ಹೀಗಾಗುವ ಬದಲು ಹಾಗಾಗಿದ್ದರೆ ಇಷ್ಟೊಂದು ಗೊಂದಲವೇ ಇರುತ್ತಿರಲಿಲ್ಲ
ಕರ್ನಾಟಕ ರಾಜಕೀಯದಲ್ಲಿ ಉದ್ಭವಿಸಿರುವ ಗೊಂದಲಮಯ ಪರಿಸ್ಥಿತಿ ದೇಶಾದ್ಯಂತ ಅಲ್ಲೋಲಕಲ್ಲೋಲ ಎಬ್ಬಿಸಿದೆ. ರಾಜ್ಯಪಾಲರು ತೆಗೆದುಕೊಂಡಿರುವ ಒಂದು ನಿರ್ಣಯದಿಂದಾಗಿ ಭಾರೀ ಬಿರುಗಾಳಿ ಎದ್ದಿದ್ದು, ಸದ್ಯಕ್ಕೆ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.
ಆರಂಭದಿಂದ ಕರ್ನಾಟಕದ ರಾಜಕೀಯ ಸನ್ನಿವೇಶವನ್ನು ಅವಲೋಕಿಸೋಣ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ತಮಗೇ ಸ್ಪಷ್ಟ ಬಹುಮತ ಸಿಗುತ್ತದೆಂಬ ಆಸೆಯಿಂದ ಚುನಾವಣಾ ಕಣಕ್ಕಿಳಿದಿದ್ದವು. ಇದು ಸಹಜವಾದದ್ದು ಕೂಡ. ಮೂರು ಪಕ್ಷಗಳೂ ತಾವೇ ಸರಕಾರ ರಚಿಸುವ ಕನಸುಗಳನ್ನೂ ಕಂಡಿದ್ದವು.
ಆದರೆ ಆದಿದ್ದೇನು? ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ, ಭಾರತೀಯ ಜನತಾ ಪಕ್ಷ 104, ಎರಡನೇ ದೊಡ್ಡ ಪಕ್ಷವಾಗಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ 78 ಮತ್ತು ಇವೆರಡು ಪಕ್ಷಗಳ ಜಗಳದ ಲಾಭ ಪಡೆದು ಕಿಂಗ್ ಮೇಕರ್ ಆಗುವ ಉಮೇದಿಯೊಂದಿಗೆ ಕಣಕ್ಕಿಳಿದಿದ್ದ ಜೆಡಿಎಸ್ 38ಕ್ಕೆ ತೃಪ್ತಿ ಪಟ್ಟುಕೊಂಡಿದೆ.

ಯಾವುದೇ ಚುನಾವಣಾಪೂರ್ವ ಮೈತ್ರಿ ಇಲ್ಲದ್ದರಿಂದ ಭಾರತೀಯ ಜನತಾ ಪಕ್ಷಕ್ಕೆ ಸರಕಾರ ರಚಿಸಲು ಮೊದಲ ಆದ್ಯತೆ ಸಿಗಬೇಕಿರುವುದು ಸಹಜ. ಅದಕ್ಕೆ ಬಹುಮತದ ಸಂಖ್ಯೆ ಇಲ್ಲವೆಂದುಕೊಂಡಾಗ, ಚುನಾವಣೋತ್ತರ ಮೈತ್ರಿ ಹುಟ್ಟಿಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ಸರಕಾರ ರಚಿಸುವ ಹಕ್ಕು ಸಿಗಬೇಕಿತ್ತು.
ಆದರೆ, ಮಹಾ ಎಡವಟ್ಟು ಆದದ್ದೇ ಇಲ್ಲಿ. ನಮ್ಮ ಪಕ್ಷ ಸರಕಾರ ರಚಿಸುತ್ತದೆ, ನಮ್ಮ ಪಕ್ಷದಿಂದಲೇ ನಾಯಕರೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಘೋಷಿಸಿಕೊಳ್ಳುವ ಬದಲು, ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಹೊರಗಿಡುವ ಉದ್ದೇಶದಿಂದ ಜಾದ್ಯತೀತ ಜನತಾದಳಕ್ಕೆ ನಾನು ಬೆಂಬಲ ನೀಡುತ್ತೇನೆ ಮತ್ತು ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಲಿ ಎಂದು ಹಿಂದುಮುಂದು ನೋಡದೆ ಘೋಷಿಸಿತು.
ಅವರಡು ಪಕ್ಷಗಳ ಅಭಿಮಾನಿಗಳನ್ನು ಹೊರತುಪಡಿಸಿ, #JustAsking ಎಂದು ಕೇಳುವ ನಟರನ್ನು ಹೊರತುಪಡಿಸಿ, ಇಡೀ ರಾಜ್ಯದ ಜನರೆಲ್ಲರು ಇದೆಂಥ ಮೈತ್ರಿಕೂಡ, ಇದೆಂಥ ಆಯ್ಕೆ ಎಂದು ಪ್ರಶ್ನಿಸಲು ಆರಂಭಿಸಿತು. ಜನಾದೇಶವನ್ನೇ ಪಡೆಯದ, ಅತಿಕಡಿಮೆ ಸೀಟು ಗಳಿಸಿರುವ ಪಕ್ಷದ ನಾಯಕ ಈ ರಾಜ್ಯದ ಮುಖ್ಯಮಂತ್ರಿ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಲು ಆರಂಭಿಸಿದರು. ಪ್ರಶ್ನೆ ಕೇಳುವ ಹಕ್ಕು ಎಲ್ಲರಿಗೂ ಇದೆ ತಾನೆ? #JustAsking!
ಜನರು ಆಡಿಕೊಳ್ಳುವುದಿರಲಿ, ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಕ್ಕೆ ಕಾಂಗ್ರೆಸ್ ಪಕ್ಷದಲ್ಲಿನ ಹಲವಾರು ನಾಯಕರೇ ಅಸಮಾಧಾನದ ಹೊಗೆಯನ್ನು ಉಗುಳಲು ಪ್ರಾರಂಭಿಸಿದರು. ಅದರಲ್ಲಿಯೂ, ಕಾಂಗ್ರೆಸ್ ಹೈಕಮಾಂಡನ್ನೇ ಅಲ್ಲಾಡಿಸಿದ್ದ, ತನ್ನ ಮುಷ್ಠಿಯಲ್ಲಿಟ್ಟುಕೊಂಡಿದ್ದ, ತನ್ನಿಚ್ಛೆಯಂತೆ ಆಟವಾಡಿಸಿದ್ದ, ತನ್ನ ಮಾತನ್ನೇ ಕೇಳುವಂತೆ ಮಾಡಿದ್ದ ಸಿದ್ದರಾಮಯ್ಯನವರು ಕೂಡ ಕೈಕಟ್ಟಿ ನಿಂತಿದ್ದಕ್ಕೆ ಬೇಜಾರು ವ್ಯಕ್ತಪಡಿಸಿದ್ದರು.
ಮೈತ್ರಿಕೂಟದಲ್ಲಿ ತಮ್ಮ ಪಕ್ಷವೇ ದೊಡ್ಡದಿರುವುದರಿಂದ ಮತ್ತು ತಮ್ಮ ಪಕ್ಷದಲ್ಲೇ ಹಲವಾರು ಸಮರ್ಥ ನಾಯಕರಿರುವುದರಿಂದ ಕಾಂಗ್ರೆಸ್ ಪಕ್ಷದವರು ತಾವೇ ಸರಕಾರ ರಚಿಸುತ್ತೇವೆ, ತಮ್ಮದೇ ಪಕ್ಷದ ನಾಯಕರೊಬ್ಬರು ಮುಖ್ಯಮಂತ್ರಿಗಳಾಗುತ್ತಾರೆ, ಬೇಕಿದ್ದರೆ ನಿಮ್ಮ ಪಕ್ಷದಿಂದ (ಜೆಡಿಎಸ್) ಯಾರಾದರೊಬ್ಬರು ಉಪಮುಖ್ಯಮಂತ್ರಿಗಳಾಗಲಿ ಎಂದು ವಾದ ಮಂಡಿಸಿದ್ದರೆ, ಅನೇಕ ಗೊಂದಲಗಳಿಗೆ ಅವಕಾಶವಿರುತ್ತಿರಲಿಲ್ಲ ಮತ್ತು ಕರ್ನಾಟಕದ ಅಸಹ್ಯ ನಾಟಕವನ್ನು ನೋಡುವಂತಾಗುತ್ತಿರಲಿಲ್ಲ.
ಆದರೆ, ಆಗಿದ್ದೇನು? 'ಕೋಮುವಾದಿ' ಪಕ್ಷವೆಂಬ ಹಣೆಪಟ್ಟಿಯನ್ನು ಕಟ್ಟಿಸಿಕೊಂಡಿರುವ, ಇಡೀ ದೇಶದಲ್ಲಿ ಧೂಳೆಬ್ಬಿಸಿರುವ, ಎಲ್ಲ ರಾಜ್ಯಗಳಲ್ಲಿಯೂ ಅಧಿಕಾರ ಸ್ಥಾಪಿಸುತ್ತಿರುವ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲೇಬಾರದೆಂಬ ಒಂದೇ ಕಾರಣದಿಂದ ಮೈತ್ರಿಕೂಟ ರಚಿಸಿದ್ದಲ್ಲದೆ, ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿತು. ಅಧಿಕಾರ ದಾಹವೇ ಇದಕ್ಕೆಲ್ಲ ಕಾರಣವಾಯಿತೆ? ಅಥವಾ ಕರ್ನಾಟಕದ ಅಭಿವೃದ್ಧಿ ಮಾಡಲಿಕ್ಕೆಂದು ಹೀಗೆಲ್ಲ ಮಾಡಿದರೆ?
ಇಲ್ಲಿ, ದೇವೇಗೌಡ ಅವರ ಮಗ ಎಚ್ ಡಿ ಕುಮಾರಸ್ವಾಮಿ ಅವರೇ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ಸಿನ ಬೆಂಬಲವನ್ನು ಪಡೆಯಲಾಯಿತು. ಕುಮಾರಸ್ವಾಮಿಯವರು ಈಗಾಗಲೆ ಒಮ್ಮೆ ಮುಖ್ಯಮಂತ್ರಿಯಾಗಿ ರಾಜ್ಯವನ್ನು 20 ತಿಂಗಳು ಆಳಿದ್ದರಿಂದ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತಿರಲಿಲ್ಲ. ಬೇರೊಬ್ಬರಿಗೂ ಅಧಿಕಾರ ಬಿಟ್ಟುಕೊಡುವಂತಿರಲಿಲ್ಲ!
ಮುಂದೆ ಏನಾದರೂ ಆಗಬಹುದು. ಹೇಗೋ ಭಾರತೀಯ ಜನತಾ ಪಕ್ಷ ಮತ್ತು ಯಡಿಯೂರಪ್ಪ ಬಹುಮತ ಸಾಬೀತುಪಡಿಸಬಹುದು ಅಥವಾ ಅವರನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ವಿಶ್ವಾಸಮತದಲ್ಲಿ ಸೋಲಿಸಬಹುದು. ಅಥವಾ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ವಿಜೃಂಭಿಸಬಹುದು. ಅಥವಾ ಮತ್ತಷ್ಟು ರಾದ್ಧಾಂತಗಳಿಗೆ ಕಾರಣವಾಗಿ ರಾಷ್ಟ್ರಪತಿ ಆಳ್ವಿಕೆಯೇ ಹೇರಿ, ಮತ್ತೊಂದು ಚುನಾವಣೆಗೆ ಕರ್ನಾಟಕ ಅಣಿಯಾಗಬಹುದು.












Click it and Unblock the Notifications