ನಿಷ್ಠ ಕಾರ್ಯಕರ್ತರನ್ನೇ ಮರೆತ ಬಿಜೆಪಿಗೆ ಕಷ್ಟ ಕಾಲದಲ್ಲಿ ಆಗೋರ್ಯಾರು?
ಅಗ್ನಿಪರೀಕ್ಷೆಯ ಕಾಲ! ಕರ್ನಾಟಕ ಬಿಜೆಪಿ ಪಾಲಿಗೆ ಈ ಮಾತು ಚೆನ್ನಾಗಿ ಅನ್ವಯಿಸುತ್ತದೆ. ಮುಂದಿನ ಲೋಕಸಭಾ ಚುನಾವಣೆಗೆ ಮುಂಚೆ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪ್ರೋತ್ಸಾಹಿಸುವುದಕ್ಕೆ ಪಕ್ಷಕ್ಕೆ ಒಂದು ಅವಕಾಶ ಇದ್ದು, ಅದನ್ನು ಹೇಗೆ ಬಳಸುತ್ತದೆ ಎಂಬ ಬಗ್ಗೆ ಒಂದು ಕುತೂಹಲ ಇದೆ.
ಏನದು ಅವಕಾಶ? ಕಾರ್ಯಕರ್ತರನ್ನು ಉತ್ತೇಜಿಸುವ ಅಗತ್ಯ ಏನಿದೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಪಕ್ಷದೊಳಗಿನ ಇತ್ತೀಚೆಗಿನ ಬೆಳವಣಿಗೆ ಅಂಥದ್ದೊಂದು ಅಗತ್ಯವನ್ನು ಸೂಚಿಸುತ್ತಿದೆ. ಬಿಜೆಪಿ ಎಂಬ ಶಿಸ್ತಿನ ಪಕ್ಷದ ತಳ ಮಟ್ಟದ ಕಾರ್ಯಕರ್ತರ ಮನಸಿನ ಭಾವನೆಯನ್ನು ಇಷ್ಟಿಷ್ಟೇ ಕೆದಕಿದರೆ ಇದಕ್ಕೆ ಉತ್ತರ ಸಿಗುತ್ತಾ ಹೋಗುತ್ತದೆ.
ಪಕ್ಷದೊಳಗಿನ ಬೆಳವಣಿಗೆಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಹೊರಹಾಕುವ ಅಸಮಾಧಾನದ ಧ್ವನಿಯನ್ನೇ ಸಂಕಲ ಮಾಡಿ, ನಿಮ್ಮ ಮುಂದಿಡುವ ಪ್ರಯತ್ನವೇ ಈ ವರದಿ. ಅಂದಹಾಗೆ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನಿಂತು, ಗೆದ್ದಿರುವ ಮೂವರು ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಗಳಿಗೆ ಆಯ್ಕೆ ನಡೆಯಬೇಕಿದೆ.
ಕಾಂಗ್ರೆಸ್ ನಿಂದ ಡಾ.ಜಿ.ಪರಮೇಶ್ವರ್, ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ಹಾಗೂ ವಿ.ಸೋಮಣ್ಣ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈಗ ಇನ್ನೇನು ಎರಡೂ ಚಿಲ್ಲರೆ ವರ್ಷದ ಅವಧಿಗೆ ಬಿಜೆಪಿಯಿಂದ ಒಬ್ಬರನ್ನು ಮಾತ್ರ ವಿಧಾನಪರಿಷತ್ ಗೆ ಆರಿಸಿಕಳಿಸುವ ಅವಕಾಶ ಇದೆ.

ಹಣ- ಜಾತಿ ನೋಡದೆ ವಿಧಾನಪರಿಷತ್ ಸ್ಥಾನ ಕೊಡುತ್ತಾರಾ?
ಹಾಗೆ ಸಿಕ್ಕಿರುವ ಈ ಅವಕಾಶವನ್ನು ರಾಜ್ಯ ನಾಯಕರು ಹೇಗೆ ಬಳಸುತ್ತಾರೆ ಎಂಬುದು ಸದ್ಯದ ಕುತೂಹಲ. ತಮ್ಮಷ್ಟಕ್ಕೆ ಪಕ್ಷದ ಕೆಲಸ ಮಾಡುತ್ತಾ, ದಶಕಗಳ ಕಾಲ ಏನನ್ನೂ ನಿರೀಕ್ಷಿಸದ, ಉತ್ತಮ ಹೆಸರು ಉಳಿಸಿಕೊಂಡಂಥವರನ್ನು ಆರಿಸಿದರೆ ಆಗ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದಂತಾಗುತ್ತದೆ. ಏಕೆಂದರೆ, ಇತ್ತೀಚೆಗೆ ಬಿಜೆಪಿಯಲ್ಲಿ ಹಣ- ಜಾತಿ ವಶೀಲಿ ಬಾಜಿಗೆ ಹಾಕುತ್ತಿರುವ ಮಣೆ ನಿಷ್ಠಾವಂತ ಕಾರ್ಯಕರ್ತರಲ್ಲಿ ಭ್ರಮನಿರಸನ ಮೂಡಿಸಿದೆ. ಒಂದು ಕಾಲದಲ್ಲಿ ಕೇಸರಿ ಬಾವುಟ ನೆಟ್ಟು ಬರಲು ಸಹ ಜನರು ಸಿಗದೆ, ನಾಮ್ ಕೇ ವಾಸ್ಥೆ ಅಂತಾದರೂ ಒಬ್ಬರಿಂದ ನಾಮಪತ್ರ ಹಾಕಿಸುವಲ್ಲಿ ಸುಸ್ತಾಗಿಬಿಡುತ್ತಿದ್ದ ಕಮಲ ಪಕ್ಷದ ವರಿಷ್ಠರಿಗೆ, ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡುವುದಾದರೆ ಕೋಟಿಗಟ್ಟಲೆ ಪಾರ್ಟಿ ಫಂಡ್ ಕೊಡಲು ಸಿದ್ಧವಾಗುವ ಮಂದಿ ಇದ್ದಾರೆ.

ನಡೆದಾಡುವ ತಿಜೋರಿಗಳು, ಓಡಾಡುವ ಜ್ಯುವೆಲ್ಲರಿ ಶಾಪ್ ಗಳು
ಆದರೆ, ಬಿಜೆಪಿಯ ಶಕ್ತಿ ಹಾಗೂ ಭರವಸೆ ಏನಿತ್ತು ಅಂದರೆ, ಮೇಲ್ ಸ್ತರದಲ್ಲಿ- ಜವಾಬ್ದಾರಿಯುತ ಸ್ಥಾನದಲ್ಲಿ ಕೂತವರೆಲ್ಲ ಕಾರ್ಯಕರ್ತರಾಗಿಯೇ ತಮ್ಮ ಪ್ರಯಾಣ ಆರಂಭಿಸಿದವರು. ಕೆಲಸ ಮಾಡುತ್ತಾ, ಜವಾಬ್ದಾರಿಗಳಿಗೆ ಹೆಗಲು ಕೊಡುತ್ತಾ ಎತ್ತರಕ್ಕೆ ಏರಿದವರು. ಅಂಥವರನ್ನು ನೋಡುತ್ತಾ ತಳಮಟ್ಟದ ಕಾರ್ಯಕರ್ತರು ಪ್ರೋತ್ಸಾಹ ಸಿಕ್ಕು, ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆ ಪರಿಪಾಠ ಬದಲಾಗಿದೆ ಎಂದು ಪಕ್ಷದ ಹಿರಿಯರಲ್ಲೇ ಅಸಮಾಧಾನ ಇದೆ. ನಡೆದಾಡುವ ತಿಜೋರಿಗಳು, ಓಡಾಡುವ ಜ್ಯುವೆಲ್ಲರಿ ಶಾಪ್ ಗಳನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಂಡು, ಆ ತಕ್ಷಣವೇ ಪಕ್ಷದೊಳಗೇ ದೊಡ್ಡ ಹುದ್ದೆ ಮತ್ತು ವಿಧಾನಪರಿಷತ್ ಅಥವಾ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ, ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ರೂಢಿ ಬಂದುಹೋಗಿದೆ. ಇದರ ಜತೆಗೆ ಪ್ರಬಲ ಹಾಗೂ ಪ್ರಮುಖ ಜಾತಿಗಳ ಸ್ವಾಮೀಜಿಗಳ ಆಣತಿಯಂತೆ ಆಯ್ಕೆ, ನೇಮಕಾತಿಗಳಾಗುವ ಪರಿಸ್ಥಿತಿ ಬಂದಿದೆ.

ಬಿಜೆಪಿ ನಿಷ್ಠರಲ್ಲಿ ಅಸಮಾಧಾನದ ಹೊಗೆ
ವಿಧಾನಪರಿಷತ್ ಸದಸ್ಯ ಸ್ಥಾನಗಳು ಪಕ್ಷಕ್ಕಾಗಿ ದುಡಿದವರ ಪಾಲಿಗೆ ನೀಡುವ, ಆ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸವಂತೂ ದೂರದ ಮಾತಾಯಿತು ಎಂದು ದಶಕಗಳ ಕಾಲ ಪಕ್ಷಕ್ಕಾಗಿ ದುಡಿದವರು ತಮ್ಮ ಬೇಸರ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಬಹುತೇಕ ಪ್ರಮುಖ ಕಾರ್ಯಕರ್ತರು ಕೆ.ಪಿ.ನಂಜುಂಡಿ ಅವರ ಉದಾಹರಣೆಯನ್ನೇ ತೆಗೆದುಕೊಂಡು ಮಾತನಾಡುತ್ತಾರೆ. ಕಾಂಗ್ರೆಸ್ ನಲ್ಲಿ ಇದ್ದ ಅವರನ್ನು ಬಿಜೆಪಿಗೆ ಕರೆತಂದ ತಕ್ಷಣ ರಾಜ್ಯ ಉಪಾಧ್ಯಕ್ಷ ಹುದ್ದೆ, ಪಕ್ಷದಲ್ಲಿ ಒಳ್ಳೆ ಹುದ್ದೆ ಸಿಕ್ಕ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. ಇಂಥ ಬೆಳವಣಿಗೆಗಳು ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಹಾಗೂ ಬಿಜೆಪಿಗಾಗಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವವರಲ್ಲಿ ಒಂದು ರೀತಿಯ ಬೇಸರ ಮೂಡಿಸಿದೆ.

ಪೆಂಡಾಲ್-ಕುರ್ಚಿಗೆ ಹಣ ಕೊಡುವ ಮಂದಿಯಿಂದ ಪಕ್ಷ ಬೆಳೆಯುತ್ತಾ?
ಮುಂಬರುವ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ, ಅಮಿತ್ ಶಾ, ಯಡಿಯೂರಪ್ಪ ಆದಿಯಾಗಿ ಯಾರೇ ಪ್ರಚಾರಕ್ಕೆ ಇಳಿದರೂ ತಳಮಟ್ಟದ ಕಾರ್ಯಕರ್ತರು ಬೆವರು ಹರಿಸಿ ಶ್ರಮಿಸದಿದ್ದರೆ ಫಲಿತಾಂಶ ಏನು ಬರಲು ಸಾಧ್ಯ? ಆ ಕಾರಣಕ್ಕೆ ಕಾರ್ಯಕರ್ತರ ಪರವಾಗಿ ಉತ್ತಮ ಸ್ಥಾನ ಪಡೆದಂಥವರು ಅಂತ ಉದಾಹರಣೆಗೆ ಹೇಳಲಾದರೂ ಒಂದು ಆಯ್ಕೆ ಬೇಕಲ್ಲವೆ? ಪೆಂಡಾಲ್- ಕುರ್ಚಿಗಳು- ಮೈಕ್ ಮತ್ತೊಂದಕ್ಕೆ ಹಣ ಕೊಡುವ ಮಂದಿ ಸಿಗುವುದು ಕಷ್ಟವಲ್ಲ. ಆದರೆ ಅಶೋಕ್, ಅನಂತಕುಮಾರ್, ಯಡಿಯೂರಪ್ಪರಂಥ ನಾಯಕರು ಎದ್ದುಬಂದ ಅದೇ ಕಾರ್ಯಕರ್ತರ ಗುಂಪಿನಿಂದ ಇತ್ತೀಚೆಗೆ ಕರ್ನಾಟಕದಲ್ಲಿ ಯಾರಾದರೂ ಆಯ್ಕೆಯಾದ ಉದಾಹರಣೆಗಳಿವೆಯೇ? ಈಗ ವಿಧಾನಪರಿಷತ್ ಗೆ ಆಯ್ಕೆ ಮಾಡಬಹುದಾದ ಒಂದು ಸ್ಥಾನವನ್ನಾದರೂ ಅರ್ಹರು, ಪಕ್ಷಕ್ಕಾಗಿ ದುಡಿದವರು, ಸಿದ್ಧಾಂತದ ವಿಚಾರದಲ್ಲಿ ರಾಜೀ ಮಾಡಿಕೊಳ್ಳದವರನ್ನು ಕಮಲ ಪಕ್ಷ ವಿಧಾನ ಪರಿಷತ್ ಗೆ ಆರಿಸಿಕಳಿಸಿದರೆ ಲೋಕಸಭೆ ಚುನಾವಣೆ ಹೊತ್ತಿಗೆ ಬಿಜೆಪಿಯಲ್ಲಿ ಒಂದಿಷ್ಟು ಬದಲಾವಣೆ ಆಗಬಹುದೇನೋ!












Click it and Unblock the Notifications