೆ ಚೇಳು, ಹಾವು ಬರುತ್ತಿವೆ.
ಬೆಂಗಳೂರು ಮಳೆಯಿಂದ ಹೆಚ್ಚಿನ ತೊಂದರೆಯಾಗಿರುವುದು ಹೊರವರ್ತುಲ ರಸ್ತೆ (ORR) ಭಾಗದಲ್ಲಿ (ಬೆಳ್ಳಂದೂರು ಔಟರ್ ರಿಂಗ್ ರೋಡ್). ಹಿಂದಿನ ರಾತ್ರಿ ಸುರಿದ ಭಾರೀ ಮಳೆ ಈ ಭಾಗದ ಜನರನ್ನು ಅಕ್ಷರಶಃ ದುಃಸ್ವಪ್ನದಂತೆ ಕಾಡುತ್ತಿದೆ. ಊಹಿಸಲೂ ಅಸಾಧ್ಯವಾದ ಟ್ರಾಫಿಕ್ ಜಾಂನಿಂದ ಜನರು ನಲುಗಿದ್ದಾರೆ. ಇದಕ್ಕೆಲ್ಲಾ ಕಾರಣ ಮುಂದಾಲೋಚನೆಯಿಲ್ಲದ ಕಾಮಗಾರಿಗಳು, ಹಣದ ದಾಹ..
ಕರ್ನಾಟಕ, ಕೇರಳದಲ್ಲಿ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ: ಯುಪಿಯಲ್ಲಿ 2.4 ಲಕ್ಷ ಜನ ಸಂತ್ರಸ್ತ
ಈ ಚಿತ್ರವನ್ನು ಒಮ್ಮೆ ನೋಡಿ.. ಇದು ಯಾವುದೋ ಕೆರೆಕಟ್ಟೆಯಲ್ಲ
ಈ ಚಿತ್ರವನ್ನು ಒಮ್ಮೆ ನೋಡಿ.. ಇದು ಯಾವುದೋ ಕೆರೆಕಟ್ಟೆಯಲ್ಲ. ಗೌರಿ ಹಬ್ಬದ ಮುನ್ನಾದಿನದ ರಾತ್ರಿ ಸುರಿದ ಮಳೆಯಿಂದಾಗಿ ಆದ ಕೃತಕ ಸರೋವರ. ಪ್ರತಿಷ್ಠಿತ ಕಂಪನಿಗಳು, ಹೆಸರಾಂತ ಅಪಾರ್ಟ್ಮೆಂಟ್ ಗಳು ಇರುವ ಬೆಳ್ಳಂದೂರು ಔಟರ್ ರಿಂಗ್ ರೋಡ್. ಸುಮಾರು ಎರಡು ಅಡಿ ನೀರು ನಿಂತಿದ್ದರಿಂದ ರಸ್ತೆಯೆಲ್ಲಾ ಜಲಾವೃತ. ದೇಶದ ಟ್ವಿಟ್ಟರ್ ಅಕೌಂಟ್ ನಲ್ಲಿ ನಂಬರ್ ಒನ್ ಆಗಿ ಟ್ರೆಂಡ್ ಆದ ಚಿತ್ರವಿದು. ಸಾವಲಕೆರೆ ತುಂಬಿ ಹರಿದು ರಸ್ತೆಯನ್ನು ಆವರಿಸಿಕೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. (ಚಿತ್ರಕೃಪೆ: ಟ್ವಿಟ್ಟರ್)
ಒಂದು ಕಿಲೋಮೀಟರ್ ದೂರವನ್ನು ಕ್ರಮಿಸಲು ಎರಡೂವರೆ ತಾಸು
ಒಂದು ಕಿಲೋಮೀಟರ್ ದೂರವನ್ನು ಕ್ರಮಿಸಲು ಎರಡೂವರೆ ತಾಸು ತೆಗೆದುಕೊಂಡಿತು ಎಂದಾಗ ಜನರು ಯಾವರೀತಿ ತೊಂದರೆಯನ್ನು ಎದುರಿಸಿದರು ಎಂದು ಮತ್ತೆ ಹೇಳಬೇಕಾಗಿಲ್ಲ. ಭೀಕರ ಮಳೆ ಸುರಿದು ಒಂದೂವರೆ ದಿನವಾದರೂ ರಸ್ತೆಯಿಂದ ಇನ್ನೂ ನೀರು ಹರಿದು ಹೋಗಿಲ್ಲ. ಕಾರಣ, ಅಸಮರ್ಪಕ ಡ್ರೈನೇಜ್ ಸಿಸ್ಟಂ ಮತ್ತು ಒತ್ತುವರಿ ಸಮಸ್ಯೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಾಜಕಾರಣಿಗಳು ಈ ಭಾಗದ ಜಮೀನಿನ ಒಡೆಯರು ಎಂದಾಗ ಒತ್ತುವರಿ ಬಗ್ಗೆ ಧ್ವನಿ ಎತ್ತುವವರಾರು ಎನ್ನುವುದಿಲ್ಲಿ ಪ್ರಶ್ನೆ. (ಚಿತ್ರಕೃಪೆ: ಟ್ವಿಟ್ಟರ್)
ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ORR ಬೆಳ್ಳಂದೂರು
ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ORR ಬೆಳ್ಳಂದೂರು, ಮಾರತಹಳ್ಳಿಯಿಂದ ಸರ್ಜಾಪುರದವರೆಗೆ ದ್ವಿಚಕ್ರ ವಾಹನ ಓಡಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿತ್ತು. ಕ್ಯಾಬ್ ಚಾಲಕರೊಬ್ಬರ ಪ್ರಕಾರ, "ಸಾವಲಕೆರೆ ತುಂಬಿದ್ದರಿಂದ ನೀರು ನಿಂತು ಕೊಂಡಿದೆ. ಡ್ರೈನೇಜ್ ಸಿಸ್ಟಂ ಸಣ್ಣದಾಗಿದ್ದು ಈ ರೀತಿಯ ಮಳೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿಲ್ಲ, ಆ ರೀತಿಯ ಕಾಮಗಾರಿಯನ್ನು ನಮ್ಮ ಇಂಜಿನಿಯರ್ ಗಳು ಮಾಡಿದ್ದಾರೆ"ಎಂದು ಚಾಲಕ ವೆಂಕಟೇಶ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಮೂರನೇ ಬಾರಿ ಸರ್ಜಾಪುರ - ಬೆಳ್ಳಂದರು ಭಾಗ ಜಲಾವೃತ
ಕಳೆದ ಒಂದು ತಿಂಗಳಲ್ಲಿ ಮೂರನೇ ಬಾರಿ ಸರ್ಜಾಪುರ - ಬೆಳ್ಳಂದರು ಭಾಗ ಜಲಾವೃತಗೊಳ್ಳುತ್ತಿರುವುದು. ಈ ಭಾಗದಲ್ಲಿ ನಿರ್ಮಿಸಲಾಗಿರುವ ಚರಂಡಿಗಳಲ್ಲಿ 70 ಮಿ.ಮೀಗಿಂತ ಕಮ್ಮಿಯಿದ್ದರೆ ಮಾತ್ರ ಸರಾಗವಾಗಿ ನೀರು ಹರಿದು ಹೋಗುತ್ತಿದೆ. ಆದರೆ, ಕಳೆದ ಕೆಲವು ದಿನಗಳಿಂದ 95-125ಮಿ.ಮೀ ಮಳೆಯಾಗುತ್ತಿದೆ. ಹಾಗಾಗಿ, ನೀರು ರಸ್ತೆ ತುಂಬುತ್ತಿದೆ, ಜೊತೆಗೆ ಹಾಲನಾಯಕನ ಹಳ್ಳಿ, ಸಿದ್ದಾಪುರ ಮತ್ತು ಚೂಡಸಂದ್ರ ಕೆರೆಗಳು ಕೋಡಿ ಹೋಗಿರುವುದು ಸಮಸ್ಯೆಗೆ ಕಾರಣ ಎನ್ನುವುದು ಬಿಬಿಎಂಪಿ ಅಧಿಕಾರಿಗಳು ನೀಡುತ್ತಿರುವ ಸಬೂಬು.
ಪೂರ್ವ ಮತ್ತು ಆಗ್ನೇಯ ಭಾಗದಲ್ಲಿ ಮಳೆಯಿಂದಾಗುವ ಸಮಸ್ಯೆ ಇಂದು ನಿನ್ನೆಯದಲ್ಲ
ಬೆಂಗಳೂರು ಪೂರ್ವ ಮತ್ತು ಆಗ್ನೇಯ ಭಾಗದಲ್ಲಿ ಮಳೆಯಿಂದಾಗುವ ಸಮಸ್ಯೆ ಇಂದು ನಿನ್ನೆಯದಲ್ಲ. ತೆರಿಗೆ ಕಟ್ಟುವ, ಕೋಟಿ ಕೋಟಿ ಆದಾಯ ತೆರಿಗೆ ಈ ಭಾಗದಿಂದ ಬರುತ್ತಿದೆ, ಸಮರ್ಪಕ ವ್ಯವಸ್ಥೆ ನೀಡದ ನಿಮಗೆ ಧಿಕ್ಕಾರ ಎಂದು ಬಿಬಿಎಂಪಿ ವಿರುದ್ದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯ ಕರ್ನಾಟಕ, ಬಿಲಿಯನ್ ನಲ್ಲಿ ಇಲ್ಲಿ ವಹಿವಾಟು ನಡೆಯುತ್ತಿದೆ. ಬದಲಿಗೆ ನೀವು ನಮಗೆ ಕೊಡುತ್ತಿರುವ ಮೂಲಭೂತ ಸೌಕರ್ಯ ಇದು ಎಂದು ಸರಕಾರದ ವಿರುದ್ದ ಆಕ್ರೋಶ ಎದ್ದೇಳುತ್ತಿದೆ. ಒಟ್ಟಿನಲ್ಲಿ, ಮೋಡ ಕವಿದರೆ ಸಾಕು, ಬೆಂಗಳೂರಿಗರು ಭಯ ಪಡುವಂತಾಗಿದೆ.