ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?
Recommended Video

ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಬಹಳ ಪ್ರಮುಖವಾದ ಕ್ಷೇತ್ರ. ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಪ್ರತಿನಿಧಿಸುವ ಕ್ಷೇತ್ರವಾಗಿರುವುದರಿಂದ ಕೊಂಚ ಮಹತ್ವ ಹೆಚ್ಚು. ಆರ್ ಟಿ ನಗರ, ಇಂದಿರಾನಗರ, ಜಾಲಹಳ್ಳಿ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಪ್ರಮುಖ ಬಡಾವಣೆಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಸದಾನಂದ ಗೌಡರೇ ಸ್ಪರ್ಧಿಸುತ್ತಾರಾ ಎಂಬುದು ಈಗಿರುವ ಪ್ರಶ್ನೆ.
1951 ಮತ್ತು 1957 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಕೇಶವ ಅಯ್ಯಂಗಾರ್ ಅವರು ಜಯಗಳಿಸಿದ್ದರೆ ನಂತರ 1962 ರಿಂದ 1971 ರವರೆಗೆ ಸತತ ಮೂರು ಬಾರಿ ಕಾಂಗ್ರೆಸ್ ನ ಕೆ.ಹನುಮಂತಯ್ಯ ಜಯಸಾಧಿಸಿದ್ದರು. ಆಗ ಕರುನಾಡು ಮೈಸೂರು ರಾಜ್ಯವಾಗಿತ್ತು.
ಮೈಸೂರು ರಾಜ್ಯ, ಕರ್ನಾಟಕವಾಗಿ ಬದಲಾದ ನಂತರ 1977 ರಿಂದ 1991 ರವರೆಗೆ ಐದು ಬಾರಿ ಮತ್ತು 1998, 1999 ರಲ್ಲಿ ಕಾಂಗ್ರೆಸ್ ನ ಸಿಕೆ ಜಾಫರ್ ಶರೀಫ್ ಜಯ ದಾಖಲಿಸಿ ದಾಖಲೆ ಬರೆದಿದ್ದರು. 1996 ರಲ್ಲಿ ಜನತಾದಳದ ಸಿ ನಾರಾಯಣಸ್ವಾಮಿ ಗೆಲ್ಲುವ ಮೂಲಕ ಪಕ್ಷಕ್ಕೆ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಜಯ ದಾಖಲಿಸಿಕೊಟ್ಟಿದ್ದರು. ಅದುವರೆಗೂ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರದಲ್ಲಿ ಬಿಜೆಪಿಯ ಪಾರುಪತ್ಯ ಆರಂಭವಾಗಿದ್ದು 2004 ರ ನಂತರ.

2004 ರಲ್ಲಿ ಭಾರತೀಯ ಜನತಾ ಪಕ್ಷದಿಂದ ಹೆಚ್ ಟಿ ಸಾಂಗ್ಲಿಯಾನ ಅವರು ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದರು. ಆದರೆ ಅವರು ಬಿಜೆಪಿಯನ್ನು ತೊರೆದ ನಂತರ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ ಬಿ ಚಂದ್ರೇಗೌಡ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದರು. 2014 ರಲ್ಲಿ ಡಿವಿ ಸದಾನಂದಗೌಡ ಅವರು ಗೆಲುವು ಸಾಧಿಸುವ ಮೂಲಕ ಸತತ ಮೂರು ಬಾರಿಗೆ ಬಿಜೆಪಿಯೇ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಗಳಿಸುವಂತೆ ಮಾಡಿದರು.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಸದಾನಂದ ಗೌಡರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸದಾನಂದಗೌಡ ಅವರು ಕಾಂಗ್ರೆಸ್ನ ಸಿ.ನಾರಾಯಣಸ್ವಾಮಿ ವಿರುದ್ಧ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಕ್ಷೇತ್ರದ ಸಮಸ್ಯೆಗಳು: ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಪಾರ್ಕಿಂಗ್ ಸಮಸ್ಯೆಯೊಂದಿಗೆ ಕಸ ವಿಲೇವಾರಿಯೂ ಒಂದು ದೊಡ್ಡ ಸಮಸ್ಯೆ. ರಸ್ತೆಗಳು ಕೆಲವೆಡೆ ಸುಸಜ್ಜಿತವಾಗಿದ್ದರೂ, ಹಲವೆಡೆ ಇನ್ನಷ್ಟು ಸುಧಾರಿಸುವ ಅಗತ್ಯವಿದೆ.
ಬೆಂಗಳೂರು ಉತ್ತರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳು(8): ಕೆ.ಆರ್.ಪುರಂ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ

ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,401,472
ಮಹಿಳೆಯರು 1,260,356
ಪುರುಷರು 1,141,116
ಭಾರತ ಸರ್ಕಾರದಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಮಂಜೂರಾಗಿದ್ದ ಅನುದಾನ 20 ಕೋಟಿ ರೂ. ಸಂಸದರ ನಿಧಿಯಲ್ಲಿ ಇದುವರೆಗೂ ಬಳಕೆಯಾದ ಹಣ 17.22 ಕೋಟಿ ರೂ.

ಕಳೆದ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಾನಂದ ಗೌಡರು ಪಡೆದ ಒಟ್ಟು ಮತಗಳು: 718,326, ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸಿ ನಾರಾಯಣ ಸ್ವಾಮಿ ಪಡೆದ ಮತಗಳು: 488,562.
ಒಟ್ಟು 229764 ಮತಗಳ ಭಾರೀ ಅಂತರದಿಂದ ಸದಾನಂದ ಗೌಡರು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.
ಈ ವರ್ಷ ಬಿಜೆಪಿಯಿಂದ ಸದಾನಂದ ಗೌಡರು ಸ್ಪರ್ಧಿಸದಿದ್ದರೆ, ಶೋಬಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಕಾಂಗ್ರೆಸ್ ನಿಂದ ಮಾಜಿ ನಟಿ ರಮ್ಯಾ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ.












Click it and Unblock the Notifications