ಓಮಿಕ್ರಾನ್ ಸೌಮ್ಯ ಎಂದು ಹೇಳಲಾಗದು:WHO
ವಾಷಿಂಗ್ಟನ್, ಜನವರಿ 07: ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಸೋಂಕಿತರು ಸಾವನ್ನಪ್ಪುತ್ತಿರುವುದರಿಂದ ಓಮಿಕ್ರಾನ್ ರೂಪಾಂತರಿ ಕೇವಲ ಸೌಮ್ಯ ಸೋಂಕು ಎಂದು ಹೇಳುವುದು ಅಪಾಯಕಾರಿ. ಜಾಗರೂಕರಾಗಿರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
2022 ಆರಂಭವಾಗುತ್ತಿದ್ದಂತೆ ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನ ಹೊಸ ಅಲೆ ಹರಡುವ ಭೀತಿ ಕಾಡುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಒಮಿಕ್ರಾನ್ಸೋಂಕಿನ ಕುರಿತಾದ ಮತ್ತಷ್ಟು ಮಾಹಿತಿ ನೀಡಿದ್ದಾರೆ.
ನಂತರ ಮಾತನಾಡಿದ ವಿಶ್ವ ಆರೋಗ್ಯಸಂಸ್ಥೆಯ ಕೋವಿಡ್ -19 ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವ್ಯಾನ್ ಕೆರ್ಖೋವ್, ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಮಿಕ್ರಾನ್ ರೂಪಾಂತರದಿಂದ ಉಂಟಾದ ಕೋವಿಡ್ ಪ್ರಕರಣಗಳ ಹೊಸ ಉಲ್ಬಣದ ವಿರುದ್ಧ ಕ್ರಮಗಳನ್ನು ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಸಂದರ್ಭಗಳಲ್ಲಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಇದನ್ನು ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.

WHO ಪ್ರಕಾರ, ಕಳೆದ ವಾರದಲ್ಲಿ ಪ್ರಪಂಚದಲ್ಲಿ 9.5 ದಶಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ವರದಿ ಮಾಡಲಾಗಿದೆ. 2021 ರ ಡಿಸೆಂಬರ್ 27 ರಿಂದ ಈ ವರ್ಷದ ಜನವರಿ 2 ರವರೆಗೆ 41,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು WHO ಹೇಳಿದೆ.
ವಿಶ್ವದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಅನೇಕ ರಾಷ್ಟ್ರಗಳಲ್ಲಿ ಕೋವಿಡ್ ನಿಯಮಗಳನ್ನು ಕಠಿಣಗೊಳಿಸಲಾಗಿದೆ.
ಡೆಲ್ಟಾಕ್ಕೆ ಹೋಲಿಸಿದರೆ ಓಮಿಕ್ರಾನ್ ಕಡಿಮೆ ತೀವ್ರವಾಗಿರುವಂತೆ ಕಂಡು ಬಂದಿದೆ. ಆದರೂ ಸಹ ಇದು ಸೌಮ್ಯ ಲಕ್ಷಣಗಳನ್ನು ಹೊಂದಿದೆ ಎಂದು ವರ್ಗೀಕರಿಸಬಾರದು. ಈ ಹಿಂದಿನ ರೂಪಾಂತರಿಗಳಂತೆ ಒಮಿಕ್ರಾನ್ ಸಹ ಜನರನ್ನು ಕಾಡುತ್ತಿದೆ. ಹೆಚ್ಚು ಜನರಿಗೆ ಸೋಂಕು ತಗುಲುತ್ತಿರುವುದಲ್ಲದೇ, ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದು ಟೆಡ್ರೊಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮುಂದಿನ ಎರಡು ವಾರ ಭಾರತಕ್ಕೆ ನಿರ್ಣಾಯಕವಾಗಿದ್ದು, ಇಡೀ ದೇಶವನ್ನು ಕೊರೊನಾ ವೈರಸ್ ಸಂಪೂರ್ಣವಾಗಿ ಆವರಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತ ಸರ್ಕಾರವನ್ನು ಎಚ್ಚರಿಸಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಕೊವೀಡ್ ಪ್ರಕರಣಗಳ ಬಗ್ಗೆ ಮಾತನಾಡಿರುವ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್, ಭಾರತಕ್ಕೆ ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಭಾರತದಲ್ಲಿ ಕೊರೊನಾ ಮೂರನೇ ಅಲೆ ಶುರುವಾಗಿದೆ, ಎರಡನೇ ಅಲೆಗಿಂತ ಮೂರನೇ ಅಲೆ ಅತ್ಯಂತ ವೇಗವಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ಮುಂದಿನ ಎರಡು ವಾರದಲ್ಲಿ ಭಾರಿ ಸಂಖ್ಯೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಲಿದೆ ಎಂದು ಸೌಮ್ಯ ಸ್ವಾಮಿನಾಥನ್ ಭವಿಷ್ಯ ನುಡಿದಿದ್ದು, ಸೋಂಕು ಏಕಾಏಕಿ ಹೆಚ್ಚುತ್ತಿರುವ ಹಿನ್ನಲೆ ನಿಯಂತ್ರಣಕ್ಕಾಗಿ ಪರೀಕ್ಷೆ ಹೆಚ್ಚಿಸಲು ಅವರು ಸಲಹೆ ನೀಡಿದ್ದಾರೆ.
ಓಮಿಕ್ರಾನ್ ಸಾಮಾನ್ಯ ಶೀತವೆಂದು, ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಇಲ್ಲ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಎರಡು ವಾರದ ಬಳಿಕ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಬಹುದು, ರೋಗಿಗಳನ್ನು ಪರೀಕ್ಷಿಸಲು, ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಸಾಕಾಗದಿರಬಹುದು ಹೀಗಾಗಿ ಈಗಿನಿಂದಲೇ ಎಚ್ಚರಿಕೆ ವಹಿಸಿ ವ್ಯವಸ್ಥಿತ ತಯಾರಿಯಲ್ಲಿರುವಂತೆ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
14 ದಿನ ಕ್ವಾರಂಟೈನ್ ಕಡ್ಡಾಯ
ಕೋವಿಡ್- 19 ಸೋಂಕಿತರು 7 ದಿನಗಳಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರೂ ಕೂಡ 14 ದಿನ ಕ್ವಾರಂಟೈನ್ ಕಡ್ಡಾಯವಾಗಿ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಪುನರುಚ್ಚರಿಸಿದೆ.











Click it and Unblock the Notifications