ಚಂದ್ರನ ಮೇಲೆ ಮನುಷ್ಯನ ಮೊದಲ ಪಾದ ಸ್ಪರ್ಶ, ಐತಿಹಾಸಿಕ ಘಳಿಗೆ
ಚಂದ್ರನ ಮೇಲೆ ಮನುಷ್ಯ ಕಾಲಿಟ್ಟು 53 ವರ್ಷಗಳಾಯ್ತು. 1969, ಜುಲೈ 20 ಮನುಕುಲಕ್ಕೆ ಐತಿಹಾಸಿಕ ದಿನ. ಇಬ್ಬರು ಗಗನಯಾತ್ರಿಗಳು ಚಂದ್ರನ ನೆಲದ ಮೇಲೆ ಪಾದಸ್ಪರ್ಶಿಸಿದ್ದರು. ಜುಲೈ 20 ಅನ್ನು ಅಂತಾರಾಷ್ಟ್ರೀಯ ಚಂದ್ರ ದಿನ ಎಂದು ಕರೆಯಲಾಗುತ್ತದೆ. ಅಮೆರಿಕದ ನಾಸಾ ಸಂಸ್ಥೆ ನಿನ್ನೆ ಬುಧವಾರ ಕೆಲ ಸರಣಿ ಟ್ವೀಟ್ಗಳನ್ನು ಮಾಡಿ ಈ ದಿನವನ್ನು ಮೆಲುಕು ಹಾಕಿದೆ.
ಇಂದು, ಜುಲೈ 21ರಂದು ಗಗನಯಾತ್ರಿಗಳು ಚಂದ್ರನಿಂದ ಭೂಮಿಗೆ ವಾಪಸ್ ಹೊರಟ ದಿನ. ಕುತೂಹಲವೆಂದರೆ ಇದೂವರೆಗೆ 6 ಬಾರಿ ಮನುಷ್ಯರು ಚಂದ್ರನ ಮೇಲೆ ಕಾಲಿಟ್ಟಿದ್ದಾರೆ. 12 ವ್ಯಕ್ತಿಗಳಿಗೆ ಈ ಸಾಧನೆಯ ಗರಿಮೆ ಸಿಕ್ಕಿದೆ. ಇನ್ನೂ ಕುತೂಹಲವಂದರೆ 1972ರ ನಂತರ ಮನುಷ್ಯ ಮತ್ಯಾವ ಆಕಾಶಕಾಯದ ಮೇಲೂ ಕಾಲಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಮಂಗಳ ಗ್ರಹದಲ್ಲಿ ವಸಾಹತು ನಿರ್ಮಿಸುವ ಕನಸು ಕಾಣುತ್ತಿದ್ದೇವೆ.
ಚಂದ್ರನ ಮೇಲೆ ಆರು ಬಾರಿ ಮನುಷ್ಯರು ಕಾಲಿಟ್ಟಿದ್ದಾರೆಂದು ಹೇಳಲಿಲ್ಲವೇ. ಅದೆಲ್ಲವೂ 1969ರಿಂದ 1972ರ ಅವಧಿಯಲ್ಲಿ ಆಗಿದ್ದು. ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರು. ನೀಲ್ ಆರ್ಮ್ಸ್ಟ್ರಾಂಗ್ ಹೆಸರು ಇನ್ನೂ ದಟ್ಟಕ್ಷರದಲ್ಲಿ ಇತಿಹಾಸ ಪುಟದಲ್ಲಿ ಮೂಡಿದೆ.
ಚಂದ್ರನ ಮೇಲೆ ಮನುಷ್ಯ ಕಾಲಿಡುವ ಪ್ರಯತ್ನ ಶುರುವಾಗಿದ್ದು ವಿಶ್ವ ಮಹಾಯುದ್ಧದ ಪರಿಣಾಮವಾಗಿ ಎಂದರೆ ನಿಮಗೆ ಅಚ್ಚರಿ ಆಗಬಹುದು. ಅಮೆರಿಕ ಮತ್ತು ರಷ್ಯಾ ನಡುವಿನ ಘನಘೋರ, ರಣರೋಚಕ ಶೀತಲ ಸಮರದ ಫಲ ಇದು. ಅಧಿಕಾರ, ಪ್ರತಿಷ್ಠೆ, ಪೈಪೋಟಿ ಎಲ್ಲವೂ ಮನುಷ್ಯನ ಚಂದ್ರಯಾನದ ಹಿಂದಿನ ಶಕ್ತಿಗಳಾಗಿ ಕೆಲಸ ಮಾಡಿವೆ. ಹಾಗೆಯೇ, ಚಂದ್ರನ ಮೇಲೆ ಮಾನವ ಕಾಲಿಟ್ಟೇ ಇಲ್ಲ, ಅದೆಲ್ಲಾ ಸುಳ್ಳು ಎನ್ನುವಂತಹ ಕಾನ್ಸ್ಪಿರೆಸಿ ಥಿಯರಿಗಳೂ ಇವೆ. ಇವೆಲ್ಲದರ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

ಯೂರಿ ಗಗಾರಿನ್ ಮಾಡಿದ ಸಾಧನೆ ಏನು?
ನೀವು ಯೂರಿ ಗಗಾರಿನ್ ಹೆಸರು ಕೇಳಿದ್ದಿರಬಹುದು. ರಷ್ಯಾದ ಗಗನಯಾತ್ರಿ. ಇವರು ಗಗನಯಾತ್ರೆ ಕೈಗೊಂಡ ಮೊದಲ ಮಾನವ. 1961, ಏಪ್ರಿಲ್ 12ರಂದು ಇವರು ಆ ಸಾಧನೆ ಮಾಡಿದ್ದರು. ಚಂದ್ರನ ಮೇಲೆ ಮನುಷ್ಯ ಕಾಲಿಡಲು 8 ವರ್ಷ ಮುನ್ನವೇ ಯೂರಿ ಗಗಾರಿನ್ ಗಗನಯಾತ್ರೆ ಮಾಡಿದ್ದರು.
ನೆನಪಿರಲಿ, ಯೂರಿ ಗಗಾರಿನ್ ಅವರು ರಷ್ಯಾ ನಿರ್ಮಿತ ವೋಸ್ಟೋಕ್ 1 ಸ್ಪೇಸ್ ಕ್ಯಾಪ್ಸೂಲ್ (ಸಣ್ಣ ಗಗನನೌಕೆ) ಮೂಲಕ ಭೂಮಿಯನ್ನು ಒಂದು ಸುತ್ತು ಪ್ರದಕ್ಷಿಣೆ ಬಂದಿದ್ದರು. ಆದರೆ ಯಾವ ಗ್ರಹ ಅಥವಾ ಉಪಗ್ರಹದ ಮೇಲೆ ಇವರು ಕಾಲಿಟ್ಟಿದ್ದಲ್ಲ. ಆ ಸಾಧನೆ ಮಾಡಿದ್ದು ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಎಂಬಿಬ್ಬರು ಅಮೆರಿಕನ್ ಗಗನಯಾತ್ರಿಗಳು.
|
ಸ್ಪೇಸ್ ರೇಸ್
ಇಪ್ಪತ್ತನೇ ಶತಮಾನದಲ್ಲಿ ರಾಷ್ಟ್ರ ರಾಷ್ಟ್ರಗಳ ನಡುವೆ ಪ್ರಚಂಡ ಯುದ್ಧಗಳೇ ಆದವು. ಅಮೆರಿಕ, ಬ್ರಿಟನ್, ರಷ್ಯಾ, ಜರ್ಮನಿ ದೇಶಗಳು ವಿಶ್ವದ ಪಾರಮ್ಯಕ್ಕಾಗಿ ಪೈಪೋಟಿಗೆ ಬಿದ್ದಿದ್ದವು. ಎರಡು ವಿಶ್ವ ಮಹಾಯುದ್ಧಗಳೇ ನಡೆದು ಸಾಕಷ್ಟು ಅನಾಹುತ ಸೃಷ್ಟಿಸಿದ್ದವು. ಮನುಷ್ಯನ ಯುದ್ಧ ಹಪಾಹಪಿಯ ಪರಿಣಾಮ ಘನಘೋರವಾಗಿರುತ್ತದೆ ಎಂಬುದು ಜಪಾನ್ ಮೇಲೆ ಬಿದ್ದ ಅಣು ಬಾಂಬ್ಗಳೇ ಸಾಕ್ಷಿಗಳಾದವು.
ಎರಡನೇ ಮಹಾಯುದ್ಧದ ಬಳಿಕ ಮತ್ಯಾವುದೇ ದೊಡ್ಡ ಯುದ್ಧ ಸಂಭವಿಸಿದೇ ಹೋದರೂ ಸೋವಿಯತ್ ರಷ್ಯಾ ಮತ್ತು ಅಮೆರಿಕ ಎಂಬೆರಡು ದೇಶಗಳು ಸೂಪರ್ ಪವರ್ ಆಗಿ ಭೂಮಿಯ ಎರಡು ಶಕ್ತಿಕೇಂದ್ರಗಳೆನಿಸಿದವು. ಅಷ್ಟರಲ್ಲಿ ಯುದ್ಧದ ದೆಸೆಯಿಂದಾಗಿ ಮನುಷ್ಯ ಅಣು ಬಾಂಬ್ ತಂತ್ರಜ್ಞಾನದ ಜೊತೆಗೆ ಕ್ಷಿಪಣಿ ತಂತ್ರಜ್ಞಾನವನ್ನೂ ಸಿದ್ಧಿಸಿಕೊಂಡಿದ್ದ. ಅದರಲ್ಲೂ ಅಣು ಬಾಂಬ್ಗಳನ್ನು ಹೊತ್ತೊಯ್ಯಬಲ್ಲ ಬ್ಯಾಲಿಸ್ಟಿಕ್ ಮಿಸೈಲ್ ಎಂಬುದು ಅಮೆರಿಕ ಮತ್ತು ರಷ್ಯಾ ನಡುವೆ ಪ್ರತಿಷ್ಠೆಯ ಅಸ್ತ್ರವಾಗಿತ್ತು. ತಮ್ಮ ಭದ್ರತೆಗೂ ಇದು ಅಗತ್ಯವಾಗಿತ್ತು.
ಈ ವಿನೂತನ ಕ್ಷಿಪಣಿ ತಂತ್ರಜ್ಞಾನವನ್ನೇ ಅಭಿವೃದ್ಧಿಪಡಿಸಿ ಕೃತಕ ಉಪಗ್ರಹಗಳ ನಿರ್ಮಾಣಗಳಾದವು. ದೂರ ಗಗನದಲ್ಲಿ ಸಂಚಾರಗಳಾದವು. ಚಂದ್ರ, ಮಂಗಳ, ಶುಕ್ರ ಇತ್ಯಾದಿ ಗ್ರಹಗಳಿಗೆ ನೌಕೆಗಳನ್ನು ಕಳುಹಿಸುವ ನಿಟ್ಟಿನಲ್ಲಿ ಪ್ರಯತ್ನಗಳಾದವು. ಈ ಕಾರ್ಯಗಳಲ್ಲಿ ಪೈಪೋಟಿಗೆ ಬಿದ್ದದ್ದು ಅಮೆರಿಕ ಮತ್ತು ರಷ್ಯಾ. ಒಂದಕ್ಕಿಂತ ಒಂದು ಬಲಶಾಲಿ ಎಂಬುದನ್ನು ಸಾಬೀತು ಮಾಡುವ ಹಠಕ್ಕೆ ಬಿದ್ದವು.
|
ಗಗನಯಾತ್ರೆಯ ಪೈಪೋಟಿ ಶುರುವಾಗಿದ್ದು ಹೀಗೆ
1955 ಜುಲೈ 30ರಂದು ಅಮೆರಿಕ ತಾನು ಕೃತಕ ಸೆಟಿಲೈಟ್ಗಳನ್ನು ಹಾರಿಸುವುದಾಗಿ ಘೋಷಣೆ ಮಾಡಿತು. ರಷ್ಯಾ ಸುಮ್ಮನಿರಲು ಸಾಧ್ಯವಿರಲಿಲ್ಲ. ನಾಲ್ಕೇ ದಿನದಲ್ಲಿ ಅದು ತಾನೂ ಕೂಡ ಅತಿಶೀಘ್ರದಲ್ಲೇ ಉಪಗ್ರಹ ಉಡಾವಣೆ ಮಾಡುವುದಾಗಿ ತಿಳಿಸಿತು. ಆಗ ಎರಡೂ ದೇಶಗಳು ತಮಗೆ ಅಲ್ಲಿಯವರೆಗೆ ಗೊತ್ತಿದ್ದ ಕ್ಷಿಪಣಿ ತಂತ್ರಜ್ಞಾನದ ಸಹಾಯದಿಂದ ಉಪಗ್ರಹ ಇತ್ಯಾದಿಯ ನಿರ್ಮಾಣ ಮಾಡತೊಡಗಿದವು.
ಈ ಪೈಪೋಟಿಯಲ್ಲಿ ಮೊದಲು ಗೆದ್ದದ್ದು ಸೋವಿಯತ್ ರಷ್ಯಾ. ಎರಡೇ ವರ್ಷದಲ್ಲಿ ಸೆಟಿಲೈಟ್ ಅನ್ನು ಯಶಸ್ವಿಯಾಗಿ ಗಗನಕ್ಕೆ ಕಳುಹಿಸಿತು. 1957 ಅಕ್ಟೋಬರ್ 4ರಂದು ಸ್ಪುಟ್ನಿಕ್ 1 ಎಂಬ ಉಪಗ್ರಹ ಆಗಸಕ್ಕೆ ಉಡಾವಣೆಗೊಂಡಿತು. ಅಷ್ಟೇ ಅಲ್ಲ 1961ರಲ್ಲಿ ಯೂರಿ ಗಗಾರಿನ್ ವೋಸ್ಟೋಕ್-1 ಸೆಟಿಲೈಟ್ ಮೂಲಕ ಗಗನಯಾನ ಮಾಡಿದ ಮೊದಲ ಮಾನವ ಎನಿಸಿದರು. ಅದಾಗಿ ಇನ್ನೂ ಕೆಲ ವರ್ಷಗಳ ಕಾಲ ಸೋವಿಯತ್ ರಷ್ಯಾ ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿತು. ಅದರಲ್ಲಿ 1959ರಲ್ಲಿ ಚಂದ್ರನ ಮೇಲೆ ಮನುಷ್ಯ ನಿರ್ಮಿತ ಉಪಗ್ರಹ ಇಳಿಸಿದ ಮೊದಲ ದೇಶ ಎಂಬ ಗರಿಮೆಯೂ ಇದೆ.
|
ಸವಾಲು ಸ್ವೀಕರಿಸಿದ ಅಮೆರಿಕ
ಗಗನಯಾನದಲ್ಲಿ ರಷ್ಯಾ ನಾಗಾಲೋಟ ಮಾಡುತ್ತಿರುವುದು ಕಂಡು ಅಮೆರಿಕ್ಕೆ ಸುಮ್ಮನಿರಲಾದೀತೆ..! 1961ರಲ್ಲಿ ಯೂರಿ ಗಗಾರಿನ್ ಗಗನಯಾನದ ಸಾಧನೆ ಮಾಡುತ್ತಿದ್ದಂತೆಯೇ ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಚಂದ್ರನ ಮೇಲೆ ಮನುಷ್ಯರನ್ನು ಕಳುಹಿಸುವ ಗುರಿಯನ್ನು ಘೋಷಿಸಿಬಿಟ್ಟರು. ಆ ದಶಕ ದಾಟುವುದರ ಒಳಗೆ ಚಂದ್ರನ ಮೇಲೆ ಮನುಷ್ಯರನ್ನು ಕಳುಹಿಸಿ ಮತ್ತೆ ವಾಪಸ್ ಕರೆಸಿಕೊಳ್ಳುತ್ತೇವೆ ಎಂದಿದ್ದರು ಕೆನಡಿ.
ರಷ್ಯಾ ಕೂಡ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಯಿತು. ಈ ಪೈಪೋಟಿಯಲ್ಲಿ ಗೆಲುವಿನ ನಗೆ ಬೀರಿದ್ದು ಮಾತ್ರ ಅಮೆರಿಕವೇ. 1961ರಲ್ಲಿ ಅಪೋಲೊ 11 ನೌಕೆ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಚಂದ್ರನ ಅಂಗಳಕ್ಕೆ ಇಳಿಸಿ ಸುರಕ್ಷಿತವಾಗಿ ವಾಪಸ್ ಕರೆತಂದಿತು.
ಅದಾದ ಬಳಿಕ ಮೂರು ವರ್ಷದ ಅಂತರದಲ್ಲೇ ಅಮೆರಿಕ ಇನ್ನೂ ಐದು ಬಾರಿ ಲೂನಾರ್ ಮಿಷನ್ ಕೈಗೊಂಡಿತು. ಒಟ್ಟು ಆರು ಬಾರಿ ಮನುಷ್ಯರನ್ನು ಚಂದ್ರನ ಬಳಿ ಕಳುಹಿಸಲಾಗಿದೆ. ಪ್ರತೀ ಬಾರಿಯೂ ಇಬ್ಬರು ಯಾತ್ರಿಗಳು ಚಂದ್ರನನ್ನು ಸ್ಪರ್ಶಿಸಿಬಂದಿದ್ದಾರೆ. ಒಮ್ಮೆಯೂ ಅವಘಡವಾಗಿಲ್ಲ ಎಂಬುದು ವಿಶೇಷ. ಈ 12 ಮಂದಿ ಭಾಗ್ಯವಂತರ ಪಟ್ಟಿ ಇಲ್ಲಿದೆ:
1969, ಜುಲೈ 21: ನೀಲ್ ಆರ್ಮ್ಸ್ಟ್ರಾಂಗ್, ಬಜ್ ಆಲ್ಡ್ರಿನ್
1969, ನವೆಂಬರ್ 19-20: ಪೀಟ್ ಕಾನ್ರಾಡ್, ಅಲನ್ ಬೀನ್
1971, ಫೆ. 5-6: ಅಲನ್ ಶೆಪರ್ಡ್, ಎಡ್ಗರ್ ಮಿಚೆಲ್
1971, ಜುಲೈ 31-ಆಗಸ್ಟ್ 2: ಡೇವಿಡ್ ಸ್ಕಾಟ್, ಜೇಮ್ಸ್ ಇರ್ವಿನ್
1972, ಏಪ್ರಿಲ್ 21-23: ಜಾನ್ ಯಂಗ್, ಚಾರ್ಲ್ಸ್ ಡ್ಯೂಕ್
1972, ಡಿ. 11-14: ಯೂಜೀನ್ ಸೆರ್ನನ್, ಹ್ಯಾರಿಸನ್ ಶ್ಮಿಟ್
ಇವರಲ್ಲದೇ ಇನ್ನೂ 12 ಮಂದಿ ಚಂದ್ರನ ನೆಲದ ಮೇಲೆ ಕಾಲಿಡದೇ ಹೋದರೂ ಮೇಲ್ಮೈ ಸಮೀಪ ಹೋಗಿಬಂದಿದ್ದಾರೆ. ಇದೂವರೆಗೆ ಒಟ್ಟು 24 ಮನುಷ್ಯರು ಚಂದ್ರನನ್ನು ಬಹಳ ಹತ್ತಿರದಿಂದ ಕಂಡು ಬಂದಿದ್ದಾರೆ. ಈ 24 ಮಂದಿ ಪೈಕಿ 10 ಮಂದಿ ಈಗಲೂ ಜೀವಂತ ಇದ್ದಾರೆ. ತಮ್ಮ ಅನುಭವಗಳನ್ನು ರಸವತ್ತಾಗಿ ಬಣ್ಣಿಸಲು ಬದುಕಿದ್ದಾರೆ.

ಮೊದಲು ಕಾಲಿಟ್ಟಾಗಿನ ಘಳಿಗೆ ಹೇಗಿತ್ತು?
1969, ಜುಲೈ 16ರಂದು ಸ್ಯಾಟರ್ನ್ 5 ಎಂಬ ರಾಕೆಟ್ನಲ್ಲಿ ಅಪೋಲೊ 11 ಸೆಟಿಲೈಟ್ ಭದ್ರವಾಗಿ ಕೂತಿತ್ತು. ನೀಲ್ ಆರ್ಮ್ಸ್ಟ್ರಾಂಗ್, ಬಜ್ ಆಲ್ಡ್ರಿನ್ ಮತ್ತು ಮೈಕೇಲ್ ಕಾಲಿನ್ಸ್ ಈ ಸೆಟಿಲೈಟ್ನೊಳಗೆ ಕೂತಿದ್ದರು. ಬೆಳಗ್ಗೆ 9:32ಕ್ಕೆ ರಾಕೆಟ್ ಉಡಾವಣೆ ಆಗುತ್ತದೆ. 12 ನಿಮಿಷದಲ್ಲಿ ಸೆಟಿಲೈಟ್ ಭೂಮಿಯ ಕಕ್ಷೆ ಸೇರುತ್ತದೆ. ಒಂದೂವರೆ ಸುತ್ತು ಭೂಮಿಯನ್ನು ಪ್ರದಕ್ಷಿಣೆ ಹಾಕಿದ ಬಳಿಕ ಚಂದ್ರನತ್ತ ಸೆಟಿಲೈಟ್ ಅನ್ನು ತಿರುತಿಸಲಾಗುತ್ತದೆ. ಅದಾಗಿ ಮೂರು ದಿನದಲ್ಲಿ ಈ ಉಪಗ್ರಹವು ಚಂದ್ರನ ಕಕ್ಷೆ ತಲುಪುತ್ತದೆ.
ಈ ಸೆಟಿಲೈಟ್ನಲ್ಲಿ ಎರಡು ಕಿರು ನೌಕೆಗಳೂ ಇರುತ್ತದೆ. ಈಗಲ್ ಎಂಬ ಕಿರುನೌಕೆಯಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಇರುತ್ತಾರೆ. ಇವರದ್ದು ಚಂದ್ರನ ಮೇಲೆ ಇಳಿಯುವ ಕೆಲಸವಾದರೆ, ಕೊಲಂಬಿಯಾ ಎಂಬ ಇನ್ನೊಂದು ಕಿರು ನೌಕೆಯಲ್ಲಿ ಮೈಕೇಲ್ ಕಾಲಿನ್ಸ್ ಇರುತ್ತಾರೆ. ಇವರದ್ದು ಕಮ್ಯಾಂಡಿಂಗ್ ಕೆಲಸ. ಅಂದರೆ ಆರ್ಮ್ಸ್ಟ್ರಾಂಗ್ ಮತ್ತು ಆಲ್ಡ್ರಿನ್ ಇಬ್ಬರಿಗೂ ಇವರು ಮೇಲಿನಿಂದ ಸಲಹೆಗಳನ್ನು ನೀಡುತ್ತಾರೆ.
ನಿಗದಿತ ಸ್ಥಳದಲ್ಲಿ ಈಗಲ್ ಅನ್ನು ಇಳಿಸುವಾಗ ಅಲ್ಲಿ ದೊಡ್ಡದೊಡ್ಡ ಕಲ್ಲುಗಳಿರುವ ಪ್ರದೇಶ ಕಾಣಿಸುತ್ತದೆ. ಗಗನಯಾತ್ರಿಗಳು ಹೇಗೋ ಮಾಡಿ ಈಗಲ್ ಕ್ಯಾಪ್ಸೂಲ್ ಅನ್ನು ಆ ಪ್ರದೇಶದಿಂದ ಬೇರೆಡೆಗೆ ಮ್ಯಾನುಯಲ್ ಆಗಿಯೇ ಸಾಗಿಸಿ ಸುರಕ್ಷಿತ ಸ್ಥಳದಲ್ಲಿ ಇಳಿಸುತ್ತಾರೆ. ಸಂಜೆ 4:17ಕ್ಕೆ ಸರಿಯಾಗಿ ಈ ಈಗಲ್ ನೌಕೆ ಚಂದ್ರನ ಮೇಲಿಳಿಯುತ್ತದೆ. ಆಗ 30 ಸೆಕೆಂಡ್ ಮಾತ್ರವೇ ಇಂಧನ ಉಳಿದದ್ದು. ಒಂದು ನಿಮಿಷ ತಡವಾಗಿದ್ದರೂ ಯಾತ್ರಿಗಳ ಕಥೆ ಗೋವಿಂದ.
ಚಂದ್ರನ ಮೇಲೆ ಏನು ಬೇಕಾದರೂ ಸಂಭವಿಸಬಹುದಿತ್ತು. ಯಾವುದೇ ಸ್ಪಷ್ಟವಿರಲಿಲ್ಲ. ಕಳವಳ ಪಡಲು ಸಾವಿರ ಸಂಗತಿಗಳಿದ್ದವು. ಈಗ ನೌಕೆಯಿಂದ ಮನುಷ್ಯ ಚಂದ್ರನ ನೆಲದ ಮೇಲೆ ಕಾಲಿಡುವ ಸವವಾಲು ಇತ್ತು. ರಾತ್ರಿ 10:56ಕ್ಕೆ ನೀಲ್ ಆರ್ಮ್ಸ್ಟ್ರಾಂಗ್ ಮೊದಲು ಕಾಲಿಡುತ್ತಾರೆ. "ಇದು ಮಾನವನ ಒಂದು ಚಿಕ್ಕ ಹೆಜ್ಜೆ, ಆದರೆ ಮಾನವಕುಲಕ್ಕೆ ಇದು ದೈತ್ಯ ಹೆಜ್ಜೆ" ಎಂದು ಉದ್ಗರಿಸುತ್ತಾರೆ. ಆರ್ಮ್ಸ್ಟ್ರಾಂಗ್ ಬಳಿಕ ಆಲ್ಡ್ರಿನ್ ಕೂಡ ಇಳಿಯುತ್ತಾರೆ.
ಎರಡೂವರೆ ಗಂಟೆ ಕಾಲ ಅವರು ಚಂದ್ರನ ನೆಲದಿಂದ ಮಣ್ಣು, ಕಲ್ಲು ಇತ್ಯಾದಿ ವಸ್ತುಗಳನ್ನು ಕಲೆಹಾಕುವ ಕೆಲಸ ಮಾಡುತ್ತಾರೆ. ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ತಾವಿದ ಸ್ಥಳದಲ್ಲಿ ಅಮೆರಿಕ ಬಾವುಟ ನೆಟ್ಟು ಬರುತ್ತಾರೆ.
ನಂತರ, ಈ ಇಬ್ಬರು ಗಗನಯಾತ್ರಿಗಳು ಅಲ್ಲಿಂದ ತಮ್ಮ ಈಗಲ್ ನೌಕೆ ಮೂಲಕ ಕಾಲಿನ್ಸ್ ಇದ್ದ ಕೊಲಂಬಿಯಾ ನೌಕೆ ಸೇರಿಕೊಳ್ಳುತ್ತಾರೆ. ಬಳಿಕ ಈ ಮೂವರೂ ಕೂಡ ಅಪೋಲೊ ಸೆಟಿಲೈಟ್ ಸೇರಿಕೊಂಡು ಅಲ್ಲಿಂದ ಜುಲೈ ೨೪ಕ್ಕೆ ಹವಾಯ್ ದ್ವೀಪಕ್ಕೆ ಬಂದಿಳಿಯುತ್ತಾರೆ.
|
ಚಂದ್ರನಲ್ಲಿ ಮನುಷ್ಯ ಇಳಿಯಲೇ ಇಲ್ಲವಾ?
ಅಮೆರಿಕ ಆರು ಬಾರಿ ಚಂದ್ರನಲ್ಲಿ ಗಗನಯಾತ್ರಿಗಳನ್ನು ಇಳಿಸಿರುವ ಸಂಗತಿಯನ್ನು ಸುಳ್ಳು ಎಂದು ಕೆಲವರು ಈಗಲೂ ಹೇಳುತ್ತಾರೆ. ವಿಶ್ವವನ್ನು ನಂಬಿಸಲು ಅಮೆರಿಕ ಮಾಡಿದ ದೊಡ್ಡ ಮೋಸ ಇದು ಎಂದು ಶಂಕಿಸುವವರಿದ್ದಾರೆ.
ಆದರೆ, ಚಂದ್ರನಲ್ಲಿ ಮನುಷ್ಯ ಕಾಲಿಟ್ಟ ಎನ್ನುವುದಕ್ಕೆ ಹಲವು ಪುರಾವೆಗಳು ಸಿಕ್ಕಿವೆ. ಈಗಲೂ ಸಿಗುತ್ತವೆ. ಅಪೋಲೋ 11 ಮಿಷನ್ ವೇಳೆ ಮೂರು ರೆಟ್ರೋರಿಫ್ಲೆಕ್ಟರ್ಗಳನ್ನು ಚಂದ್ರನ ಮೇಲೆ ಬಿಟ್ಟು ಬರಲಾಗಿತ್ತು. ಈಗಲೂ ಕೂಡ ಭೂಮಿಯಿಂದ ಲೇಸರ್ ಮತ್ತು ಟೆಲಿಸ್ಕೋಪ್ ಮೂಲಕ ಆ ರಿಟ್ರೋರಿಫ್ಲೆಕ್ಟರ್ನ ಲೇಸರ್ ಬೀಮ್ಗಳನ್ನು ಪತ್ತೆಹಚ್ಚಬಹುದಾಗಿದೆ.
ಅಲ್ಲೇ 2009ರಲ್ಲಿ ನಾಸಾದ ಆರ್ಬಿಟರ್ವೊಂದು ಚಂದ್ರನ ಮೇಲೆ ಅಪೋಲೋ ಇಳಿದಿದ್ದ ಸ್ಥಳದ ಫೋಟೋಗಳನ್ನು ಸೆರೆಹಿಡಿದು ಕಳುಹಿಸಿತ್ತು. ಅದರಲ್ಲಿ ರೋವಿಂಗ್ ವಾಹನಗಳು ಸಾಗಿದ ಹಾದಿ, 12 ಗಗನಯಾತ್ರಿಗಳು ಚಂದ್ರನ ದೂಳಿನಲ್ಲಿ ಹಾಕಿದ ಹೆಜ್ಜೆಯ ಗುರುತುಗಳನ್ನು ಕಾಣಬಹುದು ಎಂದು ಹೇಳಲಾಗುತ್ತದೆ.
(ಒನ್ಇಂಡಿಯಾ ಸುದ್ದಿ)
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications