Get Updates
Get notified of breaking news, exclusive insights, and must-see stories!

ಬಾಲ್ಯವೆಂದರೆ ಮಳೆ, ಅಲೆದಾಟ, ಆಟೋಟ ಮತ್ತು ಅಜ್ಜಿಯ ಪ್ರೀತಿ!

ಎಲ್ಲಾ ಬದಲಾಗುತ್ತೆ, ಕಾಲ ಎಲ್ಲವನ್ನು ಮರೆಸುತ್ತದೆ ಎಂಬ ಮಾತು ನನಗೂ ಗೊತ್ತಿದೆ. ಆದರೆ, ಈ ಹೊತ್ತಿಗೆ ನೆನಪಿನ ಬುತ್ತಿ ಬಿಚ್ಚಿಡಲೇಬೇಕಿದೆ. ಹೌದು, ಬಾಲ್ಯದ ನೆನಪು ಮತ್ತೆ ಮರುಕಳಿಸುತ್ತಿದೆ. ಮಳೆ ಸುರಿವಾಗಲಂತೂ ನೆನಪಿನ ದೋಣಿಯಲ್ಲಿ ಕೂರುವ ಮನಸ್ಸಾಗುತ್ತದೆ. ನನ್ನ ಪಾಲಿಗೆ ಮಲೆನಾಡು ಹಾಗೂ ಬಯಲುಸೀಮೆ ಎರಡಲ್ಲೂ ಬಾಲ್ಯ ಕಳೆದಿದ್ದು, ಬದುಕಿಗೆ ಒಳ್ಳೆ ಪಾಠವಾಗಿದೆ.

ನಾಡ ಹೆಂಚು, ಮಂಗ್ಳೂರ್ ಹೆಂಚಿನ ಮನೆ ಇದ್ದದ್ದು ಬದಲಾಗಿ, ತಾರಸಿ ಮನೆ ತಲೆ ಎತ್ತಿದೆ. ಮನೆ ಮುಂದಿನ ವಿದ್ಯುತ್ ಕಂಬ ಅದಕ್ಕೆ ಸುತ್ತಿದ ಸುರುಳಿ, ಸುರುಳಿ ವೈರುಗಳು ಇನ್ನಷ್ಟು ಹೆಚ್ಚಾಗಿವೆ. ಮುಂಚೆ ಇದ್ದ ಬಲ್ಬ್ ಬದಲಾಗಿ ಸೋಡಿಯಂ ವೆಪರ್ ದೀಪ ಬೆಳಗು ಹರಿಸುತ್ತಿದೆ.

ಮನೆಯ ಕಿಟಕಿಗೆ ಹರಿಯುತ್ತಿದ್ದ ಬೆಳಕಿನ ಪ್ರಮಾಣ ಸ್ಥಳ ಬದಲಾಗಿದೆ. ಬಾಗಿಲ ಪಕ್ಕದ ಕಿಟಕಿ ಈಗಿಲ್ಲ, ಹೊಸ ದೊಡ್ಡಗಾತ್ರದ ಕಿಟಕಿಗೆ ಹೊಸ ಬೆಳಕು ಮಹಡಿ ಮೇಲಿನ ಕಿಟಕಿಯಲ್ಲಿ ಇಣುಕಿದೆ.

ಮಳೆ, ಚಳಿ ಎನ್ನದೆ ಎಲ್ಲಾ ಕಾಲಕ್ಕೂ ಬೆಚ್ಚಗಿಡುತ್ತಿದ್ದ ಅಜ್ಜಿ ತಯಾರಿಸಿದ ಕೌದಿ ಈಗಿಲ್ಲ. ಅಜ್ಜಿಯೂ ಇಲ್ಲ, ಇಲ್ಲಗಳ ನಡುವೆ ಈ ಬೀದಿ, ಸ್ಥಳ, ಸಾಕಷ್ಟು ಸಾವು ನೋವು ನಲಿವು ಕಂಡಿದೆ. ಹೇಳುವುದಕ್ಕೆ ಬೇಕಾದಷ್ಟಿದೆ. . .

ಮಳೆ ಬಿದ್ದಾಗ ಬೀದಿ ದೀಪ ಬೆಚ್ಚಗೆ ಮಲಗುತ್ತಿತ್ತು

ಮಳೆ ಬಿದ್ದಾಗ ಬೀದಿ ದೀಪ ಬೆಚ್ಚಗೆ ಮಲಗುತ್ತಿತ್ತು

ಆದರೆ, ಮಳೆ ಮಾತ್ರ ಅಂದಿನಂತೆ ಇಂದು ಸುರಿಯುತ್ತಿದೆ. ಇಲ್ಲಿನ ಮಳೆ, ಹವೆ, ಚಳಿ ಮಾತ್ರ ಬದಲಾಗುವುದಿಲ್ಲ.

ಮಳೆ ಬಿದ್ದಾಗ ಬೀದಿ ದೀಪ ಬೆಚ್ಚಗೆ ಮಲಗುವುದು ಮುಂದುವರೆದಿದೆ, ಆದರೆ. ಲೈನ್ ಮ್ಯಾನ್ ಬದಲಾಗಿದ್ದಾನೆ, ಹೊಸ ಹೆಲ್ಮೆಟ್, ಏಣಿ ಸಿಕ್ಕಿದೆ, ಬೆಳಕಿನ ಭಾಗ್ಯ ಬೀದಿಗೆ ಬೇಗ ಮತ್ತೆ ಸಿಗುತ್ತಿದೆ.ಬೀದಿ ದೀಪ ಮಲಗಿದಾಗಲೆಲ್ಲ ಮನೆ ಬೆಳಗುತ್ತಿದ್ದ ಸೀಮೆಎಣ್ಣೆ ಬುಡ್ಡಿದೀಪ ಬದಲಾಗಿದೆ, ಮೊಂಬತ್ತಿ, ಟಾರ್ಚ್ ಕೂಡಾ ಈಗಿಲ್ಲ, ಮೊಬೈಲಿನ ಟಾರ್ಚ್ ಬೆಳಕು ಎಲ್ಲದ್ದಕ್ಕೂ ಸಾಕು.ಮಳೆ ಬಂದಾಗ ಮನೆಯ ತುಂಬೆಲ್ಲಾ ಸೋರುತ್ತಿದ್ದ ಮಾಳಿಗೆ, ಹೆಂಚು ಸರಿಸುವ ಕೊನೆ ಸಮಯದ ಸಾಹಸ ಈಗಿಲ್ಲ. ಹೊರಗೆ ಸುರಿವ ಮಳೆ ಕಿಟಕಿಯ ಗಾಜಿಗೆ ಬಡಿಯುವುದು ನೋಡಬಹುದು ಅಷ್ಟೆ.
ನಾಡ ಹೆಂಚಿನ ಎರಡಂತಸ್ತಿನ ಮನೆ ಉಪ್ಪರಿಗೆ

ನಾಡ ಹೆಂಚಿನ ಎರಡಂತಸ್ತಿನ ಮನೆ ಉಪ್ಪರಿಗೆ

ಚಿಕ್ಕಮಗಳೂರು ನನ್ನ ತಾಯಿಯ ತವರು, ನನ್ನ ಹೆಸರಿನೊಂದಿಗೆ ಮಲ್ನಾಡ್ ಸೇರಿಕೊಳ್ಳಲು ಇದೇ ಕಾರಣ. ನಾ ಹುಟ್ಟಿದ ಕಾಲಕ್ಕೆ ಅಜ್ಜಿ ಮನೆ ನಾಡ ಹೆಂಚಿನ ಎರಡಂತಸ್ತಿನ ಮನೆಯಾಗಿತ್ತು. ಉಪ್ಪರಿಗೆಯಲ್ಲಿ ನಾನು ನನ್ನ ಸೋದರ ಮಾವ ಸೇರಿಕೊಂಡು ಸಿನಿಮಾ ರೀಲ್ ಗಳನ್ನು ತಂದು ಹೆಂಚಿನಿಂದ ಬರುವ ಬಿಸಿಲು...ಭೂತದ ಗಾಜಿನ ಜೋಡಣೆಯೊಂದಿಗೆ ಗೋಡೆ ಮೇಲೆ ಸಿನಿಮಾ ಮೂಡಿಸುವ ಪ್ರಯತ್ನ, ಶಬ್ದವಿಲ್ಲದೆ ಓಡುವ ಸರಣಿ ಸಿನಿಮಾ ಇನ್ನೂ ಹಸಿರಾಗಿದೆ.

ಇದಲ್ಲದೆ, ಶಾಲೆಯ ಮುಂದೆ ಬರುತ್ತಿದ್ದ ಬಯೋಸ್ಕೋಪ್ ಡಬ್ಬದಲ್ಲಿ ಚಲಿಸುವ ಸಿನಿಮಾ, ಅದನ್ನು ನೋಡಲು ಮನೆಯಲ್ಲಿ ಕಾಡಿಸಿ, ಪೀಡಿಸಿ 25 ಪೈಸೆ ಪಡೆಯುತ್ತಿದ್ದದ್ದೇ ಸಾಹಸ.

ಹೌದು, ನಮ್ಮ ತಾಯಿ ಮನೆ ಕಡೆ ಬಹುತೇಕ ಎಲ್ಲರಿಗೂ ಸಿನಿಮಾದ ಗೀಳು. ಆಗಿನ್ನೂ ನಾನು ಶಾಲೆಗೆ ಹೋಗುತ್ತಿದ್ದೆ. ಮಾವ ಪ್ರತಿ ಸಿನಿಮಾ ನೋಡಿದ ಬಳಿಕ ಮನೆಗೆ ಬಂದು ಟಿಪ್ಪಣಿ ಮಾಡುವುದನ್ನು ಆಸಕ್ತಿಯಿಂದ ಗಮನಿಸುತ್ತಿದೆ. ಸಿನಿಮಾ ತೆರೆ ಕಂಡ ದಿನಾಂಕ, ಸಿನಿಮಾ ಟಿಕೆಟ್ ಎಲ್ಲವೂ ಸಂಗ್ರಹಿಸುವುದು ಹವ್ಯಾಸ, ಅಭ್ಯಾಸವಾಗಿಬಿಟ್ಟಿತು.

ಸಿನಿಮಾ ಗೀಳು ಮುಂದುವರೆಯಲು ಅಜ್ಜಿ ಕಾರಣ

ಸಿನಿಮಾ ಗೀಳು ಮುಂದುವರೆಯಲು ಅಜ್ಜಿ ಕಾರಣ

ಮನೆ ಬಳಿ ಇದ್ದ ಗುರುನಾಥ ಟಾಕೀಸ್ ಆಗಲಿ, ಬಸ್ ಸ್ಟ್ಯಾಂಡ್ ಬಳಿಯ ಮಿಲನ್ ಅಥವಾ ದೂರದ ಪೂಜಾ (ಈಗ ಇಲ್ಲ) ಇರಲಿ, ಡಾ. ರಾಜ್ ಕುಮಾರ್ ಸಿನಿಮಾ ಬಂದರೆ ನಾನು ನನ್ನ ಅಜ್ಜಿ ಮೊದಲ ದಿನವೇ ಹೋಗಿ ನೋಡಿ ಬರುತ್ತಿದ್ದೆವು. ಡಾ. ರಾಜ್ ಕುಟುಂಬದ ಹೀರೋಗಳು ಪೈಕಿ ಒಬ್ಬಬ್ಬರಿಗೆ ಮನೆಯಲ್ಲಿ ಒಬ್ಬೊಬ್ಬರು ಫ್ಯಾನ್ಸ್.

ಆನಂದ್, ಮನ ಮೆಚ್ಚಿದ ಹುಡುಗಿ, ರಥಸಪ್ತಮಿ ಸಿನಿಮಾ ಹೀಗೆ ಶಿವರಾಜ್ ಕುಮಾರ್ ಸಿನ್ಮಾ, ಶಂಕರ್ ನಾಗ್ ಸಿನ್ಮಾ ಬಂದರೆ ಶಾಲೆಗೆ ಚಕ್ಕರ್ ಹಾಕಿಯಾದರೂ ಮೊದಲ ದಿನವೆ ನೋಡಬೇಕು. ನಂತರ ಶಾಲೆಗೆ ಬಂದು ಸ್ನೇಹಿತರಿಗೆ ಕಥೆ ಹೇಳಬೇಕು ಎಂಬುದು ನನ್ನ ಗುರಿಯಾಗಿತ್ತು. ಸಿನ್ಮಾ 100 ದಿನ ಓಡಿದ ಮೇಲೆ ಟಾಕೀಸಿಗೆ ಹೀರೋ ಬರುವುದು, ಗೆಳೆಯರ ಜತೆ ಹೋಗಿ ಹತ್ತಿರದಿಂದ ನೆಚ್ಚಿನ ನಟ, ನಟಿಯರನ್ನು ನೋಡುವುದು ಸಂಭ್ರಮವೋ ಸಂಭ್ರಮ

ಕ್ರಿಕೆಟ್ ಆಟ ಎಂದರೆ ಊಟ ನಿದ್ದೆ ಬೇಕಿಲ್ಲ

ಕ್ರಿಕೆಟ್ ಆಟ ಎಂದರೆ ಊಟ ನಿದ್ದೆ ಬೇಕಿಲ್ಲ

ನನ್ನ ಪ್ರಾಥಮಿಕ ಶಿಕ್ಷಣವಾಗಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ, ಹೀಗಾಗಿ, ಓದಿಗಿಂತ ಆಟೋಟದ ಮೇಲೆ ಹೆಚ್ಚಿನ ಧ್ಯಾನ ಸಹಜವಾಗಿ ಮೂಡಿತ್ತು. ಶಾಲೆ ಹಿಂಬದಿ ಸರ್ಕಾರಿ ಆಸ್ಪತ್ರೆ ಅದರ ಹಿಂದೆ ಅಜಾದ್ ಪಾರ್ಕ್, ಡಿಸ್ಟ್ರಿಕ್ ಫೀಲ್ಡು. ಶಾಲೆಯಲ್ಲಿ ಚುಚ್ಚುಮದ್ದು ಹಾಕುವ ಕಾರ್ಯಕ್ರಮ ಏನಾದರೂ ಕಂಡು ಬಂದರೆ, ಶಾಲೆ ಹಿಂಬದಿ ಗೋಡೆ ಹಾರಿ, ಚಕ್ಕರ್ ಹಾಕುವುದೆಂದರೆ ನನಗೂ ನನ್ನ ಗೆಳೆಯ ನಾಗರಾಜನಿಗೂ ತುಂಬಾ ಇಷ್ಟದ ಕೆಲಸವಾಗಿತ್ತು.

ಆದರೆ, ಒಮ್ಮೆ ಹೀಗೆ ಚಕ್ಕರ್ ಹಾಕಿದ್ದಾಗ ಅಜ್ಜಿ ಕೈಲಿ ಸಿಕ್ಕಿ ಬಿದ್ದಿದೆ. ನನಗೆ ವೆಸ್ಟ್ ಇಂಡೀಸ್ ದೈತ್ಯ ವಿವಿಯನ್ ರಿಚರ್ಡ್ಸ್ ಆಟ ಎಂದರೆ ಎಂದಿಗೂ ಅಚ್ಚರಿ. ಬಬ್ಬಲ್ ಗಾಮ್ ಜಿಗಿಯುತ್ತಾ, ಯಾವುದೇ ಹೆದರಿಕೆ ಇಲ್ಲದ್ದಂತೆ ಬೌಲರ್ ಗಳ ಎಸೆತಗಳನ್ನು ಬೌಂಡರಿಗೆ ಅಟ್ಟುತ್ತಿದ್ದ ಅವನ ಆಟ ನೋಡುವುದೇ ಆನಂದವಾಗಿತ್ತು.

ಉಳಿದಂತೆ, ಕಪಿಲ್ ದೇವ್ ಇಷ್ಟ ಆಗುತ್ತಿದ್ದ. ಅವರಿಬ್ಬರ ಫೋಟೊಗಳು ಸಿಕ್ಟರ್ ಆಗಿ ನನ್ನ ಬಳಿ ಇದ್ದ ಮರದ ಬ್ಯಾಟಿನ ಮೇಲೆ ಭದ್ರವಾಗಿದ್ದವು.

ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ, ಎಂಜಿ ರಸ್ತೆಯ ಎಲೆಕ್ಟ್ರಾನಿಕ್ ಅಂಗಡಿ ಅನ್ನಪೂರ್ಣ ಟ್ರೇಡರ್ಸ್ ನಲ್ಲಿ ಅಂದು ಟಿವಿ ಆನ್ ಆಗಿರಲಿಲ್ಲ.

ಅಂದು ಮ್ಯಾಚ್ ನೋಡಲು ಶಾಲೆಗೆ ಚಕ್ಕರ್

ಅಂದು ಮ್ಯಾಚ್ ನೋಡಲು ಶಾಲೆಗೆ ಚಕ್ಕರ್

ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಿದ್ದ ನನಗೆ, ಹೊಳೆದಿದ್ದು ನನ್ನ ಗೆಳೆಯ ಮಂಜುನಾಥನ ಮನೆಯ ಹಾದಿ, ಊಟವಾದ ಕೂಡಲೇ ಶಾಲೆ ಚೀಲ ಗೂಟಕ್ಕೆ ನೇತುಹಾಕಿ, ಶಾಲೆ ಮರೆತು ಗೆಳೆಯನ ಮನೆಗೆ ಹೋಗಿದ್ದೆ.

ಅವರ ತಾಯಿ ಬಳಿ, ಟಿವಿ ಆನ್ ಮಾಡುವಂತೆ ಹೇಳಿ, ಶಾಲೆಗೆ ರಜೆ ಕೊಟ್ರು ಎಂದು ಸುಳ್ಳು ಹೇಳಿ, ಮ್ಯಾಚ್ ನೋಡತೊಡಗಿದ್ದೆ. ಇತ್ತ ನನ್ನನ್ನು ಹುಡುಕುತ್ತಿದ್ದ ಅಜ್ಜಿಗೆ ನಾನು ಶಾಲೆಗೆ ಚಕ್ಕರ್ ಹಾಕಿರುವುದು ಹೇಗೋ ಗೊತ್ತಾಗಿ, ನನ್ನನ್ನು ನನ್ನ ಗೆಳೆಯನ ಮನೆಯಿಂದ ಕರೆದುಕೊಂಡು ನೇರ ಶಾಲೆಗೆ ಕರೆದುಕೊಂಡು ಬಂದರು.

ನನ್ನ ವಿರುದ್ಧ ದೂರಿನ ಪಟ್ಟಿ ಇಟ್ಟುಕೊಂಡು ನನ್ನ ತರಗತಿಯ ಮೇಷ್ಟ್ರು ಪ್ರಕಾಶ್ ಅವರಿಗೆ ಹೇಳಲು ಸಿದ್ಧರಾಗಿದ್ದರು. ಆದರೆ, ನನ್ನ ಪುಣ್ಯಕ್ಕೆ ಅವರು ಬಂದಿರಲಿಲ್ಲ. ಪಕ್ಕದ ತರಗತಿಯ ಮೇಡಂ ಒಬ್ಬರಿದ್ರು, ಅವರ ನೋಡಿದರೆ ಭಯ ಆಗುತ್ತಿತ್ತು.

ಅವರ ಬಳಿ ನನ್ನ ಚಕ್ಕರ್ ಹಾಕುವ ಪುರಾಣವನ್ನು ಅಜ್ಜಿ ಬಿಚ್ಚಿಟ್ಟರು. ನನಗೋ ಆತಂಕ, ಆದರೆ, ನಡೆದಿದ್ದೆ ಬೇರೆ, ಅಜ್ಜಿ ಹೇಳಿದ ಕಥೆ ಕೇಳಿದ ಮೇಡಂ,
ಇವನು ಹಾಗೆಲ್ಲ, ಮಾಡಲ್ಲ, ಬಿಡಿ, ಒಳ್ಳೆ ಮಾರ್ಕ್ಸ್ ತಗೊತ್ತಾನೆ, ಪ್ರತಿ ಸಲ, ಚಕ್ಕರ್ ಹಾಕಿದ್ರು ಪರ್ವಾಗಿಲ್ಲ, ನೀವು ಯಾಕೆ ಇಷ್ಟು ಬರೋಕೆ ಹೋದ್ರಿ ದೂರು ಹೇಳೋಕೆ ಅಂದು ಬಿಟ್ರು. ನನಗೋ ಎಲ್ಲಿಲ್ಲದ ಆನಂದ. ಬಂದ ದಾರಿಗೆ ಸುಂಕವಿಲ್ಲವೆಂದು ಅಜ್ಜಿ ಮನೆಗೆ ಹೊರಟರು.

ಅಲೆದಾಟ ಬಾಲ್ಯದಿಂದ ಬಂದ ಹವ್ಯಾಸ

ಅಲೆದಾಟ ಬಾಲ್ಯದಿಂದ ಬಂದ ಹವ್ಯಾಸ

ಶಾಲೆಗಿಂತ ಹೆಚ್ಚು ಮೈದಾನದಲ್ಲೆ ಕಳೆಯುತ್ತಿದ್ದ ನಾನು, ಶಾಲೆ ಬಿಟ್ಟೋಡನೆ ಗೆಳೆಯ ಕುಮಾರನ ಜತೆಗೂಡಿ ಬಚ್ಚಾ ಎಸೆಯುತ್ತಾ ಚಿಕ್ಕಮಗಳೂರಿನ ರಸ್ತೆಗಳ ಉದ್ದಗಲವನ್ನು ಅಲೆಯುತ್ತಿದ್ದೆ. ಹೀಗಾಗಿ, ನಗರದ ಪ್ರತಿ ಗಲ್ಲಿಗಲ್ಲಿಯಲ್ಲೂ ಹೆಜ್ಜೆಗುರುತು ಇಟ್ಟಿದ್ದೆ ಎಂದು ಧೈರ್ಯವಾಗಿ ಹೇಳಬಲ್ಲೆ, ಕೋಟೆ, ರತ್ನಗಿರಿ ಬೋರೆ, ಮಾರ್ಕೆಟ್ ರಸ್ತೆ, ಷರೀಫ್ ಗಲ್ಲಿ, ಹೊಸಮನೆ, ಹೌಸಿಂಗ್ ಬೋರ್ಡ್ ನಿಂದ ಆ ಕಡೆ ಹಿರೇಮಗಳೂರು ಈ ಕಡೆ ಇಂದಾವರ, ಮತ್ತೊಂದು ಕಡೆ ಗೌನಳ್ಳಿ, ಹೀಗೆ ಅಲೆದಾಟವೆಂದರೆ ತುಂಬಾ ಖುಷಿ ಕೊಡುವ ವಿಚಾರವಾಗಿತ್ತು. ಗುಂಡಗಿದ್ದ ಬಚ್ಚಾ ಕಲ್ಲುಗಳನ್ನು ರಸ್ತೆಯಲ್ಲಿ ಅವನು ಎಸೆಯುವುದು ನಾನು ಅದನ್ನು ಗುರಿ ಇಟ್ಟು ಹೊಡೆಯುವುದು, ಗೆದ್ದವರಿಗೆ ಒಂದು ಮ್ಯಾಚ್ ಬ್ಯಾಕ್ಸಿನ ಚಿನ್ಹೆ ಸಿಗುತ್ತಿತ್ತು. ಆ ದಿನ ಹೆಚ್ಚು ಚಿನ್ಹೆ ಕಲೆಕ್ಟ್ ಮಾಡುವುದು ನನ್ನ ಗುರಿ.

ಅಲೆದಾಟ ನಂತರ ಪೆಟ್ಟು ತಿನ್ನೋದು

ಅಲೆದಾಟ ನಂತರ ಪೆಟ್ಟು ತಿನ್ನೋದು

ಎಷ್ಟೋ ಸಲ ಇದರಿಂದ ಅಜ್ಜಿ ಅಜ್ಜ, ಮಾವನಿಗೆ ತೊಂದರೆಗಳಾಗುತ್ತಿತ್ತು. ಒಮ್ಮೆ ಗಣಪತಿ ದೇವಸ್ಥಾನದವರ ಮನೆಯಲ್ಲಿ ಹೋಮ, ಊಟಕ್ಕೆ ಕರೆದಿದ್ದರಂತೆ, ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಬೇಗ ಬರುವಂತೆ ಅಜ್ಜಿ ಹೇಳಿ ಕಳಿಸಿದ್ದರು. ತಲೆ ಕೊಡವಿಗೊಂಡು ಶಾಲೆಗೆ ಹೊರಟ ನನಗೆ ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ಅಜ್ಜಿ ಹೇಳಿದ್ದು ಮರೆತು ಹೋಗಿತ್ತು. ಮಧ್ಯಾಹ್ನ ಶಾಲೆ ಬಿಟ್ಟೊಡನೆ ಕುಮಾರನ ಚಾಲೆಂಜ್ ಸ್ವೀಕರಿಸಿ, ಮ್ಯಾಚ್ ಬಾಕ್ಸ್ ಚಿನ್ಹೆಗಳನ್ನು ಹೆಚ್ಚು ಗೆಲ್ಲುವುದು ನನ್ನ ಗುರಿಯಾಗಿತ್ತು. ನಂತರ ಗುಂಡಗಿದ್ದ ಬಚ್ಚಾ ಕಲ್ಲುಗಳನ್ನು ರಸ್ತೆಯಲ್ಲಿ ಅವನು ಎಸೆಯುವುದು ನಾನು ಅದನ್ನು ಗುರಿ ಇಟ್ಟು ಹೊಡೆಯುವುದರಲ್ಲಿ ಸಮಯ 3 ಗಂಟೆಯಾಗಿದ್ದು ತಿಳಿಯಲೇ ಇಲ್ಲ. ಮನೆಗೆ ಹೋದ ಮೇಲೆ ಮೊದಲ ಬಾರಿಗೆ ಅಜ್ಜನ ಸಿಟ್ಟು ಎದುರಿಸಬೇಕಾಯಿತು. ಬೇರೆಯವರ ಸಮಯಕ್ಕೆ ಬೆಲೆ ಕೊಡುವುದನ್ನು ಮೊದಲು ಕಲಿ ಎಂದಿದ್ದು ಈಗಲೂ ನೆನಪಿದೆ. ಆದ್ರೆ, ಅಳವಡಿಸಿಕೊಂಡಿಲ್ಲ ಎಂಬುದು ನನ್ನ ಆಪ್ತರ ಆರೋಪವಾಗಿದೆ. ಅಜ್ಜನ ಕೈಲಿ ಪೆಟ್ಟು ತಿಂದದ್ದು ಅಂದು ಮಾತ್ರ.

ಎಂದೆಂದಿಗೂ ಶೃಂಗೇರಿ ನೆಚ್ಚಿನ ತಾಣ

ಎಂದೆಂದಿಗೂ ಶೃಂಗೇರಿ ನೆಚ್ಚಿನ ತಾಣ

ಮಧ್ಯರಾತ್ರಿ ನಂತರ ಒಂದೂವರೆ ಎರಡು ಗಂಟೆ ಸುಮಾರಿಗೆ ಬರುವ ಶೃಂಗೇರಿ ಬಸ್ ಹತ್ತಿ, ಮುಂಜಾನೆ ಪೂಜೆ ವೇಳೆಗೆ ತಲುಪುವುದೆಂದರೆ, ಎಲ್ಲಿಲ್ಲದ ಉತ್ಸಾಹ. ಅಜ್ಜಿ -ಅಜ್ಜನ ಜೊತೆ ಮೊದಲ ಬಾರಿಗೆ ಶೃಂಗೇರಿಗೆ ಹೋದವನು, ನನ್ನನ್ನು ಇಲ್ಲೇ ಬಿಟ್ಟು ಬಿಡಿ, ನಾನು ಗುರುಗಳನ್ನು ನೋಡಿಕೊಂಡು ಬರುತ್ತೇನೆ ಎಂದು ನಾನು ಹೇಳಿದ್ದನಂತೆ. 3ನೇ ತರಗತಿಯಲ್ಲೇ ಗುರುಗಳು, ಹುಟ್ಟು ಸಾವು, ಬದುಕಿನ ಬಗ್ಗೆ ಚಿಂತಿಸುವ ಮಟ್ಟಕ್ಕೆ ಬೆಳೆಯಲು ಮನೆಯ ವಾತಾವರಣ ಕಾರಣವಾಗಿತ್ತು. ಶೃಂಗೇರಿ ಎಂದೆಂದಿಗೂ ನೆಚ್ಚಿನ ತಾಣವಾಗಿ ಉಳಿಯಿತು. ಮಿಕ್ಕಂತೆ, ಹೊರನಾಡು, ಬಾಬಾ ಬುಡನ್ ಗಿರಿಗೆ ಹೋಗಿ ಬರುವುದು ಸಾಗಿತ್ತು, ಆಗಿನ್ನೂ ಇನಾಂ ದತ್ತಪೀಠ ವಿವಾದ ಅಷ್ಟಾಗಿ ಇರಲಿಲ್ಲ. ಗುಹೆಯಲ್ಲಿ ದತ್ತಾತ್ರೇಯ ಪಾದುಕೆ ನೋಡಿ ತೀರ್ಥ ಸೇವಿಸಿ, ಮುಲ್ಲಾಗಳು ನವಿಲುಗರಿಯಲ್ಲಿ ಆಶೀರ್ವದಿಸಿ ನೀಡುತ್ತಿದ್ದ ಸಕ್ಕರೆ, ಖರ್ಜೂರ ಪ್ರಿಯವಾಗಿತ್ತು. ಇವೆಲ್ಲವು ನನ್ನ ಅಲೆದಾಟ, ಟ್ರೆಕ್ಕಿಂಗ್ ಹುಚ್ಚು ಇಂದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಯಿತು ಎನ್ನಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+