ಮಾಲ್ಡೀವ್ಸ್ನಲ್ಲಿ ಇಂಡಿಯಾ ಔಟ್ ಅಭಿಯಾನ; ಅಲ್ಲೂ ನಡೆದಿದೆಯಾ ರಾಜಕಾರಣ!?
ನವದೆಹಲಿ, ಏಪ್ರಿಲ್ 22: ಕಳೆದ ತಿಂಗಳಿನಿಂದ ಮಾಲ್ಡೀವ್ಸ್ ನಲ್ಲಿ ನಡೆಯುತ್ತಿರುವ "ಇಂಡಿಯಾ ಔಟ್" ಅಭಿಯಾನದ ನಡುವೆ ದೇಶದ ವಿರುದ್ಧ ಪ್ರತಿಭಟನೆ ನಡೆಸುವುದಕ್ಕೆ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ನಿಷೇಧಿಸಿದ್ದಾರೆ. ದೇಶದ ವಿರುದ್ಧ ಪ್ರತಿಭಟನೆ ನಡೆಸುವುದು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕಿದಂತೆ ಎಂದು ಅವರು ಉಲ್ಲೇಖಿಸಿದ್ದಾರೆ.
"ವಿಭಿನ್ನ ಘೋಷಣೆಗಳ ಅಡಿಯಲ್ಲಿ ವಿವಿಧ ದೇಶಗಳ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಅಭಿಯಾನವನ್ನು ನಿಲ್ಲಿಸಬೇಕು. "ಇಂಡಿಯಾ ಔಟ್" ಅನ್ನು ಉಲ್ಲೇಖಿಸಿ ಅಶಾಂತಿಯನ್ನು ಪ್ರಚೋದಿಸುವ ಮೂಲಕ ಎರಡು ದೇಶಗಳ ನಡುವಿನ ಸಂಬಂಧಗಳನ್ನು ಹಾಳು ಮಾಡುವುದು. ಎರಡು ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಅಡ್ಡಿಯಾಗುವ ಯಾವುದೇ ಸಂಘಟಿತ ಅಭಿಮಾನವನ್ನು ನಿಷೇಧಿಸಲಾಗುವುದು ಎಂದಿದ್ದಾರೆ.
ಅಮೆರಿಕವೇ ಅತಿಹೆಚ್ಚು ಸಾಲಗಾರ; ಭಾರತ, ರಷ್ಯಾ ಸೇರಿ ಪ್ರಮುಖ ದೇಶಗಳ ಸಾಲ ಎಷ್ಟೆಷ್ಟು?
ದೇಶದಲ್ಲಿ ಕಾನೂನಿನ ಲಭ್ಯವಿರುವ ನಿಬಂಧನೆಗಳ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ತೀರ್ಪನ್ನು ಜಾರಿಗೊಳಿಸುವಂತೆ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಹಾಗಿದ್ದರೆ ಈ ಇಂಡಿಯಾ ಔಟ್ ಅಭಿಯಾನ ಎಂದರೇನು?, ಮಾಲ್ಡೀವ್ಸ್ ನೆಲದಲ್ಲಿ ಇಂಥದೊಂದು ಅಭಿಯಾನ ನಡೆಯುವುದಕ್ಕೆ ಕಾರಣವೇನು?, ಈಗ ಅಧ್ಯಕ್ಷರು ಈ ಅಭಿಯಾನವನ್ನು ಮತ್ತು ಪ್ರತಿಭಟನೆಯನ್ನು ನಿಷೇಧಿಸಿರುವುದು ಏಕೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ ನೋಡಿ.
ಮಾಲ್ಡೀವ್ಸ್ ನೆಲದಲ್ಲಿ ಭಾರತದ ರಾಜತಾಂತ್ರಿಕರಿಗೆ ಬೆದರಿಕೆ
ಮಾಲ್ವೀವ್ಸ್ ಧಿವೇಹಿ ಭಾಷೆಯಲ್ಲಿ ಹೊರಡಿಸಲಾದ ಸುಗ್ರೀವಾಜ್ಞೆಯು ದೇಶಕ್ಕೆ ನಿಯೋಜಿಸಲಾದ ರಾಜತಾಂತ್ರಿಕರು ಮತ್ತು ರಾಜತಾಂತ್ರಿಕ ನಿಯೋಗಗಳ ಭದ್ರತೆಯನ್ನು ಖಾತ್ರಿಪಡಿಸುವ ಕರ್ತವ್ಯವನ್ನು ಹೊಂದಿದೆ ಎಂದು ಹೇಳುತ್ತದೆ. ಕೆಲವು ತಿಂಗಳ ಹಿಂದೆ ಭಾರತೀಯ ರಾಜತಾಂತ್ರಿಕರಿಗೆ ಬೆದರಿಕೆಗಳು ಮತ್ತು ಪ್ರಚಾರವು ವೇಗ ಪಡೆಯುತ್ತಿದ್ದಂತೆ ಸಾಮಾಜಿಕ ಮಾಧ್ಯಮದ ಮೂಲಕ ಮಿಷನ್ ಅನ್ನು ಅನುಸರಿಸಿ, ಭಾರತೀಯ ಮಿಷನ್ ಹೆಚ್ಚುವರಿ ಭದ್ರತೆಯನ್ನು ಕೋರಿತ್ತು, ಇದನ್ನು ಸೋಲಿಹ್ ಸರ್ಕಾರವು ಒದಗಿಸಿತ್ತು.
ಭಾರತ-ವಿರೋಧಿ ಅಭಿಯಾನದ ಮುಂದಾಳತ್ವ ವಹಿಸಿದ್ದು ಯಾರು?
ಮಾಲ್ಡೀವ್ಸ್ ನೆಲದಲ್ಲಿ ಭಾರತ-ವಿರೋಧಿ ಅಭಿಯಾನದ ನೇತೃತ್ವವನ್ನು ಮೊದಲು ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್ ವಹಿಸಿಕೊಂಡಿದ್ದರು. ಆದರೆ ಕಳೆದ ಡಿಸೆಂಬರ್ನಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಇದರ ಮುಂದಾಳತ್ವ ವಹಿಸಿದ್ದಾರೆ. ಏಪ್ರಿಲ್ 20ರಂದು ಮಾಲೆಯಲ್ಲಿರುವ ಅವರ ನಿವಾಸದಲ್ಲಿ ಬೃಹತ್ "ಇಂಡಿಯಾ ಔಟ್" ಬ್ಯಾನರ್ ನೇತಾಡುತ್ತಿರುವುದು ಕಂಡುಬಂದಿದೆ. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಗುರುವಾರ ಅದನ್ನು ತೆಗೆದು ಹಾಕಿದ್ದಾರೆ.
ಇಂಡಿಯಾ ಔಟ್ ಅಭಿಯಾನದ ಹಿಂದೆ ಚುನಾವಣೆ ತಂತ್ರ
ಕಳೆದ 2013 ರಿಂದ 2018ರವರೆಗೆ ತನ್ನ ಅಧಿಕಾರಾವಧಿಯಲ್ಲಿ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮಾಲ್ಡೀವ್ಸ್ನ ವಿದೇಶಾಂಗ ನೀತಿಗೆ ಚೀನಾ ಪರ ಒಲವನ್ನು ಹೊಂದಿದ್ದರು. ಇದರಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಬೀಜಿಂಗ್ ತನ್ನ ಶಕ್ತಿ ಪ್ರದರ್ಶಿಸಿ ರಸ್ತೆ ಹಾಗೂ ಉಪಕ್ರಮಗಳಿಗೆ ಮಾರುಕಟ್ಟೆಯನ್ನು ಹುಟ್ಟು ಹಾಕಲು ಯತ್ನಿಸಿತ್ತು. ಈ ಮಧ್ಯೆ 2023ರ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಇಂಡಿಯಾ ಔಟ್ ಅಭಿಯಾನವನ್ನೇ ತನ್ನ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಯಮೀನ್ ತಂತ್ರ ರೂಪಿಸಿದ್ದಾರೆ.
ದೇಶದಲ್ಲಿ ಅಶಾಂತಿ ಸೃಷ್ಟಿಸುವುದಕ್ಕೆ ಪ್ರತಿಭಟನೆಗಳೇ ಸಾಧನ
"ಅವರು ಈ ಪ್ರತಿಭಟನೆಗಳ ಮೂಲಕ ಇಡೀ ದೇಶದಲ್ಲಿ ದೊಡ್ಡ ಪ್ರಮಾಣದ ಅಶಾಂತಿ ಮತ್ತು ಅಸ್ಥಿರತೆಯನ್ನು ಸೃಷ್ಟಿಸಲು ಹೊರಟಿದ್ದಾರೆ. ಸರ್ಕಾರದ ವಿರುದ್ಧ ದಂಗೆಯನ್ನು ಈ ಪ್ರತಿಭಟನೆಗಳನ್ನೇ ಸಾಧನವಾಗಿ ರೂಪಿಸಲು ಬಯಸುತ್ತಿದ್ದಾರೆ," ಎಂದು ರಾಷ್ಟ್ರೀಯ ಭದ್ರತೆಯ ಸಂಸದೀಯ ಸಮಿತಿಯ ಮುಖ್ಯಸ್ಥ ಮೊಹಮ್ಮದ್ ಅಸ್ಲಾಮ್ ಹೇಳಿದ್ದಾರೆ. ದೇಶದಲ್ಲಿ ಅಭಿವ್ಯಕ್ತಿ ಮತ್ತು ಸಭೆ ಸ್ವಾತಂತ್ರ್ಯ ರಕ್ಷಿಸಲು ಸರ್ಕಾರವು ಬದ್ಧವಾಗಿದೆ. ಮಾಲ್ಡೀವ್ಸ್ನಲ್ಲಿ ಅಶಾಂತಿಯನ್ನು ಉಂಟು ಮಾಡುವುದೇ ಅಭಿಯಾನದ ಹಿಂದಿರುವವರು ಉದ್ದೇಶವಾಗಿದೆ. ಈ ಅಂತರರಾಷ್ಟ್ರೀಯ ಸಮುದಾಯದಿಂದ ಮಾಲ್ಡೀವ್ಸ್ ಅನ್ನು ಪ್ರತ್ಯೇಕಿಸುವ ರೀತಿಯಲ್ಲಿ ಈ ಸ್ವಾತಂತ್ರ್ಯಗಳನ್ನು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂಷಿಸಲಾಗುತ್ತಿದೆ.
ಮಾಲ್ವೀವ್ಸ್ ನೆಲದಲ್ಲಿ ಭಾರತದ ವಿರುದ್ಧ ದ್ವೇಷ ಸೃಷ್ಟಿಸುವ ಅಭಿಯಾನ
ಈ ಅಭಿಯಾನವು "ಭಾರತದ ವಿರುದ್ಧ ದ್ವೇಷವನ್ನು ಪ್ರಚೋದಿಸುವ" ಉದ್ದೇಶವನ್ನು ಹೊಂದಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯು ತೀರ್ಮಾನಿಸಿದೆ. ದೇಶದ ರಾಷ್ಟ್ರೀಯ ಭದ್ರತೆಗೆ ಇದು ಬೆದರಿಕೆಯಾಗಿದ್ದು, ಸಾರ್ವಭೌಮತ್ವ ಕಾಪಾಡಿಕೊಳ್ಳುವ ದೇಶದ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು. ವಿದೇಶದಲ್ಲಿ ವಾಸಿಸುವ ಮಾಲ್ಡೀವಿಯನ್ನರ ಸುರಕ್ಷತೆ ಮತ್ತು ಭದ್ರತೆಗೆ ಅಪಾಯವನ್ನು ಉಂಟು ಮಾಡುತ್ತದೆ. ಆಡಳಿತಾರೂಢ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಈ ಹಿಂದೆ ಇಂಡಿಯಾ ಔಟ್ ಅಭಿಯಾನವನ್ನು ನಿಷೇಧಿಸಲು ಶಾಸನವನ್ನು ತರಲು ಯೋಚಿಸಿತ್ತು. ಪ್ರಸ್ತಾವಿತ ಕಾನೂನಿನ ಕರಡನ್ನು ಪ್ರಸಾರ ಮಾಡಲಾಯಿತು, ಆದರೆ ಕಲ್ಪನೆಯನ್ನು ರದ್ದುಗೊಳಿಸಲಾಯಿತು.
ಮಾಲ್ಡೀವ್ಸ್ ನಲ್ಲಿ ಅಧ್ಯಕ್ಷ ಬದಲಾಗುತ್ತಿದ್ದಂತೆ ಪರಿಸ್ಥಿತಿ ಬದಲು
ಮಾಲ್ಡೀವ್ ನೆಲದಲ್ಲಿ ಅಧ್ಯಕ್ಷ ಸೋಲಿಹ್ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಪರಿಸ್ಥಿತಿ ಬದಲಾಯಿತು. ಅಬ್ದುಲ್ಲಾ ಯಮೀನ್ ಅಧ್ಯಕ್ಷರಾಗಿದ್ದಾಗ ಹದಗೆಟ್ಟಿದ್ದ ಭಾರತದೊಂದಿಗಿನ ಬಾಂಧವ್ಯವನ್ನು ಸರಿಪಡಿಸಲಾಗುವುದು ಎಂಬ ಸ್ಪಷ್ಟ ಸಂಕೇತಗಳನ್ನು ಕಳುಹಿಸಲಾಯಿತು. ಮೊದಲ ವಿದೇಶಾಂಗ ನೀತಿಯನ್ನೂ ಸರ್ಕಾರ ಘೋಷಿಸಿತು. ಅಲ್ಲಿಂದ ಈಚೆಗೆ, ದೆಹಲಿ ಮತ್ತು ಮಾಲೆ ಸಮುದ್ರ ಡೊಮೇನ್ನಲ್ಲಿ ಸಾಮರ್ಥ್ಯ ವೃದ್ಧಿಗಾಗಿ ಭಾರತದಿಂದ 50 ಮಿಲಿಯನ್ ಡಾಲರ್ ಕ್ರೆಡಿಟ್ ಲೈನ್ನೊಂದಿಗೆ ಭದ್ರತಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿವೆ. ಉತುರು ತಿಲಫಲ್ಹು ಹವಳದ ಬಳಿ ಕೋಸ್ಟ್ ಗಾರ್ಡ್ ಬೇಸ್ ಅನ್ನು ಅಭಿವೃದ್ಧಿಪಡಿಸಲು ಭಾರತವು ಸಹಾಯ ಮಾಡುತ್ತಿದೆ.
ನವದೆಹಲಿಯು ಮಾಲ್ಡೀವ್ಸ್ನಲ್ಲಿ ಮಿಲಿಟರಿ ಉಪಸ್ಥಿತಿಯನ್ನು ನಿರ್ವಹಿಸುತ್ತಿದೆ ಎಂದು ಇಂಡಿಯಾ ಔಟ್ ಅಭಿಯಾನ ಹೇಳಿಕೊಂಡಿದೆ, ಇದನ್ನು ಮಾಲ್ಡೀವ್ಸ್ ಸರ್ಕಾರ ನಿರಾಕರಿಸಿದೆ. ಇದು ಪ್ರಚಾರದ ಕೇಂದ್ರಬಿಂದುವಾಗಿದೆ ಎಂದು ಅದು ಹೇಳಿದೆ.
ಭಾರತದಿಂದ ಮಾಲ್ಡೀವ್ಸ್ನಲ್ಲಿ ಮೂಲಭೂತ ಯೋಜನೆಗಳು
ಕಳೆದ ಮಾರ್ಚ್ನಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದರು. ಮಾಲ್ಡೀವಿಯನ್ ದ್ವೀಪಸಮೂಹದ ವಿವಿಧ ಅಟಾಲ್ಗಳಲ್ಲಿ ಹೈ ಇಂಪ್ಯಾಕ್ಟ್ ಕಮ್ಯುನಿಟಿ ಡೆವಲಪ್ಮೆಂಟ್ ಪ್ರಾಜೆಕ್ಟ್ (ಎಚ್ಐಸಿಡಿಪಿ) ಅಡಿಯಲ್ಲಿ ಹಲವಾರು ಹೊಸ ಯೋಜನೆಗಳನ್ನು ಘೋಷಿಸಿದರು. ಈ ಯೋಜನೆಗಳಲ್ಲಿ ಆಸ್ಪತ್ರೆಗಳು, ಕ್ರೀಡಾ ಸೌಲಭ್ಯಗಳು ಮತ್ತು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸುವುದನ್ನು ಒಳಗೊಂಡಿವೆ. ಭಾರತವು ಈಗಾಗಲೇ ಮಾಲ್ಡೀವ್ಸ್ನಲ್ಲಿ 20 ಎಚ್ಐಸಿಡಿಪಿಗಳನ್ನು ಹೊಂದಿದೆ. ಸ್ಥಳೀಯ ಸಮುದಾಯಗಳ ವಿನಂತಿಗಳು ಮತ್ತು ಪ್ರಸ್ತಾವನೆಗಳ ಆಧಾರದ ಮೇಲೆ ಈ ಯೋಜನೆಗಳನ್ನು ಅಂತಿಮಗೊಳಿಸಲಾಗುತ್ತದೆ.