ಲೋಕ ಸಮರ: ಜೆಡಿಎಸ್- ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿಗೆ ಖುಷಿಯೋ ಖುಷಿ!
Recommended Video
"ಅಯ್ಯೋ, ಜೆಡಿಎಸ್ ಜತೆ ಸೇರಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚನೆ ಮಾಡದೇ ಇದ್ದದ್ದೇ ಒಳ್ಳೆಯದಾಯಿತು. ಒಂದು ವೇಳೆ ಹಾಗೆ ಸರಕಾರ ಮಾಡಿದ್ದರೆ ಈಗ ಬಹಳ ಕಷ್ಟ ಆಗುತ್ತಿತ್ತು" ಅಂತಲೇ ಮಾತಿಗೆ ಆರಂಭಿಸಿದರು ಬಿಜೆಪಿಯ ಆ ಹಿರಿಯ ಕಾರ್ಯಕರ್ತ. ಬೆಂಗಳೂರಲ್ಲಿ ನಮ್ಮಷ್ಟಕ್ಕೆ ಆಗಲೇ ಬಿಜೆಪಿ ಪರ ಪ್ರಚಾರ ಶುರು ಮಾಡಿದ್ದೇವೆ. ಯಾರೇ ಅಭ್ಯರ್ಥಿಯಾಗಲಿ ಪರವಾಗಿಲ್ಲ, ನಮಗೆ ಮೋದಿ ಪ್ರಧಾನಿ ಆಗಬೇಕಷ್ಟೇ ಎಂದರು.
ಈಗ ಜೆಡಿಎಸ್-ಕಾಂಗ್ರೆಸ್ ಸೇರಿ ಸೀಟು ಹಂಚಿಕೊಂಡು, ಸ್ಪರ್ಧೆ ಮಾಡುತ್ತಿರುವುದರಿಂದ ಬಿಜೆಪಿಗೆ ಅನುಕೂಲ ಏನು ಎಂದು ಆವರನ್ನೇ ಪ್ರಶ್ನಿಸಿದರೆ ಒಂದೊಂದೇ ಅಂಶಗಳನ್ನು ತೆರೆದಿಡುತ್ತಾ ಹೋದರು. ಹಾಸನ, ಮಂಡ್ಯದಿಂದ ಜೆಡಿಎಸ್ ಹಿರಿಯ ನಾಯಕರನ್ನು ಕಣಕ್ಕೆ ಇಳಿಸಿದ್ದರೆ ಅದು ಕೂಡ ಸವಾಲಿರುತ್ತಿತ್ತು. ಆದರೆ ಇನ್ನೂ ಸಣ್ಣ ವಯಸ್ಸಿನವರನ್ನು ಅಖಾಡಕ್ಕೆ ಇಳಿಸಿ, ಅಪಾಯ ಮೈ ಮೇಲೆ ಎಳೆದುಕೊಂಡಿದ್ದಾರೆ ಎಂಬುದು ಅವರ ಅಭಿಪ್ರಾಯ.
ಸೀಟು ಹಂಚಿಕೆಯಲ್ಲೂ ಪರಂಗೆ ಧರ್ಮ ಸಂಕಟ; ಗೆದ್ದು ಬೀಗಿದ ಸಿದ್ದು
ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವೀರಪ್ಪ ಮೊಯಿಲಿ ಇದ್ದರು. ಬಿಜೆಪಿಯಿಂದ ಬಚ್ಚೇಗೌಡ ಸ್ಪರ್ಧಿಸಿದರು. ಮಧ್ಯೆ ಎಚ್.ಡಿ.ಕುಮಾರಸ್ವಾಮಿ ಕಣಕ್ಕೆ ಇಳಿದು, ಒಕ್ಕಲಿಗರ ಮತಗಳು ವಿಭಜನೆ ಆಗಿ, ಮೊಯಿಲಿ ಗೆಲುವಿಗೆ ಕಾರಣ ಆಯಿತು. ಈ ಸಲ ಒಕ್ಕಲಿಗರ ಮತಗಳನ್ನು ಮೊಯಿಲಿಗೆ ಸೆಳೆಯುವಲ್ಲಿ ಕುಮಾರಸ್ವಾಮಿ ಸಫಲರಾಗುತ್ತಾರಾ?
ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್- ಕಾಂಗ್ರೆಸ್ ಸ್ಪರ್ಧಿಸಿದ್ದರೆ...
ಇನ್ನು ಕಾಂಗ್ರೆಸ್- ಜೆಡಿಎಸ್ ಮಧ್ಯೆ ಅಲ್ಲಿರುವ ಮುನಿಸು ಗಮನಿಸಿದರೆ ಈ ಬಾರಿ ಬಚ್ಚೇಗೌಡರಲ್ಲ, ಬಿಜೆಪಿಯಿಂದ ಮತ್ತ್ಯಾರು ನಿಂತರೂ ಬಿಜೆಪಿಗೆ ಗೆಲ್ಲುವ ಅವಕಾಶ ಜಾಸ್ತಿ ಇದೆ. ಆದೇ ಒಂದು ವೇಳೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಗದೇ ಇದ್ದಲ್ಲಿ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಿ ಸಾಕು.
ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ತತ್ತರ
ಇದು ಒಂದು ಕಡೆಯಾಯಿತು. ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಗೆ ಅನುಕೂಲಕರ ವಾತಾವರಣ ಇತ್ತು. ಅಲ್ಲಿ ಈಗ ಬಿಜೆಪಿ ಎದುರಿಗೆ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಅಲ್ಲಿ ದೇವೇಗೌಡರ ಹೆಸರು ಕೇಳಿಬರುತ್ತಿದೆ. ಆ ಕ್ಷೇತ್ರದಲ್ಲಿ ಒಮ್ಮೆ ಜೆಡಿಎಸ್ ನೆಲೆಯೂರಿದರೆ ಕಾಂಗ್ರೆಸ್ ಸ್ಥಿತಿ ಏನು? ಹೀಗೆ ಅಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ನಾಯಕರು, ಸ್ಪರ್ಧೆ ಆಕಾಂಕ್ಷಿಗಳು ಯೋಚಿಸಿದರೆ ಈ ಬಾರಿ ಚುನಾವಣೆಯಲ್ಲಿ ಹೇಗೆ ಕೆಲಸ ಮಾಡಬಹುದು?
ಕಾಂಗ್ರೆಸ್ ನಾಯಕರು ಜೆಡಿಎಸ್ ಪರವಾಗಿ ಕೆಲಸ ಮಾಡುತ್ತಾರಾ?
ತುಮಕೂರಿನಲ್ಲಂತೂ ಕಾಂಗ್ರೆಸ್ ಹಾಗೂ ಪರಮೇಶ್ವರ್, ಜಯಚಂದ್ರ, ಕೆ.ಎನ್.ರಾಜಣ್ಣ ಎಲ್ಲ ಸ್ಥಿತಿಯೂ ಹೀನಾಯ. ಹಾಲಿ ಗೆದ್ದ ಸೀಟನ್ನು ಯಾರಾದರೂ ಬಿಟ್ಟುಕೊಡುವ ಉದಾಹರಣೆ ಸಿಗಬಹುದಾ? ಇದರಲ್ಲಿ ಏನಾದರೂ ತರ್ಕ ಇದೆಯಾ? ಆದರೆ ಜೆಡಿಎಸ್ ಗೆ ತುಮಕೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಲಾಗಿದೆ. ಈಗಾಗಲೇ ಹೇಳಿದ ನಾಯಕರೆಲ್ಲ ಜೆಡಿಎಸ್ ಪರವಾಗಿ ಕೆಲಸ ಮಾಡಬೇಕು. ಆದರೆ ಅದೇನಾಗುತ್ತದೋ ಎಂಬ ಪ್ರಶ್ನೆ ಇದ್ದೇ ಇದೆ.
ಹಾಸನದಲ್ಲಿ ಸಲೀಸಾಗಿಲ್ಲ
ಹಾಸನದಲ್ಲಿ ಮಾಜಿ ಸಚಿವ ಎ.ಮಂಜು ಮೈತ್ರಿ ಸರಕಾರದ ದೋಸ್ತಿ ಆರಂಭದಿಂದಲೂ ಬೆಂಕಿ ಉಗುಳುತ್ತಲೇ ಇದ್ದಾರೆ. ಇದೀಗ ಪ್ರಜ್ವಲ್ ರೇವಣ್ಣ ಹಾಸನದಿಂದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಅಂತಿಮ ಎಂದಾದ ಮೇಲೆ ಮಂಜು ಸುಮ್ಮನಿರುವ ಪೈಕಿ ಅಂತೂ ಅಲ್ಲ. ಈಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಆ ಕ್ಷೇತ್ರದಲ್ಲಿ ಬಹಳ ಕಷ್ಟ ಇದೆ.
ಮಂಡ್ಯದ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಇದೆ
ಮಂಡ್ಯದ ವಿಚಾರದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಕೂಡ ಸಲೀಸಲ್ಲ ಎಂಬ ಪರಿಸ್ಥಿತಿ ಇದೆ. ಸುಮಲತಾ ಅಂಬರೀಶ್ ಪರವಾಗಿ ಇರುವ ಅನುಕಂಪ ಮತಗಳಾಗಿ ಪರಿವರ್ತನೆ ಆಗುವ ಅವಕಾಶಗಳು ಹೆಚ್ಚು. ಅಲ್ಲಿ ಯಾವ ಕಾರಣಕ್ಕೂ ಕಾಂಗ್ರೆಸ್ ನಾಯಕರು ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಪರ ಕೆಲಸ ಮಾಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇವೆಲ್ಲ ನೋಡುತ್ತಿದ್ದರೆ ಕುಮಾರಸ್ವಾಮಿ ಅವರು ಆರಂಭದಲ್ಲಿ ಇಟ್ಟಿದ್ದ ಮೈತ್ರಿ ಸೂತ್ರವೇ ಪರಿಣಾಮಕಾರಿ ಆಗಿತ್ತು ಎನಿಸುತ್ತದೆ.
ಕುಮಾರಸ್ವಾಮಿ ಸೂತ್ರವೇ ಚೆನ್ನಾಗಿತ್ತು
ಏನದು ಕುಮಾರಸ್ವಾಮಿ ಸೂತ್ರ ಅಂದರೆ, ಎಲ್ಲೆಲ್ಲಿ ಬಿಜೆಪಿ ಪ್ರಬಲವಾಗಿದೆಯೋ ಅಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುವುದು. ಉಳಿದಂತೆ 'ಫ್ರೆಂಡ್ಲಿ ಫೈಟ್' ಇರಲಿ ಅಂದಿದ್ದರು. ಹಾಗೆ ಆಗಿದ್ದಿದ್ದರೆ ಪರಿಸ್ಥಿತಿ ಬೇರೆಯೇ ಇತ್ತು. ಎಲ್ಲಿ ಬೇಕೋ ಅಲ್ಲಿ ದೋಸ್ತಿ ಮತ್ತು ಅಗತ್ಯ ಇರುವ ಕಡೆ ಕುಸ್ತಿ ಅಂದಿದ್ದರೆ ಆಗ ಬಿಜೆಪಿಗೆ ಕಷ್ಟ ಇತ್ತು. ಆದರೆ ಈಗ ಆ ಸಮಸ್ಯೆಯೂ ಇಲ್ಲ.