ಬೆಂಗಳೂರಿಗೆ ಬಂದು ಐಎಸ್ಐ ಪರ ಗೂಢಚಾರಿಕೆ; ಪಾಕಿಸ್ತಾನೀ ಬಿಚ್ಚಿಟ್ಟ ರಹಸ್ಯ
ಬೆಂಗಳೂರು, ಜುಲೈ 12: ಯುಪಿಎ ಸರಕಾರದ ಆಡಳಿತದ ಅವಧಿಯಲ್ಲಿ ತಾನು ಭಾರತಕ್ಕೆ ಬಂದು ಗೂಢಚಾರಿಕೆ ಮಾಡಿರುವುದಾಗಿ ಪಾಕಿಸ್ತಾನದ ಹಿರಿಯ ಅಂಕಣಕಾರರೊಬ್ಬರು ಹೇಳಿಕೊಂಡಿದ್ದಾರೆ. ಪಾಕಿಸ್ತಾನೀ ಪತ್ರಕರ್ತ ಶಕೀಲ್ ಚೌಧರಿ ನಡೆಸಿದ ಸಂದರ್ಶನದಲ್ಲಿ ಅಂಕಣಕಾರ ನುಸ್ರತ್ ಮಿರ್ಜಾ ಅನೇಕ ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಜುಲೈ 10ರಂದು ಪ್ರಕಟವಾದ ಈ ಸಂದರ್ಶನದಲ್ಲಿ ನುಸ್ರತ್ ಮಿರ್ಜಾ ತಾನು 2005ರಿಂದ 2011ರ ಅವಧಿಯಲ್ಲಿ ಭಾರತಕ್ಕೆ ಹಲವು ಬಾರಿ ಹೋಗಿದ್ದು, ಅಲ್ಲಿನ ಮಾಹಿತಿಯನ್ನು ಪಾಕ್ ಗುಪ್ತಚರ ಸಂಸ್ಥೆ ಐಎಸ್ಐಗೆ ರವಾನಿಸುತ್ತಿದ್ದುದು ಇತ್ಯಾದಿಯನ್ನು ವಿವರಿಸಿದ್ದಾರೆ.
ಪಾಕಿಸ್ತಾನದಲ್ಲಿ ವಿದ್ಯುತ್ ಬಿಕ್ಕಟ್ಟು: ಇಂಟರ್ನೆಟ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ
ನುಸ್ರತ್ ಮಿರ್ಜಾ 2005ರಲ್ಲಿ ಮೊದಲು ಗೊಂಡು ಐದು ಬಾರಿ ಭಾರತಕ್ಕೆ ಬಂದಿದ್ದರಂತೆ. 2011ರಲ್ಲಿ ಅವರದ್ದು ಭಾರತದ ಕೊನೆಯ ಭೇಟಿ. ಆಗ ಉಪಾಧ್ಯಕ್ಷರಾಗಿದ್ದ ಹಮೀದ್ ಅನ್ಸಾರಿಯ ಆಹ್ವಾನವನ್ನೂ ಅವರು ನೆನಪಿಸಿಕೊಂಡಿದ್ದಾರೆ.
ಭಾರತದಿಂದ ಪಾಕಿಸ್ತಾನದ ಅಸ್ತಿತ್ವಕ್ಕೆ ಅಪಾಯ ಇದೆಯಾ? ಭಾರತೀಯ ಭಾಷೆಯ ಪರಿಣತಿ ಪಾಕಿಸ್ತಾನಕ್ಕೆ ಯಾಕಿಲ್ಲ ಎಂದು ಶಕೀಲ್ ಚೌಧರಿ ಈ ಸಂದರ್ಶನದಲ್ಲಿ ಪ್ರಶ್ನೆ ಕೇಳಿದಾಗ ನುಸ್ರತ್ ಮಿರ್ಜಾ ಉದ್ರೇಕಗೊಂಡು ತಾನು ಭಾರತಕ್ಕೆ ಹೋಗಿ ಧೈರ್ಯವಾಗಿ ಮತ್ತು ಬಿಂದಾಸ್ ಆಗಿ ಗೂಢಚಾರಿಕೆ ಮಾಡಿರುವ ವಿಚಾರವನ್ನು ಹೊರಗೆಡವಿದ್ದಾರೆ.
|
2006ರಲ್ಲಿ ಬೆಂಗಳೂರಿಗೆ
ನುಸ್ರತ್ ಮಿರ್ಜಾ ಅವರು ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದು 2005ರಲ್ಲಿ. ಮೊದಲು ಬಂದಾಗ ಚಂಡೀಗಡಕ್ಕೆ ಅವರ ಭೇಟಿಯಾಗಿತ್ತು. ಮರು ವರ್ಷ, ಅಂದರೆ 2006ರಲ್ಲಿ ಅವರು ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈಗೆ ಬಂದಿದ್ದರಂತೆ. ಬೇರೆ ಬೇರೆ ಅವಧಿಯಲ್ಲಿ ಅವರು ಪಟ್ನಾ, ಕೋಲ್ಕತಾ ಮೊದಲಾದ ಸ್ಥಳಗಳಿಗೂ ಹೋಗಿ ಬಂದಿದ್ದರಂತೆ.
ಪಾಕಿಸ್ತಾನೀ ವ್ಯಕ್ತಿಗೆ ನೀಡಲಾಗುವ ವೀಸಾದಲ್ಲಿ ಮೂರು ಸ್ಥಳಗಳಿಗೆ ಮಾತ್ರ ಭೇಟಿ ನೀಡಲು ಅವಕಾಶ ಇರುತ್ತದೆ. ಆದರೆ, ನುಸ್ರತ್ ಮಿರ್ಜಾ ಏಳು ಸ್ಥಳಗಳಿಗೆ ವೀಸಾ ಪಡೆದಿದ್ದರು. ಆಗ ಪಾಕಿಸ್ತಾನದ ವಿದೇಶಾಂಗ ಮಂತ್ರಿಯಾಗಿದ್ದ ಖುರ್ಷಿದ್ ಕಸೂರಿ ಈ ವೀಸಾಗೆ ಸಹಾಯ ಮಾಡಿದ್ದರಂತೆ. ಹಾಗಂತ ಮಿರ್ಜಾ ಹೇಳಿಕೊಂಡಿದ್ಧಾರೆ.
ಚೀನಾದಲ್ಲೂ ಜನರ ದಂಗೆಯಾ? ಹಣಕ್ಕಾಗಿ ಜನರ ಹಾಹಾಕಾರ
ಭಾರತೀಯರ ಸ್ನೇಹ
"ಭಾರತ ಹೇಗೆ ಕಾರ್ಯಾಚರಿಸುತ್ತದೆ ಎಂದು ಬಲ್ಲೆ. ಭಾರತೀಯ ಮುಸ್ಲಿಮರು ಯಾವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪತ್ತೆಹಚ್ಚಿದ್ದೇನೆ. ಭಾರತೀಯ ಉರ್ದು ಪತ್ರಿಕೆಗಳ ಎಲ್ಲಾ ಸಂಪಾದಕರೂ ನನ್ನ ಸ್ನೇಹಿತರೇ. ಸುದ್ದಿ ವಾಹಿನಿಗಳ ಮಾಲೀಕರೂ ಕೂಡ ಸ್ನೇಹಿತರೇ. ನಾವು ಭಾರತಕ್ಕೆ ಬಂದಾಗೆಲ್ಲಾ ಹಲವು ಸಂದರ್ಶನಗಳನ್ನು ನೀಡಿದ್ದೇನೆ" ಎಂದು ನುಸ್ರತ್ ಮಿರ್ಜಾ ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಈ ಸಂದರ್ಶನದಲ್ಲಿ ನುಸ್ರತ್ ಮಿರ್ಜಾ ತಮ್ಮ 2010ರ ಭಾರತ ಪ್ರವಾಸವನ್ನು ಉಲ್ಲೇಖಿಸಿದ್ದಾರೆ. ಭಯೋತ್ಪಾದನೆ ವಿಚಾರದ ಬಗ್ಗೆ ಆಯೋಜಿಸಲಾಗಿದ್ದ ಸಮಾವೇಶಕ್ಕೆ ಬರುವಂತೆ ಹಮೀದ್ ಅನ್ಸಾರಿ ನೀಡಿದ ಆಹ್ವಾನದ ಮೇರೆಗೆ ಮಿರ್ಜಾ ಭಾರತಕ್ಕೆ ಬಂದಿದ್ದರಂತೆ.
ಹಾಗೆಯೇ, ಮಿಲ್ಲಿ ಗೆಜೆಟ್ ಪತ್ರಿಕೆಯ ಮುದ್ರಕ ಜಫಾರುಲ್ಲಾ ಇಸ್ಲಾಮ್ ಖಾನ್ ಅವರನ್ನು ಭೇಟಿಯಾಗಲು 2011ರಲ್ಲಿ ಮಿರ್ಜಾ ಆಗಮಿಸಿದ್ದರು. ಆ ವರ್ಷ ಅವರು ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ಐಎಸ್ಐಗೆ ನೀಡಿದ್ದರು.
ಪಾಕಿಸ್ತಾನದ ರಾಜಕೀಯ ಸರಿಯಿಲ್ಲ
ಭಾರತದ ಬಗ್ಗೆ ತಾನು ಅಷ್ಟು ಆಳವಾಗಿ ಅಧ್ಯಯನ ನಡೆಸಿದ ವಿಚಾರಗಳನ್ನು ಪಾಕಿಸ್ತಾನ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಪಾಕಿಸ್ತಾನದ ರಾಜಕೀಯವೇ ಕಾರಣ. ಪಾಕಿಸ್ತಾನದ ಸೇನೆಗೆ ಹೊಸ ಮುಖ್ಯಸ್ಥರು ನೇಮಕವಾಗುತ್ತಿದ್ದಂತೆಯೇ ಹಿಂದಿನ ಮುಖ್ಯಸ್ಥರು ಮಾಡಿದ ಕೆಲಸವೆಲ್ಲಾ ಬದಿಗೆ ಸರಿಯುತ್ತದೆ. ಮತ್ತೆ ಹೊಸದಾಗಿ ಆರಂಭಿಸಲಾಗುತ್ತದೆ ಎಂದು ನುಸ್ರತ್ ಮಿರ್ಜಾ ವ್ಯಥೆ ಪಟ್ಟಿದ್ದಾರೆ.
ಪಾಕಿಸ್ತಾನದ ಕೈ ಕಟ್ಟಿದೆ
ನುಸ್ರತ್ ಮಿರ್ಜಾ ಈ ಸಂದರ್ಶನದಲ್ಲಿ ಭಾರತದಲ್ಲಿ ಪಾಕಿಸ್ತಾನ ಇತ್ತೀಚೆಗೆ ಯಾಕೆ ಚಟುವಟಿಕೆ (ಭಯೋತ್ಪಾದನೆ) ನಡೆಸಲು ಸಾಧ್ಯವಾಗಿಲ್ಲ ಎಂದು ವಿವರಣೆ ನೀಡಿದ್ದಾರೆ.
ಭಯೋತ್ಪಾದನೆಗೆ ಅಂತಾರಾಷ್ಟ್ರೀಯ ಹಣ ಬೆಂಬಲದ ಮೇಲೆ ನಿಗಾ ಇರಿಸಲು ರಚಿಸಲಾಗಿರುವ ಸಂಸ್ಥೆ ಎಫ್ಎಟಿಎಫ್. ಈ ಸಂಸ್ಥೆ ಸ್ಥಾಪನೆಯಾದಾಗಿನಿಂದ ಭಾರತದಲ್ಲಿ ಪಾಕಿಸ್ತಾನ ಯಾವ ಚಟುವಟಿಕೆಯನ್ನೂ ನಡೆಸಲು ಸಾಧ್ಯವಾಗಿಲ್ಲವಂತೆ. ಎಫ್ಎಟಿಎಫ್ನಿಂದಾಗಿ ಪಾಕಿಸ್ತಾನದ ಕೈ ಕಟ್ಟಿಹಾಕಿದಂತಾಗಿದೆ ಎಂದು ನುಸ್ರತ್ ಮಿರ್ಜಾ ಹೇಳಿದ್ದಾರೆ.
ಭಾರತ ಶಾಂತಿವಿರೋಧಿ
ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಶಾಂತಿಯಿಂದ ಇರಲು ಸಾಧ್ಯವಿಲ್ಲವಾ ಎಂಬ ಪ್ರಶ್ನೆಗೆ ನುಸ್ರತ್ ಮಿರ್ಜಾ ಭಾರತವನ್ನು ಶಾಂತಿ ವಿರೋಧಿ ಎಂದು ಟೀಕಿಸಿದ್ದಾರೆ.
ಮೊಘಲರ ವಿರುದ್ಧದ ಶತಮಾನಗಳಷ್ಟು ಹಳೆಯ ಯುದ್ಧಗಳಿಗೆ ಭಾರತ ಈಗ ಪ್ರತೀಕಾರ ತೀರಿಸಿಕೊಳ್ಳಲು ಹೊರಟಿದೆ. ಪಾಕಿಸ್ತಾನವನ್ನು ನಾಶ ಮಾಡುವುದು ಭಾರತದ ಗುರಿಯಾಗಿದೆ ಎಂದು ಅವರು ಆಕ್ಷೇಪಿಸಿದ್ಧಾರೆ.
"ನಾನು ಉತ್ತರಪ್ರದೇಶಕ್ಕೆ ಭೇಟಿ ನೀಡಿದಾಗ ಒಬ್ಬ ರಾಜಕೀಯ ಮುಖಂಡರನ್ನು ಸಂಧಿಸಿದೆ. ತಮ್ಮ ಸರಕಾರ ಮುಸ್ಲಿಮರಿಗೆ ಉದ್ಯೋಗ ಕೊಡಿಸಲು ಹೇಗೆ ನೆರವಾಯಿತು ಎಂದು ಅವರು ತಿಳಿಸಿದರು. ಅವರು ಹಾಗೆ ಇದ್ದರೆ ಸರಿ. ಆದರೆ, ಮುಸ್ಲಿಮರನ್ನು ಗುಲಾಮರಂತೆ ನೋಡುವುದು ತಪ್ಪು" ಎಂದು ನುಸ್ರತ್ ಮಿರ್ಜಾ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)