ಪಂಜಾಬ್ ಚುನಾವಣೆ: ರಾಜಕೀಯವಾಗಿ ಕುಸಿಯುತ್ತಿದ್ದ ಎಎಪಿ ಈಗ ಕಮ್ ಬ್ಯಾಕ್ಗೆ ಸಜ್ಜು
ಚಂಡೀಗಢ, ಜನವರಿ 11: ಆಮ್ ಆದ್ಮಿ ಪಕ್ಷ (ಎಎಪಿ) 2017 ರ ಚುನಾವಣೆ ವೇಳೆ ಸಾಕಷ್ಟು ಪ್ರಚಾರ ಮಾಡಿ ಚುನಾವಣಾ ಕಣಕ್ಕೆ ಇಳಿದಿತ್ತು. ಆದರೆ ನಿರೀಕ್ಷಿತ ಪ್ರದರ್ಶನವನ್ನು ನೀಡಿಲ್ಲ. ಆ ಬಳಿಕ ಎಎಪಿ ಪಕ್ಷದಿಂದ ಹಲವಾರು ಮಂದಿ ಹೊರನಡೆದಿದ್ದು, ಪಕ್ಷಕ್ಕೆ ಗಾಯದ ಮೇಲೆ ಬರೆ ಬಲೆದಂತೆ ಆಗಿತ್ತು. ಈಗ ಐದು ವರ್ಷಗಳ ಬಳಿಕ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಪಂಜಾಬ್ನಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಈ ನಿಟ್ಟಿನಲ್ಲಿ ಕಳೆದ ಚುನಾವಣೆ ವೇಳೆ ನಿರೀಕ್ಷೆಗೂ ಅಧಿಕ ಕುಸಿತ ಕಂಡಿದ್ದ ಎಎಪಿ ಈಗ ಪಂಜಾಬ್ನಲ್ಲಿ ಕಮ್ ಬ್ಯಾಕ್ ಆಗಲು ಸಜ್ಜಾಗುತ್ತಿದೆ.
ಆಡಳಿತಾರೂಢ ಕಾಂಗ್ರೆಸ್ನಲ್ಲಿನ ಆಳವಾದ ಭಿನ್ನಾಭಿಪ್ರಾಯಗಳು, 2017 ರ ಚುನಾವಣಾ ಸೋಲಿನ ನಂತರ ಶಿರೋಮಣಿ ಅಕಾಲಿ ದಳದ ವಿಫಲತೆ, ಜನರಲ್ಲಿರುವ ಬದಲಾವಣೆಯ ಬಯಕೆ ಇವೆಲ್ಲವೂ ಎಎಪಿ ಪಾಲಿಗೆ ಹೊಂಗಿರಣವಾಗಿದೆ. ಪಕ್ಷವು ಈಗ ಪಂಜಾಬ್ನ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕಣ್ಣಿರಿಸಿದೆ.
ಕಳೆದ ಐದು ವರ್ಷಗಳಲ್ಲಿ, ಎಎಪಿ ಆಂತರಿಕ ಕಲಹದಿಂದಾಗಿ ರಾಜಕೀಯ ಕುಸಿತ ಕಂಡಿತು. ಎಎಪಿಯ ಕ್ಯಾಡರ್ ಬಲದಲ್ಲಿ ಕುಸಿತ ಕಂಡು ಬಂದಿತು. 20 ಶಾಸಕರೊಂದಿಗೆ ಪಂಜಾಬ್ ವಿಧಾನಸಭೆಗೆ ಪ್ರವೇಶಿಸಿದ ಎಎಪಿ, ಹಲವಾರು ಶಾಸಕರು ಎಎಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆದ ಬಳಿಕ, ಈಗ ಎಎಪಿ ಅರ್ಧದಷ್ಟು ಶಾಸಕರನ್ನು ಮಾತ್ರ ಹೊಂದಿದೆ. ವಿಧಾನಸಭೆಯಲ್ಲಿ ಎಎಪಿ ಇನ್ನೂ 17 ಶಾಸಕರನ್ನು ಹೊಂದಿದ್ದರೆ. ಕಾಂಗ್ರೆಸ್ಗೆ ಹೋಗಿದ್ದ ಶಾಸಕರು ಎಎಪಿಗೆ ಕಮ್ ಬ್ಯಾಕ್ ಮಾಡಿರುವ ಕಾರಣ ಈ ಶಾಸಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಮೂವರು ಶಾಸಕರು ಎಎಪಿಯಿಂದ ದೂರವಾಗಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ವಿಪಕ್ಷ ನಾಯಕರ ಬದಲಾವಣೆ
ಎಎಪಿಯು ವಿಧಾನಸಭೆಯಲ್ಲಿ ತನ್ನ ನಾಯಕತ್ವದಲ್ಲಿ ಬದಲಾವಣೆಗಳನ್ನು ಕಂಡಿದೆ. ಸುಪ್ರೀಂ ಕೋರ್ಟ್ ವಕೀಲ ಎಚ್ ಎಸ್ ಫೂಲ್ಕಾರನ್ನು ಆರಂಭದಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಕ ಮಾಡಲಾಗಿತ್ತು. ಆದರೆ ಬಳಿಕ ಸುಖಪಾಲ್ ಸಿಂಗ್ ಖೈರಾರನ್ನು ನೇಮಕ ಮಾಡಲಾಗಿದೆ. ಈಗ ಹರ್ಪಾಲ್ ಸಿಂಗ್ ಚೀಮಾ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಕಳೆದೆರಡು ವರ್ಷಗಳಿಂದ, ಚೀಮಾ ಸುನಮ್ ಶಾಸಕ ಅಮನ್ ಅರೋರಾ ಮತ್ತು ಕೊಟ್ಕಾಪುರ ಶಾಸಕ ಕುಲ್ತಾರ್ ಸಿಂಗ್ ಸಂಧ್ವಾನ್ ನೆರವಿನೊಂದಿಗೆ ವಿಪಕ್ಷ ನಾಯಕರ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಕಾರ್ಯಕರ್ತರನ್ನು ಒಟ್ಟಿಗೂಡಿಸಲು ಎಎಪಿ ಯತ್ನ
2017 ರ ಚುನಾವಣಾ ಫಲಿತಾಂಶದ ನಂತರ ದೂರ ಸರಿದಿರುವ ಕಾರ್ಯಕರ್ತರನ್ನು ಪುನರ್ ತಮ್ಮೆಡೆಗೆ ಸೆಳೆಯಲು ನಾಯಕತ್ವವು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗಿದೆ. 2017 ರಲ್ಲಿ ಪಕ್ಷವು ಸುಮಾರು 100 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹಲವರು ಭವಿಷ್ಯವನ್ನು ನುಡಿದಿದ್ದರು. ಆದರೆ ಎಎಪಿ ಕೇವಲ 20 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಹುಪಾಲು ಸ್ಥಾನಗಳು (18) ಮಾಲ್ವಾ ಪ್ರದೇಶದಿಂದ ಮತ್ತು ಎರಡು ದೋಬಾದಿಂದ ಲಭಿಸಿದೆ. ಮಾಜಾ ಪ್ರದೇಶದಲ್ಲಿ ಪಕ್ಷ ತನ್ನ ಖಾತೆ ತೆರೆಯಲು ವಿಫಲವಾಗಿದೆ. ಎಎಪಿ ಜನಪ್ರಿಯತೆಯ ಕುಸಿತವು 2019 ರ ಲೋಕಸಭೆ ಚುನಾವಣೆಯಲ್ಲಿ ಮುಂದುವರೆದಿದೆ. ಪಕ್ಷವು ತನ್ನ ನಾಲ್ಕು ಸ್ಥಾನಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಂಡಿದೆ. ರಾಜ್ಯಾಧ್ಯಕ್ಷ ಭಗವಂತ್ ಮಾನ್ ಮಾತ್ರ ಗೆಲುವು ಸಾಧಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವೂ ಅಷ್ಟೇ ನೀರಸವಾಗಿತ್ತು.

ಎಎಪಿ ಪಕ್ಷ ಪುನರ್ ನಿರ್ಮಾಣದ ಕಸರತ್ತು
ಕಳೆದ ಒಂದು ವರ್ಷದಲ್ಲಿ ಪದಾಧಿಕಾರಿಗಳ ನೇಮಕಕ್ಕೆ ಹೆಚ್ಚು ಸೂಕ್ಷ್ಮವಾದ ವಿಧಾನವನ್ನು ಪಾಲಿಸಿ ಎಎಪಿ ಪಕ್ಷವನ್ನು ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ದೆಹಲಿ ಶಾಸಕ ಜರ್ನೈಲ್ ಸಿಂಗ್ ಅವರನ್ನು ರಾಷ್ಟ್ರೀಯ ನಾಯಕತ್ವವು ರಾಜ್ಯ ಉಸ್ತುವಾರಿಯಾಗಿ ನೇಮಿಸಿದರೆ, ಶೀಘ್ರದಲ್ಲೇ ದೆಹಲಿ ಶಾಸಕರಾದ ರಾಘವ್ ಚಡ್ಡಾರನ್ನು ರಾಜ್ಯ ಸಹ-ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಪುನರ್ನಿರ್ಮಾಣ ಕಸರತ್ತನ್ನು ಮುನ್ನಡೆಸುತ್ತಿರುವ ಚಡ್ಡಾ ಹಲವಾರು ಸಂದರ್ಭಗಳಲ್ಲಿ ಮಾಜಾ ಪ್ರದೇಶದಲ್ಲಿ ಎಎಪಿ 2017 ರಲ್ಲಿದ್ದಕ್ಕಿಂತ ಉತ್ತಮ ಫಲಿತಾಂಶವನ್ನು ಸಾಧಿಸಲಿದೆ ಎಂದು ಹೇಳಿದ್ದಾರೆ. ಪಕ್ಷವು 117 ಅಸೆಂಬ್ಲಿ ಸ್ಥಾನಗಳಿಗೆ 109 ಅಭ್ಯರ್ಥಿಗಳನ್ನು ಘೋಷಿಸಿದೆ.

ಈ ಬಾರಿ ಜನರು ಎಎಪಿಗೆ ಏಕೆ ಮತ ಹಾಕಬೇಕು?
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಚಡ್ಡಾ ಜನರು ಎಎಪಿಗೆ ಏಕೆ ಮತ ಹಾಕಬೇಕು ಎಂಬ ವಿಚಾರವನ್ನು ವಿವರಿಸುತ್ತಾ ಕಾಂಗ್ರೆಸ್ನ ಆಂತರಿಕ ಕಲಹದೆಡೆ ಬೊಟ್ಟು ಮಾಡಿದ್ದಾರೆ. "ಚನ್ನಿ ಸಿದ್ದು ಜೊತೆ ಹೊಂದಿಕೊಳ್ಳುವುದಿಲ್ಲ. ಚನ್ನಿ ಮತ್ತು ಸಿದ್ದು ಜೊತೆ ಜಖರ್ ಹೊಂದಿಕೊಳ್ಳುವುದಿಲ್ಲ. ಸಿಧು ಜೊತೆ ಸುಖಿಂದರ್ ರಾಂಧವಾ ಹೊಂದಿಕೊಳ್ಳುವುದಿಲ್ಲ. ಅಶು ಸಿಧು ಜೊತೆ ಭರತ್ ಭೂಷಣ್ ಹೊಂದಿಕೊಳ್ಳುವುದಿಲ್ಲ," ಎಂದು ಕಾಂಗ್ರೆಸ್ನ ಆತಂರಿಕ ಕಲಹವನ್ನು ವಿವರಿಸಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications