Get Updates
Get notified of breaking news, exclusive insights, and must-see stories!

ಕ್ಯಾನ್ಸರಿಗೆ ಬಲಿಯಾದ ಮುತ್ತಪ್ಪಣ್ಣ, ಕಂಬನಿ ಮಿಡಿದ ಬಂಟರು

ಬೆಂಗಳೂರು, ಮೇ 15: ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಕಳೆದುಕೊಂಡು ಅನಾಥಭಾವದಲ್ಲಿದ್ದಾರೆ ರಾಜ್ಯ ಕಾರ್ಯನಿರ್ವಾಹಕ ಅಧ್ಯಕ್ಷ ಪ್ರಕಾಶ್ ರೈ. ಪುತ್ತೂರಿನ ಮುತ್ತು, ಎಲ್ಲರ ಪಾಲಿಗೆ ಅಣ್ಣನಾಗಿದ್ದ ರೈ ನಿಧನದಿಂದ ಅಭಿಮಾನಿಗಳಿಗೆ ಎಲ್ಲೆಡೆ ಶೂನ್ಯ ಆವರಿಸಿದೆ.

Recommended Video

      Muthappa Rai No More | ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಮಾಜಿ ಭೂಗತ ದೊರೆ ಮುತ್ತಪ್ಪ ರೈ.

      ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ ಎಂದು ಸಂಘಟನೆಯ ವಕ್ತಾರರಾಗಿ ಕೂಡಾ ಪ್ರಕಾಶ್ ರೈ ಎಲ್ಲರಿಗೂ ಸುದ್ದಿ ಮುಟ್ಟಿಸಿದ್ದಾರೆ. ಕಳೆದ ತಿಂಗಳು ರೈ ನಿಧನದ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ್ದಾಗ ಪ್ರಮುಖ ಮಾಧ್ಯಮಗಳಿಗೆ ಅಣ್ಣ ಇನ್ನೂ ಬದುಕಿದ್ದಾರೆ, ಸಾಮಾಜಿಕ ಜಾಲ ತಾಣಗಳಲ್ಲಿ ಬಂದ ಸುದ್ದಿ ನೋಡಿ ವರದಿ ಮಾಡಬೇಡಿ ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಇಂದು ಮಾರಕ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಅಣ್ಣ ಸೋತಿದ್ದಾರೆ. ಬದುಕಿನ ಚದುರಂಗದಾಟದಲ್ಲಿ ಚೆಕ್ ಮೆಟ್ ಆಗಿ ಆಟ ಮುಗಿಸಿದ್ದಾರೆ ಎಂದು ತಿಳಿಸಬೇಕಾದ ಪರಿಸ್ಥಿತಿ.

      ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೈ, ಕಳೆದ ತಿಂಗಳು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.

      ಪುತ್ತೂರು ತಾಲೂಕಿನ ಕೆಯ್ಯೂರಿನ ಎನ್.ಮುತ್ತಪ್ಪ ರೈಯವರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಮತ್ತಷ್ಟು ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಏಪ್ರಿಲ್ 28ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 13ರ ರಾತ್ರಿ ವೇಳೆಗೆ ಎನ್. ಮುತ್ತಪ್ಪ ರೈಯವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಐಸಿಯುವಿನಲ್ಲಿ ವೆಂಟಿಲೇಟರ್ ಮೂಲಕ ಉಸಿರಾಟ ನಡೆಸಿದ್ದರು. ಶುಕ್ರವಾರ ಮುಂಜಾನೆ 2 ಗಂಟೆ ನಂತರ ಉಸಿರು ಚೆಲ್ಲಿದ್ದಾರೆ.

      ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ

      ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ

      ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರೂ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ನ‌ ನಿಕಟಪೂರ್ವ ಅಧ್ಯಕ್ಷರೂ ಆಗಿರುವ ಮುತ್ತಪ್ಪ ರೈಯವರು ಪ್ರಸ್ತುತ ಬೆಂಗಳೂರಿನ ಬಿಡದಿಯಲ್ಲಿ ವಾಸವಿದ್ದರು. ಕನ್ನಡ ನಾಡಿನ ಪರ ಹೋರಾಟ ಮಾಡುವ ಹಾಗೂ ಹೊಸದೊಂದು ಚಳವಳಿಗೆ ರೂಪ ನೀಡುವ ಉದ್ದೇಶದಿಂದ ಎನ್.ಮುತ್ತಪ್ಪ ರೈರವರ ಜಯ ಕರ್ನಾಟಕ ಸಂಸ್ಥೆ ಹತ್ತು ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು. ಪತ್ರಕರ್ತ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಜಾಣಗೆರೆ ವೆಂಕಟರಾಮಯ್ಯ ಅವರು ನಿಯೋಜಿತ ಅಧ್ಯಕ್ಷರಾಗಿ ಮೊದಲಿಗೆ ಕಾರ್ಯ ನಿರ್ವಹಿಸಿದ್ದರು.

      ಈ ಸಂಘಟನೆಯ ಉದ್ದೇಶ ಹಣ, ಆಸ್ತಿ ಮಾಡುವುದಲ್ಲ. ಕರ್ನಾಟಕದ ಪರ ಕೆಲಸ ಮಾಡುವುದು , ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸಂಘಟನೆಯ ಗುರಿಯಾಗಿದೆ ಎಂದಿದ್ದ ಪ್ರಕಾಶ್ ಅಂದಿನಿಂದ ಇಂದಿನವರೆಗೂ ಕಾರ್ಯ ನಿರ್ವಾಹಕ ಅಧ್ಯಕ್ಷ, ವಕ್ತಾರರಾಗಿ ಮುತ್ತಪ್ಪಣ್ಣನ ಜೊತೆಗಿದ್ದಾರೆ.

      ಅಣ್ಣನ ಮರಣ ವಾರ್ತೆ ಬಗ್ಗೆ ಪ್ರಕಾಶ್ ರೈ ಪ್ರಕಟಣೆ

      ಅಣ್ಣನ ಮರಣ ವಾರ್ತೆ ಬಗ್ಗೆ ಪ್ರಕಾಶ್ ರೈ ಪ್ರಕಟಣೆ

      ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಮತ್ತು 4 ಆರ್ ಗ್ರೂಪ್ಸ್ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿರುವ ಅಣ್ಣ ಎನ್ ಮುತ್ತಪ್ಪ ರೈ ದೇರ್ಲ (2-05-1952 --15-05-2020) ಬೆಳಗ್ಗಿನ ಜಾವ ಎರಡು ಗಂಟೆಗೆ ನಿಧನರಾಗಿದ್ದಾರೆ. ಇಬ್ಬರು ಮಕ್ಕಳು, ಮೂವರು ತಮ್ಮಂದಿರು, ಒಬ್ಬ ತಂಗಿ, ಕುಟುಂಬವರ್ಗ, ಅಪಾರ ಅಭಿಮಾನಿ, ಬಂಧುವರ್ಗವನ್ನು ತ್ಯಜಿಸಿದ್ದಾರೆ.
      ಕೋವಿಡ್ 19 ನಿಯಮಾವಳಿ ಇರುವುದರಿಂದ ಬಿಡದಿಯ ಸ್ವಗೃಹದಲ್ಲಿ ಮಧ್ಯಾಹ್ನದ ಮೇಲೆ ಕುಟುಂಬ ಸದಸ್ಯರಿಂದ ಮಾತ್ರ ಅಂತಿಮ ವಿಧಿ ವಿಧಾನಗಳು ನಡೆಯಲಿವೆ. ಆದ್ದರಿಂದ ಎಲ್ಲರೂ ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ

      ಇಂತಿ ತಮ್ಮ ವಿಶ್ವಾಸಿ-ಪ್ರಕಾಶ್ ರೈ
      ಎರಡು ವರ್ಷಗಳಿಂದ ಕ್ಯಾನ್ಸರ್ ಜೊತೆಗೆ ಹೋರಾಟ

      ಎರಡು ವರ್ಷಗಳಿಂದ ಕ್ಯಾನ್ಸರ್ ಜೊತೆಗೆ ಹೋರಾಟ

      ಕಳೆದ ಎರಡು ವರ್ಷಗಳಿಂದ ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ಅವರು ಇತ್ತೀಚೆಗೆ ಅತ್ಯಂತ ಕೃಶಕಾಯರಾಗಿ ತಮ್ಮ ಬಿಡದಿ ಮನೆಯಲ್ಲಿ ಕಾಣಿಸಿಕೊಂಡಿದ್ದರು.

      ನವದೆಹಲಿ, ಚೆನ್ನೈ, ಬೆಂಗಳೂರು ಸೇರಿದಂತೆ ವಿವಿಧ ಕಡೆ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಮೊದಲಿಗೆ ಕಾಣಿಸಿಕೊಂಡಿದ್ದ ಲಿವರ್ ಕ್ಯಾನ್ಸರ್ ಗುಣವಾಯಿತು ಎನ್ನುವಷ್ಟರಲ್ಲೇ ಮೆದುಳಿನಲ್ಲಿ ಕ್ಯಾನ್ಸರ್ ಗೆಡ್ಡೆ ಪತ್ತೆಯಾಯಿತು. ''ಇನ್ನು ಕೆಲವು ತಿಂಗಳಷ್ಟೆ ಬದುಕುವುದಾಗಿ ವೈದ್ಯರು ಹೇಳಿಬಿಟ್ಟಿದ್ದಾರೆ ಹಾಗಾಗಿ ಕೊನೆಯ ದಿನಗಳನ್ನು ಕಳೆಯಲು ಬಿಡದಿಗೆ ಬಂದಿದ್ದೇನೆ''ಎಂದು ಜನವರಿ ತಿಂಗಳಿನಲ್ಲಿ ಸುದ್ದಿಗೋಷ್ಠಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

      'ಕ್ಯಾನ್ಸರ್ ನನ್ನನ್ನು ಸಾವಿನ ಅಂಚಿಗೆ ತಳ್ಳಿರುವುದು ನಿಜ ಆದರೆ ಪವಾಡಸದೃಶ ರೀತಿಯಲ್ಲಿ ಹೇಗೋ ಬದುಕುತ್ತಿದ್ದೀನಿ' ಎಂದಿದ್ದರು.

      ಜೀವ ಇರುವವರೆಗೂ ಸಮಾಜ ಸೇವೆ

      ಜೀವ ಇರುವವರೆಗೂ ಸಮಾಜ ಸೇವೆ

      'ನನಗೀಗ 68 ವರ್ಷ, ಐದು ಗುಂಡು ಬಿದ್ದಿದ್ದರೂ ಬದುಕಿ ಬಂದಿದ್ದೇನೆ, ಸಾವಿಗೆ ಎಂದೂ ಹೆದರಿದವನು ನಾನಲ್ಲ. ಅದೇ ಇಚ್ಛಾಶಕ್ತಿಯಿಂದ ಕ್ಯಾನ್ಸರ್ ಅನ್ನು ಎದುರಿಸಿ ಬದುಕುತ್ತಿದ್ದೇನೆ, ಜೀವ ಇರುವವರೆಗೂ ಸಮಾಜ ಸೇವೆ ಮುಂದುವರೆಸುತ್ತೀನಿ' ಎಂದು ಹೇಳಿದ್ದಾರೆ.

      ತಮ್ಮ ಆಸ್ತಿ ಬಗ್ಗೆಯೂ ಮಾತನಾಡಿದ ಮುತ್ತಪ್ಪ ರೈ, 'ವರ್ಷಕ್ಕೆ 25-30 ಕೋಟಿ ತೆರಿಗೆ ಕಟ್ಟುತ್ತಿದ್ದೇನೆ, ಆಸ್ತಿ ಕುರಿತಾಗಿ ಈಗಾಗಲೇ ವಿಲ್ ಮಾಡಿಸಿಟ್ಟಿದ್ದೀನಿ, ಮಕ್ಕಳಿಗೂ ವಿಷಯ ಹೇಳಿದ್ದೀನಿ' ಎಂದಿದ್ದರು.

      ನನ್ನ ಜೊತೆಗೆ ಇಷ್ಟು ದಿನ ಇದ್ದ ಎಲ್ಲರಿಗೂ ಒಂದೊಂದು ನಿವೇಶನ ಕೊಡುತ್ತಿದ್ದೀನಿ. ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ' ಎಂದು ಹೇಳಿದರು.

      ಎರಡು ಮದುವೆ, ಪ್ರೀತಿಸುವ ನಂಬುಗೆಯ ಜನ ಸಮೂಹ

      ಎರಡು ಮದುವೆ, ಪ್ರೀತಿಸುವ ನಂಬುಗೆಯ ಜನ ಸಮೂಹ

      2013 ಏಪ್ರಿಲ್ 28ರಂದು ಸಿಂಗಾಪುರದಲ್ಲಿ ರೈ ಅವರ ಮೊದಲ ಪತ್ನಿ ರೇಖಾ ರೈ ನಿಧನರಾಗಿದ್ದರು. ರೇಖಾ ಅವರ ಸಾವಿನ ಕೊರಗಿನಲ್ಲಿದ್ದ ರೈ ಅವರು 2016ರಲ್ಲಿ ಪುನರ್ ವಿವಾಹಕ್ಕೆ ಆಪ್ತರ ಒತ್ತಾಯಕ್ಕೆ ಮಣಿದು ಒಪ್ಪಿಗೆ ನೀಡಿದ್ದರು. ರೈ ಅವರಿಗೆ ರಾಕಿ, ರಿಕ್ಕಿ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.

      ಸಕಲೇಶಪುರ ಮೂಲದ ಅನುರಾಧ ಅವರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಅನುರಾಧ ಅವರಿಗೂ ಇದು ಎರಡನೇ ಮದುವೆಯಾಗಿತ್ತು, ಅನುರಾಧಾ ಅವರಿಗೂ ಇಬ್ಬರು ಮಕ್ಕಳಿದ್ದಾರೆ. ಅನುರಾಧಾ ಅವರ ಮೊದಲ ಪತಿ ತೀರಿಕೊಂಡಿದ್ದಾರೆ.

      ಪುತ್ತೂರಿನ ಮುತ್ತು ದೈವಭಕ್ತ ಮುತ್ತಪ್ಪ ರೈ

      ಪುತ್ತೂರಿನ ಮುತ್ತು ದೈವಭಕ್ತ ಮುತ್ತಪ್ಪ ರೈ

      ಪುರಾಣ ಪ್ರಸಿದ್ದ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ ಸೇರಿದಂತೆ ತುಳುನಾಡಿನ ದೇವ ದೈವಗಳಿಗೆ ಮುತ್ತಪ್ಪ ನಡೆದುಕೊಳ್ಳುತ್ತಿದ್ದರು. ರಾಜ್ಯದಲ್ಲೇ ಅತ್ಯಂತ ಎತ್ತರದ ಹೆಗ್ಗಳಿಕೆಯ ಈ ರಥವನ್ನು ಮುತ್ತಪ್ಪ ರೈ ಸುಮಾರು ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿ ದೇವಸ್ಥಾನಕ್ಕೆ ಅರ್ಪಿಸಿದ್ದರು. ಮಾರ್ಚ್- ಏಪ್ರಿಲ್ ತಿಂಗಳಿನಲ್ಲಿ ನಡೆಯುವ ರಥೋತ್ಸವ ಜಾತ್ರೆ ಖರ್ಚು ವೆಚ್ಚ ನೋಡಿಕೊಂಡು, ಲಕ್ಷಾಂತರ ಮಂದಿಗೆ ಅನ್ನ ಸಂತರ್ಪಣೆ ಮಾಡಿಸುತ್ತಿದ್ದರು.

      ಪ್ರತಿ ಬಾರಿ ಬಿಡದಿಯಿಂದ ಪುತ್ತೂರಿಗೆ ಭೇಟಿ ಕೊಟ್ಟಾಗ ಅವರ ಕುಟುಂಬ ಪರಿವಾರವೇ ಅಲ್ಲಿ ನೆರದಿರುತ್ತಿತ್ತು. ಮುತ್ತಪ್ಪ ರೈ ಅವರ ಸಹೋದರ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಕರುಣಾಕರ ರೈ, ಅವರ ಪತ್ನಿ ಕೃಷ್ಣವೇಣಿ ಕರುಣಾಕರ ರೈ, ಪುತ್ರ ಅಶ್ವಿನ್ ಕುಮಾರ್ ರೈ, ಆಪ್ತರಾದ ಪ್ರವೀಣ್ ಚಂದ್ರ ಶೆಟ್ಟಿ ಬೇಕೂರು, ಜಯಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟ, ಅಧ್ಯಕ್ಷ ಜಗದೀಶ್ ಶೆಟ್ಟಿ ಸದಾಕಾಲ ಜೊತೆಗಿರುತ್ತಿದ್ದರು.

      ಬೆಂಬಿಡದ ಹಳೆ ಹೊಸ ಕೇಸುಗಳು

      ಬೆಂಬಿಡದ ಹಳೆ ಹೊಸ ಕೇಸುಗಳು

      ಭೂಗತ ಲೋಕ, ದುಬೈ ಸಹವಾಸದಿಂದ ದೂರ ಉಳಿದಿದ್ದ ಮುತ್ತಪ್ಪ ರೈ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಜಯ ಕರ್ನಾಟಕ ಸಂಘಟನೆ ಸ್ಥಾಪಿಸಿದಾಗಲೂ ಎಲ್ಲರೂ ಅನುಮಾನದಿಂದಲೇ ನೋಡತೊಡಗಿದ್ದರು. ರೋಲ್ ಕಾಲ್ ಮಾಡಲು ಇದೊಂದು ಮಾರ್ಗ ಎಂದು ಅನೇಕರು ಟೀಕಿಸಿದ್ದರು. ಆದರೆ, ರಾಜ್ಯವ್ಯಾಪ್ತಿಯಾಗಿ ಸಂಘಟನೆ ಬೆಳೆದು, ಸಾಮಾಜಿಕ ಕಳಕಳಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಟೀಕೆಗೆ ಉತ್ತರಿಸಿದ್ದರು.

      ಮೈಸೂರಿನ ದಿವಂಗತ ಎಡ್ವಿನ್ ವಾನ್ ಇಂಗೆನ್ ಅವರಿಗೆ ಸೇರಿದ 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಸಿಐಡಿ ಮುಂದೆ ವಿಚಾರಣೆ ಎದುರಿಸಬೇಕಾಗಿತ್ತು. 2018ರಲ್ಲಿ ಆಯುಧ ಪೂಜೆ ದಿನ ಶಸ್ತ್ರಾಸ್ತ್ರ ಇಟ್ಟು ಪೂಜೆ ಮಾಡಿದ್ದರಿಂದ ಸಿಸಿಬಿ ನೋಟಿಸ್ ಪಡೆದ್ದರು. ಮುತ್ತಪ್ಪ ರೈ ವಿರುದ್ಧ ನಡೆಯುತ್ತಿದ್ದ ಸಿಸಿಬಿ ತನಿಖೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಹಾಲಿ ಡಾನ್ ಗಳ ಬಂಧನ, ಬೆದರಿಕೆ ಕೇಸ್ ಗಳು ಬಂದಾಗ ಪೊಲೀಸರಿಗೆ ಹೆಚ್ಚಿನ ಮಾಹಿತಿ ಬೇಕಾದರೆ ಬಿಡದಿ ಮನೆಗೆ ಫೋನ್ ಕಾಲ್ ಬರುತ್ತಿತ್ತು. ಇದೆಲ್ಲದರ ನಡುವೆ ಅಪಾರ ಪ್ರಮಾಣದ ಜನ ಸಮೂಹದ ಪ್ರೀತಿ ವಿಶ್ವಾಸವನ್ನು ರೈ ಪಡೆದುಕೊಂಡಿದ್ದರು ಎಂದು ಪ್ರಕಾಶ್ ರೈ ಸ್ಮರಿಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+