Maha Kumbh Mela 2025: ಮಹಾ ಕುಂಭಮೇಳದಲ್ಲಿ ನಿನ್ನೆ 5 ಕೋಟಿ ಭಕ್ತರಿಂದ ಪವಿತ್ರ ಸ್ನಾನ
ಹದಿನಾರು ದಿನಗಳನ್ನು ಯಶಸ್ವಿಯಾಗಿ ಮುಗಿಸಿದ್ದ ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ಮಹಾ ಕುಂಭಮೇಳದಲ್ಲಿ ನಿನ್ನೆ ದುರಂತ ಸಂಭವಿಸಿದ್ದು, ಮೂವತ್ತು ಜನರು ಸಾವನ್ನಪ್ಪಿದ್ದಾರೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲು ಕೋಟ್ಯಂತರ ಭಕ್ತರು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವು-ನೋವುಗಳು ಉಂಟಾಗಿದೆ.
ಪ್ರಯಾಗ್ ರಾಜ್ನ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನ ಸಾವನ್ನಪ್ಪಿರುವ ಉತ್ತರ ಪ್ರದೇಶದ ಯೋಗಿ ಸರ್ಕಾರ ಖಚಿತ ಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ.

ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಒಂದೇ ಸಮಯದಲ್ಲಿ ಮೂರು ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕೆ ಮುಗಿಬಿದ್ದಿದ್ದಾರೆ. ತಾತ್ಕಾಲಿಕ ಸೇತುವೆ ಬಂದ್ ಮಾಡಿದ್ದ ಕಾರಣ ಕೆಲವರು ಸಂಗಮದ ಸನಿಹದ ಬ್ಯಾರಿಕೇಡ್ಗಳಲ್ಲಿ ಸಿಲುಕಿದರು. ತ್ರಿವೇಣಿ ಸಂಗಮದಲ್ಲಿ ಪ್ರತ್ಯೇಕ ಪ್ರವೇಶವಿದ್ದು, ನಿರ್ಗಮನ ಇರಲಿಲ್ಲ. ಹೀಗಾಗಿ ಭಕ್ತರು ಬಂದ ದಾರಿಯಲ್ಲೇ ಹಿಂದಿರುಗುವ ಅನಿವಾರ್ಯತೆಯಿದ್ದು, ಈ ವೇಳೆ ನೂಕುನುಗ್ಗಲು ಉಂಟಾಗಿದೆ.
ಈ ವೇಳೆ ಸ್ನಾನದ ಘಾಟ್ಗಳಲ್ಲಿ ಅಳವಡಿಸಿದ್ದ ಕೆಲ ಬ್ಯಾರಿಗೇಟ್ಗಳು ಮುರಿದಿದ್ದು, ಜನ ಏಕಾಏಕಿ ಬ್ಯಾರಿಕೇಡ್ನಿಂದ ಹೊರಬಂದು ಮಲಗಿದ್ದವರ ಮೇಲೆ ಬಿದ್ದಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿದ್ದು, ಒಬ್ಬರ ಮೇಲೆ ಒಬ್ಬರು ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಉತ್ತರ ಪ್ರದೇಶದ ಸರ್ಕಾರ ಕೂಡ ಈ ಬಗ್ಗೆ ಎಚ್ಚೆತ್ತುಕೊಂಡಿದ್ದು, ದುರಂತ ಹೇಗೆ ಸಂಭವಿಸಿತು ಎನ್ನುವ ಅಸಲಿ ಕಾರಣ ತಿಳಿಯಲು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
ಒಂದೇ ದಿನ ಐದು ಕೋಟಿಗೂ ಅಧಿಕ ಭಕ್ತರು ಆಗಮಿಸಿದ್ದೇಕೆ?
ಮಹಾ ಕುಂಭಮೇಳದಲ್ಲಿ ಒಂದೇ ದಿನ ಐದು ಕೋಟಿ ಭಕ್ತರು ಆಗಮಿಸಲು ಕಾರಣ ಏನು ಎನ್ನುವುದು ತಿಳಿಯುವುದಾದರೆ ನಿನ್ನೆ ಮಾಘ ಮಾಸದಲ್ಲಿ ಬರುವ ಮೌನಿ ಅಮವಾಸ್ಯೆಯ ಪವಿತ್ರ ದಿನವಾಗಿದೆ. ಈ ದಿನ ಗಂಗಾ ನದಿಯ ನೀರು ಅಮೃತವಾಗಿ ಬದಲಾಗುತ್ತದೆ ಎನ್ನುವ ನಂಬಿಕೆ ಇದೆ. ಮಾಘ ಮಾಸದ ಮೌನಿ ಅಮವಾಸ್ಯೆಯ ದಿನ ಪುಣ್ಯಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ. ಹೀಗಾಗಿ ಕೋಟ್ಯಂತರ ಭಕ್ತರು ಪ್ರಯಾಗ್ ರಾಜ್ನ ಕುಂಭಮೇಳಕ್ಕೆ ಆಗಮಿಸಿದ್ದರು.

ನಿನ್ನೆಯ ಒಂದೇ ದಿನ ಹತ್ತು ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ ಇತ್ತು. ಆದರೆ ಬೆಳಗ್ಗೆ ಕಾಲ್ತುಳಿತ ದುರಂತ ನಡೆದ ಕಾರಣ ಅಮೃತ ಸ್ನಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಸಂಜೆ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಅಖಾಡಗಳ ಸ್ವಾಮೀಜಿಗಳು, ಸಾಧುಗಳು ಅಮೃತ ಸ್ನಾನ ಮಾಡಿದ್ದು, ನಿನ್ನೆ ಒಂದೇ ದಿನ ಸುಮಾರು 5.71 ಕೋಟಿ ಭಕ್ತರು ಪವಿತ್ರ ಸ್ನಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications