ಮಮತಾ ಬ್ಯಾನರ್ಜಿ 'ದಂಡಯಾತ್ರೆ': ಪತರುಗುಟ್ಟಿದ ಬಿಜೆಪಿ, ಕಾಂಗ್ರೆಸ್
ಕೆಲವು ತಿಂಗಳ ಹಿಂದೆ ನಡೆದಿದ್ದ ಪಶ್ಚಿಮ ಬಂಗಾಳದ ಚುನಾವಣೆಯ ಬಹುತೇಕ ಸಮೀಕ್ಷೆಗಳು ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿತ್ತು. ಅದೇ ರೀತಿ, ಬಿಜೆಪಿಯ ಘಟಾನುಗಟಿಗಳು ಅಬ್ಬರದ ಪ್ರಚಾರವನ್ನು ನಡೆಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತೂ ಅಲ್ಲೇ ಠಿಕಾಣಿ ಹೂಡಿದ್ದರು.
ಆದರೆ, ಬಂದ ಫಲಿತಾಂಶ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಇದ್ದ ಜನಪ್ರಿಯತೆಯನ್ನು ರುಜುವಾತು ಪಡಿಸಿತು. ಅಧಿಕಾರಕ್ಕೆ ಬರುತ್ತೇವೆ ಎಂದು ಓವರ್ ಕಾನ್ಫಿಡೆನ್ಸ್ ಆಗಿದ್ದ ಬಿಜೆಪಿಗೆ ನಿರಾಶೆಯಾದರೆ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಹೇಳ ಹೆಸರಿಲ್ಲದಂತೇ ನೆಲಕಚ್ಚಿದವು.
ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರಕಾರಕ್ಕೆ ತನ್ನದೇ ಶೈಲಿಯಲ್ಲಿ ತಿರುಗೇಟು ನೀಡುತ್ತಿರುವ ಮಮತಾ, ಈಗ ತಮ್ಮ ಪಕ್ಷದ ಪರಿಧಿಯನ್ನು ವಿಸ್ತರಿಸಲು ಹೊರಟಿದ್ದಾರೆ. ಸೋದರಳಿಯ ಅಭಿಶೇಕ್ ಬ್ಯಾನರ್ಜಿ ತೃಣಮೂಲ ಕಾಂಗ್ರೆಸ್ಸಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದ ಮಮತಾ ಕಣ್ಣು ಈಗ ಬೇರೆ ರಾಜ್ಯದತ್ತ ನೆಟ್ಟಿದೆ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಬಿಟ್ಟವರೆಲ್ಲಾ ಒಬ್ಬೊಬ್ಬರಾಗಿ ಘರ್ ವಾಪ್ಸಿ ಆಗುತ್ತಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಗೂ ಪಕ್ಷವನ್ನು ಸುದೃಢಗೊಳಿಸುವಲ್ಲಿ ಇದು ಸಹಾಯವಾಗುತ್ತಿದೆ. ಇದೆಲ್ಲದರ ನಡುವೆ, ಮಮತಾ ಬ್ಯಾನರ್ಜಿ ಕಣ್ಣು ಸಣ್ಣಸಣ್ಣ ರಾಜ್ಯದತ್ತ ನೆಟ್ಟಿದೆ.

ಸುಬ್ರಮಣಿಯನ್ ಸ್ವಾಮಿ ಮತ್ತು ಮಮತಾ ಬ್ಯಾನರ್ಜಿ ಭೇಟಿ
ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಕೀರ್ತಿ ಆಜಾದ್ ಅವರು ಟಿಎಂಸಿ ಸೇರಿದ್ದರು. ಇನ್ನು, ಬಿಜೆಪಿಯ ಸುಬ್ರಮಣಿಯನ್ ಸ್ವಾಮಿಯವರು ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದಾರೆ ಮತ್ತು ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ. ದೆಹಲಿ ಭೇಟಿಯ ವೇಳೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗದೇ, ಪ್ರತೀಬಾರಿ ದೆಹಲಿಗೆ ಬಂದಾಗಲೆಲ್ಲಾ ಅವರನ್ನು ಭೇಟಿ ಮಾಡಬೇಕಾ ಎಂದು ಪ್ರಶ್ನಿಸುವ ಮೂಲಕ, ಕಾಂಗ್ರೆಸ್ ನಮಗೇನೂ ಆಸರೆಯಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸಾರಿದ್ದಾರೆ. ಇದರ ಬೆನ್ನಲ್ಲೇ ಮೇಘಾಲಯದ ರಾಜಕೀಯ ವಿದ್ಯಮಾನ ಕಾಂಗ್ರೆಸ್ ಅನ್ನು ದಂಗು ಪಡಿಸಿದೆ.

ದೇಶದ ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಟಿಎಂಸಿ
ದೇಶದ ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ನಡೆದ ರಾಜಕೀಯ ಕ್ಷಿಪ್ರಕ್ರಾಂತಿಯಲ್ಲಿ ಹನ್ನೆರಡು ಕಾಂಗ್ರೆಸ್ ಶಾಸಕರು ಟಿಎಂಸಿ ಸೇರುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ. ಒಂದು ಸಮಯದಲ್ಲಿ ಭಿನ್ನಮತ ಶಮನಗೊಳಿಸುವಲ್ಲಿ ಎತ್ತಿದ ಕೈಯಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಕೈಚೆಲ್ಲಿ ಕೂತಿದೆ. ಈಗ ಕಾಂಗ್ರೆಸ್ಸಿನಲ್ಲಿ ಉಳಿದಿರುವುದು ಐವರು ಶಾಸಕರು ಮಾತ್ರ. ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಕೂಡಾ ಟಿಎಂಸಿ ಸೇರಿದ್ದರಿಂದ ಪಕ್ಷ ತೀವ್ರ ಮುಜುಗರ ಎದುರಿಸುವಂತೆ ಮಾಡಿದೆ.

ಗೋವಾ ನೆಲಕ್ಕೂ ಕಾಲಿಟ್ಟ ಮಮತಾ ಬ್ಯಾನರ್ಜಿ
ಇದೇ ರೀತಿಯ ಬೆಳವಣಿಗೆಗಳು ಗೋವಾದಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಗೋವಾಗೆ ಭೇಟಿ ನೀಡಿದ್ದ ಮಮತಾ ಬ್ಯಾನರ್ಜಿ, ಮೂರು ದಿನ ಅಲ್ಲೇ ತಂಗಿದ್ದು ಹಲವು ಮುಖಂಡರನ್ನು ಟಿಎಂಸಿಎಗೆ ಸೇರ್ಪಡೆಗೊಳಿಸಿದ್ದಾರೆ. "ಬಿಜೆಪಿ ಮತ್ತು ನರೇಂದ್ರ ಮೋದಿ ಜನಪ್ರಿಯತೆ ಪಡೆಯುತ್ತಿರುವುದು ಕಾಂಗ್ರೆಸ್ಸಿನಿಂದ, ಆ ಪಕ್ಷ ಬಿಜೆಪಿಗೆ TRP (ಟೆಲಿವಿಷನ್ ರೇಟಿಂಗ್ ಪಾಯಿಂಟ್) ನಂತಾಗಿದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ದೇಶ ತೊಂದರೆ ಅನುಭವಿಸುತ್ತಿದೆ. ತುಂಬಾ ಅವಕಾಶಗಳು ಇದ್ದಾಗ ದೇಶ ಯಾಕೆ ತೊಂದರೆ ಅನುಭವಿಸಬೇಕು" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ತ್ರಿಪುರಾದಲ್ಲೂ ತೃಣಮೂಲ ಕಾಂಗ್ರೆಸ್ಸಿನ ಅಬ್ಬರ ಆರಂಭವಾಗಿದೆ
ಇನ್ನು, ತ್ರಿಪುರಾದಲ್ಲೂ ತೃಣಮೂಲ ಕಾಂಗ್ರೆಸ್ಸಿನ ಅಬ್ಬರ ಆರಂಭವಾಗಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಟಿಎಂಸಿ ಒಂದು ಸ್ಥಾನವನ್ನು ಗೆಲ್ಲಲಾಗದಿದ್ದರೂ, ಈಗಿನ ಪರಿಸ್ಥಿತಿ ಹಿಂದಿನಂತಿಲ್ಲ. ಒಂದು ದಿನದ ಹಿಂದೆ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಟಿಎಂಸಿ, ಬಿಜೆಪಿಗೆ ಠಕ್ಕರ್ ನೀಡುವತ್ತ ಸಾಗುತ್ತಿದೆ. ಇಲ್ಲಿ, ಎಡಪಕ್ಷಗಳನ್ನು ಸೈಡಿಗೆ ತಳ್ಳಿ ಬಿಜೆಪಿ ಅಸೆಂಬ್ಲಿ ಚುನಾವಣೆಯನ್ನು ಗೆದ್ದಿತ್ತು. ಮುಂದಿನ ಎರಡು ವರ್ಷಗಳಲ್ಲಿ ಅಲ್ಲಿ ಚುನಾವಣೆ ನಡೆಯಬೇಕಾಗಿರುವುದರಿಂದ, ಮಮತಾ ಬ್ಯಾನರ್ಜಿ ಈಗಲೇ ಚುನಾವಣೆ ತಾಲೀಮು ಶುರು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ, ಮಮತಾ ಬ್ಯಾನರ್ಜಿಯವರ ಪಕ್ಷ ಬೆಳೆಸುವ ಮಹತ್ವಾಕಾಂಕ್ಷೆ, ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಭಯಭೀತಿಯನ್ನಾಗಿಸಿದೆ.












Click it and Unblock the Notifications