ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಿನಾಲ್ಕು ವರ್ಷಗಳ ನಂತರ, 26/11 ಮುಂಬೈ ಭಯೋತ್ಪಾದಕ ದಾಳಿಯ ನೆನಪು

|
Google Oneindia Kannada News

ಮುಂಬೈ ನವೆಂಬರ್ 26: ಇದು ದೇಶದ ಆರ್ಥಿಕ ರಾಜಧಾನಿ. ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವವರು ಒಂದೆಡೆ ಆದರೆ ರಾತ್ರಿ ಕೆಲಸಕ್ಕೆ ಹೋಗುವವರು ಮತ್ತೊಂದೆಡೆ. ಸಂಜೆ ಊಟ, ಪಾರ್ಟಿ, ಭೇಟಿ ಅಂತ ಸುತ್ತಾಡುವ ಜನ ಜಂಗುಳಿ ಬೇರೆ ಹೆಚ್ಚು. ಹೀಗಾಗಿ ಈ ಪ್ರದೇಶದಲ್ಲಿ 24 ಗಂಟೆ ಜನ ಸಂದಣಿ ಇರುತ್ತದೆ.

ಹದಿನಾಲ್ಕು ವರ್ಷಗಳ ಹಿಂದೆ ಅದು ಹಗಲಿನಿಂದ ಇರುಳಿಗೆ ಜಾರುವ ಸಮಯ. ಆಗಷ್ಟೇ ವಾಹನಗಳ ಸದ್ದು ಹೆಚ್ಚಾಗಲು ಶುರುವಾಗಿತ್ತು. ಹೀಗೆ ಹಗಲಿನಿಂದ ಇರುಳಿನ ಕಡೆಗೆ ಮುಖ ಮಾಡುತ್ತಿದ್ದ ಜನ ನಿದ್ದೆಗೂ ಜಾರಿರಲಿಲ್ಲ. ಹೀಗೆ ಶಾಂತವಾಗಿದ್ದ ಪ್ರದೇಶದಲ್ಲಿ ಏಕಾಏಕಿ ಗುಂಡಿನ ಸದ್ದು ಮುಳಗಲು ಆರಂಭವಾದವು. ಯಾರಿಗೆ? ಏನು ಆಯ್ತು ಎನ್ನುವಷ್ಟರಲ್ಲಿ ಗುಂಡಿನ ಶಬ್ದ ಹೆಚ್ಚಾಗುತ್ತಾ ಹೋಯಿತು. ಅದೇನಾಯ್ತು ಎಂದು ನೋಡುವಷ್ಟರಲ್ಲಿ ಮುಂಬೈನ ಪ್ರಸಿದ್ಧ ತಾಜ್‌ ಹೋಟೆಲ್‌ ಸುತ್ತ ದಟ್ಟ ಹೊರೆ ಆವರಿಸಿತ್ತು. ಕಿಟಕಿ ಬಾಗಿಲುಗಳಿಂದ ಬೆಂಕಿಯ ಕೆನ್ನಾಲಿಗೆ ಆಕಾಶ ಮುಟ್ಟುವಂತೆ ಅರ್ಭಟಿಸುತ್ತಿತ್ತು. ತಕ್ಷಣ ಜನರ ಕೂಗು, ಅಳು, ನರಳಾಟ, ರೋದನೆಯ ಶಬ್ದ ಕಿವಿಗೆ ತಾಗ ತೊಡಗಿತು. ಇದು ನವೆಂಬರ್ 26, 2008ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿಯ ನೆನಪು.

ಹದಿನಾಲ್ಕು ವರ್ಷಗಳ ಹಿಂದೆ ಈ ದಿನ (ನವೆಂಬರ್ 26) ಹತ್ತು ಯುವಕರು ದೇಶದ ರಾಜಧಾನಿ ಮುಂಬೈಗೆ ನುಗ್ಗಿದರು. ಸತತ ಮೂರು ದಿನಗಳವರೆಗೆ ಮುಂಬೈ ನಗರವು ಭಯೋತ್ಪಾದನೆಯ ಹಿಡಿತದಲ್ಲಿ ಸಿಲುಕಿ ಹೋಗಿತ್ತು. ಆಸ್ಪತ್ರೆ, ರೈಲು ನಿಲ್ದಾಣ, ರೆಸ್ಟೋರೆಂಟ್, ಯಹೂದಿ ಕೇಂದ್ರ ಮತ್ತು ತಾಜ್ ಮಹಲ್ ಪ್ಯಾಲೇಸ್ ಸೇರಿದಂತೆ ಎರಡು ಐಷಾರಾಮಿ ಹೋಟೆಲ್‌ಗಳು ಉಗ್ರರ ದಾಳಿಗೆ ನಲುಗಿ ಹೋದವು. ಶಸ್ತ್ರಸಜ್ಜಿತ ಉಗ್ರಗಾಮಿಗಳು ಮುಂಬೈನ ಹತ್ತಾರು ಸ್ಥಳಗಳಲ್ಲಿ ದಾಳಿಯಿಂದ 166 ಜನರು ಪ್ರಾಣ ತೆತ್ತರು. 300 ಕ್ಕೂ ಹೆಚ್ಚು ಜನ ಗಾಯಗೊಂಡರು.

ನವೆಂಬರ್ 26, 2008ರ ಮುಂಬೈ ಭಯೋತ್ಪಾದಕ ದಾಳಿ

ನವೆಂಬರ್ 26, 2008ರ ಮುಂಬೈ ಭಯೋತ್ಪಾದಕ ದಾಳಿ

ನವೆಂಬರ್ 26 ರಿಂದ 60 ಗಂಟೆಗಳಿಗೂ ಹೆಚ್ಚು ಕಾಲ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ನಾಲ್ಕು ಭಾರಿ ಶಸ್ತ್ರಸಜ್ಜಿತ ಉಗ್ರರು ಮುತ್ತಿಗೆ ಹಾಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದರು. ಮಾತ್ರವಲ್ಲದೆ ಅಬ್ದುಲ್ ರೆಹಮಾನ್ ಬಡಾ ಮತ್ತು ಅಬು ಅಲಿ ಎಂಬ ಇಬ್ಬರು ಉಗ್ರರು ಟವರ್ ವಿಭಾಗದ ಮುಖ್ಯ ದ್ವಾರವನ್ನು ತಲುಪಿ ಹತ್ತಿರದ ಪೊಲೀಸ್ ಪೋಸ್ಟ್ ಮುಂದೆ ಆರ್‌ಡಿಎಕ್ಸ್ ಬಾಂಬ್ ಹಾಕಿದರು. ಎಕೆ 47ಗಳು, ಮದ್ದುಗುಂಡುಗಳು ಮತ್ತು ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾಗಿ ಬಂದಿದ್ದ ಭಯೋತ್ಪಾಕರು ಅಮಾಯಕರ ಮೇಲೆ ಗುಂಡು ಹಾರಿಸಿದರು.

ಇತರ ಇಬ್ಬರು ಭಯೋತ್ಪಾದಕರಾದ ಶೋಯಿಬ್ ಮತ್ತು ಉಮರ್ ಅವರು ಅರಮನೆಯ ಲಾ-ಪಾಟ್ ಬಾಗಿಲಿನಿಂದ ಪ್ರವೇಶಿಸಿ ಪೂಲ್‌ಸೈಡ್ ಪ್ರದೇಶದಲ್ಲಿ ಅತಿಥಿಗಳ ಮೇಲೆ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಪೂಲ್‌ಸೈಡ್‌ನಲ್ಲಿ, ಭದ್ರತಾ ಸಿಬ್ಬಂದಿ ರವೀಂದ್ರ ಕುಮಾರ್ ಮತ್ತು ಅವರ ನಾಯಿ ಲ್ಯಾಬ್ರಡಾರ್ ರಿಟ್ರೈವರ್‌ನೊಂದಿಗೆ ಭಯೋತ್ಪಾದಕರು ಮೊದಲು ಹೊಡೆದುರುಳಿಸಿದ ನಾಲ್ವರು ವಿದೇಶಿಯರಾಗಿದ್ದರು.

ಮುಂಬೈ ದಾಳಿ: 166 ಜನ ಸಾವು

ಮುಂಬೈ ದಾಳಿ: 166 ಜನ ಸಾವು

ಹಿಂಸಾಚಾರದಲ್ಲಿ ವಿದೇಶಿಗರು ಸೇರಿದಂತೆ 166 ಜನರು ಸಾವನ್ನಪ್ಪಿದ್ದಾರೆ. ಎನ್ ಕೌಂಟರ್ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಬಂದೂಕುಧಾರಿಗಳು ಸಾವನ್ನಪ್ಪಿದ್ದರೆ, ಒಬ್ಬರು ಬದುಕುಳಿದಿದ್ದಾರೆ. ನವೆಂಬರ್ 26 ಆ ಕರಾಳ ರಾತ್ರಿಯ ದಿನಗಳನ್ನ ನೆನಪು ಮಾಡುತ್ತದೆ.

ಆ ದಿನ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ತಾಜ್‌ ಹೋಟೆಲ್‌ ಮೇಲೆ ಬಾಂಬ್ ಹಾಕಲಾಯಿತು. ಕಟ್ಟಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತು. ಮುಂಬೈ ಪೊಲೀಸರು ತಾಜ್ ಹೋಟೆಲ್ ಅನ್ನು ಸುತ್ತುವರೆದರು. ಈ ವೇಳೆಗೆ ಹೋಟೆಲ್‌ನ ಒಳಗಿದ್ದ ಅನೇಕ ಅತಿಥಿಗಳನ್ನು ಸಿಬ್ಬಂದಿಗಳು ಚಿಕ್ಕ ಕೋಣೆಗಳಲ್ಲಿ ಕೂಡಿ ಹಾಕಿದ್ದರು. ಸೇನೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ನಂತರ ಮೊದಲ ಸುತ್ತಿನ ತೆರವು ಮಾಡಲಾಯಿತು.

ಈ ವೇಳೆ ತುರ್ತಾಗಿ ಎರಡು ಗುಂಪುಗಳ ಕಮಾಂಡೋಗಳನ್ನು ರಚಿಸಲಾಯಿತು. ಮೊದಲ ಗುಂಪು ರಕ್ಷಣಾ ಕಾರ್ಯದಲ್ಲಿ ತೊಡಗಿದರೆ. ಎರಡನೆ ಗುಂಪು ಉಗ್ರರ ಸದೆಬಡೆಯಲು ಮುಂದಾಗಿತ್ತು. ಈ ವೇಳೆ ತಾಜ್‌ನಲ್ಲಿ ತಂದೂರ್ ಬಾಣಸಿಗ ಎಂದು ಗುರುತಿಸಲ್ಪಟ್ಟ ಗೌತಮ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ನ.29ರಂದು ಉಗ್ರರನ್ನು ಸದೆಬಡೆದ ಸೇನೆ

ನ.29ರಂದು ಉಗ್ರರನ್ನು ಸದೆಬಡೆದ ಸೇನೆ

200 ಕಮಾಂಡೋಗಳ ತಂಡ ಮರುದಿನ (ನವೆಂಬರ್ 27) ನವದೆಹಲಿಯಿಂದ ಮುಂಬೈ ತಲುಪಿತು. ತಾಜ್ ಮತ್ತು ಒಬೆರಾಯ್ (ದಾಳಿಗೊಳಗಾದ ಮತ್ತೊಂದು ಹೋಟೆಲ್) ನಲ್ಲಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿತು. ಕಟ್ಟಡವನ್ನು ಮುತ್ತಿಗೆ ಹಾಕಲು ಸರ್ಕಾರ ಆದೇಶ ನೀಡಿತು. ಈ ವೇಳೆ ನಡೆದಿದ್ದು ಭಯಾನಕ ಯುದ್ಧ ಮತ್ತು ಸರಣಿ ಸ್ಫೋಟಗಳು ಸಂಭವಿಸಿದವು. ಈ ಹಿಂದೆ ಕಾಣದ ದಾಳಿ ತಾಜ್‌ ಹೋಟೆಲ್‌ನಲ್ಲಿ ನಡೆದೇ ಹೋಯಿತು. ಎದುರಾಳಿಗಳ ಗುಂಡಿನ ದಾಳಿಗೆ ಸಾಮಾನ್ಯ ಜನರ ಗುಂಡಿಗೆ ನಿಂತಂತಾಗಿತ್ತು. ಹೋಟೆಲ್‌ನಲ್ಲಿರುವ ಬಹುತೇಕ ಜನರು ತಾವು ಬದುಕುಳಿಯುವ ಭರವಸೆಯನ್ನೇ ಕಳೆದುಕೊಂಡು ಬಿಟ್ಟಿದ್ದರು. ಈ ವೇಳೆ ಭಾರತೀಯ ಸೇನೆ ಹಲವಾರು ಜನರನ್ನು ರಕ್ಷಣೆ ಮಾಡಿತು.

ನವೆಂಬರ್ 29 ರಂದು ಭಾರತೀಯ ಕಮಾಂಡೋಗಳು ತಾಜ್ ಅನ್ನು ಎಲ್ಲಾ ಉಗ್ರಗಾಮಿಗಳಿಂದ ತೆರವುಗೊಳಿಸಲಾಗಿದೆ ಎಂದು ಘೋಷಿಸಿದರು.

ದಾಳಿಯ ಆಡಿಯೋ ಕ್ಲಿಪ್

ದಾಳಿಯ ಆಡಿಯೋ ಕ್ಲಿಪ್

ದಾಳಿಯ ಯೋಜಕರಲ್ಲಿ ಒಬ್ಬನಾದ ಸಾಜಿದ್ ಮಿರ್‌ನ ಆಡಿಯೋ ಕ್ಲಿಪ್ ಅನ್ನು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಪ್ಲೇ ಮಾಡಿದ್ದರು. ಆಡಿಯೋ ಕ್ಲಿಪ್‌ನಲ್ಲಿ, ನಾರಿಮನ್ ಹೌಸ್‌ನಲ್ಲಿ ಗುಂಡು ಹಾರಿಸುವಂತೆ ಅವರು ಭಯೋತ್ಪಾದಕರಿಗೆ ನಿರ್ದೇಶಿಸುತ್ತಿರುವುದನ್ನು ಕೇಳಬಹುದು.

ಈ ವರ್ಷದ ಅಕ್ಟೋಬರ್‌ನಲ್ಲಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರು ಮುಂಬೈನಲ್ಲಿ ನಡೆದ ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಸಮಾವೇಶದಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಯ ಯೋಜಕರನ್ನು ಜಾಗತಿಕ ಭಯೋತ್ಪಾದಕರು ಎಂದು ಪಟ್ಟಿ ಮಾಡುವ ವಿಷಯವನ್ನು ಪ್ರಸ್ತಾಪಿಸಿದರು. 2008 ರ ಭಯೋತ್ಪಾದಕ ದಾಳಿಯ ತಾಣಗಳಲ್ಲಿ ಒಂದಾದ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಎಲ್ಲಾ 15 ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸದಸ್ಯರ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇದು ಮುಂಬೈ ಭಯೋತ್ಪಾದಕ ದಾಳಿಯ ಕರಾಳ ದಿನಗಳ ನೆನಪು. ಮರೆತು ಮರೆಯಾಗದ ದಿನಗಳು.

English summary
Mumbai 26/11 Terror Attacks 14th Anniversary : Remembering the horrors of the 26/11 Mumbai terror attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X