Maha Kumbh Mela 2025: ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಈ ನಟಿ ಈಗ ಸನ್ಯಾಸಿ
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸಾಧು-ಸಂತರು ನಾಗಸಾಧುಗಳು, ವಿದೇಶಿ ಭಕ್ತರು ಮಾತ್ರವಲ್ಲದೇ ದೇಶದ ಹಾಗೂ ವಿದೇಶದ ಗಣ್ಯರು ಕೂಡ ಭಾಗಿಯಾಗುತ್ತಿದ್ದಾರೆ. ಮಹಾ ಕುಂಭಮೇಳದ ಅಂತ್ಯದಲ್ಲಿ ನೆಲವತ್ತು ಕೋಟಿ ಭಕ್ತರು ಭಾಗಿಯಾಗುವ ನಿರೀಕ್ಷೆ ಇದ್ದು, ಈಗಾಗಲೇ ಹತ್ತು ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ.
ವಿಶೇಷ ಎಂಬಂತೆ ಮಹಾ ಕುಂಭ ಮೇಳದಲ್ಲಿ ಪವಿತ್ರಾ ಸ್ನಾನ ಮಾತ್ರವಲ್ಲದೇ ಅನೇಕರು ಸನ್ಯಾಸತ್ವ ಕೂಡ ಸ್ವೀಕರಿಸುತ್ತಿದ್ದಾರೆ. ಈಗಾಗಲೇ ಹತ್ತಾರು ಮಂದಿ ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕಗೆ ಕಾಲಿಟ್ಟಿದ್ದಾರೆ. ಇದೀಗ ಬಹುಭಾಷಾ ನಟಿ ಮಮತಾ ಕುಲಕರ್ಣಿ ಕೂಡ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಹೌದು ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ಮಮತಾ ಕುಲಕರ್ಣಿ ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಮಹಾ ಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದಾರೆ. ಸದ್ಯ ಮಮತಾ ಕುಲಕರ್ಣಿ ಕಿನ್ನರ ಅಖಾಡದ ಮಹಾಮಂಡಲೇಶ್ವರಿ ಆಗಿದ್ದು, ಮಾಯಿ ಮಮತಾ ನಂದಗಿರಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ನಟಿ ಮಮತಾ ಕುಲಕರ್ಣಿ ಕಳೆದ 25 ವರ್ಷಗಳಿಂದ ವಿದೇಶದಲ್ಲಿ ನಲೆಸಿದ್ದಾರೆ. 2012ರಲ್ಲಿ ನಡೆದ ಕುಂಭ ಮೇಳದಲ್ಲಿ ಭಾಗವಹಿಸಿದ್ದ ಅವರು, ಮತ್ತೆ ವಿದೇಶಕ್ಕೆ ವಾಪಸ್ ಆಗಿದ್ದದರು. ಇದೀಗ ಮರಳಿ ಭಾರತಕ್ಕೆ ಬಂದಿರುವ ಅವರು 2025ರ ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಬಳಿಕ ತಮ್ಮ ಸ್ವ ಪಿಂಡ ಪ್ರದಾನ ಮಾಡಿದರು. ಸದ್ಯ ಕಿನ್ನರ ಅಖಾಡಕ್ಕೆ ಸೇರಿಕೊಂಡಿರುವ ಇವರಿಗೆ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ನೀಡಿದ್ದಾರೆ.

ಮಮತಾ ಕುಲಕರ್ಣಿ ಕಳೆದ ಕೆಲವು ವರ್ಷಗಳಿಂದ ಆಫ್ರಿಕಾದಲ್ಲಿ ನೆಲೆಸಿದ್ದು, ವಿಕಿ ಗೋಸ್ವಾಮಿ ಎನ್ನುವವರು ಮದುವೆಯಾಗಿದ್ದರು. 2000 ಕೋಟಿ ಹಣದ ಡ್ರಗ್ಸ್ ಪ್ರಕರಣದಲ್ಲಿ ಮಮತಾ ಕುಲಕರ್ಣಿಯರ ಹೆಸರು ಕೇಳಿ ಬಂದಿತ್ತು. ಅನೇಕ ಬಾರಿ ತನಿಖೆಗೂ ಹಾಜರಾಗಿದ್ದ ನಟಿ ಲೌಕಿಕ ಜೀವನದ ಬಗ್ಗೆ ಬೇಸತ್ತಿದ್ದರು ಎನ್ನಲಾಗಿದೆ. ಕಳೆದ ಹಲವು ವರ್ಷಗಳಿಂದ ಕಿನ್ನರ ಅಖಾಡ ಜೊತೆ ಸಂಪರ್ಕ ಹೊಂದಿದ್ದ ಮಮತಾ ಕುಲಕರ್ಣಿ ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಿ ಮಾಯಿ ಮಮತಾ ನಂದಗಿರಿಯಾಗಿ ಬದಲಾಗಿದ್ದಾರೆ. ಇನ್ನು ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಅನೇಕ ಯುವಕ ಯುವತಿಯರು ಹಾಗೂ ಹಿರಿಯರು ಸನ್ಯಾಸತ್ವ ಸ್ವೀಕರಿಸಿದ್ದು, ಸಾಧು-ಸಂತರನ್ನು ಅನುಸರಿಸಿ ಲೌಕಿಕ ಜೀವನ ತೊರೆದಿದ್ದಾರೆ.












Click it and Unblock the Notifications