ಹುಟ್ಟಿದ ಒಂದು ವರ್ಷದ ದಿನವೇ ಮಹಾಘಟಬಂಧನ್ ಅವಸಾನ!

ನವದೆಹಲಿ, ಮೇ 23 : ಸರಿಯಾಗಿ ಒಂದು ವರ್ಷದ ಹಿಂದೆ 2018ರ ಮೇ 23ರಂದು ಕರ್ನಾಟಕದ ನೆಲದಲ್ಲಿ 'ಮಹಾಘಟಬಂಧನ್' ಎಂಬ ಪರಿಕಲ್ಪನೆ ಹುಟ್ಟಿಕೊಂಡಿತ್ತು. ಆದರೆ, ವಿಪರ್ಯಾಸದ ಸಂಗತಿಯೆಂದರೆ, ಒಂದು ವರ್ಷದ ನಂತರ ಅದೇ ಮಹಾಘಟಬಂಧನ್ ಇಂದು ಅವಸಾನದ ಹಾದಿಯಲ್ಲಿದೆ.

2018ರ ಮೇ 23ರಂದು ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರಕಾರ ಹುಟ್ಟಿಕೊಂಡಿತ್ತು ಮತ್ತು ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಅದೇ ದಿನ, ಬೆಂಗಳೂರಿನ ವಿಧಾನಸಭೆ ಎದಿರು, ಚುಮುಚುಮು ಮಳೆಯಲ್ಲಿಯೂ ಇಂದು ಮಹಾಘಟಬಂಧನ್ ಜೊತೆ ಗುರುತಿಸಿಕೊಂಡಿದ್ದ ಎಲ್ಲಾ ನಾಯಕರು ಅಂದು ಹಾಜರಿದ್ದರು. ಶ್ವೇತ ವಸ್ತ್ರ ಧರಿಸಿ ಬಂದಿದ್ದ ಎಲ್ಲ ನಾಯಕ, ನಾಯಕಿಯರು ಕೈಕೈ ಹಿಡಿದು ಹೋ ಎಂದು ಹರ್ಘೋದ್ಘಾರ ಮಾಡಿದ್ದರು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಚ್ ಡಿ ದೇವೇಗೌಡ, ಮಾಯಾವತಿ, ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್, ಅಜಿತ್ ಸಿಂಗ್, ಸೀತಾರಾಂ ಯೆಚೂರಿ, ಅಖಿಲೇಶ್ ಯಾದವ್, ಶರದ್ ಪವಾರ್ ಮುಂತಾದವರು ಒಂದೇ ಸಾಲಿನಲ್ಲಿ ನಿಂತಿದ್ದರು. ಆಗ ಸೋನಿಯಾ ಗಾಂಧಿ ಅವರೇ, ಮಾಯಾವತಿ ಅವರ ಕೈಯನ್ನು ಬಲವಂತವಾಗಿ ಎತ್ತಿಹಿಡಿದಿದ್ದರು.

ಅಮಿತ್ ಶಾ-ನರೇಂದ್ರ ಮೋದಿ ಎಂಬ ಶಕ್ತಿ

ಅಮಿತ್ ಶಾ-ನರೇಂದ್ರ ಮೋದಿ ಎಂಬ ಶಕ್ತಿ

ಈ ಮಹಾಘಟಬಂಧನ್ ಅಸ್ತಿತ್ವವೇ ಇಂದು ಅಳಿವಿನಂಚಿನಲ್ಲಿದೆ. ಬಿಜೆಪಿ ಸರಕಾರ ತೊಲಗಬೇಕು, ನರೇಂದ್ರ ಮೋದಿ ಎಂದೂ ಪ್ರಧಾನಿಯಾಗಬಾರದು, ಪ್ರಾದೇಶಿಕ ಪಕ್ಷಗಳ ನಾಯಕರೇ ಭಾರತ ಸರಕಾರದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಒಬ್ಬೊಬ್ಬರೂ ಕೂಗುತ್ತಿದ್ದರೂ, ಈ ಪಕ್ಷಗಳ ನಾಯಕರು ಎಂದೂ ಬಿಜೆಪಿಯನ್ನು ಎದುರಿಸುವಂಥ, ಲೋಕಸಭೆ ಚುನಾವಣೆಯಲ್ಲಿ ಸದೆಬಡಿಯುವಂಥ ಒಗ್ಗಟ್ಟನ್ನು ತೋರಲೇ ಇಲ್ಲ. ಕಡೆಯ ಘಳಿಗೆಯಲ್ಲಿ ಎಲ್ಲರೂ ಸಭೆ ನಡೆಸುತ್ತಿದ್ದರೇ ಹೊರತು, ಬಿಜೆಪಿಯನ್ನು ಮತ್ತು ಅಮಿತ್ ಶಾ-ನರೇಂದ್ರ ಮೋದಿ ಎಂಬ ಶಕ್ತಿಯನ್ನು ಸೋಲಿಸುವ ಯಾವುದೇ ತಂತ್ರಗಾರಿಕೆ ಅವರಲ್ಲಿ ಇರಲೇ ಇಲ್ಲ.

ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?

ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?

ಎಲ್ಲ ಭಿನ್ನಾಭಿಪ್ರಾಯಗಳು, ಜಗಳಗಳು ಆರಂಭವಾಗಿದ್ದು ಯಾರು ಈ ಮಹಾಘಟಬಂಧನ್ ದ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬುದರ ಮೂಲಕವೇ. ಅಲ್ಲೇ ಮಹಾಘಟಬಂಧನ್ ಎಡವಿಬಿದ್ದಿತ್ತು. ಆ ಸಮಯದಲ್ಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಿದ್ದರೆ ಈಗಿನ ಪರಿಸ್ಥಿತಿ ಎದುರಿಸುವ ಪ್ರಮೇಯ ಬರುತ್ತಿರಲಿಲ್ಲ. ಕಾಂಗ್ರೆಸ್ಸಿಗೆ ರಾಹುಲ್ ಗಾಂಧಿಯವರೇ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬ ಇರಾದೆಯಿದ್ದರೂ, ಮಾಯಾವತಿ, ಮಮತಾ, ಚಂದ್ರಬಾಬು ನಾಯ್ಡು, ಶರದ್ ಪವಾರ್ ಮುಂತಾದವರು ಮುಖ ಸಿಂಡರಿಸಿದ್ದರು, ಆ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿರಲಿಲ್ಲ. ಇದು ಯಾವ ಮಟ್ಟಿಗೆ ಹೋಯಿತೆಂದರೆ, ರಾಹುಲ್ ಗಾಂಧಿ ಅವರು ಯಾವುದೇ ಪ್ರಾದೇಶಿಕ ನಾಯಕ ಪ್ರಧಾನಿ ಅಭ್ಯರ್ಥಿಯಾದರೂ ಸೈ, ಯಾವುದೇ ಮಹಿಳಾ ಪ್ರಧಾನಿ ಅಭ್ಯರ್ಥಿಯಾದರೂ ಸೈ ಎಂದಿದ್ದರು.

ಬಾಬು ಮಾಡಿದ ಕಡೆಯ ವ್ಯರ್ಥ ಪ್ರಯತ್ನ

ಬಾಬು ಮಾಡಿದ ಕಡೆಯ ವ್ಯರ್ಥ ಪ್ರಯತ್ನ

ಮಹಾಘಟಬಂಧನ್ ಅನ್ನು ಒಗ್ಗೂಡಿಸಲು ಕಟ್ಟಕಡೆಯ ಘಳಿಗೆಯಲ್ಲಿ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರು ಶತಪ್ರಯತ್ನ ನಡೆಸಿದರೂ ಅದು ಯಶಸ್ವಿಯಾಗಲಿಲ್ಲ. ಹಲವರನ್ನು ಭೇಟಿ ಮಾಡಿ ಮುತುಕತೆ ನಡೆಸಿದರೂ ಫಲ ನೀಡಲಿಲ್ಲ. ಅಷ್ಟರಲ್ಲಾಗಲೇ ತಡವಾಗಿತ್ತು, ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದ್ದರಿಂದ ಎಲ್ಲವೂ ಸ್ಪಷ್ಟವಾಗಿತ್ತು, ಸೋಲು ಮಹಾಘಟಬಂಧನ್ ಹಣೆಯ ಮೇಲೆ ಬರೆಯಲಾಗಿತ್ತು. ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ನಂತರ ಕೆಲ ಅಂಗ ಪಕ್ಷಗಳು ಉಲ್ಟಾ ಹೊಡೆಯಲು ಕೂಡ ಆರಂಭಿಸಿದ್ದರು. ಇಂಥದೇ ಪ್ರಯತ್ನವನ್ನು ಟಿಎಸ್ಆರ್ ಪಕ್ಷದ ಕೆಸಿಆರ್ ಕೂಡ ಮಾಡಿ ಸೋತಿದ್ದರು.

ಮಹಾಘಟಬಂಧನ್ ಹುಟ್ಟಿದಾಗಲೇ ಸತ್ತಿತ್ತು

ಮಹಾಘಟಬಂಧನ್ ಹುಟ್ಟಿದಾಗಲೇ ಸತ್ತಿತ್ತು

ಅಸಲಿಗೆ, ಮಹಾಘಟಬಂಧನ್ ಎಂಬುದು ಹುಟ್ಟಿದಾಗಲೇ ಸತ್ತಿತ್ತುೇ. ಅದನ್ನು ಒಂದು ವರ್ಷಗಳ ಕಾಲ ವೆಂಟಿಲೇಟರ್ ನಲ್ಲಿ ಸುಮ್ಮನೆ ಇಡಲಾಗಿತ್ತು. ನೋಡಲು ಜೀವಂತ ಕಾಣುತ್ತಿದ್ದರೂ ಅದರಲ್ಲಿ ಉಸಿರಿರಲಿಲ್ಲ. ಅಸಲಿಗೆ, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ದೂರವಿಟ್ಟಾಗಲೇ, ಮಹಾಘಟಬಂಧನ್ ದಲ್ಲಿ ಎಂಥ ಹೊಂದಾಣಿಕೆ ಇದೆ ಎಂಬುದು ಸಾಬೀತಾಗಿತ್ತು. ಮಹಾಘಟಬಂಧನ್ ದ ಹಣೆಬರಹವೇನು ಎಂಬುದು ಫಲಿತಾಂಶದ ದಿನ ಸಾಬೀತಾಗಿದೆ. ಒಂದು ವರ್ಷದ ಕಾಲ ಜೀವಂತ ಇತ್ತು ಎಂದುಕೊಂಡರೂ ಹುಟ್ಟಿದ ದಿನವೇ ಮಹಾಘಟಬಂಧನ್ ಅವಸಾನ ಕಂಡಿದೆ.

ದೇವೇಗೌಡ ಅವರು ಮಾಡಿದ ಪ್ರಯತ್ನ

ದೇವೇಗೌಡ ಅವರು ಮಾಡಿದ ಪ್ರಯತ್ನ

ಮಹಾಘಟಬಂಧನ್ ಗೂ ಮೊದಲೇ ಬಿಜೆಪಿ ವಿರುದ್ಧ ತೃತೀಯ ಮತ್ತು ಚತುರ್ಥ ರಂಗವನ್ನು ಸ್ಥಾಪಿಸಬೇಕು ಎಂಬ ಕೂಗು ಎದ್ದಿತ್ತು. ಅದಕ್ಕೆ ಯಾವತ್ತೂ ಚಾಲನೆ ಸಿಗಲೇ ಇಲ್ಲ. ಅದೃಷ್ಟವಶಾತ್, ಎಚ್ ಡಿ ದೇವೇಗೌಡ ಅವರು ಮಾಡಿದ ಪ್ರಯತ್ನದಿಂದಾಗಿ, ಬೆಂಗಳೂರಿನಲ್ಲಿ ಎಲ್ಲ ವಿರೋಧ ಪಕ್ಷಗಳ ನಾಯಕರು ಒಂದುಗೂಡಿ, ಆ ಪರಿಕಲ್ಪನೆಗೆ ನೀರೆರೆದಿದ್ದರು. ಆದರೆ, ರಾಹುಲ್ ಗಾಂಧಿ ಅವರು ಮಹಾಘಟಬಂಧನ್ ದ ನೇತೃತ್ವ ವಹಿಸಿಕೊಳ್ಳಲು ಹೋಗಿ ದೇವೇಗೌಡ ಅವರನ್ನೇ ಹಿಂದಿನ ಸೀಟಿಗೆ ತಳ್ಳಿದ್ದು ಅವರಂಥ ಹಿರಿಯರಿಗೆ ಮಾಡಿದ ಅವಮಾನ.

ಮಹಾಘಟಬಂಧನ್ ಮುಂದಿನ ನಡೆಯೇನು?

ಮಹಾಘಟಬಂಧನ್ ಮುಂದಿನ ನಡೆಯೇನು?

ಎಲ್ಲಕ್ಕೂ ಹೆಚ್ಚಾಗಿ ಮಹಾಘಟಬಂಧನ್ ದ ನಾಯಕರು, ಇಡೀ ಲೋಕಸಭೆ ಚುನಾವಣೆ ಸಮಾವೇಶಗಳಲ್ಲಿ ಎಲ್ಲಿಯೂ ಒಟ್ಟಾಗಿ ಕಂಡೇ ಇಲ್ಲ. ಎಲ್ಲರೂ ತಮ್ಮ ತಮ್ಮ ಬೇಳೆ ಕಾಳು ಬೇಯಿಸಿಕೊಂಡರೇ ಹೊರತು, ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಇನ್ನು ಕಡೆಯ ಕ್ಷಣದಲ್ಲಿ ಒಟ್ಟಾಗಿ ಕೈಕೈ ಎತ್ತುತ್ತೇವೆ ಎಂದರೆ ನಂಬಲು ಭಾರತ ಜನರೇನು ಮೂರ್ಖರೆ? ಈ ಸೋಲಿನ ನಂತರ ಬಹುಶಃ ಮಹಾಘಟಬಂಧನ್ ಎಂಬುದು ಅಸ್ತಿತ್ವದಲ್ಲೇ ಇರಲಿಕ್ಕಿಲ್ಲ. ರಾಹುಲ್ ಗಾಂಧಿ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲ ವಿರೋಧಿಗಳನ್ನು ಸೇರಿಸಿ ಮತ್ತೊಂದು ಹೆಸರಿಡುತ್ತೇನೆ ಎಂದು ಮೇ 22ರಂದು ಹೊರಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+