ಕಾಂಗ್ರೆಸ್ಗೆ 'ಕೈ'ಗೆ ಸಿಗದ ದಾವಣಗೆರೆ ಲೋಕಸಭಾ ಕ್ಷೇತ್ರ ಪರಿಚಯ
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬಿಸಿಲಿನ ಝಳದ ಜೊತೆ ಲೋಕಸಭೆ ಚುನಾವಣೆ ಕಾವು ಏರುತ್ತಿದೆ. ಬಿಜೆಪಿ ಈಗಾಗಲೇ ಹಾಲಿ ಸಂಸದ ಜಿ. ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಮೇ 7ರಂದು ಚುನಾವಣೆ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.
ದಾವಣಗೆರೆ ಚುನಾವಣೆ ಕುತೂಹಲಕ್ಕೆ ಕಾರಣವಾಗುವುದು ಒಂದು ಕಾರಣಕ್ಕೆ. 4 ಬಾರಿ ಸತತವಾಗಿ ಗೆದ್ದು ಬಂದಿರುವ ಬಿಜೆಪಿಯ ಜಿ. ಎಂ. ಸಿದ್ದೇಶ್ವರಗೆ ಈ ಬಾರಿ ಟಿಕೆಟ್ ಕೈತಪ್ಪಿದೆ. ಆದರೆ ಅವರ ಪತ್ನಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಇದಕ್ಕೆ ಹಲವು ಬಿಜೆಪಿ ನಾಯಕರ ಅಸಮಾಧಾವೂ ಉಂಟಾಗಿದೆ. ಇದೇ ಬಿಜೆಪಿಗೆ ಹಿನ್ನಡೆ ಉಂಟು ಮಾಡಲಿದೆ ಎಂದು ಅಂದಾಜಿಸಲಾಗಿದೆ.

1977ರಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರ ರಚನೆಗೊಂಡಿತು. ಒಂದು ಬಾರಿ ಮಾತ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. 2004ರಿಂದ ಸತತವಾಗಿ ಗೆದ್ದು ಬರುತ್ತಿರುವ ಜಿ. ಎಂ. ಸಿದ್ದೇಶ್ವರ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿಯೂ ಸಚಿವರಾಗಿ ಕೆಲಸ ಮಾಡಿದರು. ಕಾಂಗ್ರೆಸ್ 'ಕೈ'ಗೆ ಕ್ಷೇತ್ರ ಸಿಗದಂತೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಬಗ್ಗೆ ಅಸಮಾಧಾನ ಎದ್ದಿದೆ.
ಕಾಂಗ್ರೆಸ್ ಶಾಸಕರು ಹೆಚ್ಚು: ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಗಳೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಈ ಪೈಕಿ ಹರಪನಹಳ್ಳಿಯಲ್ಲಿ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ, ಹರಿಹರ ಬಿ. ಪಿ. ಹರೀಶ್ (ಬಿಜೆಪಿ) ಹೊರತುಪಡಿಸಿ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರೇ ಇದ್ದಾರೆ. ಲತಾ ಮಲ್ಲಿಕಾರ್ಜುನ ಸಹ ಕಾಂಗ್ರೆಸ್ ಬೆಂಬಲಿಸುತ್ತಾರೆ. ಸಿಎಲ್ಪಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1946 ಮತಗಟ್ಟೆಗಳು ಬರುತ್ತವೆ. ಕ್ಷೇತ್ರವ್ಯಾಪ್ತಿಯಲ್ಲಿ ಹರಪನಹಳ್ಳಿ ಸೇರಿದಂತೆ ಪುರುಷ 838705, ಮಹಿಳಾ 840340, ಇತರೆ 136 ಹಾಗೂ 565 ಸೇವಾ ಮತದಾರರು ಸೇರಿ 16,79,746 ಮತದಾರರಿದ್ದಾರೆ.
ಕಾಂಗ್ರೆಸ್ನಿಂದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಇದೆ. ಎಸ್. ಎಸ್. ಮಲ್ಲಿಕಾರ್ಜುನ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು. ಶಾಮನೂರು ಕುಟುಂಬದ ಪ್ರಭಾವ, ಕಾಂಗ್ರೆಸ್ ಶಾಸಕರ ಬೆಂಬಲ, ಬಿಜೆಪಿಯಲ್ಲಿನ ಅಸಮಾಧಾನದಿಂದ ಕಾಂಗ್ರೆಸ್ ಗೆಲುವು ಸುಲಭವಾಗಲಿದೆ ಎಂಬುದು ಲೆಕ್ಕಾಚಾರವಾಗಿದೆ.

ಗಾಯತ್ರಿ ಸಿದ್ದೇಶ್ವರ ಬಿಜೆಪಿ-ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್ನಿಂದ ಪ್ರಭಾ ಮಲ್ಲಿಕಾರ್ಜುನ್ ಕಣಕ್ಕಿಳಿದರೆ ಮಹಿಳಾ ಮಣಿಗಳ ನಡುವಿನ ಹೋರಾಟ ದಾವಣಗೆರೆ ಚುನಾವಣಾ ಅಖಾಡವನ್ನು ಮತ್ತಷ್ಟು ಕುತೂಹಲಕಾರಿಯಾಗಿಸಲಿದೆ. ಕುರುಬ ಸಮುದಾಯಕ್ಕೆ ಸೇರಿದ, ಸಿದ್ದರಾಮಯ್ಯ ಆಪ್ತರಾದ ವಿನಯ್ ಕುಮಾರ್ ಹೆಸರು ಕಾಂಗ್ರೆಸ್ನಿಂದ ಕೇಳಿ ಬರುತ್ತಿದೆ.
ಪ್ಲಸ್ ಮತ್ತು ಮೈನಸ್ ಏನು?; ರಾಮ ಮಂದಿರ ಉದ್ಘಾಟನೆ ಬಳಿಕ ಹೆಚ್ಚಿದ ಬಿಜೆಪಿ ಜನಪ್ರಿಯತೆ. ಪ್ರಧಾನಿ ಮೋದಿಯ ಪ್ರಭಾವ, ಬಿಜೆಪಿ ಪರವವಾಗಿ ಲಿಂಗಾಯತರಿಗೆ ಇರುವ ಒಲವು, ಕಳೆದ ಆರು ಚುನಾವಣೆಯಲ್ಲಿ ದಾವಣಗೆರೆಯಲ್ಲಿ ಬಿಜೆಪಿಗಳಿಸಿರುವ ಮತ, ಬಿಜೆಪಿಯ ಬಲಿಷ್ಠ ಸಂಘಟನೆಗಳೇ ಪಕ್ಷದ ಪ್ಲಸ್ ಪಾಯಿಂಟ್.
ಆದರೆ ಈ ಬಾರಿ ಗಾಯತ್ರಿ ಸಿದ್ದೇಶ್ವರಗೆ ಟಿಕೆಟ್ ನೀಡಿದ ವಿಚಾರದಲ್ಲಿ ಉಂಟಾಗಿರುವ ಗೊಂದಲ. ಹೊನ್ನಾಳಿಯ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಸೇರಿ ಇತರರ ಅಸಮಾಧಾನ ಬಿಜೆಪಿಗೆ ಹಿನ್ನಡೆ ಉಂಟು ಮಾಡಬಹುದು ಎಂಬುದು ಲೆಕ್ಕಾಚಾರವಾಗಿದೆ.
ಇನ್ನು ಕಾಂಗ್ರೆಸ್ಗೆ ಶಾಮನೂರು ಕುಟುಂಬದ ಪ್ರಭಾವ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದು. ಕ್ಷೇತ್ರದ 6 ಕಡೆ ಕಾಂಗ್ರೆಸ್ ಶಾಸಕರು ಇರುವುದು, ಎಸ್. ಎಸ್. ಮಲ್ಲಿಕಾರ್ಜುನ್ ಪ್ರಭಾವ ಪ್ಲಸ್ ಪಾಯಿಂಟ್. ಆದರೆ ಈಗಾಗಲೇ ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್ ಇಬ್ಬರೂ ಶಾಸಕರು. ಮತ್ತೆ ಅವರ ಕುಟುಂಬಕ್ಕೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣದ ಅಪವಾದ ಮೈನಸ್ ಪಾಯಿಂಟ್ ಆಗಲಿದೆ ಎಂಬ ಮಾತು ಇದೆ.
ಹಿಂದಿನ ಚುನಾವಣೆ ಫಲಿತಾಂಶಗಳು
* 2019ರ ಚುನಾವಣೆಯಲ್ಲಿ ಬಿಜೆಪಿಯ ಜಿ. ಎಂ. ಸಿದ್ದೇಶ್ವರ 652,996 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎಚ್. ಬಿ. ಮಂಜಪ್ಪ 483,294 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಿಎಸ್ಪಿಯ ಸಿದ್ದಪ್ಪ ಬಿ. ಎಚ್. 7,736 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು.
* 2014ರಲ್ಲಿ ಬಿಜೆಪಿಯ ಜಿ. ಎಂ. ಸಿದ್ದೇಶ್ವರ 518,894 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎಸ್. ಎಸ್. ಮಲ್ಲಿಕಾರ್ಜುನ 501,287 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. ಜೆಡಿಎಸ್ನ ಮಹಿಮಾ ಪಟೇಲ್ 46,911 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದರು.
* 2009ರಲ್ಲಿ ಜಿ. ಎಂ. ಸಿದ್ದೇಶ್ವರ 423,447 ಮತಗಳನ್ನು ಪಡೆದು ಗೆಲವು ಕಂಡರು. ಕಾಂಗ್ರೆಸ್ನ ಎಸ್. ಎಸ್. ಮಲ್ಲಿಕಾರ್ಜುನ್ 421,423 ಮತಗಳನ್ನು ಪಡೆದು 2ನೇ ಸ್ಥಾನ ಪಡೆದರು. ಜೆಡಿಎಸ್ನ ಕೆಬಿ ಕುಳ್ಳೇರುದ್ರಪ್ಪ 10,489 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು.
* 2004ರ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ 370,499 ಮತಗಳನ್ನು ಪಡೆದು ಗೆದ್ದರು. ಎಸ್. ಎಸ್. ಮಲ್ಲಿಕಾರ್ಜುನ್ 337,823 ಮತಗಳನ್ನು ಪಡೆದು ಸೋಲು ಕಂಡರು. ಜೆಡಿಎಸ್ನ ಚೆನ್ನಯ್ಯ ಒಡೆಯರ್ 158,515 ಮತಗಳನ್ನು ಪಡೆದು 3ನೇ ಸ್ಥಾನ ಪಡೆದರು.
ದಾವಣಗೆರೆ ಕ್ಷೇತ್ರದ ಚುನಾವಣೆ ಎಂದರೆ ಜಿ. ಎಂ. ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಕುಟುಂಬದ ನಡುವಿನ ಕಾಳಗ ಎಂದೇ ಖ್ಯಾತಿ ಪಡೆದಿದೆ. ಎಸ್. ಎಸ್. ಮಲ್ಲಿಕಾರ್ಜುನ್ ಸಿದ್ದೇಶ್ವರ ವಿರುದ್ಧ ಚುನಾವಣೆಯಲ್ಲಿ ಸೋತ ಸೇಡನ್ನು ಪ್ರಭಾ ಮಲ್ಲಿಕಾರ್ಜುನ್ ತೀರಿಸಿಕೊಳ್ಳುತ್ತಾರೆಯೇ? ಅಥವ ಈ ಬಾರಿ ಟಿಕೆಟ್ ಶಾಮನೂರು ಕುಟುಂಬದ ಕೈ ತಪ್ಪುತ್ತದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications