ಮಂಡ್ಯದಲ್ಲಿ ರಾಜಕೀಯದ ದಿಕ್ಕು ಬದಲಿಸುತ್ತಿರುವ ಕೈ-ತೆನೆ ನಾಯಕರ ಕಚ್ಚಾಟ
Recommended Video
ಮಂಡ್ಯ, ಮೇ.14:ಲೋಕಸಭಾ ಚುನಾವಣೆಗೂ ಮೊದಲು, ಚುನಾವಣೆ ವೇಳೆ, ಚುನಾವಣಾ ನಂತರವೂ ಮಂಡ್ಯ ಜಿಲ್ಲೆಯು ರಾಜಕೀಯವಾಗಿ ಸುದ್ದಿಯಲ್ಲಿದೆ. ಇದಕ್ಕೆ ಇಲ್ಲಿ ನಡೆಯುತ್ತಿರುವ ಮೈತ್ರಿ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರವೇ ಕಾರಣವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸಿದಕ್ಕಿಂತ ಹೆಚ್ಚಾಗಿ ತಮ್ಮೊಳಗಿನ ಅಸಮಾಧಾನವನ್ನು, ಕಚ್ಚಾಟವನ್ನು ಹತ್ತಿಕ್ಕಲು ಪರದಾಡಿದ್ದೇ ಜಾಸ್ತಿ.
ಮಂಡ್ಯ ಚುನಾವಣೆ: ಐತಿಹಾಸಿಕ ದೇವಾಲಯದಲ್ಲಿ ಹೊರಬಿದ್ದ ಹೂವಿನ ಭವಿಷ್ಯ
ಇದೀಗ ಮೇಲ್ಮಟ್ಟದ ನಾಯಕರೇ ಹೇಳಿಕೆ ಪ್ರತಿ ಹೇಳಿಕೆ ನೀಡುತ್ತಾ ಕಾಲು ಕೆರೆದು ಜಗಳಕ್ಕಿಳಿದಿರುವುದನ್ನು ನೋಡಿದರೆ ಮೈತ್ರಿ ಸರ್ಕಾರ ಹೆಚ್ಚು ದಿನ ಬಾಳುತ್ತದೆ ಎಂಬ ನಿರೀಕ್ಷೆಯೇ ಇಲ್ಲವಾದಂತಾಗಿದೆ. ಮಂಡ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ನಡುವಿನ ಜಗಳ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಿದರೆ ಅಚ್ಚರಿ ಪಡಬೇಕಾಗಿಲ್ಲ.
ಇಲ್ಲಿ ಎರಡು ಪಕ್ಷಗಳ ಮುಖಂಡರು ತಮ್ಮ ನಾಲಿಗೆಯನ್ನು ಹರಿಯಬಿಡುತ್ತಿರುವುದನ್ನು ನೋಡಿದರೆ ರಾಜಕೀಯ ಸಂಘರ್ಷಗಳು ತಣ್ಣಗಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.ಜೊತೆಗೆ ಈ ಕೆಸರು ಎರಚಾಟಗಳು ವಿಧಾನಸೌಧದಲ್ಲಿ ಒಂದಾಗಿ ಸರ್ಕಾರ ರಚನೆ ಮಾಡಿದ ನಾಯಕರಿಗೆ ಮುಜುಗರ ತರುವಂತಾಗಿದೆ.
ಮಂಡ್ಯ ಫಲಿತಾಂಶ: ಮೂರು ಗುಪ್ತಚರ ಮಾಹಿತಿ ನಡುವಿನ ವ್ಯತ್ಯಾಸ ಏನು?
ಹಾಗೆ ನೋಡಿದರೆ ಮಂಡ್ಯ ಎನ್ನುವುದು ಜೆಡಿಎಸ್ನ ಭದ್ರಕೋಟೆ ಎಂಬುದು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಯಲಾಗಿತ್ತು. ಅದು ದೇವೇಗೌಡರ ಕುಟುಂಬದಲ್ಲಿ ಹೊಸ ಆಶಾಭಾವ ಮೂಡಿಸಿತ್ತಲ್ಲದೆ, ಮೊಮ್ಮಕ್ಕಳನ್ನು ರಾಜಕೀಯಕ್ಕೆ ತರಲು ಪ್ರೇರಣೆ ನೀಡಿತ್ತು.
ನಿಖಿಲ್ ಅಭ್ಯರ್ಥಿಯಾಗಿದ್ದಕ್ಕೆ ಅಸಮಾಧಾನ
ಹೇಗೂ ರಾಜ್ಯದಲ್ಲಿ ಮೈತ್ರಿ ಸರ್ಕಾರವಿರುವುದರಿಂದ ಮಂಡ್ಯದಲ್ಲಿ ಜೆಡಿಎಸ್ನಿಂದ ಯಾರೇ ಕಣಕ್ಕಿಳಿದರೂ ಸುಲಭವಾಗಿ ಗೆಲ್ಲಬಹುದು ಎಂಬುದಕ್ಕೆ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದ ಎಲ್.ಆರ್.ಶಿವರಾಮೇಗೌಡರು ಸಾಕ್ಷಿಯಾಗಿದ್ದರು. ಏಕೆಂದರೆ ಸದಾ ಸೋತು ಸುಣ್ಣವಾಗಿದ್ದ ಅವರು ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕದ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಇದರಿಂದಾಗಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದರೆ ಸುಲಭವಾಗಿ ಗೆಲುವು ಕಾಣಬಹುದು ಎಂದು ದೇವೇಗೌಡರ ಕುಟುಂಬದವರು ನಂಬಿದ್ದರು.
ಬಹುಶಃ ಜೆಡಿಎಸ್ನಿಂದ ಬೇರೆ ಯಾರೇ ನಿಂತಿದ್ದರೂ ಕಾಂಗ್ರೆಸ್ನ ಮುಖಂಡರು ಸಹಿಸಿಕೊಳ್ಳುತ್ತಿದ್ದರೇನೋ? ಆದರೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು.
ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ
ದೇವೇಗೌಡರ ಕುಟುಂಬ ರಾಜಕಾರಣದಿಂದ ಬೇಸತ್ತು ಹೊರಬಂದಿದ್ದ ಕಾಂಗ್ರೆಸ್ನ ಮುಖಂಡರಾದ ಚೆಲುವರಾಯಸ್ವಾಮಿ ಮತ್ತು ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದ್ದು ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಅವರು ತಟಸ್ಥವಾಗುವ ಮೂಲಕ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದರು. ಅಲ್ಲಿಂದ ಆರಂಭವಾದ ಚೆಲುವರಾಯಸ್ವಾಮಿ ಮತ್ತು ಜೆಡಿಎಸ್ ಮುಖಂಡರ ನಡುವಿನ ಅಸಮಾಧಾನ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಅದು ದಿನ ಕಳೆದಂತೆ ಹೊಸ ರೂಪವನ್ನು ಪಡೆಯುತ್ತಾ ಸಾಗುತ್ತಿದ್ದು, ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಾಗಿಲ್ಲ.
ಸುಮಲತಾ ಪರ ಚಲುವರಾಯಸ್ವಾಮಿ ಹಣ ಹಂಚಿದ್ದಾರೆ: ಸುರೇಶ್ ಗೌಡ
ಕಾಂಗ್ರೆಸ್ ಮುಖಂಡರ ಮೇಲಿನ ಆರೋಪ
ಕಳೆದ ಬಾರಿ ಕಾಂಗ್ರೆಸ್ನಿಂದ ವಿಧಾನ ಸಭೆಗೆ ಸ್ಪರ್ಧಿಸಿ ಸೋಲು ಕಂಡಿರುವ ಚೆಲುವರಾಯಸ್ವಾಮಿ ಕ್ಷೇತ್ರದಲ್ಲಿ ತಮ್ಮದೇ ಆದ ವರ್ಚಸ್ಸನ್ನು ಹೊಂದಿದ್ದು, ಅವರ ಮಾತನ್ನು ಕೇಳುವ ಕಾರ್ಯಕರ್ತರ ಪಡೆಯೇ ಇದೆ. ಅವರೆಲ್ಲರೂ ಸುಮಲತಾ ಪರ ಕೆಲಸ ಮಾಡಿದ್ದಾರೆ ಎಂಬುದೇ ಜೆಡಿಎಸ್ನ ಆರೋಪವಾಗಿದೆ. ಆ ಮೂಲಕ ಮೈತ್ರಿ ಧರ್ಮವನ್ನು ಮುರಿಯಲಾಗಿದೆ ಎಂಬ ಅಸಮಾಧಾನ ಹೊಗೆಯಾಡುತ್ತಿದೆ. ಇಷ್ಟಕ್ಕೂ ಚುನಾವಣೆ ನಂತರ ಜೆಡಿಎಸ್ ನಾಯಕರೇಕೆ ಮಂಡ್ಯದ ಕಾಂಗ್ರೆಸ್ ಮುಖಂಡರ ಮೇಲೆ ಮುಗಿ ಬೀಳುತ್ತಿದ್ದಾರೆ? ಆರೋಪಗಳ ಸುರಿಮಳೆಯನ್ನೇಕೆ ಸುರಿಸುತ್ತಿದ್ದಾರೆ? ಮೊದಲಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಮೇಲ್ನೋಟಕ್ಕೆ ಅದು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅವರ ಪುತ್ರನನ್ನು ಓಲೈಸಿಕೊಳ್ಳುವ ತಂತ್ರ ಎಂಬುದು ಸಾಬೀತಾಗುತ್ತಿದೆ.
ಇವರುಗಳ ಮೇಲೆ ಕೆಂಡಕಾರುವ ಸಾಧ್ಯತೆ
ಒಂದು ವೇಳೆ ಲೋಕಸಭಾ ಚುನಾವಣೆ ಫಲಿತಾಂಶ ಜೆಡಿಎಸ್ಗೆ ವ್ಯತಿರಿಕ್ತವಾದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಯ ಶಾಸಕರ ಮೇಲೆ ಕೆಂಡ ಕಾರುವ ಲಕ್ಷಣಗಳಿವೆ. ಮಗನ ಸೋಲಿಗೆ ಜಿಲ್ಲೆಯ ಶಾಸಕರು ಮತ್ತು ಮುಖಂಡರನ್ನು ಹೊಣೆ ಮಾಡುವ ಸಾಧ್ಯತೆಯಿದೆ. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಇರುವ ಸುಲಭೋಪಾಯವೆಂದರೆ ಕಾಂಗ್ರೆಸ್ ಮುಖಂಡರ ಮೇಲೆ ಈಗಿನಿಂದಲೇ ಗೂಬೆ ಕೂರಿಸಿ ಅವರ ಮೇಲೆ ಆರೋಪಗಳನ್ನು ಮಾಡಿದರೆ ಒಂದು ಏನಾದರೂ ಎಡವಟ್ಟಾದರೆ ಅದರಿಂದ ಜಾರಿಕೊಳ್ಳಲು ಸುಲಭವಾಗಲಿದೆ. ಈಗಾಗಲೇ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಶಾಸಕರಾದ ಸುರೇಶ್ಗೌಡ, ಡಾ. ಕೆ. ಅನ್ನದಾನಿ, ಸಚಿವ ಪುಟ್ಟರಾಜು ಮೊದಲಾದವರು ಮುಗಿ ಬಿದ್ದು ಆರೋಪ ಮಾಡುತ್ತಿದ್ದರೆ ಅದಕ್ಕೆ ಖಡಕ್ಕಾಗಿಯೇ ಚೆಲುವರಾಯಸ್ವಾಮಿ ಉತ್ತರ ನೀಡಿದ್ದಾರೆ.
ತಿರುಗೇಟು ನೀಡಿದ ಚಲುವರಾಯಸ್ವಾಮಿ ಬೆಂಬಲಿಗರು
ಜೆಡಿಎಸ್ ಶಾಸಕ ಕೆ.ಸುರೇಶ್ಗೌಡ ಅವರು ನಿಖಿಲ್ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡುವ ಭರದಲ್ಲಿ ತನ್ನ ರಾಜಕೀಯ ಎದುರಾಳಿ ಎನ್. ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರೆ, ಅದಕ್ಕೆ ಪ್ರತಿಯಾಗಿ ಚಲುವರಾಯಸ್ವಾಮಿ ಬೆಂಬಲಿಗರು ತಾವು ಬಹಿರಂಗವಾಗಿಯೇ ಸುಮಲತಾ ಪರ ಚುನಾವಣೆ ನಡೆಸಿದ್ದಾಗಿ ಒಪ್ಪಿಕೊಳ್ಳುತ್ತಾ, ಓರ್ವ ಮಹಿಳಾ ಅಭ್ಯರ್ಥಿಯನ್ನು ಸೋಲಿಸಲು ಆಡಳಿತಾರೂಢ ಸರ್ಕಾರವೇ ಬಂದು ಕುಳಿತದ್ದು ವೀರರು ಮಾಡುವ ಕೆಲಸವೇ ಎಂದು ಸುರೇಶ್ಗೌಡರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇನ್ನು ಸಚಿವರಾದ ಸಿ.ಎಸ್. ಪುಟ್ಟರಾಜು ಅವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ, ಒಂದು ವೇಳೆ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿಯನ್ನು ಘೋಷಿಸುವುದಾಗಿ ಸವಾಲು ಹಾಕಿದ್ದರು.