ನೀರಿನಿಂದ ಹೊರಬಿದ್ದ ಮೀನಿನಂತಾದ್ರಾ ಪ್ರಿಯಾಂಕಾ 'ಗಾಂಧಿ' ವಾದ್ರಾ?
2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದಾಗಲೇ ಪ್ರಿಯಾಂಕಾ ವಾದ್ರಾ ಅವರ ರಾಜಕೀಯ ನೈಪುಣ್ಯತೆಯ ಮಟ್ಟ ಎಂಥದ್ದೆಂದು ಸಾಬೀತಾಗಿತ್ತು. ನೋಡಲು ಚೆಂದ, ಅಜ್ಜಿಯ ಮೂಗು, ಹೆಸರಿನ ಮಧ್ಯದಲ್ಲೊಂದು 'ಗಾಂಧಿ' ಅನ್ನುವುದು ಬಿಟ್ಟರೆ ಪ್ರಿಯಾಂಕಾ ಬಳಿ ಅಷ್ಟು ಸಾಮರ್ಥ್ಯವಿದೆಯಾ ಎನ್ನುವಂತಾಗಿತ್ತು.
ಉತ್ತರ ಪ್ರದೇಶದಲ್ಲಿ ಆಗ ಕಾಂಗ್ರೆಸ್ ಅಕ್ಷರಶಃ ಮಕಾಡೆ ಮಲಗಲು ಪ್ರಿಯಾಂಕಾ ವಾದ್ರಾ ಕಾರಣರಾಗಿದ್ದರು. ಅವರು ಆಗ ಸಕ್ರಿಯ ರಾಜಕೀಯದಲ್ಲೇ ಇರಲಿಲ್ಲ, ಅದ್ಹೇಗೆ ಕಾರಣರಾಗುತ್ತಾರೆ ಎನ್ನುವ ಪ್ರಶ್ನೆಗೂ ಉತ್ತರವಿದೆ. ಆಗ, 403 ಸೀಟುಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 7 ಸೀಟು ಎಂದರೆ ಲೆಕ್ಕ ಹಾಕಿ ಕಾಂಗ್ರೆಸ್ ಯಾವ ರೀತಿ ಸೋಲು ಅನುಭವಿಸಿತ್ತೆಂದು. ರಾಹುಲ್ ಗಾಂಧಿ ಅವರು ತಾವೊಬ್ಬರೇ ಬಿದ್ದಿರಲಿಲ್ಲ, ಸೈಕಲ್ ಮೇಲೆ ಒಂಟಿಯಾಗಿ ಹೋಗುತ್ತಿದ್ದ ಅಖಿಲೇಶ್ ಯಾದವ್ ಅವರನ್ನೂ ಕೆಡವಿದ್ದರು.
ಅದಕ್ಕೂ ಮೊದಲು 2014ರ ಲೋಕಸಭೆ ಚುನಾವಣೆಯ ಸೋಲಿನ ನಂತರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನ ವಿಶ್ವಾಸದ ಮಟ್ಟ ಎಷ್ಟು ಕುಗ್ಗಿತ್ತೆಂದರೆ, ಅಮಿತ್ ಶಾ ಅವರ ಬಿರುಗಾಳಿಯ ಹೊಡೆತಕ್ಕೆ ಸಾವರಿಸಿಕೊಳ್ಳಬೇಕಿದ್ದರೆ ಮೈತ್ರಿ ಮಾಡಿಕೊಳ್ಳಲೇಬೇಕು ಎಂದು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಇಲ್ಲದ ಮತ್ತು ಒಲ್ಲದ ಮೈತ್ರಿಗೆ ಗಂಟು ಹಾಕಿದ್ದು ಇದೇ ಪ್ರಿಯಾಂಕಾ ಗಾಂಧಿ ವಾದ್ರಾ. ಆ ಸೋಲಿನಿಂದ ಹೊರಬರಲು ರಾಹುಲ್ ಅವರು ಗುಜರಾತ್ ಚುನಾವಣೆಯವರೆಗೆ ಕಾಯಬೇಕಾಯಿತು.
ರಾಹುಲ್, ಪ್ರಿಯಾಂಕಾ ಗಾಂಧಿಗೆ ಸಲಾಂ: ಶಿವಸೇನೆ ವಿಚಿತ್ರ ನಡೆ
2019ರ ಚುನಾವಣೆಯಲ್ಲಿ ಕೂಡ ಪ್ರಿಯಾಂಕಾ ವಾದ್ರಾ ಅವರು ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸೋಲಲು ಪ್ರತ್ಯಕ್ಷವಾಗಿ ಕಾರಣವಾಗಿದ್ದಲ್ಲದೆ, ಇಡೀ ದೇಶದಲ್ಲಿ ರಾಹುಲ್ ಗಾಂಧಿ ಸೋಲಲು ಕೂಡ ಪರೋಕ್ಷವಾಗಿ ಕಾರಣರಾಗಿದ್ದಾರೆ. ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ವಹಿಸಿಕೊಂಡಿದ್ದ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗರಿಗರಿ ಕಾಟನ್ ಸೀರೆಯಲ್ಲಿ ಮಿಂಚುತ್ತಿದ್ದ ಪ್ರಿಯಾಂಕಾ ಗಾಂಧಿ ಅವರು ತಮ್ಮ ಅಮ್ಮನನ್ನು ಮಾತ್ರ ಗೆಲ್ಲಿಸುವಲ್ಲಿ ಸುಸ್ತು ಹೊಡೆದಿದ್ದಾರೆ. 80 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಒಂದು.
ಪ್ರಿಯಾಂಕಾರನ್ನು ರಾಜಕೀಯಕ್ಕೆ ತಂದಿದ್ದೇ ತಪ್ಪಾ?
ಪ್ರಿಯಾಂಕಾ ಅವರನ್ನು ತಮ್ಮ ಅಣ್ಣ ರಾಹುಲ್ ಗಾಂಧಿ ಅವರಿಗೆ ಚುನಾವಣೆ ಸಮಯದಲ್ಲಿ ಸಹಾಯವಾಗಲೆಂದು ಮತ್ತು ಅವರ ವರ್ಚಸ್ಸು ವೃದ್ಧಿಸಲೆಂದು ಕಾಂಗ್ರೆಸ್ಸಿಗೆ ಎಳೆದು ತಂದಿದ್ದು ದೊಡ್ಡ ದುರಂತ. ಇದು ರಾಹುಲ್ ಗಾಂಧಿ ಅವರು ಸಾಮರ್ಥ್ಯದ ಮೇಲೆ ಪ್ರಶ್ನೆಗಳೇಳುವಂತೆ ಮಾಡಿತು. ಪ್ರಿಯಾಂಕಾ ಅವರಲ್ಲಿ ಆಕ್ರಮಣಕಾರಿ ವಿಚಾರಧಾರೆಗಳಿರಬಹುದು, ಆದರೆ ರಾಜಕೀಯವಾಗಿ ರಾಹುಲ್ ರಷ್ಟು ಅವರು ಪಳಗಿಲ್ಲ. ತಮ್ಮ ಅಪ್ರಬುದ್ಧತೆಯಿಂದ, ಅಹಂಕಾರದಿಂದ, ದಾರ್ಷ್ಟ್ಯದಿಂದ ಆಂತರಿಕವಾಗಿಯೇ ಶತ್ರುಗಳನ್ನು ಬೆಳೆಸಿಕೊಳ್ಳುತ್ತ ಹೋದರೇ ಹೊರತು ಮಿತ್ರರನ್ನು ಗಳಿಸಲಿಲ್ಲ. ಇದಕ್ಕೆ ಉದಾಹರಣೆ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಅವರ ಹೀನಾಯ ಸೋಲು. ಅಲ್ಲಿ ಕಾಂಗ್ರೆಸ್ ನಾಯಕರೇ ಪ್ರಿಯಾಂಕಾ ವಿರುದ್ಧ ತಿರುಗಿಬಿದ್ದಿದ್ದರು. ಅಮೇಥಿಯಲ್ಲಿ ರಾಹುಲ್ 55 ಸಾವಿರ ಮತಗಳ ಅಂತರದಿಂದ ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸ್ಮೃತಿ ಇರಾನಿ ಅವರ ವಿರುದ್ಧ ಸೋತಿದ್ದಾರೆ.
ತಂದೆ ರಾಜೀವ್ ರನ್ನು ನೆನೆದು ಕಂಬನಿ ಮಿಡಿದ ಪ್ರಿಯಾಂಕಾ, ರಾಹುಲ್
ಹಸಿದ ಹುಲಿಯೆದಿರು ಕುರಿ!
ಪ್ರಿಯಾಂಕಾ ವಾದ್ರಾರನ್ನು ಕಾಂಗ್ರೆಸ್ ಬಲಿಷ್ಠವಾಗಿರುವ ಮಧ್ಯ ಪ್ರದೇಶ, ರಾಜಸ್ಥಾನ ರಾಜ್ಯದಲ್ಲಿ ನಿಯೋಜಿಸಬಹುದಾಗಿತ್ತು. ಆದರೆ, ಅವರನ್ನು ಉಸ್ತುವಾರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಅತ್ಯಂತ ದುರ್ಬಲವಾಗಿರುವ ಮತ್ತು ಬಿಜೆಪಿ ಅತ್ಯಂತ ಪ್ರಬಲವಾಗಿರುವ ಉತ್ತರ ಪ್ರದೇಶದಲ್ಲಿ. ಹಸಿದ ಹುಲಿಯೆದಿರು ಕುರಿಯನ್ನು ನೂಕಿದಂತಾಗಿತ್ತು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಅಮೇಥಿ ಮತ್ತು ರಾಯ್ ಬರೇಲಿ ಮಾತ್ರ. ಬಡೇ ಹನುಮಾನ್ ಗೆ ಪೂಜೆ ಸಲ್ಲಿಸಿ, ಗಂಗಾ ನದಿಯ ನೀರು ಕುಡಿದು, ದೋಣಿಯಲ್ಲಿ ಸಾಗುತ್ತ ತಮ್ಮ ಪ್ರಚಾರದ ಅಭಿಯಾನವನ್ನು ಆರಂಭಿಸಿದ ಪ್ರಿಯಾಂಕಾ ಮತ್ತು ರಾಹುಲ್ ಅವರಿಗೆ ಉತ್ತರ ಪ್ರದೇಶದ ಮತದಾರರು ಭರ್ತಿಯಾಗಿಯೇ ಗಂಗೆಯ ನೀರನ್ನು ಕುಡಿಸಿದ್ದಾರೆ. ಬಡವರಲ್ಲಿ ತಮ್ಮೆಡೆ ಪ್ರೀತಿ ಉಕ್ಕಲು, ಬಿಜೆಪಿ ವಿರುದ್ಧ ಜನರಿಗೆ ಸಿಟ್ಟು ಹುಟ್ಟಿಸಲು ಅವರು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು.
ದೈಹಿಕ ಹಲ್ಲೆ ಇಲ್ಲದಿದ್ದರೂ ಮಾನಸಿಕ ಕಿರುಕುಳ ಅನುಭವಿಸಿದ್ದೇನೆ : ಅಭಿನಂದನ್
ಮೋದಿ ಜನಪ್ರಿಯತೆಯೆದಿರು ಮಂಕಾದ ಪ್ರಿಯಾಂಕಾ
ಪ್ರಿಯಾಂಕಾರನ್ನು ಯಾವ ರೀತಿ ಬಿಂಬಿಸಲಾಯಿತೆಂದರೆ, ವಾರಣಾಸಿಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸಲು ಪ್ರಿಯಾಂಕಾ ವಾದ್ರಾ ಅವರಿಂದ ಮಾತ್ರ ಸಾಧ್ಯ ಎನ್ನುವಂತೆ ಅವರನ್ನು ಅಟ್ಟಕ್ಕೇರಿಸಲಾಯಿತು. ತಾವು ಕೂಡ ವಾರಣಾಸಿಯಲ್ಲಿ ನರೇಂದ್ರ ಮೋದಿಯವರಿಗೆ ನೀರು ಕುಡಿಸಲು ಸಿದ್ಧ ಎಂದು ಅವರೇ ಘಂಟಾಘೋಷಿಸಿದರು. ಆದರೆ, ಕಡೆಯ ಘಳಿಗೆಯಲ್ಲಿ ನರೇಂದ್ರ ಮೋದಿಯವರ ಅಗಾಧ ಜನಪ್ರಿಯತೆ, ಜನ ಸೇರುತ್ತಿದ್ದ ರೀತಿ, ಅವರ ಮೇಲೆ ಪ್ರೀತಿ ತೋರುತ್ತಿದ್ದ ಬಗೆಯನ್ನು ಕಂಡೇ ರಾಹುಲ್ ಗಾಂಧಿ ಥಂಡಾ ಹೊಡೆದರು. ಮೊದಲ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ಮೋದಿಯಂಥವರ ವಿರುದ್ಧ ಸೋಲುವುದು ಬೇಡವೆಂದು ಅವರ ಕ್ಯಾಂಡಿಡೇಚರ್ ಅನ್ನು ಹಿಂತೆಗೆದುಕೊಂಡರು.
ಮತದಾನೋತ್ತರ ಸಮೀಕ್ಷೆಯನ್ನು ತಿರಸ್ಕರಿಸಿದ ಪ್ರಿಯಾಂಕಾ ಗಾಂಧಿ
ನಾಮಬಲದಿಂದಲೇ ಯಶಸ್ಸು ಸಾಧ್ಯವೆ?
ರಾಜಕೀಯದಲ್ಲಿ ಪ್ರಯತ್ನವಿಲ್ಲದೆ, ಅನುಭವ ಗಳಿಸದೆ, ಕೇವಲ ಅದೃಷ್ಟದ ಸಹಾಯದಿಂದ ಅಥವಾ ನಾಮಬಲದಿಂದಲೇ ಯಶಸ್ಸು ಸಿಗುವುದು ಸಾಧ್ಯವಿಲ್ಲ. ಆದರೆ, ಈ ಗುಣಗಳನ್ನೆಲ್ಲ ತನ್ಮಯತೆಯಿಂದ ಕಲಿಯಬೇಕಲ್ಲ, ತಾಳ್ಮೆಯನ್ನು ರೂಢಿಸಿಕೊಳ್ಳಬೇಕಲ್ಲ, ವಿನಮ್ರತೆಯಿಂದ ಅನುಭವ ಗಳಿಸಬೇಕಲ್ಲ. ಅದು ಪ್ರಿಯಾಂಕಾ ಅವರಿಗೆ ಸಾಧ್ಯವೇ ಇಲ್ಲ. ದುರಂಕಾರವೆಂಬುದು ಮೈಯೆಲ್ಲ ತುಂಬಿಕೊಂಡಿದ್ದರೆ, ತನ್ನ ಎದುರಾಳಿಗಳ ಸಾಮರ್ಥ್ಯಕ್ಕೆ ತಕ್ಕಂತೆ ವ್ಯವಹರಿಸದಿದ್ದರೆ, ಅತ್ಯಂತ ಲೆಕ್ಕಾಚಾರದ ನಡೆಗಳನ್ನು ಇಡದಿದ್ದರೆ ಏನಾಗುತ್ತದೆಂದು ಉತ್ತರ ಪ್ರದೇಶದ ಜನರೇ ಪಾಠ ಕಲಿಸಿದ್ದಾರೆ, ಪ್ರಿಯಾಂಕಾ ಗಾಂಧಿ ತತ್ತರಿಸುವಂತೆ ಮಾಡಿದ್ದಾರೆ.
ಉತ್ತರ ಪ್ರದೇಶ ಬಿಟ್ಟು ಹೊರಬಂದರಷ್ಟೇ ರಾಹುಲ್ ಗಾಂಧಿಗೆ ಚಾನ್ಸ್?
ರಾಹುಲ್ ಗಿಂತ ಪ್ರಿಯಾಂಕಾ ಉತ್ತಮ
ನಡೆನುಡಿಗಳಲ್ಲಿ, ಮಾತುಗಾರಿಕೆಯಲ್ಲಿ, ಜಾಣ್ಮೆಯಲ್ಲಿ, ತಂತ್ರಗಾರಿಕೆಯಲ್ಲಿ, ವರ್ಚಸ್ಸಿನಲ್ಲಿ ರಾಹುಲ್ ಗಾಂಧಿ ಅವರಿಗಿಂತ ಪ್ರಿಯಾಂಕಾ ವಾದ್ರಾ ಸಮರ್ಥರು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ, ರಾಹುಲ್ ಗಾಂಧಿಯಲ್ಲಿರುವ ಪ್ರಬುದ್ಧತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಈ ಚುನಾವಣೆಯಲ್ಲಿ ಮಾತ್ರವಲ್ಲ ಹಿಂದಿನ ಚುನಾವಣೆಯಲ್ಲಿಯೂ ಅವರು ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಅಣ್ಣ ಮತ್ತು ಅಮ್ಮನಿಗಾಗಿ ಪ್ರಚಾರ ಮಾಡಿದ್ದರು. ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಅವರ ಬದಲಿಗೆ ಪ್ರಿಯಾಂಕಾ ವಾದ್ರಾ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದರೆ, ಪ್ರಿಯಾಂಕಾ ಅವರಿಗೆ ಕನಿಷ್ಠಪಕ್ಷ ನೀರಿನ ಆಳ ಎಷ್ಟಿದೆ ಎಂದಾದರೂ ತಿಳಿಯುತ್ತಿತ್ತು. ಈ ರೀತಿ ಭರ್ತಿ ಹರಿಯುತ್ತಿರುವ ಗಂಗೆಯಲ್ಲಿ ಧುಮುಕುವಂತೆ ಆಗುತ್ತಿರಲಿಲ್ಲ. ಈಗ ಪ್ರಿಯಾಂಕಾ ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದಾರೆ.
ಮೋದಿ ಬದಲು ಅಮಿತಾಬ್ ಬಚ್ಚನ್ ಅವರನ್ನು ಪ್ರಧಾನಿ ಮಾಡಬಹುದಿತ್ತು: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾರಲ್ಲಿ ವಿಶಿಷ್ಟ ಆಕರ್ಷಣೆ
ಮನಃಶಾಸ್ತ್ರ ಪದವೀಧರೆ, ಬುದ್ಧಿಸ್ಟ್ ಸ್ಟಡೀಸ್ ನಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಪ್ರಿಯಾಂಕಾ ವಾದ್ರಾರಲ್ಲಿ ವಿಶಿಷ್ಟವಾದ ಆಕರ್ಷಣೆಯಿದೆ. ಅವರ ವಿಸ್ಮಯ ನಗು, ಅಜ್ಜಿಯಂತೆ ಉದ್ದನೆಯ ಕೆಂಪು ಮೂಗು, ಆಕರ್ಷಕವಾಗಿ ಸೀರೆ ಉಡುವ ರೀತಿ ಅವರಿಗೆ ಪಾರಂಪರ್ಯವಾಗಿ ಬಂದಿದೆ. ಅವರು ಹೋದಲ್ಲೆಲ್ಲ ಮಾಧ್ಯಮದವರು, ಜನರು ಮುತ್ತಿಕೊಳ್ಳುತ್ತಾರೆ, ಮಾತಿಗೆ ಆಕರ್ಷಿತರಾಗುತ್ತಾರೆ. ಆದರೆ, ಅವರು ಎಡವಿದ್ದು ಎಲ್ಲಿ? ಅಂಥ ವರ್ಚಸ್ವಿ ನಾಯಕಿಯಾಗಿದ್ದರೂ ಅಣ್ಣನನ್ನು ಗೆಲ್ಲಿಸಲು ಏಕೆ ಸಾಧ್ಯವಾಗಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.
ವಿವಾದದ ಸುಳಿಯಲ್ಲಿ ಪತಿದೇವರು
ಈ ಎಲ್ಲ ರಾಜಕೀಯ ಜಂಝಾಟಗಳ ನಡುವೆ ಪತಿದೇವರಾದ ರಾಬರ್ಟ್ ವಾದ್ರಾ ಅವರು ವಿದೇಶದಲ್ಲಿ ಅಕ್ರಮ ಆಸ್ತಿ ಮಾಡಿಕೊಂಡ, ದೇಶದಲ್ಲಿ ಅಕ್ರಮವಾಗಿ ಆಸ್ತಿ ಕಬಳಿಸಿದ ಆರೋಪದ ಸುಳಿಯಲ್ಲಿ ಸಿಲುಕಿದ್ದಾರೆ. ರಾಬರ್ಟ್ ವಾದ್ರಾ ಅವರು ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಪಟ್ಟಿದ್ದು, ಬಂಧನದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಈ ನಡುವೆ, ಅವಮಾನಕರ ಸೋಲಿನಿಂದಾಗಿ ಕಂಗೆಟ್ಟಿರುವ ರಾಹುಲ್ ಗಾಂಧಿ ಅವರು ಅಧ್ಯಕ್ಷ ಪಟ್ಟಕ್ಕೆ ರಾಜೀನಾಮೆ ನೀಡುವ ಮಾತನ್ನಾಡಿದ್ದಾರೆ. ಆ ಸ್ಥಾನಕ್ಕೆ ವಂಶಪಾರಂಪರ್ಯವಾಗಿ ಮತ್ತೆ ಪ್ರಿಯಾಂಕಾರನ್ನು ಕೂರಿಸುವ ಬದಲು ಕುಟುಂಬದಿಂದ ಹೊರಗಿನವರನ್ನು ತಂದು, ಅವರಡಿ ಪ್ರಿಯಾಂಕಾ ರಾಜಕೀಯ ಅನುಭವ ಗಳಿಸಬೇಕು.
ಜನ ಬರುತ್ತಿದ್ದುದೇ ಅವರನ್ನು ನೋಡಲು
ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಅವರು ವೈಯಕ್ತಿಕವಾಗಿ ಮತ್ತು ರಾಹುಲ್ ಜೊತೆ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದರು, ರೋಡ್ ಶೋಗಳಲ್ಲಿ ಪಾಲ್ಗೊಂಡಿದ್ದರು. ಅವರು ಹೋದಲ್ಲೆಲ್ಲ ಜನ ಮುಕ್ಕುತ್ತಿದ್ದರು. ಆದರೆ, ಅವರೆಲ್ಲ ಬರುತ್ತಿದ್ದುದು ಅವರನ್ನು ನೋಡಲೇ ಹೊರತು ಅವರ ಮಾತನ್ನು ಕೇಳಲು ಅಲ್ಲ. ಪ್ರಿಯಾಂಕಾ ಮಾತುಗಳಲ್ಲಿ ಕೂಡ ಬರೆದುಕೊಟ್ಟ ಅವೇ ಹಳಸಲು ಸಂಗತಿಗಳು ಇರುತ್ತಿದ್ದವೇ ಹೊರತು, ಹೊಸದೇನೂ ಕಂಡುಬರಲಿಲ್ಲ. ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದೇ ಹೆಗ್ಗಳಿಕೆ ಅನ್ನುವಂತಾಯಿತು.