ಕೇರಳದಲ್ಲಿ ಮಳೆ; ಮರುಜೀವ ಪಡೆದ ಬಂಡೀಪುರದ ಮೂಲೆಹೊಳೆ
ಚಾಮರಾಜನಗರ, ಜುಲೈ 27: ಕಳೆದ ಎರಡು ವರ್ಷಗಳಿಂದ ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಂಡೀಪುರದ ನಡುವೆ ಹರಿಯುವ ಮೂಲೆಹೊಳೆಗೆ ಜೀವ ಕಳೆ ಬಂದಿದೆ. ಕೆಮ್ಮಣ್ಣು ಬಣ್ಣವನ್ನು ತುಂಬಿಕೊಂಡು ವಿಶಾಲವಾಗಿ ಹರಿಯುತ್ತಿದೆ.
Recommended Video
ಮಳೆಯಿಂದ ಬಂಡೀಪುರ ಹಚ್ಚಹಸಿರಿನೊಂದಿಗೆ ಕಂಗೊಳಿಸುತ್ತಿದ್ದರೆ, ಅದರ ನಡುವೆ ಜೀವಸೆಲೆಯಾಗಿರುವ ಮೂಲೆಹೊಳೆಯೂ ಜುಳುಜುಳು ಗುಟ್ಟುತ್ತಾ ಹರಿಯುತ್ತಿರುವುದು ವನ್ಯಪ್ರಾಣಿಗಳಿಗೆ ಹುಮ್ಮಸ್ಸು ತಂದಿದೆ. ಸಾಮಾನ್ಯವಾಗಿ ಈ ಹೊಳೆಯೇ ಇಲ್ಲಿನ ವನ್ಯಪ್ರಾಣಿಗಳಿಗೆ ಜೀವಜಲ ನೀಡುತ್ತದೆ. ಇಂತಹ ಹೊಳೆ ಎರಡು ವರ್ಷಗಳ ಹಿಂದೆ ಬತ್ತಿಹೋಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಜೀವ ಕಳೆ ಪಡೆದುಕೊಂಡಿದೆ.
ಕೇರಳದಲ್ಲಿ ಹುಟ್ಟಿ ಹರಿಯುತ್ತದೆ
ಮೂಲೆಹೊಳೆ ಕೇರಳ ರಾಜ್ಯದ ಮೂಲಕ ಕರ್ನಾಟಕ ಗಡಿಭಾಗದ ಮಾರ್ಗವಾಗಿ ಕಬಿನಿ ಜಲಾಶಯಕ್ಕೆ ಸೇರ್ಪಡೆಯಾಗುತ್ತಿದ್ದು, ಹರಿಯುವ ಮಾರ್ಗದಲ್ಲಿ ಹಲವು ರೀತಿ ಆಸರೆಯಾಗಿದೆ. ಕೇರಳದಲ್ಲಿ ಉತ್ತಮ ಮಳೆಯಾಗಿ ಅಂತರ್ಜಲ ಹೆಚ್ಚಳವಾಗಿ ಜಲಹುಟ್ಟಿದರೆ ನೀರು ಬೇಸಿಗೆಯಲ್ಲೂ ಬತ್ತದೆ ಹರಿಯುತ್ತದೆ.
ಬಂಡೀಪುರದಲ್ಲಿ ಮನುಷ್ಯರ ಸುಳಿವಿಲ್ಲದೇ ಕಾಡುಪ್ರಾಣಿಗಳ ಸ್ವಚ್ಛಂದ ವಿಹಾರ
ಹಲವು ಗ್ರಾಮಗಳಿಗೆ ಜೀವಸೆಲೆ
ಬಂಡೀಪುರ ಅರಣ್ಯಕ್ಕಾಗಿ ಹರಿಯುವ ಮೂಲೆ ಹೊಳೆಯನ್ನೇ ನಂಬಿ ಕಾಡಂಚಿನ ಗ್ರಾಮಗಳಾದ ಮದ್ದೂರು, ಮೂಲೆಹೊಳೆ ಗಿರಿಜನ ಕಾಲೋನಿಯ ಜನತೆಯಿದ್ದಾರೆ. ಅವರು ಇದೇ ಹೊಳೆಯ ನೀರನ್ನು ಬಳಸುತ್ತಾರೆ. ಮೂಲೆಹೊಳೆಯಲ್ಲಿ ನೀರು ಕಡಿಮೆಯಾದರೆ ಎಷ್ಟೊಂದು ಸಮಸ್ಯೆಯಾಗುತ್ತದೆ ಎಂಬುದು ಈ ಹಿಂದೆಯೇ ಅನುಭವಕ್ಕೆ ಬಂದಿದೆ. ನೀರು ಬತ್ತಿದ್ದರಿಂದ ವನ್ಯಪ್ರಾಣಿಗಳು ನೀರು ಹುಡುಕಿಕೊಂಡು ಹೋಗಿದ್ದವು. ಬೇಸಿಗೆ ಸಮಯದಲ್ಲಿ ವೈನಾಡು ವ್ಯಾಪ್ತಿಯಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ಕಟ್ಟಿ ನೀರನ್ನು ಕೃಷಿಗೆ ಬಳಸಿಕೊಳ್ಳುವುದರಿಂದ ಹೊಳೆಯಲ್ಲಿ ನೀರು ಹರಿಯುವುದು ಕಡಿಮೆಯಾಗಿ ಸಮಸ್ಯೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಆ ಸಮಸ್ಯೆ ಎದುರಾಗದ ಕಾರಣ ಪ್ರಾಣಿ ಪಕ್ಷಿಗಳು ಖುಷಿಯಾಗಿವೆ.
ಕೆರೆಗಳಿಗೂ ನೀರು ಹರಿದು ಬರುತ್ತಿದೆ
ಮಳೆಗಾಲ ಪ್ರಾರಂಭವಾದ ನಂತರ ಮೂಲೆಹೊಳೆ ವಲಯದಲ್ಲಿರುವ ಸುಮಾರು 32 ಕೆರೆಗಳಿಗೂ ನೀರು ಹರಿದುಬರುತ್ತಿದೆ. ಇದರಿಂದ ಮುಂದಿನ ವರ್ಷದ ಬೇಸಿಗೆಯಲ್ಲಿ ನೀರಿಗೆ ಯಾವುದೇ ಸಮಸ್ಯೆಯಾಗದು ಎಂಬ ಅಂದಾಜಿದೆ. ನದಿ ಹರಿಯುವ ಪ್ರದೇಶಗಳಾದ ಬಂಡೀಪುರ ಅರಣ್ಯದ ಮದ್ದೂರಿನಿಂದ ಮೂಲೆಹೊಳೆ ದಾಟುವವರೆಗೆ ಆನೆಗಳ ಹಿಂಡು, ಜಿಂಕೆಗಳ ಗುಂಪು ಹಾಗೂ ಕಾಡುಕೋಣಗಳು ಕಾಣಸಿಗುತ್ತಿವೆ.
ಬಂಡೀಪುರದ ಖಾಲಿ ಕೆರೆಗಳಿಗೆ ಸೋಲಾರ್ ಮೋಟಾರ್ ನೀರು!
ನಿಸರ್ಗದಲ್ಲಿ ಚೈತನ್ಯ ಮೂಡಿಸಿದ ಹೊಳೆ
ಬಂಡೀಪುರ ಅಭಯಾರಣ್ಯ ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ಹೊಂದಿಕೊಂಡಂತಿದ್ದು, ದೇಶದಲ್ಲಿ ಅತಿ ಹೆಚ್ಚು ಹುಲಿಗಳು (150) ಇಲ್ಲಿವೆ ಎನ್ನಲಾಗಿದೆ. ಇದರ ಜೊತೆಗೆ ಹಲವು ಜಾತಿಯ ಪ್ರಾಣಿಗಳು ಆಶ್ರಯ ಪಡೆದಿವೆ. ಬೇಸಿಗೆಯಲ್ಲಿ ನೀರಿಲ್ಲದೆ ಕಾಣುತ್ತಿದ್ದ ಕಲ್ಲುಬಂಡೆಗಳು ಈಗ ನೀರಿನಲ್ಲಿ ಮುಳುಗಿವೆ. ಒಟ್ಟಾರೆಯಾಗಿ ಮೂಲೆಹೊಳೆ ತುಂಬಿ ಹರಿಯುತ್ತಿರುವುದರಿಂದ ನಿಸರ್ಗದಲ್ಲಿ ಹೊಸ ಚೈತನ್ಯ ಮೂಡಿದೆ.