ಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳು
ಬಹುನಿರೀಕ್ಷಿತ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆಯೇ ಎನ್ ಡಿಎ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇಡೀ ವಿಶ್ವದ ಗಮನ ಸೆಳೆದಿದ್ದ 17 ನೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೀನಾಯ ಪ್ರದರ್ಶನಕ್ಕೆ ಕಾರಣವೇನು? 2014 ರ ಲೋಕಸಭೆ ಚುನಾವಣೆಯಲ್ಲಿ ಅಂದಿನ ಯುಪಿಎ ಸರ್ಕಾರದ ಮೇಲಿದ್ದ ಆಡಳಿತ ವಿರೋಧಿ ಅಲೆಯಿಂದಾಗಿ ಎನ್ ಡಿಎ ಸರ್ಕಾರ ಹೆಚ್ಚು ಲಾಭ ಪಡೆದಿತ್ತು.
ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಆದರೆ ಬಿಜೆಪಿಯ ವೈಫಲ್ಯಗಳನ್ನು ಪ್ರಚಾರದ ಸಂದರ್ಭದಲ್ಲಿ ತಕ್ಕ ರೀತಿಯಲ್ಲಿ ಕಟ್ಟಿಕೊಡುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಮತ್ತು 'ನೆಗೆಟಿವ್ ಪಾಲಿಟಿಕ್ಸ್'ಗೆ ಹೆಚ್ಚು ಒತ್ತುಕೊಟ್ಟಿದ್ದು ಕಾಂಗ್ರೆಸ್ ಗೆ ದುಬಾರಿಯಾಗಿ ಪರಿಣಮಿಸಿತು. ನಾಯಕತ್ವದ ಕೊರತೆ, ಮಹಾಘಟಬಂಧನದ ಗೊಂದಲದ ನಿರ್ಧಾರಗಳು, ಹೊಂದಾಣಿಕೆಯ ಕೊರತೆ, ಬಿಜೆಪಿ ಕಾರ್ಯತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿನ ವೈಫಲ್ಯಗಳು ಸೇರಿ ಕಾಂಗ್ರೆಸ್ ಸೋಲಿಗೆ ಕಾರಣವಾದವು.
ನಾಯಕತ್ವದ ಕೊರತೆ
ಕಾಂಗ್ರೆಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮನಾಗಿ ನಿಲ್ಲುವಂಥ ನಾಯಕತ್ವದ ಕೊರತೆ ಎದ್ದು ಕಂಡಿದ್ದು ಕಾಂಗ್ರೆಸ್ ಸೋಲಿಗೆ ಬಹುಮುಖ್ಯ ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಹಿರಿಯ ನಾಯಕರಿದ್ದರೂ, 'ಯುವಕರಿಗೆ ಒತ್ತು' ಎಂಬ ನೆಪ ಹೂಡಿ ರಾಹುಲ್ ಗಾಂಧಿ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಕಾಂಗ್ರೆಸ್ ಆರಿಸಿತ್ತು. ರಾಜಕೀಯ ಅನುಭವದ ಕೊರತೆ ರಾಹುಲ್ ಗಾಂಧಿ ಅವರಲ್ಲಿ ಎದ್ದು ಕಾಣುತ್ತಿತ್ತು. ಆ ಎಲ್ಲವನ್ನೂ ಬಿಜೆಪಿ ಸಮರ್ಥವಾಗಿ ಬಳಸಿಕೊಂಡಿತು. ಯುವ ನಾಯಕತ್ವದೊಂದಿಗೆ, ರಾಜಕೀಯ ಹಿರಿತನದ ಅನುಭವವನ್ನೂ ಪರಿಗಣಿಸುವಲ್ಲಿ ಕಾಂಗ್ರೆಸ್ ಸೋತಿತ್ತು.
ಇದೇ ಪ್ರಜಾಪ್ರಭುತ್ವದ ಸೌಂದರ್ಯ: ಸೋಲು ಸ್ವೀಕರಿಸಿದ ಸಿದ್ದರಾಮಯ್ಯ
ಮಹಾಘಟಬಂಧನದ ಗೊಂದಲ
ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಮಹಾಘಟಬಂಧನ ಅಸ್ತಿತ್ವಕ್ಕೆ ಬರುವ ಸೂಚನೆ ಸಿಕ್ಕಿತ್ತು. ಎನ್ ಡಿಎಯೇತರ ಪಕ್ಷಗಳು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಮಾಣವಚನದ ಸಂದರ್ಭದಲ್ಲಿ ಶಕ್ತಿಪ್ರದರ್ಶನ ಮಾಡಿದ್ದರು. ಆದರೆ ಮೋದಿ ಅವರನ್ನು ಅಧಿಕಾರದಿಂದ ಕಿತ್ತೆಸೆಯುವ ಅವಸರದಲ್ಲಿ ಹುಟ್ಟಿಕೊಂಡ ಮಹಾಘಟಬಂಧನದ ಕೂಸಿಗೆ ಆರೈಕೆ ಮಾಡುವ ಇಚ್ಛಾಶಕ್ತಿಯನ್ನು ಯಾವ ಪಕ್ಷಗಳೂ ತೋರಲಿಲ್ಲ. ಮೋದಿ ಅವರನ್ನು ಅಧಿಕಾರದಿಂದ ಕಿತ್ತೆಸೆಯುವ ಉದ್ದೇಶಕ್ಕಿಂತ, 'ಪ್ರಧಾನಿ'ಯಾಗುವ ಕನಸೇ ದೊಡ್ಡದಾಗಿ ಮಹಾಘಟಬಂಧನದಲ್ಲಿ ಬಿರುಕುಂಟಾಗಿತ್ತು. ಅದರೊಟ್ಟಿಗೆ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಗೂ ಇದು ಭಾರೀ ನಷ್ಟವನ್ನುಂಟು ಮಾಡಿತು.
ಇದು ನನ್ನ ಗೆಲುವಲ್ಲ, ಮಂಡ್ಯ ಸ್ವಾಭಿಮಾನದ ಗೆಲುವು: ಸುಮಲತಾ
ಕಾಂಗ್ರೆಸ್ ಗೇ ವಿಶ್ವಾಸವಿರಲಿಲ್ಲ!
ಏಕಾಂಗಿಯಾಗಿ ಹೋರಾಡಿ ಎದುರಿಸುತ್ತೇನೆ ಎಂಬ ಮನೋಬಲವನ್ನು ಕಾಂಗ್ರೆಸ್ ಎಂದಿಗೂ ತೋರಲಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದಂದಿನಿಂದಲೂ ಪ್ರಾದೇಶಿಕ ಪಕ್ಷಗಳೊಂದಿಗೆ 'ಚೌಕಾಸಿ'ಮಾಡುವುದರಲ್ಲೇ ಕಾಂಗ್ರೆಸ್ ಸಮಯ ಕಳೆದಿತ್ತು. ಚುನಾವಣೆಗೂ ಮುನ್ನವೇ 'ಒಂಟಿಯಾಗಿ ಸ್ಪರ್ಧಿಸಿದರೆ ತಾನು ಗೆಲ್ಲುವುದಕ್ಕೆ ಸಾಧ್ಯವಿಲ್ಲ' ಎಂಬ ಆತ್ಮವಿಶ್ವಾಸದ ಕೊರತೆಯನ್ನು ಕಾಂಗ್ರೆಸ್ ಪ್ರದರ್ಶಿಸಿತ್ತು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಇನ್ನೊಂದೆಡೆ ಎಲ್ಲಾ ವಿಪಕ್ಷದ ನಾಯಕರೂ ನಿಂತು ಸೆಣಸಾಡಲು ಯತ್ನಿಸಿದ್ದು, ಮೋದಿ ಅವರ ಬಗ್ಗೆ ಧನಾತ್ಮಕ ಅಭಿಪ್ರಾಯ ಮೂಡಿಸಲು ಕಾರಣವಾಯಿತೇ ಹೊರತು, ಅದರಿಂದ ವಿಪಕ್ಷಗಳಿಗೆ ಯಾವ ಉಪಯೋಗವೂ ಆಗಲಿಲ್ಲ.
ಪ್ರಾದೇಶಿಕ ಪಕ್ಷಗಳ ಮೇಲೆ ಅವಲಂಬನೆ
ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿದ್ದು ಸಹ ಅದಕ್ಕೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಉತ್ತರ ಪ್ರದೇಶದಲ್ಲಿ, ತೆಲಂಗಾಣದಲ್ಲಿ, ದೆಹಲಿಯಲ್ಲಿ... ಮುಂತಾದ ಹಲವೆಡೆ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ಅದಕ್ಕೆ ಬಿಎಸ್ಪಿ-ಎಸ್ಪಿಯ ಮುಖಂಡರು ಸೊಪ್ಪು ಹಾಕಲಿಲ್ಲ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಆ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದ್ದು ಕಾಂಗ್ರೆಸ್ ಗೆ ಮುಖಭಂಗವನ್ನುಂಟು ಮಾಡಿದೆ. ತನ್ನ ಕಾರ್ಯತಂತ್ರವನ್ನು ಬದಲಿಸಿಕೊಳ್ಳುವ ಮತ್ತು ಬೇರೆ ಪಕ್ಷಗಳ ಮೇಲಿನ ಅವಲಂಬನೆಯನ್ನು ಬಿಡಬೇಕಾದ ಅಗತ್ಯವನ್ನು ಕಾಂಗ್ರೆಸ್ಸಿಗೆ ಈ ಫಲಿತಾಂಶ ತೋರಿಸಿಕೊಟ್ಟಿದೆ.
ಕಾರ್ಯತಂತ್ರದ ಕೊರತೆ
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನ ಕಾರ್ಯತಂತ್ರವೇನು ಎಂದು ಯೋಚಿಸಿದರೆ ಉತ್ತರ ಸಿಗುವುದಿಲ್ಲ. ಏಕೆಂದರೆ 'ನ್ಯಾಯ್' ಯೋಜನೆಯನ್ನೇ ತನ್ನ ಭಾರೀ ಕಾರ್ಯತಂತ್ರ ಎಂದುಕೊಂಡಿದ್ದ ಕಾಂಗ್ರೆಸ್ ಗೆ ಈ ಫಲಿತಾಂಶ ಮುಖಭಂಗವಾಗಿರಲಿಕ್ಕೆ ಸಾಕು. ಪ್ರಣಾಳಿಕೆಯಲ್ಲಿ 'ಸಾಲಮನ್ನಾ' ಎಂಬ ಅದೇ ಹಳೆ ಸಾಲುಗಳನ್ನು ಬಿಟ್ಟರೆ ಹೊಸತನ ಎಂಬುದು ಏನೂ ಇರಲಿಲ್ಲ. ನಾಲ್ಕಾರು ದಿನ ಸಂಸತ್ತಿನೆದುರು ಪ್ರತಿಭಟಿಸುವುದಕ್ಕಷ್ಟೇ 'ರಫೇಲ್' ಸೀಮಿತವಾಯ್ತು. ಆ ಪ್ರಕರಣವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ತಂತ್ರಗಾರಿಕೆ ಕಾಂಗ್ರೆಸ್ ನಲ್ಲಿ ಕಾಣಲೇ ಇಲ್ಲ!
ಟೀಕೆಯನ್ನೂ ಲಾಭಕ್ಕಾಗಿ ಬಳಸಿಕೊಂಡ ಬಿಜೆಪಿ ಜಾಣ್ಮೆ
2014 ರ ಲೋಕಸಭೆ ಚುನಾವಣೆಯಲ್ಲಿ 'ಚಾಯ್ ವಾಲಾ' ಎಂದು ಹಳದವರಿಗೆ ಮುಖಭಂಗಮಾಡುವಂತೆ ಗಲ್ಲಿ ಗಲ್ಲಿಗಳ್ಲಲಿ ಬಿಜೆಪಿ 'ಚಾಯ್ ಪೆ ಚರ್ಚಾ' ಅಭಿಯಾನ ಆರಂಭಿಸಿತ್ತು. ಅದೇ ರೀತಿ ಈ ಬಾರಿ 'ಚೌಕಿದಾರ್ ಚೋರ್ ಹೈ' ಎಂದ ಕಾಂಗ್ರೆಸ್ಸಿಗೆ 'ಮೇ ಬೀ ಚೌಕಿದಾರ್' ಎಂಬ ಪ್ರತ್ಯುತ್ತರವನ್ನು ಬಿಜೆಪಿ ನೀಡಿತ್ತು. ಬಿಜೆಪಿ ಮುಖಂಡರು, ಕಾರ್ಯಕರ್ತರು, ಬೆಮಂಬಲಿಗರ ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್ ನೇಮ್ ಗಳಲ್ಲಿ 'ಚೌಕಿದಾರ'ನಿಗೆ ಸ್ಥಾನ ಸಿಕ್ಕಿತ್ತು. ಪುಲ್ವಾಮಾ ದಾಳಿಯನ್ನೂ ಟೀಕಿಸಿದ ಕಾಂಗ್ರೆಸ್ ನಡೆಯನ್ನು ಬಿಜೆಪಿ 'ಸೈನಿಕರಿಗೆ ಗೌರವ ನೀಡುದ್ ವ್ಯವಧಾನವೂ ಇಲ್ಲ' ಎಂದು ವ್ಯಾಖ್ಯಾನಿಸಿತ್ತು. ಬಾಲಕೋಟ್ ಏರ್ ಸ್ಟ್ರೈಕ್ ಅನ್ನು ಹಳಿದವರಿಗೆ 'ನಮ್ಮ ಸೇನೆಯ ಶಕ್ತಿಯ ಬಗ್ಗೆ ನಂಬಿಕೆ ಇಲ್ಲ' ಎಂದು ಉತ್ತರಿಸಿತ್ತು. ಈ ಎಲ್ಲವೂ ಬಿಜೆಪಿ ಗೆಲುವಿಗೆ ವರದಾನವಾದರೆ, ಕಾಂಗ್ರೆಸ್ ತನ್ನ ಹಳ್ಳವನ್ನು ತಾನೇ ತೋಡಿಕೊಳ್ಳುವಂತೆ ಮಾಡಿತ್ತು.